Advertisement

ಒಂಟಿ ಕೈಯ ಸಿಕ್ಸರ್‌ಗೆ ಖೇಲ್‌ ಖತಂ!

11:36 PM Aug 12, 2023 | Team Udayavani |

ಈತನ ಹೆಸರು ಶಿವಶಂಕರ್‌. ಒಂಟಿ ಕೈಯ ಈ ಯುವಕ ಸುಯ್ಯನೆ ಬೈಕ್‌ ಓಡಿಸಿಕೊಂಡು ಹೋಗುವುದನ್ನು ಬೆಂಗ ಳೂರಿನ ಜನರಲ್ಲಿ ಕೆಲವರಾದರೂ ನೋಡಿ ರುತ್ತಾರೆ. ವಿಶೇಷವೇನು ಗೊತ್ತೆ? ಈತ ದೇಶವನ್ನು ಪ್ರತಿನಿಧಿಸಿರುವ ಕ್ರಿಕೆಟ್‌ ಆಟಗಾರ. ಬೌಲಿಂಗ್‌, ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌- ಈ ಮೂರೂ ವಿಭಾಗದಲ್ಲಿ ಕೌಶಲ ತೋರಿರುವ ಸಮರ್ಥ ಆಲ್‌ರೌಂಡರ್‌. ಸ್ವಾರಸ್ಯ ವೆಂದರೆ ಈತ ಅಂಗವಿಕಲರ ತಂಡ ದೊಂದಿಗೆ ಮಾತ್ರವಲ್ಲ, ಉಳಿದವರ ತಂಡದ ಜತೆಗೂ ಆಡುತ್ತಾನೆ!… ಇದಿಷ್ಟು ವಿವರ ಓದಿದವರಿಗೆ, ಈ ಶಿವಶಂಕರ್‌ ಯಾರು? ಆತ ಒಂಟಿ ಕೈ ಹೊಂದಿದ್ದು ಏಕೆ? ಈ ಪ್ರತಿಭಾವಂತನ ಸಾಮರ್ಥ್ಯ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಯಾಕೆ ಸಿಗುತ್ತಿಲ್ಲ?- ಎಂಬಂಥ ಪ್ರಶ್ನೆಗಳು ಜತೆ ಯಾಗುವುದು ಸಹಜ. ಅದಕ್ಕೆ ಉತ್ತರವನ್ನು ಶಿವಶಂಕರ್‌ ಅವರ ಮಾತುಗಳಲ್ಲೇ ಕೇಳ್ಳೋಣ ಬನ್ನಿ…

Advertisement

“ನಾನು ಚಿಕ್ಕಬಳ್ಳಾಪುರ ಜಿಲ್ಲೆ, ಬಾಗೇಪಲ್ಲಿ ತಾಲೂಕಿನ ಒಂದು ಹಳ್ಳಿಯವನು. ಅಪ್ಪ ಕೃಷಿಕರು. ಅಮ್ಮ ಗೃಹಿಣಿ. ನಾವು ನಾಲ್ಕು ಜನ ಮಕ್ಕಳು. ನಾನೇ ಕೊನೆಯವನು. 6 ವರ್ಷದವನಿದ್ದಾಗ ಅಕ್ಕನ ಜತೆ ಅವಸರದಲ್ಲಿ ರಸ್ತೆ ದಾಟುತ್ತಿದ್ದವ, ಇದ್ದಕ್ಕಿದ್ದಂತೆ ಎಡವಿ ಬಿದ್ದುಬಿಟ್ಟೆ. ಅದೇ ಸಮಯಕ್ಕೆ ವೇಗವಾಗಿ ಬಂದ ಬಸ್‌ ನನ್ನ ಕೈಮೇಲೆ ಹೋಗಿ ಬಿಡ್ತು. ಆಗ ಹೋ… ಎಂದು ಚೀರಿಕೊಂಡಿದ್ದು ಮಾತ್ರ ಗೊತ್ತು ನನಗೆ. ಮತ್ತೆ ಎಚ್ಚರಾದಾಗ ಆಸ್ಪತ್ರೆಯಲ್ಲಿದ್ದೆ.

