Advertisement

ಸಾಹಿತ್ಯ ಪ್ರೇಮಿಯೂ ಆಗಿದ್ದ ಕೆ.ಕೆ.ಪೈ 

12:30 AM Jan 14, 2019 | |

ಕೆ. ಕೆ. ಪೈ ವಿಧಿವಶರಾಗಿ ಇಂದಿಗೆ ಹತ್ತು ವರ್ಷಗಳಾದವು. ಎಲ್ಲ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ ಎಲ್ಲರೊಂದಿಗೆ ಬೆರೆಯುತ್ತಿದ್ದ ಮತ್ತು ಎಲ್ಲರನ್ನು ಕರೆದು ಮಾತಾಡಿಸುತ್ತಿದ್ದ ಕೆ.ಕೆ. ಪೈ ಈಗ ನಮ್ಮೊಂದಿಗಿಲ್ಲ ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. 

Advertisement

ಕೆ. ಕೆ. ಪೈ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವ ಬೀರಿದ್ದರು. ಅವರ ಪ್ರಭಾವದಿಂದ ಸಾಹಿತ್ಯ ಕ್ಷೇತ್ರ ಕೂಡ ಹೊರತಾಗಿರಲಿಲ್ಲ. ಸಾಹಿತ್ಯವೆಂದರೆ ಅವರಿಗೆ ತುಂಬಾ ಪ್ರೀತಿ. ಸಾಹಿತ್ಯ ಸೇವೆಯನ್ನು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಮಾಡುತ್ತಾ ಬಂದಿದ್ದರು. ಮಂಗಳೂರಿನ ಮಿತ್ರ ಮಂಡಳಿಯ ಕಾರ್ಯದರ್ಶಿಯಾಗಿದ್ದ ಕೆ. ಕೆ. ಪೈ ತಮ್ಮ ಸಾಹಿತ್ಯ ಕಾಯಕವನ್ನು ಪ್ರಾಥಮಿಕ ಶಾಲಾ ದಿನಗಳಿಂದಲೇ ಮಾಡಿಕೊಂಡಿದ್ದರು ಕಡಿಯಾಳಿ ಶಾಲೆಯಲ್ಲಿರುವಾಗ ವಿದ್ವಾನ್‌ ರಾಮಚಂದ್ರ ಉಪಾಧ್ಯರ ಪ್ರಿಯ ಶಿಷ್ಯರಾಗಿದ್ದ ಅವರು ಪ್ರತಿ ಶನಿವಾರದ ಜೈಮಿನಿ ಭಾರತ ಶ್ರಾವಕರು. ಮಂಗಳೂರಿನಲ್ಲಿ ಕಲಿಯುತ್ತಿದ್ದಾಗ ಮಿತ್ರ ಮಂಡಳಿ ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಕಡೆಂಗೋಡ್ಲು ಜೆ. ವಾಮನ ಭಟ್‌, ಹುರುಳಿಯವರು ಮುಂತಾದವರು ಕಾರ್ಯಕರ್ತರಾಗಿದ್ದ ಆ ಕಾಲದಲ್ಲಿ ತಮ್ಮ ಸಾಹಿತ್ಯ ದೀಕ್ಷೆಯನ್ನು ಬಹಳಷ್ಟು ಬಲಪಡಿಸಿಕೊಂಡರು. 

