Advertisement

ಪ್ರವಾಸದ ಆಸೆಯ ಹುಡುಗಿ ಇಹದ ಯಾತ್ರೆ ಮುಗಿಸಿದಳು!

11:24 AM Dec 17, 2018 | Team Udayavani |

ಸವಣೂರು : ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮೂಲೆತ್ತಡ್ಕ ಎಂಬಲ್ಲಿ ಶನಿವಾರ ಇಬ್ಬರು ಹೆಣ್ಣುಮಕ್ಕಳು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದು, ಈ ಘಟನೆಯಿಂದ ಇಡೀ ಊರಲ್ಲಿ ಶ್ಮಶಾನ ಮೌನ ಆವರಿಸಿದೆ. ಅಲ್ಲಿನ ಮನೆಯಲ್ಲಿ ಮಾತಿಲ್ಲ, ಕಥೆಯಿಲ್ಲ. ಕಣ್ಣೀರಧಾರೆಯೇ ಉತ್ತರವಾಗಿತ್ತು.

Advertisement

ಮೂಲೆತ್ತಡ್ಕ ಉದಯ ಭಟ್‌ ಅವರ ತೋಟದಲ್ಲಿ ನಿರ್ಮಿಸಿದ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದು ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಾದ ಕೊಳ್ತಿಗೆ ಗ್ರಾಮದ ಕೆಂಪುಗುಡ್ಡೆ ಗುಡ್ಡಪ್ಪ ಗೌಡ ಎಂಬವರ ಪುತ್ರಿ ಪ್ರಜ್ಞಾ (12) ಹಾಗೂ ದಾಮೋದರ ಗೌಡ ಎಂಬವರ ಪುತ್ರಿ ಸಂಜನಾ (9) ಜೀವ ಕಳೆದುಕೊಂಡಿದ್ದು, ಊರಲ್ಲೇ ನೀರವ ಆವರಿಸುವಂತೆ ಮಾಡಿದೆ.

ಗುಡ್ಡಪ್ಪ ಗೌಡ ಹಾಗೂ ದಾಮೋದರ ಗೌಡ ಅಣ್ಣ-ತಮ್ಮಂದಿರು. ಪ್ರಜ್ಞಾ ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಹಾಗೂ ಶಾಲಾ ನಾಯಕಿ. ಸಂಜನಾ 4ನೇ ತರಗತಿ ಓದುತ್ತಿದ್ದಳು. ಸಂಜನಾಳ ತಂದೆ ದಾಮೋದರ ಗೌಡ ಮಂಗಳೂರಿನಲ್ಲಿ ರಿಕ್ಷಾ ಚಾಲಕನಾಗಿದ್ದು, ತಾಯಿ ಜ್ಯೋತಿ ಗೃಹಿಣಿ. ಸಂಜನಾಳ ಅವಳಿ ಸಹೋದರಿ ಸಿಂಚನಾ ಪೆರ್ಲಂಪಾಡಿ ಶಾಲೆಯಲ್ಲೇ ಓದುತ್ತಿದ್ದಾಳೆ. ಪ್ರಜ್ಞಾಳ ತಂದೆ ಗುಡ್ಡಪ್ಪ ಗೌಡರು ಪೆರ್ಲಂಪಾಡಿಯಲ್ಲಿ ಗೂಡಂಗಡಿ ವ್ಯಾಪಾರಿಯಾಗಿದ್ದು, ತಾಯಿ ಜಯಲಕ್ಷ್ಮೀ ಗೃಹಿಣಿ. ಪ್ರಜ್ಞಾಳ ಅಣ್ಣ ಹರ್ಷಿತ್‌ ಬೆಳ್ಳಾರೆ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿ.

ಪ್ರವಾಸದ ಆಸೆ
ಪೆರ್ಲಂಪಾಡಿ ಶಾಲಾ ನಾಯಕಿಯಾಗಿರುವ ಪ್ರಜ್ಞಾ ಪ್ರತಿಭಾನ್ವಿತೆ. ತನ್ನ ಚುರುಕುತನದಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಳು. ಶಾಲೆಯ ಎಲ್ಲ ಚಟುವಟಿಕೆಯಲ್ಲೂ ಆಕೆ ಮುಂದಿದ್ದಳು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪ್ರವಾಸ ಆಯೋಜಿಸುವಂತೆ ಮುಖ್ಯ ಗುರುಗಳಲ್ಲಿ ಕೆಲ ದಿನಗಳ ಹಿಂದಷ್ಟೇ ವಿನಂತಿಸಿದ್ದಳು. ಆದರೆ  ಮುಖ್ಯಶಿಕ್ಷಕ ಲಕ್ಷ್ಮಣ ನಾಯ್ಕ, ವಾರ್ಷಿಕೋತ್ಸವದಲ್ಲಿ ನೀವೆಲ್ಲ ಸಂಭ್ರಮಿಸಿದ್ದೀರಿ. ಶಾಲೆಯ ಪ್ರತಿ ಕಾರ್ಯಕ್ರಮಕ್ಕೂ ಹೆತ್ತವರು ಧನಸಹಾಯ ನೀಡುತ್ತಿದ್ದು, ಪ್ರವಾಸ ಆಯೋಜಿಸಿದರೆ ಬಡ ಮಕ್ಕಳ ಹೆತ್ತವರಿಗೆ ಹೊರೆಯಾಗುತ್ತದೆ ಎಂದು ಪ್ರಜ್ಞಾಗೆ ಮನವರಿಕೆ ಮಾಡಿಕೊಟ್ಟಿದ್ದರು.