10 ದಿನಗಳ ಅನಂತರ ಮನೆಗೆ ಬಂದಾಗ, ನನ್ನ ಬಲಗೈಯನ್ನು ತೋಳಿನವರೆಗೂ ಕತ್ತರಿಸಿದ್ದಾರೆ ಎಂದು ಗೊತ್ತಾಯಿತು. ಆ್ಯಕ್ಸಿಡೆಂಟ್‌ ಕಾರಣಕ್ಕೆ ಗ್ಯಾಂಗ್ರಿನ್‌ ಆಗಿ ಆ ಭಾಗವೆಲ್ಲ ಕೊಳೆತು ಹೋಗಿದ್ದರಿಂದ ಬಲಗೈ ಕಟ್‌ ಮಾಡಿದ್ದಾರೆ ಎಂಬ ಉತ್ತರವೂ ಮನೆ ಮಂದಿಯಿಂದ ಸಿಕ್ಕಿತು. ಈ ಸಂದರ್ಭದಲ್ಲಿ ಅಪ್ಪ-ಅಮ್ಮ ನನ್ನ ಬೆಂಬಲಕ್ಕೆ ನಿಂತರು. ಅಂಗವಿಕಲ ಎಂಬ ಫೀಲ್‌ ಜತೆಯಾಗದಂತೆ ನೋಡಿಕೊಂಡರು. ಎಡಗೈಯಲ್ಲೇ ಎಲ್ಲ ಕೆಲಸ ಮಾಡಲು ಕಲಿಸಿದರು. ಮೊದಲಿಂದಲೂ ನನಗೆ ಹಠ ಜಾಸ್ತಿ. ಆ ಕಾರಣದಿಂದ ಜಿದ್ದಿಗೆ ಬೀಳುತ್ತಿದ್ದೆ. ಒಂದು ಕೈ ಇಲ್ಲ ಅನ್ನುವುದನ್ನು ಮರೆತು ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡಲು ಹೋಗುತ್ತಿದ್ದೆ.

ಡಿಗ್ರಿ ಓದಲೆಂದು ಬೆಂಗಳೂರಿಗೆ ಬಂದೆ. ಹಾಸ್ಟೆಲ್‌ ನಲ್ಲಿ ವಾಸ. ಲೆದರ್‌ ಬಾಲ್‌ನಲ್ಲಿ ಕ್ರಿಕೆಟ್‌ ಆಡಬಾರದೇಕೆ ಅನ್ನಿಸಿದ್ದು ಆಗಲೇ. ಸ್ವಲ್ಪ ದಿನದಲ್ಲೇ ಆಟಕ್ಕೆ ಹೊಂದಿಕೊಂಡೆ. ಕಾಲೇಜು, ವಿವಿ ಮಟ್ಟದ ಟೂರ್ನಿಗಳಲ್ಲಿ ಗೆದ್ದು ರಾಷ್ಟ್ರಮಟ್ಟದಲ್ಲಿ ಆಡುವ ಕನಸು ಕಂಡೆ. ಆಟಕ್ಕೆ ಹೆಚ್ಚು ಗಮನ ಕೊಟ್ಟಿದ್ದರಿಂದ ಅಟೆಂಡೆನ್ಸ್‌ ಕಡಿಮೆಯಾಯಿತು. ತರಗತಿಗಳು ಮಿಸ್‌ ಆದವು. ನೋಟ್ಸ್‌ ಕೊಟ್ಟು ಸಹಾಯ ಮಾಡುವ ಗೆಳೆಯರು ಇರಲಿಲ್ಲ. ಪರಿಣಾಮ, ಒಂದು ವರ್ಷ ಫೇಲ್‌ ಆದೆ. ಕಡೆಗೊಮ್ಮೆ ಡಿಗ್ರಿ ಮುಗಿಯಿತು. ಮರುದಿನವೇ ನನಗೆ ಹಾಸ್ಟೆಲ್‌ನಿಂದ ಗೇಟ್‌ ಪಾಸ್‌ ಕೊಡಲಾಯಿತು.

ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಸೆಲೆಕ್ಷನ್‌ ನಡೆ ಯುತ್ತಿದ್ದ ಸಮಯ ಅದು. “ಚೆನ್ನಾಗಿ ಅಭ್ಯಾಸ ಮಾಡಿ ಆಯ್ಕೆ ದಾರರ ಗಮನ ಸೆಳೆದು, ಭಾರತ ತಂಡವನ್ನು ಪ್ರತಿನಿಧಿಸಬೇಕು. ದಯವಿಟ್ಟು ನಾಲ್ಕಾರು ತಿಂಗಳು ಹಾಸ್ಟೆಲ್‌ನಲ್ಲಿ ಉಳಿಯಲು ಅವಕಾಶ ಕೊಡಿ’ ಅಂತ ಕೇಳಿಕೊಂಡೆ. ಆದರೆ ಕಾಲೇಜಿನ ಮ್ಯಾನೇಜ್‌ಮೆಂಟ್‌ ಒಪ್ಪಲಿಲ್ಲ. ಕಡೆಗೆ ಕ್ರಿಕೆಟ್‌ ಮೂಲಕ ಪರಿಚಯವಾಗಿದ್ದ ಈರ ಎಂಬ ಕ್ಲಬ್‌ಗ ಸೇರಿದ್ದ ಚಿಕ್ಕ ರೂಮ್‌ನಲ್ಲಿ ಉಳಿದುಕೊಳ್ಳಲು ಅವಕಾಶ ಕೇಳಿದೆ. ಪುಣ್ಯಕ್ಕೆ ಅವ್ರು ಒಪ್ಪಿಕೊಂಡ್ರು. ಅಲ್ಲಿದ್ದುಕೊಂಡೇ ಪ್ರಾಕ್ಟೀಸ್‌ ಮಾಡುತ್ತಿದ್ದೆ. ಸಾಕಷ್ಟು ಎಫರ್ಟ್‌ ಹಾಕಿದರೂ ಆ ಬಾರಿ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಲಿಲ್ಲ. ಆ ಬೇಸರದಲ್ಲಿ ಇದ್ದಾಗ ಸಿಕ್ಕವರೇ ಪತ್ರಕರ್ತ ಸೋಮಶೇಖರ ಪಡುಕರೆ. ಅವರು ನನ್ನ ಕಥೆಯನ್ನೆಲ್ಲ ಕೇಳಿ, ಒಂದು ಸ್ಟೋರಿ ಬರೆದರು. ಅದನ್ನು ನೋಡಿದ ರಣಜಿ ಆಟಗಾರ ಕೌನೇನ್‌ ಅಬ್ಟಾಸ್‌, ಕ್ರಿಕೆಟ್‌ ಕಿಟ್‌ ಕೊಡುವ ಮೂಲಕ ನನ್ನ ಬೆಂಬಲಕ್ಕೆ ನಿಂತರು. ಈ ಸಂದರ್ಭ ದಲ್ಲಿಯೇ, ರವಿ ಕುಮಾರ್‌ ಮತ್ತು ಸ್ಟೇಟ್‌ ಡಿವಿಷನ್‌ಗೆ ಆಡುವ ಶಿವಕುಮಾರ ಗೌಡ ಎಂಬಿಬ್ಬರ‌ ಪರಿಚಯವೂ ಆಯಿತು. “ನಿನ್ನ ಬೆಂಬಲಕ್ಕೆ ನಾವು ಇರ್ತೀವಪ್ಪ, ನೀನು ಆರಾಮಾಗಿ ಇರು. ಏನೇ ಸಮಸ್ಯೆ ಇದ್ರೂ ಹೇಳ್ಕೊ’ ಅಂದರು.

