Advertisement

ಕುಮಾರ ಬಜೆಟ್‌ಗೆ ಅಪಸ್ವರ

02:23 PM Jul 06, 2018 | |

ವಿಜಯಪುರ: ಸಿ.ಎಂ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಗೆ ಒಂದಷ್ಟು ಕೊಡುಗೆ ನೀಡಿದ್ದರೂ ಉತ್ತರ ಕರ್ನಾಟಕವನ್ನು
ಕಡೆಗಣಿಸಿದ ಬಜೆಟ್‌ ಮಂಡಿಸಿದ್ದಾರೆ ಎಂದು ಆಡಳಿತ ಮಿತ್ರ ಪಕ್ಷಗಳಿಂದಲೇ ಭಾರಿ ಟೀಕೆಗೆ ಗುರಿಯಾಗುತ್ತಿದ್ದಾರೆ. ರಾಜ್ಯದ ಬಜೆಟ್‌ಗೆ ಜಿಲ್ಲೆಯಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

Advertisement

ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಕಾರ್ಯಕ್ರಮಗಳು ಮುಂದುವರಿಸುವುದಾಗಿ ಹೇಳಿದ್ದರೂ ಕಳೆದ ಫೆಬ್ರವರಿ ಬಜೆಟ್‌ನಲ್ಲಿ ನೀಡಿದ್ದ ಶತಮಾನ ಕಂಡಿರುವ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಶತಮಾನ ಭವನ ನಿರ್ಮಾಣಕ್ಕೆ ಸರ್ಕಾರ ಹಾಗೂ ಅಫೆಕ್ಸ್‌ ಬ್ಯಾಂಕ್‌ 5 ಕೋಟಿ ರೂ. ಸಹಾಯ ಧನ ಘೋಷಣೆ ಅನುಷ್ಠಾನಗೊಳ್ಳಲಿವೆಯೆ
ಎಂಬುದು ಖಚಿತವಾಗಿಲ್ಲ.

ಇಂಡಿ ತಾಲೂಕಿನ ರೋಡಗಿ ಕ್ರಾಸ್‌, ತಾಳಿಕೋಟೆ ಬಳಿ ವಿದ್ಯುತ್‌ ಉಪ ಕೇಂದ್ರ ಸ್ಥಾಪನೆ, ಮುದ್ದೇಬಿಹಾಳದಲ್ಲಿ
ಕೃಷಿ ಸಂಶೋಧನಾ ಕೇಂದ್ರ, ಕುರಿಗಾರರ ಅನುಕೂಲಕ್ಕೆ ಕುರಿ ರೋಗ ತಪಾಷಣಾ ಕೇಂದ್ರ, ಕರ್ನಾಟಕ ನಗರ ನೀರು
ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಮುದ್ದೇಬಿಹಾಳದಲ್ಲಿ ಒಳಚರಂಡಿ ಯೋಜನೆಗಳ ಗತಿ ಏನು
ಎಂಬುದು ಸ್ಪಷ್ಟವಾಗಿಲ್ಲ. 

ಇದೀಗ ಪ್ರಸಕ್ತ ಬಜೆಟ್‌ನಲ್ಲಿ ಕುಮಾರಸ್ವಾಮಿ ಅವರು ಹೃದ್ರೋಗ ಚಿಕಿತ್ಸೆಗಾಗಿ ವಿಜಯಪುರ ನಗರದಲ್ಲಿರುವ
ಜಿಲ್ಲಾ ಸರ್ಕಾರಿ ಕಾಡಿಯಾಲಜಿ, ಕ್ಯಾನ್ಸರ್‌ ಚಿಕಿತ್ಸೆಗೆ ಅಂಕಾಲಜಿ ಹಾಗೂ ಟ್ರಾಮಾ ಆರೋಗ್ಯ ಸೇವಾ ಘಟಕ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.

