Advertisement

ಈಕೆ ಅದೆಷ್ಟು ಕ್ರೂರಿ ಗೊತ್ತಾ? ಜೈಲಿನಲ್ಲೇ ನೇಣಿಗೆ ಶರಣಾದ ಹಂತಕಿ

05:09 PM Aug 24, 2018 | Team Udayavani |

ತಿರುವನಂತಪುರಂ: ರಾಜ್ಯದಾದ್ಯಂತ ಸೆನ್ಸೆಷನಲ್ ಹುಟ್ಟಿಸಿದ್ದ ಕೇರಳದ ಪಿಣರಾಯಿ ಊರಿನ ಮಾಸ್ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ಸೌಮ್ಯ(30) ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ.

Advertisement

9 ವರ್ಷದ ಮಗಳು ಹಾಗೂ ಅಪ್ಪ, ಅಮ್ಮನಿಗೆ ವಿಷ ನೀಡಿ ಕೊಲೆಗೈದಿದ್ದ ಸೌಮ್ಯ ಜೈಲಿನ ಆವರಣದೊಳಗಿದ್ದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಸರಣಿ ಸಾವಿನಿಂದ ಊರಿನ ಜನರೇ ಭಯಗೊಂಡಿದ್ದರು:

ನಾಲ್ಕು ತಿಂಗಳಿನಲ್ಲಿಯೇ ಮೂರು ಮಂದಿ ಸಾವನ್ನಪ್ಪಿರುವ ವಿಷಯ ಪಿಣರಾಯಿ ಊರಿನಲ್ಲಿ ದೊಡ್ಡ ಭಯಕ್ಕೆ ಕಾರಣವಾಗಿತ್ತು. ಅಲ್ಲದೇ ಸಿಎಂ ಊರಿನಲ್ಲೇ ಆದ ಘಟನೆಯಿಂದಾಗಿ ಪೊಲೀಸರ ಮೇಲೆ ಪ್ರಕರಣ ಬೇಧಿಸಲು ಒತ್ತಡ ಹಾಕಿದ್ದು, ಕೊಲೆ ಪ್ರಕರಣದ ಬಗ್ಗೆ ಮೊದಲ ಆದ್ಯತೆ ಕೊಟ್ಟು ಆರೋಪಿಯನ್ನು ಕಂಡು ಹಿಡಿಯುವಂತೆ ಸಿಎಂ ಪಿಣರಾಯಿ ಸೂಚಿಸಿದ್ದರು.

2012ರಲ್ಲಿಯೇ ಈ ಕುಟುಂಬದ ದುರಂತ ಘಟನೆಗಳು ಆರಂಭವಾಗಿದ್ದವು. ಸೌಮ್ಯಳ ಒಂದು ವರ್ಷದ ಮಗಳು ಮೊದಲು ಸಾವನ್ನಪ್ಪಿದ್ದಳು. ಇದೊಂದು ಸಹಜ ಸಾವು ಎಂದು ಪರಿಗಣಿಸಿ ಪೋಸ್ಟ್ ಮಾರ್ಟ್ಂ ಮಾಡಿಸಲು ಯಾರೂ ಹೇಳಿರಲಿಲ್ಲವಾಗಿತ್ತು.

Advertisement

2018ರ ಜನವರಿ 21ರಂದು ಸೌಮ್ಯಳ ಹಿರಿಯ ಮಗಳು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಳು. ತದನಂತರ ಮಾರ್ಚ್ 7ರಂದು ಸೌಮ್ಯ ತಾಯಿ ಕಮಲಾ ಸಾವನ್ನಪ್ಪಿದ್ದರು. ಏಪ್ರಿಲ್ 13ರಂದು ತಂದೆ ಕುಂಜಿಕಣ್ಣನ್ ಸಾವನ್ನಪ್ಪಿದ್ದರು. ಎಲ್ಲರೂ ಸಾಯುವ ಮೊದಲು ವಾಂತಿ ಮಾಡಿಕೊಂಡಿದ್ದರು. ಈ ವೇಳೆ ಪೋಷಕರ ಶವವನ್ನು ಪೋಸ್ಟ್ ಮಾರ್ಟ್ಂಗೆ ಕಳುಹಿಸಿದ್ದರು. ಸೌಮ್ಯ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಸೌಮ್ಯಳ ಆರೋಗ್ಯದ ಪರೀಕ್ಷೆ ನಡೆಸಿದ್ದ ವೈದ್ಯರ ಮಾಹಿತಿ ಬಳಿಕ ಪೊಲೀಸರಿಗೆ ಸಂಶಯ ಹೆಚ್ಚಾಗತೊಡಗಿತ್ತು.

ಏಪ್ರಿಲ್ 25ರಂದು ಸೌಮ್ಯಳನ್ನು ಸುಮಾರು 11ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಗುರಿಪಡಿಸಿದ ಬಳಿಕ ಇಲಿಗೆ ಹಾಕುವ ವಿಷವನ್ನು ಅನ್ನದಲ್ಲಿ ಹಾಕಿ ಮಗಳು ಹಾಗೂ ಪೋಷಕರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಳು.

ಈ ಎಲ್ಲಾ ಹತ್ಯೆಗೆ ಕಾರಣವಾಗಿದ್ದು ತನ್ನ ಅನೈತಿಕ ಸಂಬಂಧ ಮಗಳಿಗೆ ಗೊತ್ತಾಗಿದ್ದು.  ಸೌಮ್ಯ ಪರ ಪುರುಷನ ಜೊತೆ ರಾಸಲೀಲೆಯಲ್ಲಿ ತೊಡಗಿದ್ದಾಗಲೇ ಮಗಳು ಕಣ್ಣಾರೆ ಕಂಡು ಬಿಟ್ಟಿದ್ದಳು. ಈ ಘಟನೆ ನಂತರ ಸೌಮ್ಯ ಮಗಳು ಹಾಗೂ ತಂದೆ, ತಾಯಿಯನ್ನು ಕೊಲ್ಲಲು ಯೋಚಿಸಿರುವುದಾಗಿ ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದಳು. ಆದರೆ ತಾನು ಆರು ವರ್ಷದ ಹಿಂದೆ 1ವರ್ಷದ ಮಗುವನ್ನು ಕೊಂದಿಲ್ಲ ಎಂದು ಹೇಳಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next