Advertisement

ನಾನು ಕ್ರಿಕೆಟ್‌ ಆಡುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. ಆದರೆ ಅಪ್ಪ ಗುಟ್ಟಾಗಿ ಕ್ರಿಕೆಟ್‌ ಕಿಟ್‌ ತಂದು ಕೊಟ್ಟಿದ್ರು. ಇದು ಗೊತ್ತಾ ದಾಗ ಉಳಿದವರೆಲ್ಲ ಗೇಲಿ ಮಾಡಿದ್ದರು. ನನ್ನೊಳಗಿನ ಹಠಮಾರಿ ಎದ್ದುನಿಂತದ್ದೇ ಆಗ. ಜೋರಾಗಿ ಬ್ಯಾಟ್‌ ಬೀಸಲು ಭುಜದಲ್ಲಿ ಶಕ್ತಿ ಇರಬೇಕು ಅನ್ನಿಸಿದಾಗ ಸ್ವಿಮ್ಮಿಂಗ್‌ಗೆ ಸೇರಿ, ಕೆಲವೇ ತಿಂಗಳಿನಲ್ಲಿ ಕಟ್ಟುಮಸ್ತಾದ ದೇಹಾಕೃತಿ ಪಡೆದೆ. ಮೈದಾನದಲ್ಲಿ ಗಂಟೆಗಟ್ಟಲೆ ಬೆವರು ಹರಿಸಿ, ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಪಳಗಿದೆ. ಪದೇ ಪದೆ ಗಾಯಗಳಾದಾಗ ನನ್ನನ್ನು ನಾನೇ ಸಂತೈಸಿಕೊಂಡೆ. ಅಲ್ಲದೆ ಇತರ ತಂಡದಲ್ಲೂ ಆಡುತ್ತೇನೆ. ನನ್ನ ಬಗ್ಗೆ ಕ್ರಿಕೆಟ್‌ ಕ್ಲಬ್‌ಗಳಿಗೆ ಗೊತ್ತಾಗಿದೆ, ನನಗೆ ಪ್ರಾಯೋಜಕರು ಸಿಕ್ಕಿದ್ದಾರೆ.

ನಾನು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದು 2017ರಲ್ಲಿ. ಮುಂದೆ ದಕ್ಷಿಣ ವಲಯ ತಂಡಕ್ಕೆ ಆಡಿದೆ. 2019-20ರಲ್ಲಿ ಇಂಡಿಯಾ ಎ ತಂಡಕ್ಕೆ ಆಡಿದೆ. ಸರಣಿ ಪುರುಷೋತ್ತಮ ಅನ್ನಿಸಿಕೊಂಡೆ. 2022ರಲ್ಲಿ ಭಾರತ ತಂಡದ ಆಟಗಾರನಾಗಿ ಆಡಿದೆ. ಹರಿಯಾಣದಲ್ಲಿ ನಡೆದ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಆದೆ. ಅದೊಮ್ಮೆ ನೇಪಾಲದ ಎದುರು ಏಳನೇ ಕ್ರಮಾಂಕದಲ್ಲಿ ಆಡಲು ಹೋದಾಗ 11 ಬಾಲ್‌ನಲ್ಲಿ 32 ರನ್‌ ಹೊಡೆದಿದ್ದೆ. ಇವು ಮತ್ತು ಉತ್ತಮವಾಗಿ ಆಡಿ ಪಂದ್ಯಗಳನ್ನು ಗೆದ್ದಿರುವ ಸಂದರ್ಭಗಳು, ನನ್ನ ಬದುಕಿನ ಮರೆಯಲಾಗದ ಕ್ಷಣಗಳು. 19 ಶತಕಗಳು, 91 ಅರ್ಧ ಶತಕಗಳು ಸೇರಿದಂತೆ ಒಟ್ಟು 18,000 ರನ್‌ಗಳನ್ನು ಕಲೆಹಾಕಿದ್ದೇನೆ.