ಇದಲ್ಲದೇ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಹಂಪಿ, ಬೇಲೂರ ಜೊತೆಗೆ ವಿಜಯಪುರ ಜಿಲ್ಲೆಗೂ ಪ್ರವಾಸೋದ್ಯಮ
ಅಭಿವೃದ್ಧಿಗೆ ಕೌಶಲ ತರಬೇತಿ ಆರಂಭಿಸಲು ತಲಾ 60 ಲಕ್ಷ ರೂ ನೀಡುವ, ಪರಿಸರ ಹಾಗೂ ಆಹಾರ ಶುದ್ಧತೆ ಸರ್ಕಾರಿ
ಸಂಸ್ಥೆಗಳೊಂದಿಗೆ 20 ಕೋಟಿ ರೂ. ವೆಚ್ಚದ ಯೋಜನೆ ಘೋಷಣೆಯಾಗಿವೆ.

Advertisement

ಆದರೆ ವಿಜಯಪುರ ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಬಜೆಟ್‌ ನಿರೀಕ್ಷೆ ಲಾಲಿಪಾಪ್‌ ನೀಡಿ ಸುಮ್ಮನಾಗಿಸುವ ಹುನ್ನಾರ ಮಾಡಿದ್ದು, ಬಹು ನಿರೀಕ್ಷೆಯಿಂದ ಕಾದಿದ್ದ ಜನತೆಗೆ ಭರವಸೆ ಹುಸಿಗೊಳಿಸಿದ್ದಾರೆಂದು ಅಪಸ್ವರದ ಮಾತುಗಳು ಕೇಳಿ ಬಂದಿವೆ. ಕೃಷಿ ತೋಟಗಾರಿಕೆಯಲ್ಲಿ ಇಸ್ರೇಲ್‌ ಮಾದರಿ ಯೋಜನೆ ಘೋಷಣೆ ಆಗಿದ್ದರೂ
ದ್ರಾಕ್ಷಿ ತವರು, ಲಿಂಬೆ ನಾಡು ಎಂದೆಲ್ಲ ಕೀರ್ತಿ ಪಡೆದಿರುವ ವಿಜಯಪುರಕ್ಕೆ ಆದ್ಯತೆ ನೀಡಿಲ್ಲ. ವೈನ್‌ ಪಾರ್ಕ್‌, ವಿಮಾನ ನಿಲ್ದಾಣ ಕುರಿತು ಚಕಾರ ಎತ್ತಿಲ್ಲ ಎಂದು ಆಕ್ಷೇಪ ಎತ್ತಿದ್ದಾರೆ.
 
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷಕ್ಕೆ ಜನ ಮನ್ನಣೆ ನೀಡಿಲ್ಲ ಎಂಬ ಸೇಡಿನಿಂದ ಬಜೆಟ್‌ನಲ್ಲಿ ಈ ಭಾಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಮರೆತು ಹಾಸನ, ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ತಮ್ಮ ಮಿತಿ ಹಾಕಿಕೊಂಡಿದ್ದಾರೆ. ಪ್ರಾದೇಶಿಕ ಅಸಮಾನತೆಗೆ ಸದರಿ ಬಜೆಟ್‌ ಪ್ರಚೋದನೆ ನೀಡಿದ್ದು, ರಾಜ್ಯದ ಜನರಲ್ಲಿ ಉತ್ತರ-ದಕ್ಷಿಣ ಎಂಬ ತಾರತಮ್ಯದ ಕಂದಕ ಹೆಚ್ಚಿಸಿದೆ ಎಂದು ಕಿಡಿ ಕಾರುತ್ತಿದ್ದಾರೆ.

ಕೃಷ್ಣಾ-ಕಾವೇರಿ ರಾಜ್ಯದ ಎರಡು ಕಣ್ಣುಗಳಿದ್ದಂತೆ ಎನ್ನುವ ಕುಮಾರಸ್ವಾಮಿ, ಕಾವೇರಿ ನದಿಯ ಕೃಷ್ಣರಾಜ ಜಲಾಶಯದ ಬೃಂದಾವನ ಗಾರ್ಡನ್‌ಗೆ ಅಮೆರಿಕಾದ ಡಿಸ್ನಿ ಗಾರ್ಡನ್‌ ಮಾದರಿಯಲ್ಲಿ ಅಭಿವೃದ್ಧಿಗೆ 5 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಅರ್ಧ ಕರ್ನಾಟಕಕ್ಕೆ ಜೀವನದಿಯಾಗಿರುವ ಕೃಷ್ಣೆಯ ಮಡಿಲಲ್ಲಿರುವ ಆಲಮಟ್ಟಿಯ ಲಾಲ್‌
ಬಹಾದ್ದೂರ ಶಾಸ್ತ್ರಿ ಜಲಾಶಯ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳ ಗಾರ್ಡನ್‌ಗಳು ಇದೇ
ರಾಜ್ಯದಲ್ಲಿವೆ ಎಂಬುದನ್ನು ಮರೆತಿದ್ದಾರೆ ಎಂದು ಛೇಡಿಸಿದ್ದಾರೆ.