ನಿಕಟ ಸಂಪರ್ಕ 
ಸಾಹಿತ್ಯಾಭಿಮಾನಿಯಾಗಿ ಅವರು ಶ್ರೇಷ್ಠ ಸಾಹಿತಿಗಳ, ಲೇಖಕರ ಮತ್ತು ಕವಿಗಳ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದರು. ತ.ರಾ.ಸು. ನರಸಿಂಹ ಸ್ವಾಮಿ, ವಿ.ಸೀ. ಬೇಂದ್ರೆ, ಕಾರಂತ ಮುಂತಾದವರೊಂದಿಗೆ ಉತ್ತಮ ಮತ್ತು ನಿಕಟ ಸಂಪರ್ಕವಿಟ್ಟುಕೊಂಡಿದ್ದ ಕೆ. ಕೆ. ಪೈ, ಎಲ್ಲಾ ಕನ್ನಡ. ಇಂಗ್ಲಿಷ್‌ ಲೇಖಕರುಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಸಂತ ಎಲೋಶಿಯಸ್‌ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಮುಳಿಯ ತಿಮ್ಮಪ್ಪಯ್ಯನವರಿಂದ ಕನ್ನಡ ಕಲಿತ ಕೆ. ಕೆ. ಪೈ ಕನ್ನಡ ಪ್ರೇಮಿಯಾಗಿ ಬೆಳೆದರು. ಇದೇ ಕೆ. ಕೆ. ಪೈಯವರಿಗೆ ಮುಂಬಯಿಯಲ್ಲಿ ಕನ್ನಡ ಸಂಘ ಸ್ಥಾಪಿಸಲು ಸ್ಫೂರ್ತಿ ನೀಡಿತು ಎನ್ನಬಹುದು. 

