Advertisement

ಕೇರಳದಲ್ಲಿ  ಸರಕಾರಿ ಪ್ರಾಯೋಜಿತ ಆಕ್ರಮಣ: ಸುರೇಂದ್ರನ್‌

09:57 AM Feb 25, 2017 | Harsha Rao |

ಮಂಗಳೂರು: ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಡೆಯುವ ವಿವಿಧ ರೀತಿಯ ಆಕ್ರಮಣ, ಗೂಂಡಾ ಚಟುವಟಿಕೆಗಳಿಗೆ ಆಯಾಯ ಸರಕಾರಗಳು ಕಡಿವಾಣ ಹಾಕುತ್ತವೆ. ಅಲ್ಲಿನ ಸರಕಾರ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತದೆ. ಆದರೆ ಕೇರಳದಲ್ಲಿ ಸರಕಾರಿ ಪ್ರಾಯೋಜಿತ ಆಕ್ರಮಣಗಳೇ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಕೊಲೆ ನಡೆಸುವವರನ್ನು ರಕ್ಷಿಸುವ ವ್ಯವಸ್ಥಿತ ಕೆಲಸವನ್ನು ಅಲ್ಲಿನ ಸರಕಾರ ಮಾಡುತ್ತಿದೆ ಎಂದು ಬಿಜೆಪಿ ಕೇರಳ ರಾಜ್ಯ ಘಟಕದ ಕಾರ್ಯದರ್ಶಿ ಸುರೇಂದ್ರನ್‌ ಹೇಳಿದರು.

Advertisement

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಫೆ. 25ರಂದು ಮಂಗಳೂರಿಗೆ ಆಗಮಿಸುವುದನ್ನು ವಿರೋಧಿಸಿ ವಿಶ್ವಹಿಂದೂ ಪರಿಷತ್‌ ಹಾಗೂ ಹಿಂದೂ ಜಾಗರಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಬಂಟ್ವಾಳ ತಾಲೂಕಿನಷ್ಟೇ ದೊಡ್ಡದಿರುವ ಕೇರಳದ ಕೆಲವು ಭಾಗದಲ್ಲಿ ಮಾತ್ರ ಸಿಪಿಎಂನ ಕೆಂಪು ಬಾವುಟ ಕಾಣುತ್ತಿದೆ. ಆದರೆ ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ದೇಶದ ಮೂಲೆ ಮೂಲೆಯಲ್ಲಿ ಭಗವಾಧ್ವಜ ರಾರಾಜಿಸುತ್ತಿದೆ ಎಂಬುದನ್ನು ಸಿಪಿಎಂನವರು ನೆನಪಿಟ್ಟುಕೊಳ್ಳಬೇಕು. ಹಿಂದೂ ನಾಯಕರು, ಬಿಜೆಪಿಯವರನ್ನು ಕೇರಳದಲ್ಲಿ ಮಾಡಿದಂತೆ ನಾವು ಇತರ ರಾಜ್ಯದಲ್ಲಿ ಮಾಡಿದರೆ ಏನು ಆಗಬಹುದು ಎಂಬ ಎಚ್ಚರಿಕೆ ಇರಲಿ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ನಾವು ನಿಮ್ಮ ಹಾಗೆ ಅಮಾನವೀಯವಾಗಿ ವರ್ತಿಸುವುದಿಲ್ಲ ಎಂದರು. 