ಆದರೂ ಪ್ರಜ್ಞಾ ಶಾಲೆಯ 148 ಮಕ್ಕಳ ಪೈಕಿ 50 ಮಕ್ಕಳನ್ನು ಒಗ್ಗೂಡಿಸಿ, ಅವರ ಮನೆಯವರನ್ನು ಒಪ್ಪಿಸಿ, ಪ್ರವಾಸ ಕೈಗೊಳ್ಳುವಂತೆ ಮುಖ್ಯಶಿಕ್ಷಕರಲ್ಲಿ ಮತ್ತೊಮ್ಮೆ ವಿನಂತಿಸಿದ್ದಳು. ಈ ಸಲ ಇಲ್ಲವೆನ್ನಲಾಗದೆ ಡಿ. 14ರಂದು ಹೆತ್ತವರ ಸಭೆ ಕರೆದು, ಡಿ. 26 ಹಾಗೂ 27ರಂದು ಬೇಲೂರು, ಹಳೆಬೀಡು ಸಹಿತ ಹಲವು ಕಡೆಗಳಿಗೆ ಪ್ರವಾಸ ಕೈಗೊಳ್ಳುವ ಕುರಿತು ನಿರ್ಧರಿಸಲಾಗಿತ್ತು. ಶನಿವಾರ ಪ್ರಜ್ಞಾ ಇಹಲೋಕ ತ್ಯಜಿಸಿದ್ದರಿಂದ ಪ್ರವಾಸ ರದ್ದು ಮಾಡಲಾಗಿದೆ. ಇದನ್ನು ನೆನೆದು ಕಣ್ಣೀರಿಟ್ಟ ಮುಖ್ಯ ಗುರು ಲಕ್ಷ್ಮಣ ನಾಯ್ಕ ಕುಸಿದು ಕುಳಿತರು.

Advertisement

ಬಡ ಕುಟುಂಬ
ಇಬ್ಬರೂ ವಿದ್ಯಾರ್ಥಿನಿಯರ ಕುಟುಂಬಗಳು ಬಡತನದಲ್ಲಿದ್ದು, ದುಡಿಮೆಯನ್ನೇ ನೆಚ್ಚಿಕೊಂಡಿವೆ. ಮಕ್ಕಳ ಭವಿಷ್ಯದ ಕುರಿತು ಸುಂದರ ಕನಸು ಕಂಡಿದ್ದ ಮನೆಯವರಿಗೆ ವಿಧಿ ಕ್ರೂರವಾಗಿ ಕಾಡಿದೆ.

ನೀರಿನ ತೊಟ್ಟಿಯಲ್ಲಿ ಕಾದಿತ್ತು ಸಾವು!
ಪ್ರಜ್ಞಾ ಹಾಗೂ ಸಂಜನಾ ಮನೆ ಮಧ್ಯೆ 100 ಮೀ. ಅಂತರವಿದೆ. ಶನಿವಾರ ಜ್ವರವಿದ್ದ ಕಾರಣ ಪ್ರಜ್ಞಾ ಶಾಲೆಗೆ ಹೋಗಿರಲಿಲ್ಲ. ಮಧ್ಯಾಹ್ನದ ವೇಳೆಗೆ ತಾಯಿಯ ಜತೆಗೆ ಬೆಳ್ಳಾರೆಗೆ ಔಷಧಿ ತರಲು ಹೋಗಿದ್ದು, ಪ್ರವಾಸಕ್ಕಾಗಿ ಬಳೆ, ಕಿವಿಯೋಲೆ ಇತ್ಯಾದಿಗಳನ್ನು ಖರೀದಿಸಿ ತಂದಿದ್ದಳು. ಸಂಜೆ ಸಂಜನಾಳ ಮನೆಗೆ ತೆರಳಿದ್ದ ಪ್ರಜ್ಞಾ ಅಲ್ಲಿ ವಾರ್ಷಿಕೋತ್ಸವದ ದಿನ ಮಾಡಿದ್ದ ನೃತ್ಯವನ್ನು ಮತ್ತೂಮ್ಮೆ ಮಾಡಿ, ಬಳಿಕ ಮನೆ ಸಮೀಪದ ಮೂಲೆತ್ತಡ್ಕ ಉದಯ ಭಟ್‌ ಅವರ ಜಾಗದಲ್ಲಿದ್ದ 80ಗಿ45 ಅಡಿ ಅಗಲ ಹಾಗೂ 13 ಅಡಿ ಆಳದ ನೀರಿನ ತೊಟ್ಟಿ ಬಳಿ ಆಡಲು ತೆರಳಿದ್ದರು. ತೊಟ್ಟಿಯ ಬದಿಯಲ್ಲಿ ಕುಳಿತು, ಕಾಲುಗಳನ್ನು ನೀರಲ್ಲಿ ಇಳಿಬಿಟ್ಟು ಆಡುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದಿರಬೇಕೆಂದು ಶಂಕಿಸಲಾಗಿದೆ.

