Advertisement

ಗುಂಪುಗಾರಿಕೆ ನಡುವೆಯೂ ಕಾಂಗ್ರೆಸ್‌ದೇ ಪ್ರಾಬಲ್ಯ!

11:09 PM Apr 28, 2022 | Team Udayavani |

ಕೋಲಾರ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ರಂಗೇರು ತ್ತಿದೆ. ಹಾಲಿ, ಮಾಜಿ ಶಾಸಕರು ಮತ್ತು ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹೊಸಬರು ಜನರ ನಡುವೆ ಕಾಣಿಸಿಕೊಂಡು ಸಮಾಜ ಸೇವಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Advertisement

ಕಾಂಗ್ರೆಸ್‌ನಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಹಾಗೂ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣಗಳ ನಡುವೆ ವೈಮನಸ್ಯ ಮುಂದು ವರಿದಿದೆ. ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿ ವಾಸಗೌಡ, ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವುದ ರಿಂದ ಜಾತ್ಯತೀತ ಜನತಾ ದಳಕ್ಕೆ ನಾಯ ಕತ್ವದ ಕೊರತೆ ಎದುರಾಗಿದೆ. ಬಿಜೆಪಿ ಸಂಸದರ ನೇತೃತ್ವದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.

ಕೋಲಾರ ಕ್ಷೇತ್ರ: ಕಾಂಗ್ರೆಸ್‌ ಟಿಕೆಟ್‌ ಮೇಲೆ ಹಾಲಿ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಸೇರಿ ಡಜನ್‌ಗೂ ಅಧಿಕ ಮಂದಿ ಕಣ್ಣಿಟ್ಟು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌, ಅರಿಕೆರೆ ಮಂಜುನಾಥ ಗೌಡ, ಕೊತ್ತೂರು ಮಂಜುನಾಥ್‌, ಲಕ್ಷ್ಮಣ ಗೌಡ, ಕೆಜಿಎಫ್ ಬಾಬು, ಚಂದನ ಗೌಡ, ರಾಮಚಂದ್ರಗೌಡ ಹೀಗೆ ಪಟ್ಟಿ ಬೆಳೆಯುತ್ತದೆ.

ಜೆಡಿಎಸ್‌ನಲ್ಲಿ ಸಿಎಂಆರ್‌ ಶ್ರೀನಾಥ್‌, ಕುರ್ಕಿ ರಾಜೇಶ್ವರಿ ಟಿಕೆಟ್‌ ಕೇಳಿದ್ದಾರೆ. ಹೈಕಮಾಂಡ್‌ ಯಾರಿಗೂ ಹಸುರು ನಿಶಾನೆ ತೋರಿಲ್ಲ. ಅಗೋಚರ, ಅತೃಪ್ತ ಹಾಗೂ ತೂಕದ ಅಭ್ಯರ್ಥಿಗಳಿಗೆ ಪಕ್ಷವು ಕಾಯುತ್ತಿರುವಂತಿದೆ. ಬಿಜೆಪಿ ಗೆಲ್ಲಲೇ ಬೇಕೆಂಬ ಹಠ ತೊಟ್ಟು ಹಿಂದುತ್ವವನ್ನು ಕೆರಳಿಸುತ್ತಿದೆ. ಇದರ ಲಾಭ ಪಡೆಯಲು ಮಾಜಿ ಸಚಿವ ವರ್ತೂರು ಪ್ರಕಾಶ್‌ ಬಿಜೆಪಿ ಹೊಸ್ತಿಲಲ್ಲಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಕೋಚಿಮುಲ್‌ ನಿರ್ದೇಶಕ ವಡಗೂರು ಹರೀಶ್‌ ಬಿಜೆಪಿ ಟಿಕೆಟ್‌ ನಿರೀಕ್ಷಿಸುತ್ತಿದ್ದಾರೆ.

ಬಂಗಾರಪೇಟೆ: ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕೆ.ಚಂದ್ರಾರೆಡ್ಡಿ ಬಿಜೆಪಿ ಸೇರ್ಪಡೆಯಾದ ಮೇಲೆ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಚಟುವಟಿಕೆ ಚುರುಕುಗೊಂಡಿದೆ. ಬಿಜೆಪಿ ಅಭ್ಯರ್ಥಿಯಾಗಲು ಬಿ.ಪಿ. ಮಹೇಶ್‌ ಸನ್ನದ್ಧರಾಗುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿಯಾಗಿ ಹಿಂದಿನ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮಲ್ಲೇಶ್‌ ಬಿಂಬಿತರಾಗುತ್ತಿದ್ದಾರೆ. ಹಾಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಯ ಮೂರನೇ ಗೆಲುವಿಗೆ ಬಿಜೆಪಿ ಅಡ್ಡಿ, ಆತಂಕ ಸೃಷ್ಠಿಸುತ್ತಿದೆ.

Advertisement

ಮಾಲೂರು: ಹಾಲಿ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡರ ಮುಂದೆ ಕ್ಷೇತ್ರ ಉಳಿಸಿಕೊಳ್ಳುವ ಸವಾಲಿದೆ. ಜೆಡಿಎಸ್‌ ಮಾಜಿ ಶಾಸಕ ಮಂಜುನಾಥಗೌಡ ಬಿಜೆಪಿ ಕದ ತಟ್ಟುತ್ತಿದ್ದಾರೆ. ಜೆಡಿಎಸ್‌ ಈಗಾಗಲೇ ರಾಮೇಗೌಡರನ್ನು ಅಭ್ಯರ್ಥಿಯನ್ನಾಗಿ ಘೋಷಿ ಸಿದೆ. ಬಿಜೆಪಿಯನ್ನು ಇಲ್ಲಿ ಗೆಲ್ಲಿಸಲೇಬೇಕೆಂದು ಸಂಸದ ಮುನಿಸ್ವಾಮಿ ಪಣ ತೊಟ್ಟಂತೆ ಕಾಣಿಸುತ್ತಿದೆ.

