Advertisement

ಮತ್ತೆ ಮಕ್ಕಳ ಬಲಿ ಪಡೆದ ಮರಳು ದಂಧೆ

03:27 PM Aug 29, 2019 | Naveen |

ದತ್ತು ಕಮ್ಮಾರ
ಕೊಪ್ಪಳ:
ಕೊಪ್ಪಳದ ವಸತಿ ನಿಲಯದಲ್ಲಿ ಅಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್‌ ಅವಘಡದಲ್ಲಿ ಐವರು ವಿದ್ಯಾರ್ಥಿಗಳು ಧಾರಣವಾಗಿ ಮೃತಪಟ್ಟ ಬೆನ್ನಲ್ಲೇ ಕನಕಗಿರಿ ತಾಲೂಕಿನ ನವಲಿ ಬಳಿ ಅಕ್ರಮ ಮರಳು ದಂಧೆಯ ಭೂತಕ್ಕೆ ಮತ್ತೆ ಮೂವರು ಮಕ್ಕಳು ಮೃತಪಟ್ಟಿದ್ದು ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

Advertisement

ಹೌದು.. ಕೊಪ್ಪಳದ ಡಿ. ದೇವರಾಜ ಅರಸು ವಸತಿ ನಿಲಯದಲ್ಲಿ ಇತ್ತೀಚೆಗಷ್ಟೆ ಧ್ವಜಾರೋಹಣ ಕಂಬ ತೆರವು ಮಾಡುವ ವೇಳೆ ಐವರು ವಿದ್ಯಾರ್ಥಿಗಳು ಮೃತಪಟ್ಟಿರುವುದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೂಂದು ದೊಡ್ಡ ಅವಘಡ ನಡೆದಿದೆ.

ಘಟನೆ-01: ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದಿದ್ದ ಮಹಾರಾಷ್ಟ್ರ ಮೂಲದ ಎರಡು ಕುಟುಂಬಗಳ ಮೂರು ಮಕ್ಕಳು ನವಲಿ ಬಳಿ ಮರಳು ದಿನ್ನೆಯಲ್ಲಿ ಸಿಲುಕಿ ಮೃತಪಟ್ಟಿದ್ದು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಅರ್ಜುನ್‌ ಅವರ ಮಕ್ಕಳಾದ ಕವಿತಾ(03), ಸವಿತಾ(02) ಹಾಗೂ ಇಕ್ಕಲ್ ಅವರ ಮಗಳು ಸೋನಂ(01) ಧಾರುಣವಾಗಿ ಮೃತಪಟ್ಟಿದ್ದಾರೆ. ಹೆತ್ತವರ ಆಕ್ರಂದನ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದವು. ಇವರು ದುಡಿಮೆ ಅರಸಿ ಜಿಲ್ಲೆಗೆ ಗುಳೆ ಬಂದಿದ್ದರು. ಕಟ್ಟಿಗೆ ಇದ್ದಲು ಮಾರಾಟ ಮಾಡಿ ಬಂದ ಹಣದಲ್ಲೇ ಜೀವನ ನಡೆಸುತ್ತಿದ್ದರು. ಆದರೆ ಮಕ್ಕಳು ಮರಳು ದಿನ್ನೆ ಸ್ಥಳಕ್ಕೆ ತೆರಳಿದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ. ಅದೃಷ್ಟವಶಾತ್‌ ಎರಡು ಮಕ್ಕಳು ಪಾರಾಗಿದ್ದಾರೆ.

ಘಟನೆ-02: ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದಲ್ಲಿ 2018ರ ಡಿಸೆಂಬರ್‌ ತಿಂಗಳಲ್ಲಿ ಓಜಿನಹಳ್ಳಿ ಸಮೀಪದಲ್ಲಿ ಇಬ್ಬರು ವಿದ್ಯಾರ್ಥಿಗಳು ಆಟವಾಡುತ್ತಾ ಹಳ್ಳದ ದಡದತ್ತ ತೆರಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಓಜಿನಹಳ್ಳಿ ಭಾಗದಲ್ಲೂ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದು ಮರಳು ತೆಗೆದ ಅಕ್ರಮ ದಂಧೆಕೋರರು ಗುಂಡಿ ತೋಡಿದ್ದರು. ಮಳೆ ನೀರು ಬಂದಾಗ ಗುಂಡಿಯಲ್ಲಿ ನೀರು ಸಂಗ್ರಹವಾಗಿದ್ದವು. ಬಾಲಕರಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು.

