Advertisement

ಸ್ವಚ್ಛತೆ ಜಾಗೃತಿಗೆ ಶಾಲೆಗಳಿಗೆ ಬರುತ್ತಿದ್ದಾರೆ ಕುದ್ರೋಳಿ ಗಣೇಶ್‌!

10:59 AM Jun 14, 2018 | Team Udayavani |

ಮಹಾನಗರ : ಇಂದು ಎಲ್ಲಿ ನೋಡಿದರಲ್ಲಿ ಕಸ. ಸುತ್ತಮುತ್ತ ಸ್ವಚ್ಛತೆ ಮರೆಯಾಗಿದೆ. ಅದರಲ್ಲೂ ಯುವಕರು ಸ್ವಚ್ಛತೆಯನ್ನು ಕಡೆಗಣಿಸುತ್ತಿದ್ದಾರೆ. ಮಕ್ಕಳಲ್ಲಿ ಎಳೆಯದರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ವಿಸ್ಮಯ ಜಾದೂ ತಂಡದ ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್‌ ಅವರು ಜಿಲ್ಲೆಯ ನೂರು ಶಾಲೆಗಳಲ್ಲಿ ‘ಸ್ವಚ್ಛತೆಗಾಗಿ ಜಾದೂ’ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ಮುಂದಿನ ಪೀಳಿಗೆಗೆ ಸ್ವಚ್ಛತೆ ಬಗ್ಗೆ ತಿಳಿಸುವ ಸಂದೇಶವನ್ನು ಜಾದೂ ಪ್ರದರ್ಶನದ ಹೊಂದಿದೆ. ಭಾಷಣದ ಮೂಲಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದಕ್ಕಿಂತ ಜಾದೂ ಪ್ರದರ್ಶನದ ಮೂಲಕ ಪ್ರಸ್ತುತಪಡಿಸಲು ಕುದ್ರೋಳಿ ಗಣೇಶ್‌ ತಯಾರಾಗಿದ್ದಾರೆ.

ಅಂದಹಾಗೆ, ಕುದ್ರೋಳಿ ಗಣೇಶ್‌ ಅವರ ತಂಡ ಕಳೆದ ವರ್ಷ ಜಾಥಾ ಮತ್ತು ಬೀದಿ ನಾಟಕಗಳನ್ನು ಏರ್ಪಡಿಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಜತೆಗೆ ವಿವಿಧ ಶಾಲೆಗಳಿಗೆ ತೆರಳಿ ಶಿಕ್ಷಣಕ್ಕಾಗಿ ಜಾದೂ ಪ್ರದರ್ಶನ ಏರ್ಪಡಿಸಿದ್ದರು. ಸ್ವಚ್ಛತೆ ಬಗ್ಗೆ ಮುಂದಿನ ಪೀಳಿಗೆಗೆ ಆಳವಾದ ಜಾಗೃತಿ ಮೂಡಬೇಕು ಎಂಬ ಉದ್ದೇಶದಿಂದ ಇದೀಗ ಪುಟಾಣಿ ಮಕ್ಕಳಿಗೆ ಜಾದೂ ಪ್ರದರ್ಶನ ನೀಡಲು ಮುಂದಾಗಿದ್ದಾರೆ.

20 ನಿಮಿಷಗಳ ಕಾಲ ಪ್ರದರ್ಶನ
ಜಾದೂ ಪ್ರದರ್ಶನ ಆರಂಭದಲ್ಲಿ ವಿದ್ಯಾರ್ಥಿಗಳನ್ನು ಖುಷಿಪಡಿಸುವ ಉದ್ದೇಶದಿಂದ 20 ನಿಮಿಷಗಳ ಕಾಲ ರಂಜನೀಯ ಜಾದೂ ನಡೆಯಲಿದೆ. ಇದಾದ ಬಳಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಜಾದೂಪ್ರದರ್ಶನ ಪ್ರಾರಂಭವಾಗಲಿದೆ. ಕುದ್ರೋಳಿ ಗಣೇಶ್‌ ಅವರ ಜತೆ ರಾಮಕೃಷ್ಣ ಮಿಷನ್‌ ಸ್ವಚ್ಛ ಮಂಗಳೂರು ಸಹಯೋಗದಲ್ಲಿ, ಎಂಆರ್‌ ಪಿಲ್‌ ಪ್ರಾಯೋಜಕತ್ವ ಇರಲಿದೆ.