ಕಲ್ಲನ್ನೂ ಮಾತಾಡಿಸಬಲ್ಲ ಹುಡುಗಿ!
ಅವಳಿ ಮಕ್ಕಳಾಗಿರುವ ಸಂಜನಾ ಮತ್ತು ಸಿಂಚನಾ ಇಬ್ಬರೂ ಮಾತಿನ ಮಲ್ಲಿಯರು. ಸದಾ ಜತೆಯಾಗಿಯೇ ಇರುತ್ತಿದ್ದ ಪ್ರಜ್ಞಾ ಹಾಗೂ ಸಂಜನಾ ಸಾವಿನಲ್ಲೂ ಒಂದಾಗಿದ್ದಾರೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ರವಿವಾರ ಮಧ್ಯಾಹ್ನ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮಧ್ಯಾಹ್ನದ ವೇಳೆಗೆ ಪ್ರಜ್ಞಾಳ ಮನೆ ಪಕ್ಕದಲ್ಲೇ ಒಂದೇ ಚಿತೆಯಲ್ಲಿ ಇಬ್ಬರಿಗೂ ಅಂತಿಮ ಸಂಸ್ಕಾರ ನಡೆಸಲಾಯಿತು. ನೆರೆದಿದ್ದವರು ಎಳೆಯ ಜೀವಗಳಿಗೆ ಕಣ್ಣೀರಿನ ವಿದಾಯ ಹೇಳಿದರು.

ಮೂಕ ಸಾಕ್ಷಿಯಾಗಿದ್ದವು ಮಕ್ಕಳ ಚಪ್ಪಲಿಗಳು
ಮಕ್ಕಳು ಸಂಜೆಯಾದರೂ ಸಂಜೆಯಾದರೂ ವಾಪಸ್‌ ಬಂದಿಲ್ಲವೆಂದು ಮನೆಯವರು ಕೂಗಿ ಕರೆದಿದ್ದಾರೆ. ಉತ್ತರ ಬಾರದೇ ಇದ್ದಾಗ ಹುಡುಕಲು ತೆರಳಿದ್ದಾರೆ. ಸಂಜನಾಳ ತಾಯಿ ಜ್ಯೋತಿ ಅವರಿಗೆ ತೊಟ್ಟಿಯ ಪಕ್ಕದಲ್ಲಿ ಚಪ್ಪಲಿಗಳು ಕಂಡಿವೆ. ತತ್‌ಕ್ಷಣ ಬೊಬ್ಬೆ ಹಾಕಿದರು. ಪಕ್ಕದ ಮನೆಯ ಅಜ್ಜಿ ನೀಲಮ್ಮ ಏನೋ ಅನಾಹುತವಾಗಿದೆ ಎಂದು ಧಾವಿಸಿ ಬಂದು, ಎಲ್ಲರನ್ನೂ ಕೂಗಿ ಕರೆದಿದ್ದಾರೆ. ಸ್ಥಳೀಯರಾದ ಜನಾರ್ದನ ಗೌಡ ಪೆರ್ಲಂಪಾಡಿ, ಕೇಶವ ಗೌಡ ಕಾನತ ಬರಿ, ಗಂಗಾಧರ ಕೂರೇಲು ಮತ್ತಿತರರ ಸಹಾಯದಿಂದ ಮಕ್ಕಳ ದೇಹಗಳನ್ನು ತೊಟ್ಟಿಯಿಂದ ಮೇಲೆತ್ತಲಾಯಿತು.

ದುರ್ಗಮ ಹಾದಿ ಪಯಣ
ಪೆರ್ಲಂಪಾಡಿಯಿಂದ ಮೂಲೆತ್ತಡ್ಕ, ಕೆಂಪುಗುಡ್ಡೆ ಸಂಪರ್ಕಿಸುವ ಮಾರ್ಗವು ತೀರಾ ಹದೆಗೆಟ್ಟಿದ್ದು, ಸಂಚಾರಕ್ಕೆ ದುರ್ಗಮವಾಗಿದೆ. ಕಿತ್ತು ಹೋದ ಡಾಮರು ರಸ್ತೆ, ಹೊಂಡಗುಂಡಿಗಳ ಕಚ್ಚಾ ರಸ್ತೆ ಇದು. ಪೆರ್ಲಂಪಾಡಿಗೆ ಮಕ್ಕಳೂ ಇದೇ ದಾರಿಯಾಗಿ 3 ಕಿ.ಮೀ.ಗೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕಿದೆ. ಇಂತಹ ಘಟನೆಗಳಿಂದ ಹಳ್ಳಿಗಾಡಿನ ಸಮಸ್ಯೆಗಳು ಸಾರ್ವಜನಿಕರ ಗಮನಕ್ಕೆ ಬರುತ್ತವೆ. ಈ ರಸ್ತೆ ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next