Advertisement

ಅದೃಷ್ಟದ ಕೆಕೆಆರ್‌ಗೆ ಆರ್‌ಸಿಬಿ ಸವಾಲು: ಕಾರ್ತಿಕ್- ಕೊಹ್ಲಿ ಕಾಳಗದಲ್ಲಿ ಗೆಲುವು ಯಾರಿಗೆ?

04:25 PM Oct 12, 2020 | keerthan |

ಶಾರ್ಜಾ: ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಆತ್ಮವಿಶ್ವಾಸ ದಲ್ಲಿರುವ ಕೊಹ್ಲಿ ಸಾರಥ್ಯದ ಆರ್‌ಸಿ ಬೆಂಗಳೂರು ಮತ್ತು ಪಂಜಾಬ್‌ ವಿರುದ್ಧದ ಸೋಲುವ ಪಂದ್ಯವನ್ನು ಅದೃಷ್ಟದ ಬಲದಿಂದ ಕೊನೆಯ ಹಂತದಲ್ಲಿ ರೋಚಕವಾಗಿ ಗೆದ್ದಿರುವ ದಿನೇಶ್‌ ಕಾರ್ತಿಕ್‌ ನೇತೃತ್ವದ ಕೆಕೆಆರ್‌ ಸೋಮವಾರದ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿದೆ. ಇತ್ತಂಡಗಳಿಗೂ ಇದು ಕೂಟದ ಮೊದಲ ಪಂದ್ಯವಾಗಿದ್ದು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದನ್ನು ನೋಡಬೇಕಿದೆ.

Advertisement

ಉಭಯ ತಂಡಗಳು ಅಪಾಯಕಾರಿ ಹಾಗೂ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದು ಏಕಾಂಗಿಯಾಗಿ ಪಂದ್ಯವನ್ನು ತಮ್ಮತ್ತ ಸೆಳೆಯುವಷ್ಟು ಸಮರ್ಥ ಹೊಂದಿವೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವುದರಲ್ಲಿ ಅನುಮಾನವಿಲ್ಲ.

ಆರ್‌ಸಿಬಿ ಇದುವರೆಗೆ ಆಡಿದ ಪಂದ್ಯಗಳೆಲ್ಲವೂ ಅರಬ್‌ ನಾಡಿನ ಬೃಹತ್‌ ಮೈದಾನ ಖ್ಯಾತಿಯ ಅಬುಧಾಬಿ, ದುಬಾೖ ಅಂಗಳದಲ್ಲಿ ನಡೆದಿತ್ತು. ಇದೀಗ “ಶಾರ್ಜಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ ನಲ್ಲಿ ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಹೊಡಿಬಡಿ ಆಟಕ್ಕೆ ಹೇಳಿ ಮಾಡಿಸಿದಂತಿರುವ ಈ ಮೈದಾನದಲ್ಲಿ ಆರ್‌ಸಿಬಿಗೆ ಹೆಚ್ಚು ಅವಕಾಶ ಎನ್ನಲಡ್ಡಿಲಿಲ್ಲ. ಆದರೆ ಆರ್‌ಸಿಬಿಯ ಪ್ರದರ್ಶನವನ್ನು ಅಷ್ಟು ಬಲವಾಗಿ ನಂಬುವುದು ಕಷ್ಟ. ಯಾಕೆಂದರೆ ತಂಡ ಸ್ಥಿರವಾದ ನಿರ್ವಹಣೆ ನೀಡಿದ ನಿದರ್ಶನವಿಲ್ಲ. ತಂಡವು ಕೆಲವೊಮ್ಮೆ ತನ್ನ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದ್ದರೆ ಮತ್ತೂಮ್ಮೆ ನೂರರೊಳಗೆ ಗಂಟುಮೂಟೆ ಕಟ್ಟುತ್ತದೆ. ಹಾಗಾಗಿ ಆರ್‌ಸಿಬಿ ಮೇಲೆ ನಂಬಿಕೆ ಇರಿಸುವುದು ತುಸು ಕಷ್ಟಕರ ಎನ್ನಬಹುದು.