ಹೇಗಿರಲಿದೆ ಮ್ಯಾಜಿಕ್‌
ಮೊದಲನೆಯ ಪ್ರದರ್ಶನವಾಗಿ ‘ನಮಗೆ ಇರುವುದು ಒಂದೇ ಭೂಮಿ. ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂಬ ವಿಷಯಕ್ಕೆ ಸಂಬಂಧಿಸಿದ ಜಾದೂ ನಡೆಯಲಿದೆ. ಜಾದೂ ಪ್ರಾರಂಭದಲ್ಲಿ ಭೂಮಿಯನ್ನು ಸಂಕೇತಿಸುವ ಮಾಯಾ ಪೆಟ್ಟಿಗೆ ಇರಲಿದ್ದು, ನೀರು, ಗಾಳಿ ಆಶ್ರಯ ಸಾಂಕೇತಿಕವಾಗಿ ಬರುತ್ತದೆ. ನಾವು ಭೂಮಿಗೆ ಹಾಕುತ್ತಿರುವ ಕಸ, ತ್ಯಾಜ್ಯ, ಪ್ಲಾಸ್ಟಿಕ್‌ಗಳನ್ನು ಪೊರಕೆ ಸಹಾಯದಿಂದ ಸ್ವಚ್ಛತೆ ಮಾಡಿದಾಗ ಅಲ್ಲಿ ಪ್ಲಾಸ್ಟಿಕ್‌ ಮಾಯವಾಗುತ್ತದೆ. ಅದೇ ಸಮಯದಲ್ಲಿ ಜಾದೂ ಪೆಟ್ಟಿಗೆ ಯಿಂದ ಭೂಮಿಯ ಗೋಳ ಹೊರ ಬರುತ್ತದೆ. ಇರುವುದೊಂದೇ ಭೂಮಿ ಇದರ ಸ್ವಚ್ಛತೆ ನಮ್ಮೆಲ್ಲರ ಹೊಣೆ ಎಂಬ ವಿಷಯವನ್ನು ಜಾದೂ ಜತೆ ಹಾಡಿನ ಮೂಲಕ ತಿಳಿಸಲಾಗುತ್ತದೆ. 

Advertisement

ಕಸ ಎಸೆದರೆ ಪರಿಸರ ಮಾಲಿನ್ಯವಾಗುತ್ತದೆ. ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂಬ ವಿಷಯಕ್ಕೆ ಸಂಬಂಧಿಸಿದ ಜಾದು ಕೂಡ ಪ್ರದರ್ಶನ ವಾಗಲಿದೆ. ಅಲ್ಲದೆ, ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು, ‘ದೇಹದ ಸ್ವತ್ಛತೆ, ದೇಶದ ಸ್ವಚ್ಛತೆ’ ಎಂಬ ಪರಿಕಲ್ಪನೆಯ ಜಾದೂ ಪ್ರದರ್ಶನ ನಡೆಯಲಿದೆ. ಇದರ
ಜತೆ ಕಸಕ್ಕೂ ಮೌಲ್ಯವಿದೆ ಜತೆಗೆ ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಸಂದೇಶ ಜಾದೂ ಮೂಲಕ ಕುದ್ರೋಳಿ ಗಣೇಶ್‌ ಅವರ ತಂಡ ವಿದ್ಯಾರ್ಥಿಗಳಿಗೆ ಪ್ರಸ್ತುಪಡಿಸಲಾಗುತ್ತದೆ.

ಎಷ್ಟು ಶಾಲೆಗಳಲ್ಲಿ ನಡೆಯಲಿದೆ
ಸ್ವಚ್ಛತೆಗಾಗಿ ಜಾದೂ ಪ್ರದರ್ಶನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 50 ದಿನಗಳ ಕಾಲ ನಡೆಯಲಿದೆ. ಜಿಲ್ಲೆಯ 100 ಕನ್ನಡ ಮತ್ತು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕುದ್ರೋಳಿ ಗಣೇಶ್‌ ಅವರ ತಂಡ ತೆರಳಿ ಒಟ್ಟಾರೆ 100 ಪ್ರದರ್ಶನ ನಡೆಸಲಿದ್ದಾರೆ. ಪ್ರತೀ ಶಾಲೆಯಲ್ಲಿ ಒಂದೂವರೆ ಗಂಟೆಗಳ ಕಾಲ ಪ್ರದರ್ಶನ ನಡೆಯಲಿದೆ.

ಮಕ್ಕಳು ಆಕರ್ಷಣೆ
ಜಾದೂ ಪ್ರದರ್ಶನಕ್ಕೆ ಮಕ್ಕಳು ತತ್‌ಕ್ಷಣ ಆಕರ್ಷಿತರಾಗುತ್ತಾರೆ. ಜಾದೂ ಎಂಬುವುದು ವೈಜ್ಞಾನಿಕ ಕಲೆ. ಇದರ ಮುಖಾಂತರ ಮಾಹಿತಿಗಳು ಮಕ್ಕಳ ಮನಸ್ಸಿಗೆ ನಾಟಬಹುದು. ಈ ಕಾರ್ಯಕ್ರಮದಲ್ಲಿ ಹಾಡಿನ ಜೊತೆ ಜಾದು ಪ್ರದರ್ಶನ ಸಾಗುತ್ತದೆ.
 – ಕುದ್ರೋಳಿ ಗಣೇಶ್‌,
   ಜಾದೂಗಾರ

ಬದಲಾವಣೆ ಮಕ್ಕಳಿಂದ ಸಾಧ್ಯ
ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಮಕ್ಕಳಿಂದಲೇ ಸಾಧ್ಯ. ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಪರಿಕಲ್ಪನೆ ಮೂಡಿಸುವ ಉದ್ದೇಶ ನಮ್ಮದು. ಆಗ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಸ್ವಚ್ಛತೆಗಾಗಿ ಜಾದೂ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮಕ್ಕಳಿಗೆ ಮನೋರಂಜನೆ ಇಷ್ಟ. ಇದರ ಜತೆ ಜಾದೂ ಮೂಲಕ ತಿಳಿಸಿದರೆ ಅದರ ಪ್ರಭಾವ ಹೆಚ್ಚು.
-ಸ್ವಾಮಿ ಏಕಗಮ್ಯಾನಂದ, ರಾಮಕೃಷ್ಣ ಮಿಷನ್‌
ಸ್ವಚ್ಛತಾ ಅಭಿಯಾನ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next