ಕ್ರಿಕೆಟ್‌ ಪ್ರಾಕ್ಟಿಸ್‌ಗೆ ಅವಕಾಶ ಕೊಡಬೇಕು ಅಂತ ವಿನಂತಿಸಿ ಕೊಂಡೇ ಎಕ್ಸಲೆಂಟ್‌ ಅನ್ನುವ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದೇನೆ. ನಮ್ಮ ವಿಭಾಗದ ಮುಖ್ಯಸ್ಥರು ಖುಷಿಯಿಂದ ಒಪ್ಪಿದ್ದಾರೆ. ಫಿಟೆ°ಸ್‌ ಅಕಾಡೆಮಿಯೊಂದರಲ್ಲಿ ಪರಿಚಯವಾದ ವಿಶಾಲ್‌ ಅವರಿಂದ ಕಿಕ್‌ ಬಾಕ್ಸಿಂಗ್‌ ಕಲಿತಿದ್ದೇನೆ. “ನೋಡೂ, ಎದುರಾಳಿಗೆ ಎರಡೂ ಕೈ ಇರುತ್ತವೆ. ನಿನಗೆ ಒಂದೇ ಕೈ. ಅದೇ ನಿನ್ನ ಶಕ್ತಿ ಅನ್ನುವುದನ್ನು ಅರ್ಥ ಮಾಡ್ಕೊ. ನಿನ್ನ ಪಂಚ್‌ ಯಾವುದೇ ಸಂದರ್ಭದಲ್ಲೂ ಮಿಸ್‌ ಆಗುವಂತಿಲ್ಲ’ ಎಂದದ್ದು ಮಾತ್ರವಲ್ಲ; ಕಿಕ್‌ ಬಾಕ್ಸಿಂಗ್‌ನ ಹಲವು ಪಟ್ಟು ಮತ್ತು ಗುಟ್ಟು ಗಳನ್ನು ವಿಶಾಲ್‌ ಸರ್‌ ಹೇಳಿಕೊಟ್ಟರು. ವಾರದ ಹಿಂದೆ ಮುಂಬ ಯಿಯಲ್ಲಿ ನಡೆದ ಟೂರ್ನಮೆಂಟ್‌ನಲ್ಲಿ, 70 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ ಗೆದ್ದು ಬಂದೆ!

ಆದರೆ ಯಾವ ಸಂದರ್ಭದಲ್ಲೂ ನನಗೆ ಯಾವುದೇ ಎನ್‌ಜಿಒ ಆಗಲಿ, ಸರಕಾರವಾಗಲಿ ಯಾವುದೇ ರೀತಿಯ ಸಹಾಯ ಮಾಡಿಲ್ಲ. ಕ್ರೀಡಾಪಟುಗಳಿಗೆ ಸರಕಾರ, ಸಂಘಸಂಸ್ಥೆಗಳು ಉದಾರವಾಗಿ ಸಹಾಯ ಮಾಡಬೇಕು ಅನ್ನುತ್ತಾ ತನ್ನ ಮಾತುಗಳಿಗೆ ಫುಲ್‌ ಸ್ಟಾಪ್‌ ಹಾಕಿದ ಶಿವಶಂಕರ್‌.

ಎರಡು ಪ್ರಮುಖ ಕ್ರೀಡೆಗಳಲ್ಲಿ ಮಿಂಚುತ್ತಿರುವ ಶಿವಶಂಕರ್‌ನ ಆಟದ ಸೊಬಗನ್ನು ನೋಡಬೇಕೆಂದರೆ: https://instagram.com/shiva_subbarayappa
ಈ ಹುಡುಗನಿಗೆ ಅಭಿನಂದನೆ ಹೇಳಬೇಕು ಅನ್ನಿಸಿದರೆ- 7975587909.

 ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next