ಫಿಂಚ್, ಎಬಿಡಿ ಬ್ಯಾಟಿಂಗ್‌ ವೈಫ‌ಲ್ಯ
ಮಿಸ್ಟರ್‌ 360 ಖ್ಯಾತಿಯ ಎಬಿ ಡಿ’ವಿಲಿಯರ್ ಈ ಬಾರಿಯ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವುತ್ತಿರುವುದು ನಾಯಕ ಕೊಹ್ಲಿಗೆ ಚಿಂತೆಗೀಡು ಮಾಡಿದೆ. ಜತೆಗೆ ಆಸೀಸ್‌ ಬಿಗ್‌ ಹಿಟ್ಟರ್‌ ಫಿಂಚ್‌ ಕೂಡ ಕೇವಲ ಒಂದು ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರೆ ಇನ್ನುಳಿದ ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಮಹತ್ವದ ಈ ಪಂದ್ಯದಲ್ಲಿ ಸಿಡಿಯಬೇಕಾದ ಅನಿವಾರ್ಯ ಅವರ ಮೇಲಿದೆ. ನಾಯಕ ಕೊಹ್ಲಿ, ಪಡಿಕ್ಕಲ್‌ ಉತ್ತಮ ಬ್ಯಾಟಿಂಗ್‌ ಫಾರ್ಮ್ ನಲ್ಲಿದ್ದು ಈ ಪಂದ್ಯದಲ್ಲಿಯೂ ತಂಡ ಇವರ ಮೇಲೆ ಹೆಚ್ಚು ನಂಬಿಕೆ ಇರಿಸಿಕೊಂಡಿದೆ.

ಇದನ್ನೂ ಓದಿ:ಫ್ರೆಂಚ್ ಓಪನ್ : 20ನೇ ಗ್ರಾಂಡ್ ಸ್ಲಾಮ್ ಗೆದ್ದ ನಡಾಲ್! ವೃತ್ತಿ ಜೀವನದ 100ನೇ ಗೆಲುವು

Advertisement

ಆಲ್‌ರೌಂಡರ್‌ ಮಾರಿಸ್‌ ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್‌ ಇನ್ನಷ್ಟು ಬಲಿಷ್ಠವಾಗಿದೆ. ಮಾರಿಸ್‌ ಶನಿವಾರದ ಪಂದ್ಯದಲಿ ಚೆನ್ನೈ ವಿರುದ್ಧ ಮೂರು ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ ಲಂಕಾ ವೇಗಿ ಇಸುರು ಉದಾನ, ನವದೀಪ್‌ ಸೈನಿ, ಚಹಲ್‌ ಉತ್ತಮ ಬೆಂಬಲ ನೀಡಬಲ್ಲರು. ಆದ್ದರಿಂದ ಬೌಲಿಂಗ್‌ ವಿಭಾಗ ಬಲಿಷ್ಠವಾಗಿಯೇ ಗೊಚರಿಸುತ್ತಿದೆ.

ಕೆಕೆಆರ್‌ಗೆ ಅದೃಷ್ಟದ ಬಲ
ಕೆಕೆಆರ್‌ ಪಾಳಯದಲ್ಲಿ ಬಲಿಷ್ಠ ಆಟಗಾರರಿದ್ದರೂ ಇದುವರೆಗೆ ಕೆಲವೇ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿದ್ದಾರೆ. ಆದರೆ ಅದೃಷ್ಟದ ವಿಷಯದಲ್ಲಿ ಕೆಕೆಆರ್‌ ಉಳಿದೆಲ್ಲ ತಂಡಗಳಿಗಿಂತ ಒಂದು ಕೈ ಮೇಲು ಎನ್ನಲಡ್ಡಿಯಿಲ್ಲ. ಇದುವರೆಗಿನ ಕೆಕೆಆರ್‌ ಗೆಲುವಿನ ಹಿನ್ನೋಟವನ್ನು ಗಮನಿಸುವುದಾದರೆ ಸೋಲುವ ಪಂದ್ಯಗಳನ್ನೇ ಹೆಚ್ಚಾಗಿ ತಂಡ ಅದೃಷ್ಟದ ಬಲದಿಂದ ಗೆದ್ದುಕೊಂಡಿದೆ. ಇದೇ ವೇಳೆ ಬ್ಯಾಟಿಂಗ್‌ ಬರ ಅನುಭವಿಸುತಿದ್ದ ನಾಯಕ ದಿನೇಶ್‌ ಕಾರ್ತಿಕ್‌ ಮತ್ತೆ ಫಾರ್ಮ್ ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ವಿಂಡೀಸ್‌ ದೈತ್ಯ ರಸೆಲ್‌ ಮಾತ್ರ ಈ ಬಾರಿ ಸ್ಫೋಟಕ ಬ್ಯಾಟಿಂಗ್‌ ನಡೆಸಲು ಪರದಾ ಡುತ್ತಿದ್ದಾರೆ. ಬೌಲಿಂಗ್‌ ವಿಚಾರದಲ್ಲಿ ಕೆಕೆಆರ್‌ ಸಂಘಟಿತ ಪ್ರದರ್ಶನ ತೋರುತ್ತಿದೆ. ಸುನೀಲ್‌ ನಾರಾಯಣ್‌, ಪ್ರಸಿದ್ಧ ಕೃಷ್ಣ, ಪ್ಯಾಟ್‌ ಕಮಿನ್ಸ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next