ಧಾರವಾಡ: ನಮ್ಮ ಜ್ಞಾನ ಸಂಪತ್ತು ಅಪಾರವಾಗಿದ್ದು ಅದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ದೊರೆಯುವಂತೆ ಮಾಡಬೇಕಿದೆ ಎಂದು ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ|ಎ.ವೈ. ಅಸುಂಡಿ ಹೇಳಿದರು.
ನಗರದ ಕವಿಸಂನಲ್ಲಿ ಪ್ರೊ|ಎಂ.ಆರ್. ಕುಂಬಾರ ದತ್ತಿ ಉಪನ್ಯಾಸ ಮಾಲೆ-3ರ ಅಂಗವಾಗಿ ಆಯೋಜಿಸಿದ್ದ ‘ಭಾರತೀಯ ಜ್ಞಾನ ದರ್ಶನ ಮತ್ತು ಮೀಮಾಂಸೆ’ ವಿಷಯ ಕುರಿತು ಅವರು ಮಾತನಾಡಿದರು.
ಒಂದು ದಶಲಕ್ಷ ತಾಳೆಗರೆಯಲ್ಲಿಯ ಗ್ರಂಥಗಳು, ಉಲ್ಲೇಖಗಳಲ್ಲಿ ಕೇವಲ ಶೇ.15 ರಿಂದ 20ರಷ್ಟು ಮಾತ್ರ ಲಭ್ಯವಾಗಿವೆ. ಇನ್ನೂ ಹೆಚ್ಚಿನ ಜ್ಞಾನ ಗ್ರಂಥಗಳನ್ನು ಪ್ರಾಚೀನ ವಿದೇಶಿ ಪ್ರವಾಸಿಗರು ಕೊಂಡ್ಯೊಯ್ದ ಬಗ್ಗೆ ಉಲ್ಲೇಖಗಳಿವೆ. ಗ್ರಂಥಗಳ ಸಂಗ್ರಹಣೆ, ವರ್ಗೀಕರಣ, ಜೋಡಣೆ, ನಿರ್ವಹಣೆ ಇತ್ಯಾದಿ ಅನಾದಿಕಾಲದಿಂದಲೂ ಬಂದಿದ್ದು, ಇತ್ತೀಚೆಗೆ ಪ್ರವರ್ಧಮಾನವಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ. ಗ್ರಂಥಾಲಯ ಪುಸ್ತಕ ಸಂಸ್ಕೃತಿ ಆರಂಭವಾಗಿ ನಮ್ಮ ಜ್ಞಾನದ ಹರಿವು ಹೆಚ್ಚಾಗುತ್ತಿದೆ. ಅವುಗಳ ಸೂಕ್ತ ಉಪಯೋಗ ಪಡೆದು ಜ್ಞಾನ ಪಡೆಯುವುದು ಅವಶ್ಯ ಎಂದರು.
ವೇದ, ಉಪನಿಷತ್ತು, ಪುರಾಣ, ಉಪದೇಶಗಳು, ವೇದಾಂತ, ಬ್ರಹ್ಮವಿಜ್ಞಾನ, ಬ್ರಹ್ಮಾಂಡ ಸೃಷ್ಟಿ ನಿಗೂಢತೆ ತಿಳಿಯಲು ಓದು ಮುಖ್ಯ. ಓಂ ಪಠಣ ಸಂಸ್ಕೃತದಲ್ಲಿದ್ದು, ಸಂಸ್ಕೃತ ಕಲಿಯುವುದು ಅವಶ್ಯವಿದೆ. ಇದು ಕೇವಲ ಬ್ರಾಹ್ಮಣರ ಭಾಷೆಯಲ್ಲ. ಸ್ಪಷ್ಟ ಉಚ್ಚಾರ ಹಾಗೂ ಭಾಷಾ ಶುದ್ಧತೆಗೆ ಇದು ಸಹಕಾರಿ ಎಂದರು.
ಹಿರಿಯ ಗ್ರಂಥಪಾಲಕ ಡಾ|ಎಸ್.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಪ್ರೊ|ಎಂ.ಆರ್. ಕುಂಬಾರ ಅವರ ಭಾವಚಿತ್ರಕ್ಕೆ
ಪುಷ್ಪ ನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಪ್ರೊ|ಎಸ್.ಎಲ್.ಸಂಗಮ ಇದ್ದರು. ನಿಂಗಣ್ಣ ಕುಂಟಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಎಸ್. ಬಿ. ಗಾಮನಗಟ್ಟಿ ನಿರೂಪಿಸಿ, ವಂದಿಸಿದರು.