ಕುಂದಾಪುರ: ಬೈಂದೂರು – ಕುಂದಾಪುರ ರಾ.ಹೆ. 66ರ ತಲ್ಲೂರು, ಹೆಮ್ಮಾಡಿ, ತ್ರಾಸಿ ಹಾಗೂ ಯಡ್ತರೆಯಲ್ಲಿ ಅಂಡರ್ಪಾಸ್ ಮತ್ತು ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಡಿಸೆಂಬರ್ನಲ್ಲಿಯೇ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಈಗ ಕೇಂದ್ರ ಸಚಿವರು ಅಸ್ತು ಅಂದಿದ್ದಾರೆ.
ಒಟ್ಟು 6 ಕಡೆಗಳಲ್ಲಿ ಅಂಡರ್ಪಾಸ್ ನಿರ್ಮಾಣಕ್ಕೆ ಸಂಸದರು ಪ್ರಸ್ತಾವನೆ ಸಲ್ಲಿಸಿದ್ದು, ಈ ಪೈಕಿ ತಲ್ಲೂರು, ಹೆಮ್ಮಾಡಿ, ತ್ರಾಸಿ ಹಾಗೂ ಯಡ್ತರೆ ಜಂಕ್ಷನ್ಗಳಲ್ಲಿ ಅನುಮತಿ ಸಿಕ್ಕಿದೆ. ಬೈಂದೂರು ತಾಲೂಕು ಕಚೇರಿ ಜಂಕ್ಷನ್ ಹಾಗೂ ಮುಳ್ಳಿಕಟ್ಟೆಯ ಜಂಕ್ಷನ್ಗಳಲ್ಲಿ ತಾಂತ್ರಿಕ ಕಾರಣದಿಂದ ಇನ್ನಷ್ಟೇ ಅನುಮತಿ ಸಿಗಬೇಕಿದೆ.
ಶಿರೂರು – ನಿರ್ಗದ್ದೆವರೆಗೆ ಹಾಗೂ ಮುಳ್ಳಿಕಟ್ಟೆ – ಅರಾಟೆವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆಗೂ ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ.
“ಉದಯವಾಣಿ’ ವರದಿ
ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಹಾಗೂ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತಂತೆ, ತ್ವರಿತವಾಗಿ ಆಗುತ್ತಿರುವ ಕಾಮಗಾರಿ ಬಗ್ಗೆ “ಉದಯವಾಣಿ’ಯು “ರಾಷ್ಟ್ರೀಯ ಹೆದ್ದಾರಿ 66 – ರಸ್ತೆ ಒಂದು ಸಮಸ್ಯೆ ನೂರಾ ಒಂದು’ ಸರಣಿ ಬರಹಗಳ ಮೂಲಕ ಸಮಗ್ರವಾಗಿ ಬೆಳಕು ಚೆಲ್ಲಿತ್ತು.