Advertisement

ಡೆಲ್ಲಿಗೆ ಕೆಕೆಆರ್‌ ಸವಾಲು

06:20 AM Apr 27, 2018 | |

ಹೊಸದಿಲ್ಲಿ: ಸತತ ಸೋಲು ಮತ್ತು ಗೌತಮ್‌ ಗಂಭೀರ್‌ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಕಂಗೆಟ್ಟಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಯುವ ನಾಯಕ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಶುಕ್ರವಾರ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಎದುರಿಸಲು ಸಿದ್ಧವಾಗಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ರಯತ್ನಿಸಲಿದೆ.

Advertisement

ಕೂಟದ ಮಧ್ಯದಲ್ಲಿಯೇ ಗಂಭೀರ್‌ ನಾಯಕತ್ವ ತೊರೆದಿರುವುದು ಡೆಲ್ಲಿಗೆ ದೊಡ್ಡ ಹೊಡೆತವಾಗಿದೆ. ಇದರಿಂದ ಡೆಲ್ಲಿ ತಂಡ ಚೇತರಿಸಿಕೊಳ್ಳಲು ತಂಡ ವ್ಯವಸ್ಥಾಪಕರು ಹೊಸ ಯೋಚನೆ, ಯೋಜನೆಗಳನ್ನು ರೂಪಿಸಬೇಕಾಗಿದೆ. ಶ್ರೇಯಸ್‌ ನಾಯಕತ್ವದಲ್ಲಿ ತಂಡ ತಿರುಗೇಟು ನೀಡಿದರೆ ತನ್ನ ಅಭಿಯಾನಕ್ಕೆ ಜೀವ ನೀಡಬಹುದು.

ಗಂಭೀರ್‌ ಅವರ ಸಹಿತ ಇತರ ಆಟಗಾರರ ಘೋರ ಬ್ಯಾಟಿಂಗ್‌ ವೈಫ‌ಲ್ಯದಿಂದ ಯುವ ರಿಷಬ್‌ ಪಂತ್‌ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಮ್ಯಾಕ್ಸ್‌ವೆಲ್‌ ಸಿಡಿಯುತ್ತಿಲ್ಲ. ತಂಡ ಇಷ್ಟರವರೆಗೆ ಆರು ಪಂದ್ಯಗಳನ್ನು ಆಡಿದ್ದು ಐದರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಡೆಲ್ಲಿ ತಿರುಗೇಟು ನೀಡಬೇಕಾದರೆ ಗಂಭೀರ್‌ ಕೂಡ ಸಿಡಿಯುವುದು ಅತ್ಯಗತ್ಯವಾಗಿದೆ. ಇನ್ನು ಎಂಟು ಪಂದ್ಯ ಬಾಕಿ ಉಳಿದಿದ್ದು ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ಕಡಿಮೆಪಕ್ಷ ಏಳರಲ್ಲಿ ಗೆಲುವು ಸಾಧಿಸಬೇಕಾಗಿದೆ. ಹಾಗಾಗಿ ತಂಡ ಆಲ್‌ರೌಂಡ್‌ ಪ್ರದರ್ಶನ ನೀಡುವುದು ಅಗತ್ಯವಾಗಿದೆ.

ಬ್ಯಾಟಿಂಗ್‌ನಲ್ಲಿ ಮಿಂಚುತ್ತಿರುವ 23ರ ಹರೆಯದ ಶ್ರೇಯಸ್‌ ಅಯ್ಯರ್‌ ಇನ್ನು ನಾಯಕತ್ವದ ಜವಾಬ್ದಾರಿ ವಹಿಸಬೇಕಾಗಿದೆ. ಹಾಗಾಗಿ ಒತ್ತಡದಿಂದಲೇ ಎದುರಾಳಿ ಜತೆ ಆಡಬೇಕಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪರಿಣಾಮಕಾರಿಯಾಗಿ ಆಡಿದರೆ ಮತ್ತು ಜತೆಗೆ ಅದೃಷ್ಟವೂ ಒಲಿದರೆ ಡೆಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳುವ ಸಾಧ್ಯತೆಯಿದೆ.

Advertisement

ಮ್ಯಾಕ್ಸ್‌ವೆಲ್‌ ವೈಫ‌ಲ್ಯ
ವಿದೇಶಿ ಆಟಗಾರರಾದ ಜಾಸನ್‌ ರಾಯ್‌ ಮತ್ತು ಕ್ರಿಸ್‌ ಮಾರಿಸ್‌ ಗಾಯದಿಂದ ಬಳಲುತ್ತಿದ್ದರೆ ಮ್ಯಾಕ್ಸ್‌ವೆಲ್‌ ಸಿಡಿಯದಿರುವುದು ಡೆಲ್ಲಿಯ ವೈಫ‌ಲ್ಯಕ್ಕೆ ಕಾರಣವಾಗಿದೆ. ಇಷ್ಟರವರೆಗಿನ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್‌ 17, 13, 57, 4 ಮತ್ತು 12 ರನ್‌ ಗಳಿಸಿದ್ದರು.

ಬೌಲಿಂಗ್‌ದಲ್ಲಿ ಒದ್ದಾಟ
ಕೆಕೆಆರ್‌ ಕೂಡ ಬೌಲಿಂಗ್‌ನಲ್ಲಿ ಒದ್ದಾಡುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡುತ್ತಿದೆ. ಆಟಗಾರರ ಉತ್ತಮ ನಿರ್ವಹಣೆಯಿಂದ ಕೆಕೆಆರ್‌ ಎರಡು ಬಾರಿ 200ರ ಮೊತ್ತ ಪೇರಿಸಿತ್ತು. ಕೆಕೆಆರ್‌ ಆಡಿದ ಆರು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದೆ ಈ ಎರಡು ತಂಡಗಳು ಪರಸ್ಪರ ಮುಖಾಮುಖೀಯಾದಾಗ ಕೆಕೆಆರ್‌ 200 ರನ್‌ ಪೇರಿಸಿತ್ತು ಮತ್ತು 71 ರನ್ನುಗಳಿಂದ ಜಯಭೇರಿ ಬಾರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next