ಅಧಿಕಾರಿಗಳ ನಿರ್ಲಕ್ಷ್ಯ: ಜಿಲ್ಲೆಯ ಮೂರು ಘಟನೆಗಳು ಕೇವಲ ಉದಾಹರಣೆಗಳಷ್ಟೇ. ಇಂತಹ ಹಲವು ಘಟನೆಗಳು ವಿವಿಧ ಹೋಬಳಿಯಲ್ಲಿ ನಡೆದಿವೆ. ಆದರೆ ಕೆಲವೊಂದು ಪ್ರಕರಣ ಬೆಳಕಿಗೆ ಬರುವ ಮುನ್ನವೇ ಮರೆಯಾಗಿವೆ. ಎಲ್ಲ ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತಿದೆ. ಹಾಸ್ಟೆಲ್ ಘಟನೆಯಲ್ಲಿ ವಾರ್ಡನ್‌, ಜೆಸ್ಕಾಂ, ಮಾಲಿಕನ ನಿರ್ಲಕ್ಷ ್ಯವಿದ್ದರೆ, ಮರಳು ಅಕ್ರಮ ಸಾಗಾಟ ಅವ್ಯಾಹತವಾಗಿ ನಡೆಯುತಿ ್ತದ್ದರೂ ಅಧಿಕಾರಿಗಳಿಗೆ ಅದು ಗಮನಕ್ಕೆ ಇಲ್ಲವೆಂಬಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ನೈಜ ಫೋಟೋ, ನಿಗತ ಸ್ಥಳದ ಹೆಸರು ಉಲ್ಲೇಖ ಮಾಡಿದರೂ ಅಧಿಕಾರಿಗಳು ಅಲ್ಲಲ್ಲಿ ದಾಳಿ ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇನ್ನೂ ಪೊಲೀಸರು ಅಕ್ರಮ ದಂಧೆ ಜೊತೆ ಕೈ ಜೋಡಿಸಿದ್ದಾರೆ ಎನ್ನುವ ಆಪಾದನೆ ಸಾಮಾನ್ಯವಾಗಿದೆ. ಹೀಗಾಗಿ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿವೆ. ಹಳ್ಳ ಕೊಳ್ಳಗಳಲ್ಲಿ, ನದಿ ಪಾತ್ರದ ಪ್ರದೇಶದಲ್ಲಿ ಕಂದಕಗಳಂತೆ ಗುಂಡಿ ಅಗೆಯಲಾಗಿದೆ. ಅಧಿಕಾರಿಗಳು ವರ್ಷಕ್ಕೆ ಲೆಕ್ಕಾಚಾರದಷ್ಟು ಕೇಸ್‌ ಮಾಡಿ ಸುಮ್ಮನಾಗುತ್ತಿದ್ದಾರೆ. ಅಕ್ರಮದಿಂದ ಅಮಾಯಕರು, ಮಕ್ಕಳು ಬಲಿಯಾಗುತ್ತಿದ್ದಾರೆ. ಜಿಲ್ಲಾಡಳಿತ ಮಾತ್ರ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಸ್ಥಳೀಯ ಶಾಸಕ ಬಸವರಾಜ ದಢೇಸುಗೂರು ಅವರಿಗೆ ಈ ಅಕ್ರಮದ ಬಗ್ಗೆ ಗೊತ್ತಿಲ್ಲವೇ? ಪೊಲೀಸ್‌ ಇಲಾಖೆ ಸೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಇದರ ಅರಿವಿಲ್ಲವೇ? ಕನಕಗಿರಿ ತಹಶೀಲ್ದಾರ್‌ ಅವರಿಗೆ ಇದು ಕಣ್ಣಿಗೆ ಕಾಣಲಿಲ್ಲವೇ ಎನ್ನುವ ಹಲವು ಪ್ರಶ್ನೆಗಳು ಕೇಳಿ ಬರುತ್ತಿವೆ. ಇಂತಹ ಅಕ್ರಮಗಳ ಬಗ್ಗೆ ಅಧಿಕಾರಿ ವರ್ಗವೇ ಬಾಯಿ ಬಿಡಬೇಕಿದೆ.