ಮುಂಬಯಿಯ ಸಿಡನ್‌ಹ್ಯಾಮ್‌ ಕಾಲೇಜಿನಲ್ಲಿ ಕೆ. ಕೆ. ಪೈ ಕನ್ನಡ ಸಂಘ ಆರಂಭಿಸಿ ಇತಿಹಾಸ ಸೃಷ್ಟಿಸಿದರು. ಇದು ಕಾಲೇಜಿನ ಇತಿಹಾಸದಲ್ಲೇ ಪ್ರಪ್ರಥಮ ಕನ್ನಡ ಸಂಘ. ಕು. ಶಿ. ಹರಿದಾಸ ಭಟ್ಟರು ಉಡುಪಿಯಲ್ಲಿ ನಡೆಸಿದ ಕರ್ನಾಟಕ ಸಂಘದ ದಸರಾ ಉತ್ಸವಕ್ಕೆ ಕೆ.ಕೆ. ಪೈ ಬಹಳಷ್ಟು ಪ್ರೋತ್ಸಾಹ ಬೆಂಬಲ ನೀಡಿದ್ದರಂತೆ. ಇದು 1951ರಲ್ಲಿ. ಈ ಉತ್ಸವಕ್ಕೆ ಕೆ. ಕೆ. ಪೈ ತಮ್ಮ ಮೋರೀಸ್‌ ಕಾರನ್ನು ಮೂರು ದಿನಗಳ ಮಟ್ಟಿಗೆ ಕೊಟ್ಟು ಸಹಕರಿಸಿದ್ದರಂತೆ. “ಕಾರುಗಳ ಸಂಖ್ಯೆ ಬೆರಳೆಣಿಕೆಯಲ್ಲಿದ್ದ ಆ ಕಾಲದಲ್ಲಿ ಸ್ವಂತ ಕಾರನ್ನು ಗಡಿಬಿಡಿಯ ಕನ್ನಡ ಸೇವೆಗೆ ಕೊಟ್ಟ ಪೈಗಳನ್ನು ಎಷ್ಟು ಕೊಂಡಾಡಿದರೂ ಸಾಲದು’ ಎಂದು ಕು.ಶಿ.ಯವರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಪ್ರೋತ್ಸಾಹ ಭಾಗ್ಯ 
ಕೆ. ಕೆ. ಪೈ ಆರ್ಥಿಕ ಸಾಹಿತ್ಯ, ಯಕ್ಷಗಾನ ಸಾಹಿತ್ಯ ಪ್ರವಾಸ ಸಾಹಿತ್ಯ ಪತ್ರಕರ್ತರ ಬರವಣಿಗೆಗಳು ಇವೆಲ್ಲವನ್ನೂ ಪ್ರೋತ್ಸಾಹಿಸುತ್ತಿದ್ದರು. ಒಬ್ಬ ಆರ್ಥಿಕ ಲೇಖಕನಾಗಿ ಕೆ. ಕೆ. ಪೈಯವರಿಂದ ಬಹಳಷ್ಟು ಪ್ರೋತ್ಸಾಹ ಮತ್ತು ಪ್ರೇರಣೆ ಪಡೆದವರಲ್ಲಿ ನಾನೂ ಒಬ್ಬ. ನಾನು ಬರೆದ “ಫ‌ರ್ಫಾಮೆನ್ಸ್‌ ಪ್ಲಾನ್ಸ್‌ ಎಂಡ್‌ ಸ್ಟ್ರೆಟಜೀಸ್‌ ಫಾರ್‌ ಇಂಡಿಯನ್‌ ಬ್ಯಾಂಕ್ಸ್‌ (Performance Plans and Strategies for Indian Banks)  ಎಂಬ ಪುಸ್ತಕ ಓದಿ ಕೆ. ಕೆ. ಪೈ ನನಗೆ ಒಂದು ಪತ್ರ ಬರೆದು ಅಭಿನಂದಿಸಿದ್ದರು. “ಪುಸ್ತಕ ಬಹಳ ಚೆನ್ನಾಗಿದೆ. ಇದು ಬ್ಯಾಂಕರುಗಳಿಗೆ, ಬ್ಯಾಂಕಿಂಗ್‌ ವಿದ್ಯಾರ್ಥಿಗಳಿಗೆ ಮತ್ತು ಬ್ಯಾಂಕಿಂಗ್‌ನಲ್ಲಿ ಆಸಕ್ತಿಯಿರುವ ಎಲ್ಲರಿಗೂ ಉಪಯುಕ್ತವಾಗಿದೆ’ ಎಂದು ಪತ್ರದಲ್ಲಿ ಬರೆದಿದ್ದರು. ಇಷ್ಟು ಮಾತ್ರವಲ್ಲ ಕೆ. ಕೆ. ಪೈ ನಾನು ಇಕನಾಮಿಕ್‌ ಟೈಮ್ಸ್‌, ಫೈನಾನ್ಶಿಯಲ್‌ಎಕ್ಸ್‌ಪ್ರೆಸ್‌, ಇಂಡಿಯನ್‌ ಬ್ಯಾಂಕರ್‌, ಸದರ್ನ್ ಇಕಾನಾಮಿಸ್ಟ್‌, ಬ್ಯಾಂಕರ್‌, ಈಸ್ಟರ್ನ್ ಇಕಾನಾಮಿಸ್ಟ್‌, ಫೋರ್ಚೂನ್‌ ಇಂಡಿಯಾ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿಸಿದ ಬ್ಯಾಂಕಿಂಗ್‌ ಕುರಿತಾದ ಲೇಖನಗಳನ್ನು ಓದಿ ನನಗೆ ಪತ್ರ ಬರೆದು ಅಭಿನಂದಿಸಿ, ಪ್ರೋತ್ಸಾಹಿಸಿದ್ದರು. ನೀವು ಸಿಂಡಿಕೇಟ್‌ ಬ್ಯಾಂಕಿನವರು ಎಂಬುದನ್ನು ಲೇಖನಗಳಲ್ಲಿ ನಮೂದಿಸಿ ಎಂಬ ಸಲಹೆಯನ್ನೂ ಕೆ. ಕೆ. ಪೈ ನೀಡಿದ್ದರು. 

Advertisement

ಕೆ. ಕೆ. ಪೈ ಪತ್ರಕರ್ತರಿಗೂ ಪ್ರೋತ್ಸಾಹ ನೀಡುತ್ತಿದ್ದರು. ಪಾಟೀಲ ಪುಟ್ಟಪ್ಪರು ಕೆ. ಕೆ. ಪೈಯವರಿಗೆ ಆತ್ಮೀಯರಾಗಿದ್ದರು. ಯಕ್ಷಗಾನ ಕೃತಿಗಳನ್ನು ಬರೆದವರಿಗೂ ಕೆ.ಕೆ. ಪೈ ಪ್ರೋತ್ಸಾಹ ನೀಡುತ್ತಿದ್ದರು. ಹೀಗೆ ಕೆ. ಕೆ. ಪೈಯವರ ಪ್ರೀತಿ ಮತ್ತು ಪ್ರೋತ್ಸಾಹ ಭಾಗ್ಯ ಲಭ್ಯವಾಗದ ಸಾಹಿತ್ಯ ವಿಭಾಗವಿರಲಿಲ್ಲ.
 