ಕುಮಾರಸ್ವಾಮಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇರಿಸಿಕೊಂಡು ಜೆಡಿಎಸ್‌ ಪ್ರಾಬಲ್ಯ ಇರುವ ಮೈಸೂರು ಭಾಗಕ್ಕೆ ಆದ್ಯತೆ ನೀಡಿದ್ದಾರೆ. ಈ ಬಜೆಟ್‌ನನಲ್ಲಿ
ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯವನ್ನು ಈ ಭಾಗ ಎಲ್ಲ ಪಕ್ಷಗಳ ಶಾಸಕರು ಪಕ್ಷಬೇಧ ಮರೆದು ಪ್ರಶ್ನಿಸಬೇಕು. 
 ಚಂದ್ರಶೇಖರ ಕವಟಗಿ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯರು

ರಾಜ್ಯದ ಅಪವಿತ್ರ ಸಮ್ಮಿಶ್ರ ಸರ್ಕಾರದ ಸಿ.ಎಂ. ಕುಮಾರಸ್ವಾಮಿ ಅವರಿಗೆ ಕರ್ನಾಟಕ ರಾಜ್ಯದಲ್ಲಿ ನಾಲ್ಕೇ ಜಿಲ್ಲೆಗಳಿವೆ ಎಂದು ತಿಳಿದಿದ್ದಾರೆ ಎಂಬುದು ರಾಜ್ಯ ಬಜೆಟ್‌ ಸ್ಪಷ್ಟಪಡಿಸಿದೆ. ಸ್ಪಷ್ಟತೆ ಇಲ್ಲದ ರೈತರ ಸಾಲಮನ್ನಾ ಘೋಷಿಸಿ, ಇಂಧನ ಬೆಲೆ ಏರಿಕೆ ಮಾಡಿರುವುದು ರಾಜ್ಯ ಸರ್ಕಾರದ ಗೋಸುಂಬೆತವನ್ನು ಬಯಲು ಮಾಡಿದೆ.
 ಕೃಷ್ಣಾ ಗುನ್ನಾಳಕರ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ 

ಸಿ.ಎಂ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ ಜನವಿರೋಧಿ  ಹಾಗೂ ಅಭಿವೃದ್ಧಿ ಹೀನ ಬಜೆಟ್‌. ಉತ್ತರ ಕರ್ನಾಟಕವನ್ನು ಕಡೆಗಣಿಸಿರುವ ರಾಜ್ಯ ಬಜೆಟ್‌ನಲ್ಲಿ ಈ ಭಾಗದ ಜನರಿಂದ ತೆರಿಗೆ ಪಡೆಯಲು ಮಾತ್ರ ಮುಂದಾಗಿದೆ. ಪೆಟ್ರೋಲ್‌ ಮೇಲೆ ಶೇ.30 ಸೆಸ್‌ ಏರಿಕೆ, ವಿದ್ಯುತ್‌ ಪ್ರತಿ ಯುನಿಟ್‌ಗೆ 20 ಪೈಸೆ ಹೆಚ್ಚಳದಿಂದ ಅಭಿವೃದ್ಧಿ ಹೀನ ಉತ್ತರ ಕರ್ನಾಟಕ ಜನರ ಮೇಲೆ ಹೊರೆಯಾಗಲಿದೆ. ತೆರಿಗೆ ಕಟ್ಟಲು ಬೇಕು, ಅಭಿವೃದ್ಧಿ ಅನುದಾನ ಪಡೆಯಲು ಇಲ್ಲ ಎಂಬ ಅನ್ಯಾಯ ಸಹಿಸಲು ಅಸಾಧ್ಯ. 
 ಅಪ್ಪಾಸಾಹೇಬ ಪಟ್ಟಣಶಟ್ಟಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next