ಕ್ರಮಕ್ಕೆ ಒತ್ತಾಯ
ನವಲಿ ಗ್ರಾಮದಲ್ಲಿ ಮರಳು ಅಕ್ರಮ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ತಾಲೂಕಿನ ಚಿಕ್ಕಖೇಡಾದಲ್ಲಿ ಎರಡು ವರ್ಷಗಳ ಹಿಂದೆ ಮರಳಿನ ದಿಬ್ಬ ಕುಸಿದು ಯುವಕ ಮೃತಪಟ್ಟಿದ್ದ. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನವಲಿ ಗ್ರಾಮಸ್ಥರು ಒತ್ತಾಯಿಸಿದರು.

ನವಲಿ ಬಳಿ ಮರಳು ದಿಬ್ಬ ಕುಸಿದು ಮೂರು ಮಕ್ಕಳು ಮೃತಪಟ್ಟಿದ್ದಾರೆ. ನಾನು ಘಟನಾ ಸ್ಥಳದಲ್ಲಿದ್ದೇನೆ. ಸದ್ಯಕ್ಕೆ ಭೂ ಮಾಲಿಕ ಗುರುಶಾಂತಯ್ಯ ಅವರ ಮೇಲೆ ಪ್ರಕರಣ ದಾಖಲಿಸಿದ್ದು, ಪ್ರಕರಣ ತನಿಖೆ ಆರಂಭಿಸಿದ್ದೇವೆ. ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ರೇಣುಕಾ ಸುಕುಮಾರ, ಎಸ್‌ಪಿ

ನವಲಿ, ಮುಸ್ಟೂರು, ಅಯೋಧ್ಯಾ, ಗೂಗಿ ಬಂಡಿ ಕ್ಯಾಂಪ್‌, ಕಕ್ಕರಗೋಳು, ಉಳೇನೂರು ಬೆನ್ನೂರು ಬೆಣಕಲ್, ಹಮಗುಡ್ಡ, ವೆಂಕಟಗಿರಿ, ಸಿದ್ದಿಕೇರಿ ಭಾಗದಲ್ಲಿ ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ತಡೆಯಲು ಪೊಲೀಸ್‌ ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ನವಲಿ ಹತ್ತಿರ ಖಾಸಗಿ ವ್ಯಕ್ತಿಗಳ ಹೊಲದಲ್ಲಿ ಅಕ್ರಮ ಮರಳು ದಂಧೆ ನಡೆಸಿದ್ದರಿಂದ ಇಡೀ ಭೂಮಿ ಮರಳು ದಿಬ್ಬಗಳುಂಟಾಗಿದ್ದು ಮೇಲಿಂದ ಮೇಲೆ ಅನಾಹುತಗಳು ನಡೆಯುತ್ತಿವೆ. ಬುಧವಾರ ಮೂರು ಮಕ್ಕಳ ದುರಂತ ಸಾವು ಎಲ್ಲರೂ ತಲೆ ತಗ್ಗಿಸುವ ಘಟನೆ. ಪೊಲೀಸರು ಭೂ ಮಾಲೀಕರ ವಿರುದ್ಧ ಕೇಸ್‌ ದಾಖಲಿಸಬೇಕು. ಸರಕಾರ ಸೂಕ್ತ ಪರಿಹಾರ ಕೊಡಬೇಕು.
ಜೆ. ಭಾರದ್ವಾಜ್‌,
 ಪ್ರಗತಿಪರ ಹೋರಾಟಗಾರ

 

Advertisement

Udayavani is now on Telegram. Click here to join our channel and stay updated with the latest news.

Next