ನೆರವಿನ ಹಸ್ತ 
ಕೆ. ಕೆ. ಪೈ ಸಿಂಡಿಕೇಟ್‌ ಬ್ಯಾಂಕಿನ ಅಧ್ಯಕ್ಷರಾಗಿದ್ದಾಗ ಕನ್ನಡ ಸಾಹಿತಿಗಳಿಗೆ ಮತ್ತು ಕವಿಗಳಿಗೆ ನೆರವಿನ ಹಸ್ತವನ್ನು ಚಾಚಿದ ವ್ಯಕ್ತಿ. ಪ್ರೊ| ಎಸ್‌.ವಿ. ಪರಮೇಶ್ವರ ಭಟ್ಟರು ಕಾಳಿದಾಸನ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ನಂತರ ಪ್ರಕಟನೆಗೆ ಹಣವಿಲ್ಲದೆ ತುಂಬಾ ಬೇಸರದಲ್ಲಿದ್ದರು. ಇದನ್ನು ಅರಿತ ಕೆ.ಕೆ. ಪೈ ಆ ಕೃತಿಗಳ ಪ್ರಕಟನೆಗೆ ಬೇಕಾದ ಹಣವನ್ನು ಸಾಲದ ರೂಪದಲ್ಲಿ ನೀಡಲು ಮುಂದಾದರು. ಸಾಲದ ಹಣದಿಂದ ಭಟ್ಟರು ಆ ಪುಸ್ತಕಗಳನ್ನು ಪ್ರಕಟಿಸಿದರು. ಕೆಲವೇ ತಿಂಗಳುಗಳಲ್ಲಿ ಪರಮೇಶ್ವರ ಭಟ್ಟರ ಈ ಭಾಷಾಂತರಿತ ಕೃತಿಗಳು ಸಂಪೂರ್ಣವಾಗಿ ಮಾರಾಟವಾದವು. ಆ ಹಣದಿಂದ ಭಟ್ಟರು ಬ್ಯಾಂಕಿನ ಸಾಲವನ್ನು ತೀರಿಸಿದರು. 

ಕೆ. ಕೆ. ಪೈ ಕನ್ನಡ ಸಾಹಿತ್ಯ ಮಾತ್ರವಲ್ಲ ಇಂಗ್ಲಿಷ್‌ ಮತ್ತು ತುಳು ಹಾಗೂ ಕೊಂಕಣಿ ಸಾಹಿತ್ಯವನ್ನು ಪ್ರೋತ್ಸಾಹಿಸಿದರು. ಜಿಲ್ಲೆಯ ಎಲ್ಲ ಕನ್ನಡ, ತುಳು, ಕೊಂಕಣಿ ಲೇಖಕರುಗಳನ್ನು ಪ್ರೋತ್ಸಾಹಿಸಿದರು. ವಿವಿಧ ಲೇಖಕರುಗಳು ತಮ್ಮ ಪ್ರಕಟಿತ ಪುಸ್ತಕಗಳನ್ನು ಕಳುಹಿಸಿದಾಗ ಅವುಗಳನ್ನು ಓದಿ ತಮ್ಮ ಅಭಿನಂದನೆ ಹಾಗೂ ಪ್ರತಿಕ್ರಿಯೆಯನ್ನು ಪತ್ರದ ಮೂಲಕ ತಿಳಿಸಿ ಹುರಿದುಂಬಿಸಿದರು. ಎಲ್ಲಾ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಕೆ.ಕೆ. ಪೈಯವರಿಗಿತ್ತು. 

