Advertisement

ಕನಸುಗಳ ಗಾಳಿಪಟ: ಹಾರಿಸಲು ಬರ್ತಿಯ ಅಲ್ವ?

02:47 PM Jan 16, 2018 | Team Udayavani |

ನಿನ್ನನ್ನು ಮರೆಯಬೇಕು ಅಂತ ಅದೆಷ್ಟು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಬಿಡುವಿಲ್ಲದೇ ಬಂದು ಅಪ್ಪಳಿಸುವ ಸಾಗರದ ಅಲೆಗಳಂತೆ, ನಿನ್ನ ನೆನಪುಗಳು ಮನದ ಕಿನಾರೆಯಲ್ಲಿ ಸಪ್ತ ಸ್ವರಗಳನ್ನು ಹಾಡುತ್ತಿವೆ. ಮನವೆಂಬ ಮರಳ ರಾಶಿಯಲ್ಲಿ ನೀನು ಬಿಟ್ಟು ಹೋದ ಹೆಜ್ಜೆ ಗುರುತುಗಳು ನಿನ್ನದೇ ಕಥೆ ಹೇಳುತ್ತಿವೆ. 

Advertisement

ನನ್ನೆದೆಯ ಗೂಡಿನಲ್ಲಿ ಅದೆಷ್ಟೋ ಭಾವನೆಗಳ ಉದಯಕ್ಕೆ ಕಾರಣನಾದವನು ನೀನು. ನನ್ನೆಲ್ಲಾ ನೋವುಗಳಿಗೆ ಜೊತೆಯಾಗಿದ್ದವನು ನೀನು. ನಾನು ಕೋಪಿಸಿಕೊಂಡಾಗಲೆಲ್ಲಾ ನನಗೆ ಸಮಾಧಾನ ಹೇಳಿ ಮುಖದಲ್ಲಿ ಮಂದಹಾಸ ತುಂಬುತ್ತಿದ್ದವನೂ ನೀನೇ. ಅಂಥ ನೀನು, ಸಣ್ಣದೊಂದು ಸುಳಿವನ್ನೂ ಕೊಡದೆ ನನ್ನನ್ನು ಏಕಾಂಗಿಯಾಗಿಸಿ ಹೊರಟುಬಿಟ್ಟೆಯಲ್ಲ ಸರಿಯಾ?

ನೀನಿಲ್ಲದ ಈ ಬದುಕು ಸೂತ್ರಧಾರನಿಲ್ಲದ ಗಾಳಿಪಟದಂತಾಗಿದೆ. ಚಾಲಕನಿಲ್ಲದೆ ವಾಹನ ಮುನ್ನಡೆಯಲು ಸಾಧ್ಯವೇ? ಕಡಲಾಗಿ ಹರಿಯುತ್ತಿರುವ ಕಂಗಳು ನಿನ್ನ ಸಮಾಧಾನದ ಮಾತುಗಳ ನಿರೀಕ್ಷೆಯಲ್ಲಿದೆ. ಮನಸ್ಸು ಮಂದವಾಗಿ ನೀ ಬರುವ ಕ್ಷಣಗಳನ್ನು ಲೆಕ್ಕ ಹಾಕುತ್ತಿದೆ. ಪ್ರತಿದಿನ ಮುಸ್ಸಂಜೆ ಮರೆಯಾಗುವ ಸೂರ್ಯನೂ, ಇಂದು ನೀನು ಬರಬಹುದೆಂಬ ಆಸೆಯನ್ನು ನನ್ನ ಕೈಗಿಟ್ಟೇ ಮರೆಯಾಗುತ್ತಾನೆ. ಹೌದು ಕಣೋ; ನಾನು ಕಾಯುತ್ತಲೇ ಇದ್ದೇನೆ. 

ಒಮ್ಮೆ ನನ್ನತ್ತ ತಿರುಗಿ ನೋಡು. ನನ್ನ ಮನದ ಬಾಗಿಲನ್ನು ನಿನಗಾಗಿಯೇ ತೆರೆದಿಟ್ಟಿದ್ದೇನೆ. ಊಟ ನಿದ್ದೆಯಿಲ್ಲದೇ ನಿನ್ನದೇ ಧ್ಯಾನದಲ್ಲಿದ್ದೇನೆ. ನೀನು ಜೊತೆಯಿಲ್ಲದೇ ಕ್ಷಣ ಕಳೆಯುವುದಕ್ಕೂ ನನ್ನಿಂದಾಗುತ್ತಿಲ್ಲ. ನಿನ್ನದೇ ಆಲೋಚನೆಗಳು ಮನದಲ್ಲಿ ಸರದಿ ಹಿಡಿದಿವೆ. ಸೂತಕದ ನೆರಳು ಸೋಕಿದಂತೆ ಮನಸ್ಸು ಮಂಕಾಗಿ ಕೂತಿದೆ. ನಿನಗೇನಾದರೂ ನನ್ನ ಮೇಲೆ ಮುನಿಸಿದ್ದರೆ ದಯವಿಟ್ಟು ಹೇಳಿಬಿಡು….ನಿಮಿಷವೂ ಯೋಚಿಸದೇ ಮಾಡಿದ ತಪ್ಪನ್ನು ಸಂಪೂರ್ಣ ಒಪ್ಪಿಕೊಳ್ಳುತ್ತೇನೆ. 

ನಮ್ಮ ಪ್ರೀತಿಯ ಕುರಿತು, ನಮ್ಮಿಬ್ಬರ ಬದುಕಿನ ಕುರಿತು ನಾನು ಕಟ್ಟಿಕೊಂಡ ಅದೆಷ್ಟೋ ಕನಸುಗಳು ಬಾಕಿ ಇವೆ. ಸಾಗಬೇಕಾದ ದಾರಿ ಇನ್ನೂ ದೂರವಿದೆ. ಇಟ್ಟರೆ ಪ್ರತಿ ಹೆಜ್ಜೆಯನ್ನು ನಿನ್ನೊಂದಿಗೇ ಎಂದು ನಿರ್ಧರಿಸಿದ್ದೇನೆ. ನನ್ನ ಈ ಎಲ್ಲಾ ಕನಸುಗಳಿಗೆ ಬಣ್ಣ ಹಚ್ಚಲು ನೀನು ಬಂದೇ ಬರುತ್ತೀಯ ಅಲ್ವಾ?

Advertisement

ಜಯಶ್ರೀ ಎಸ್‌. ಕಾನಸೂರ್‌

Advertisement

Udayavani is now on Telegram. Click here to join our channel and stay updated with the latest news.

Next