Advertisement

KSCA ಮಹಾರಾಜ ಟಿ20: ಕ್ರಿಕೆಟ್‌ ಶರತ್‌ ಸ್ಫೋಟಕ ಶತಕ; ಮಂಗಳೂರಿಗೆ ಜಯ

11:31 PM Aug 15, 2023 | Team Udayavani |

ಬೆಂಗಳೂರು: ಸೋಮವಾರ ಮಹಾರಾಜ ಟಿ20 ಕೂಟಕ್ಕೆ ಪದಾರ್ಪಣೆ ಮಾಡಿದ್ದ ಮಂಗಳೂರು ಡ್ರ್ಯಾಗನ್ಸ್‌, ಮಂಗಳವಾರ ಮೈಸೂರು ವಾರಿಯರ್ಸ್‌ ವಿರುದ್ಧ ರೋಚಕ ಜಯ ಗಳಿಸಿತು. ಬೃಹತ್‌ ಮೊತ್ತ ದಾಖಲಾದ ಈ ಪಂದ್ಯದಲ್ಲಿ ಇತ್ತಂಡಗಳೂ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದವು.

Advertisement

ಮೊದಲು ಬ್ಯಾಟ್‌ ಮಾಡಿದ ಕರುಣ್‌ ನಾಯರ್‌ ನಾಯಕತ್ವದ ಮೈಸೂರು ವಾರಿಯರ್ಸ್‌, 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಮಂಗಳೂರು ಡ್ರ್ಯಾಗನ್ಸ್‌ ಕೇವಲ 18.5 ಓವರ್‌ಗಳಲ್ಲಿ ಸರಿಯಾಗಿ 5 ವಿಕೆಟ್‌ಗಳ ನಷ್ಟಕ್ಕೆ 202 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಮೈಸೂರು ಪರ ನಾಯಕ ಕರುಣ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. 39 ಎಸೆತ ಎದುರಿಸಿದ ಅವರು 9 ಬೌಂಡರಿ, 2 ಸಿಕ್ಸರ್‌ ಸಹಿತ 77 ರನ್‌ ಗಳಿಸಿದರು. ಇವರಿಗೆ ಕೋದಂಡ ಕಾರ್ತಿಕ್‌ (29), ರಾಹುಲ್‌ ರಾವತ್‌ (24) ನೆರವು ನೀಡಿದರು. ಕೊನೆಯ ಹಂತದಲ್ಲಿ ಕೇವಲ 10 ಎಸೆತಗಳಲ್ಲಿ ಮನೋಜ್‌ ಭಾಂಡಗೆ 26 ರನ್‌ ಹೊಡೆದರು.

ಈ ಬೃಹತ್‌ ಮೊತ್ತವನ್ನು ಮಂಗಳೂರು ಸುಲಭವಾಗಿ ಮೀರಿ ನಿಂತಿತು. ಬಿ.ಆರ್‌. ಶರತ್‌ 61 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಸಹಿತ 111 ರನ್‌ ಸಿಡಿಸಿದರು. ಅವರ ಬ್ಯಾಟಿಂಗ್‌ ತೀವ್ರತೆ ಹೇಗಿತ್ತೆಂದರೆ ಇಡೀ ಮೈದಾನದ ತುಂಬೆಲ್ಲ ಚೆಂಡು ಹರಿದಾಡಿತು. ಕಡೆಗೂ ಇವರನ್ನು ಔಟ್‌ ಮಾಡಲು ಆಗಲಿಲ್ಲ. ಇನ್ನೊಂದು ಕಡೆ ಆರಂಭಿಕ ರೋಹನ್‌ ಪಾಟೀಲ್‌ 27 ಎಸೆತಗಳಲ್ಲಿ 54 ರನ್‌ ಗಳಿಸಿದರು. ಇದರಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳು ಸೇರಿದ್ದವು. ಮೈಸೂರು ಪರ ಎಂ. ವೆಂಕಟೇಶ್‌, ಜೆ. ಸುಚಿತ್‌ ತಲಾ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌
ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 5 ವಿಕೆಟಿಗೆ 201 (ಕರುಣ್‌ ನಾಯರ್‌ 77, ಕೋದಂಡ ಕಾರ್ತಿಕ್‌ 29). ಮಂಗಳೂರು 18.5 ಓವರ್‌ಗಳಲ್ಲಿ 5 ವಿಕೆಟಿಗೆ 202 (ಬಿ.ಆರ್‌.ಶರತ್‌ 111, ರೋಹನ್‌ ಪಾಟೀಲ್‌ 54, ಎಂ.ವೆಂಕಟೇಶ್‌ 36ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next