ಸೇರ್ಪಡೆಯ ಸಾಹಿತ್ಯ 
ಕೆ. ಕೆ. ಪೈ ಸೇರ್ಪಡೆಯ ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಿದ್ದರು. ಕನ್ನಡ ಸಾಹಿತ್ಯ ಸೀಮಿತಗೊಳ್ಳಬಾರದು. ಕತೆ, ಕಾದಂಬರಿ, ಲಘು ಪ್ರಬಂಧ, ಕವನ, ಕತೆ, ಇವು ಮಾತ್ರವಲ್ಲದೆ ಆರ್ಥಿಕ, ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ವಿಷಯಗಳೂ ಸೇರಿದಂತೆ ಇಡೀ ಜ್ಞಾನ ಭಂಡಾರದ ಎಲ್ಲಾ ಶಾಖೆಗಳು ಮತ್ತು ವಿಷಯಗಳು ಮತ್ತು ಅಂಶಗಳಿಗೆ ಅದರಲ್ಲಿ ಸ್ಥಾನವಿರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ಎಲ್ಲಾ ವಿಷಯಗಳ ಕುರಿತು ಕನ್ನಡದಲ್ಲಿ ಕೃತಿಗಳು ಪ್ರಕಟಗೊಳ್ಳಬೇಕು ಎಂಬುದು ಕೆ.ಕೆ. ಪೈಯವರ ಆಶಯವಾಗಿತ್ತು.

ಅತೀವ ಕಾಳಜಿ 
ಕೆ.ಕೆ. ಪೈಯವರಿಗೆ ಕನ್ನಡ ಸಾಹಿತ್ಯ ಮತ್ತು ಭಾಷೆಯ ಕುರಿತು ಅತೀವ ಕಾಳಜಿಯಿತ್ತು. 2007ರ ಡಿಸೆಂಬರ್‌ನಲ್ಲಿ ಉಡುಪಿಯಲ್ಲಿ ಜರಗಿದ ಕನ್ನಡ ಸಮ್ಮೇಳನದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕೆ.ಕೆ. ಪೈ ಸ್ಮರಣ ಸಂಚಿಕೆ ಮೋಹನ ಮುರಳಿಯಲ್ಲಿ ಈ ರೀತಿ ಬರೆದರು. “ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯಿದೆ. ಜತೆಗೆ ವಾಣಿಜ್ಯ ವಿದ್ಯೆ ಮುಂತಾದ ಅಭಿವೃದ್ಧಿ ಪೂರಕ ವಿಭಾಗಗಳಲ್ಲಿ ಈ ಪ್ರದೇಶ ಅಳಿಸಲಾಗದ ಹೆಜ್ಜೆಗಳನ್ನು ಮೂಡಿಸಿ, ಭಾರತದ ಇತಿಹಾಸದಲ್ಲಿ ಗಣನೀಯ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ. ಪರಸ್ಪರ ಸಾಮರಸ್ಯ ಹಾಗೂ ವಿವಿಧ ವಿಷಯಗಳ ಬಗ್ಗೆ ಒಲವು ಈ ಪ್ರದೇಶದ ಹೆಗ್ಗಳಿಕೆ. ಈ ಎಲ್ಲಾ ಸಿದ್ಧಿ – ಸಾಧನೆಗಳ ಪರಿಚಯ ನಾಡಿನ ಜನತೆಗೆ ಈ ಸಮ್ಮೇಳನದ ಮೂಲಕ ಆಗಬೇಕು’. ಇದು ಕೆ.ಕೆ. ಪೈಯವರ ಕಾಳಜಿಗೆ ಕನ್ನಡಿ ಹಿಡಿದಂತಿದೆ.