ಕೆಜಿಎಫ್: ಕಾಂಗ್ರೆಸ್‌ ಶಾಸಕಿ ರೂಪಕಲಾ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿ ಸ್ವಂತ ಗುಂಪು ಕಟ್ಟಿಕೊಂಡಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಿದೆ. ಮಾಜಿ ಶಾಸಕ ವೈ.ಸಂಪಂಗಿ ಮತ್ತು ಸಂಸದ ಮುನಿಸ್ವಾಮಿ ಗುಂಪು ಬಹಿರಂಗ ಪೈಪೋಟಿ ಗಿಳಿದಿವೆ. ಸಂಸದ ಮುನಿಸ್ವಾಮಿ ತಮ್ಮ  ಪತ್ನಿಯನ್ನು ಕೆಜಿಎಫ್ನಿಂದ ಕಣಕ್ಕಿಳಿಸುವ ಇರಾದೆ ಹೊಂದಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಶ್ರೀನಿವಾಸ್‌ ಟಿಕೆಟ್‌ ಬಯಸಿದ್ದಾರೆ. ಭಕ್ತ ವತ್ಸಲಂ ನಿಧನದ ಅನಂತರ ಜೆಡಿಎಸ್‌ ಬಲ ಹೀನವಾಗಿದೆ. ಕೋಲಾರ ಕೇಶವ ಜೆಡಿಎಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಮತ್ತೆ ಫೀಲ್ಡಿಗಿಳಿದಿದ್ದಾರೆ.

ಮುಳಬಾಗಿಲು: ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಶಾಸಕ ಎಚ್‌. ನಾಗೇಶ್‌ ಬಿಜೆಪಿಯಲ್ಲಿ ಸುಭದ್ರವಾಗಿದ್ದಾರೆ. 2ನೇ ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತಾರೆಂಬ ಸುಳಿವು ಸಿಕ್ಕಿಲ್ಲ. ಕಾಂಗ್ರೆಸ್‌ ಈ ಬಾರಿ ತನ್ನದೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳು ವತ್ತ ಚಿತ್ತ ಹರಿಸಿದೆ. ಕೆ.ಎಚ್‌.ಮುನಿಯಪ್ಪ ಇಲ್ಲಿನ ಅಭ್ಯರ್ಥಿ ಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ಹಿಂದಿನ ಪರಾಭವದ ಅನುಕಂಪ ಹೊಂದಿ ಕ್ಷೇತ್ರಾದ್ಯಂತ ಒಲವು ಸಂಪಾದಿಸುತ್ತಿದ್ದಾರೆ. ಬಿಜೆಪಿ ಇಲ್ಲಿಯೂ ಹಿಂದುತ್ವದ ಚಟುವಟಿಕೆ ತೀವ್ರಗೊಳಿಸಿದೆ.

ಶ್ರೀನಿವಾಸಪುರದಲ್ಲಿ ಜಿದ್ದಾಜಿದ್ದಿ ಪೈಪೋಟಿ :

ಶ್ರೀನಿವಾಸಪುರ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಮತ್ತು ಜೆಡಿಎಸ್‌ ಅಧ್ಯಕ್ಷ ಜಿ.ಕೆ.ವೆಂಕಟ ಶಿವಾರೆಡ್ಡಿಯದ್ದೇ ಪ್ರಾಬಲ್ಯ. ಇಲ್ಲಿ ಪಕ್ಷಗಳ ಬಲಾಬಲಕ್ಕಿಂತಲೂ ಇವರಿಬ್ಬರ ವರ್ಚಸ್ಸು ದೊಡ್ಡದು. ರಮೇಶ್‌ಕುಮಾರ್‌ಗೆ ಪಾಠ ಕಲಿಸುತ್ತೇನೆಂದು ಈಗಾಗಲೇ ಮುನಿಯಪ್ಪ ಘೋಷಿಸಿದ್ದಾರೆ. ಇದರ ಲಾಭ ಸಹಜವಾಗಿ ಜೆಡಿಎಸ್‌ನ ವೆಂಕಟಶಿವಾರೆಡ್ಡಿಗೆ ಆಗುತ್ತದೆ. ಆದರೂ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಬಹುದು. ಇವರ ನಡುವೆ ಗುಂಜೂರು ಶ್ರೀನಿವಾಸ್‌ ರೆಡ್ಡಿ ಎಂಬವರು ಕ್ಷೇತ್ರಾದ್ಯಂತ ಸಂಚರಿಸುತ್ತಿದ್ದಾರೆ. ಯಾವ ಪಕ್ಷದಿಂದ ಎಂದು ಹೇಳಿಕೊಳ್ಳುತ್ತಿಲ್ಲ. ಬಿಜೆಪಿ ಇಲ್ಲಿ ನೆಪ ಮಾತ್ರ. ಆದರೂ ಬಿಜೆಪಿ ಮೇಲೆ ಎಸ್‌ಎಲ್‌ಎನ್‌ ಮಂಜು ಕಣ್ಣಿಟ್ಟಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ವೇಣುಗೋಪಾಲ್‌ ಸರದಿಯಲ್ಲಿದ್ದಾರೆ.

 

-ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next