ದಿಲ್ಲಿ ಸಮ್ಮೇಳನಾಧ್ಯಕ್ಷ 2008ರ ಎಪ್ರಿಲ್‌ನಲ್ಲಿ ಹೊಸದಿಲ್ಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೆ.ಕೆ. ಪೈ ವಹಿಸಿದ್ದರು. ಇಲ್ಲಿ ಅವರು ಮಾಡಿದ ಭಾಷಣ ಅವರಿಗಿದ್ದ ಕನ್ನಡ ಸಾಹಿತ್ಯ ಪ್ರೇಮವನ್ನು ಎದ್ದು ತೋರಿಸಿತ್ತು. ಕೆ. ಕೆ. ಪೈ ಬಹುಮುಖ ಆಸಕ್ತಿಯ ವ್ಯಕ್ತಿ . ಅವರೇ ಕೆಲವೊಮ್ಮೆ ಹೀಗೆ ಹೇಳುತ್ತಿದ್ದರು. ಮೂಲತಃ ನಾನೊಬ್ಬ ಸಾಹಿತ್ಯ ಪ್ರೇಮಿ. ಆದರೆ ಬ್ಯಾಂಕಿಂಗ್‌, ಶಿಕ್ಷಣ ಮತ್ತು ಇದರ ಕ್ಷೇತ್ರಗಳು ನನ್ನ ಕಾರ್ಯ ಕ್ಷೇತ್ರಗಳಾದವು.’

ಕೆ.ಕೆ. ಪೈ ಉತ್ತಮ ವಾಗ್ಮಿ ಕೂಡ ಆಗಿದ್ದರು. ಕನ್ನಡ, ಇಂಗ್ಲಿಷ್‌ ತುಳು ಕೊಂಕಣಿಗಳಲ್ಲಿ ಅವರು ಸರಿಸಮಾನ ಪ್ರಭುತ್ವ ಹೊಂದಿದ್ದರು. ಯಾವುದೇ ವಿಷಯದ ಮೇಲೆ ಪೂರ್ವ ಸಿದ್ಧತೆಯಲ್ಲದೆ ಅವರು ವಿಸ್ತೃತವಾಗಿ ನಿರರ್ಗಳವಾಗಿ, ಸುದೀರ್ಘ‌ವಾಗಿ ಮಾತಾಡಬಲ್ಲವರಾಗಿದ್ದರು.

ಮಣಿಪಾಲದ ಭೀಷ್ಮ 
ಕೆ.ಕೆ. ಪೈಯವರು ಉತ್ತಮ ಸಂಭಾಷಣಾಕಾರ (Conversationist) ರೂ ಹೌದು. ಕೆ.ಕೆ. ಪೈಯವರ ಕುರಿತಾಗಿ, ಅವರ ಸಾಹಿತ್ಯ ಪ್ರೇಮದ ಕುರಿತಾಗಿ ಪ್ರೊ| ಜಿ.ಟಿ. ನಾರಾಯಣ ರಾವ್‌ ಹೀಗೆ ಬರೆದಿದ್ದಾರೆ; “”ಕೆ.ಕೆ. ಅಂದರೆ ಕರುಣೆಗೊಂದು ಕೋಡವನ್‌ ಎದೆಯೊಲುಮೆಗೆ ಬೀಡವನ್‌” (ಕುವೆಂಪು) ಇಂಥವರೇ ನೆಲದ ಸಾರ. 

ಉಲ್ಲಾಸ ನಾವೆಯನ್ನೇರಿ ಸಾರಿದೆ ನಾನು ವರ್ತಮಾನದಿ ತೀವ್ರ ಕಾರ್ಯಮಗ್ನತೆಯಲ್ಲಿ ಆದರ್ಶಗಳ ಬೀಡ ದಾಟುತ್ತ ಹೋದಂತೆ 
ಆದೆ ನಾನಾದರ್ಶ! ವೈಚಿತ್ರ್ಯ! ಅತ್ರಿಸೂನು’ಮಣಿಪಾಲದ ಭೀಷ್ಮ (ಕೆ.ಕೆ. ಪೈ)ಇಂಥ ಆದರ್ಶ ಆಗಿದ್ದಾರೆ. ಜಿ.ಟಿ.ಎನ್‌ ಹೀಗೆ ಬರೆದದ್ದು 1998ರಲ್ಲಿ ಮೈವೆತ್ತ ಲಾಲಿತ್ಯ ಎಂಬ ಲೇಖನದಲ್ಲಿ.

– ಡಾ| ಕೆ. ಕೆ. ಅಮ್ಮಣ್ಣಾಯ 

Advertisement

Udayavani is now on Telegram. Click here to join our channel and stay updated with the latest news.

Next