ಅವಕಾಶ ನೀಡುತ್ತಿಲ್ಲ
ಕೇರಳದಲ್ಲಿ ಎಲ್ಲದಕ್ಕೂ ಸಿಪಿಎಂ ನಿರ್ಧಾರವೇ ಅಂತಿಮ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದೆ. ಮಾತಾ ಅಮೃತಾನಂದಮಯಿ ಅವರ ಸಂಘಟನೆ ಕಾರ್ಯಕ್ರಮಗಳಿಗೆ ಅಲ್ಲಿ ಅವಕಾಶ ನೀಡುತ್ತಿಲ್ಲ. ಎಸ್‌ಎನ್‌ಡಿಪಿ ಕಾರ್ಯಕ್ರಮ ಮಾಡಲು ಅವಕಾಶ ನೀಡುತ್ತಿಲ್ಲ. ಸಾಮಾಜಿಕ ಸಮಾನತೆ ಸಾರಿದ ನಾರಾಯಣ ಗುರುಗಳಿಗೆ ಅವಮಾನ ಮಾಡಲಾಗುತ್ತಿದೆ. ಜಾತಿ ಸಂಘಧಿಟನೆ ಮಾಡುವ ಹಾಗಿಲ್ಲ. ಕ್ರೀಡಾ ಚಟುವಟಿಕೆ ನಡೆಸುವ ಹಾಗಿಲ್ಲ ಎಂದವರು ಹೇಳಿದರು. 

ಯಾಕೆ ಚಕಾರ ಎತ್ತುತ್ತಿಲ್ಲ ?
ರೋಹಿತ್‌ ವೇಮುಲ ಸಾವಿನ ಬಗ್ಗೆ ದೇಶಾದ್ಯಂತ ಪ್ರಚಾರ ನಡೆಸಿದ ಬುದ್ಧಿಜೀವಿ, ಸಾಹಿತಿಗಳು ಕೇರಳದ ಕಾಲೇಜುಗಳಲ್ಲಿ ಸಿಪಿಎಂ ನೇತೃತ್ವದ ವಿದ್ಯಾರ್ಥಿ ಸಂಘಟನೆಯವರು ದಲಿತ ವಿದ್ಯಾರ್ಥಿಗಳು ಹಾಗೂ ಇತರ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ದಮನೀಯ ನೀತಿ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಎಂದರು.

Advertisement

ಪ್ರಮುಖರಾದ ಕುಂಟಾರು ರವೀಶ ತಂತ್ರಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಜರಂಗದಳದ ಮುಖಂಡ ಶರಣ್‌ ಪಂಪ್‌ವೆಲ್‌, ಬಿಎಂಎಸ್‌ ಪ್ರಮುಖರಾದ ನಾರಾಯಣ ಶೆಟ್ಟಿ, ಎಬಿವಿಪಿ ಮುಖಂಡ ಶ್ರೀಜಿತ್‌ ಶೆಟ್ಟಿ ಉಪಸ್ಥಿತರಿದ್ದರು. 

ವಿಶ್ವಹಿಂದೂ ಪರಿಷತ್‌ನ ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌ ಪ್ರಸ್ತಾವಿಸಿದರು. ಹಿಂದೂ ಜಾಗರಣ ವೇದಿಕೆ ಪ್ರಮುಖ ಕಿಶೋರ್‌ ಕುಮಾರ್‌ ಸ್ವಾಗತಿಸಿದರು. ಜಗದೀಶ ಶೇಣವ ಕಾರ್ಯಕ್ರಮ ನಿರೂಪಿಸಿದರು. 

ಸಂಸದರಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮನಪಾ ಉಪಮೇಯರ್‌ ಸುಮಿತ್ರಾ ಕರಿಯ, ಪ್ರಮುಖರಾದ ಕೃಷ್ಣ ಜೆ. ಪಾಲೆಮಾರ್‌, ಎನ್‌. ಯೋಗೀಶ್‌ ಭಟ್‌, ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ, ಉದಯ್‌ ಕುಮಾರ್‌ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾಕರ ಬಂಗೇರ, ವಿಲಾಸ್‌ ನಾಯಕ್‌, ಅಂಗಾರ ಶ್ರೀಪಾದ, ಮೋನಪ್ಪ ಭಂಡಾರಿ, ರಘುಪತಿ ಭಟ್‌ ಸಭೆಯಲ್ಲಿ ಭಾಗವಹಿಸಿದ್ದರು. 
ಸಭೆಗೂ ಮುನ್ನ ನಗರದ ಅಂಬೇಡ್ಕರ್‌ ವೃತ್ತದಿಂದ ಕೇಂದ್ರ ಮೈದಾನದ ವರೆಗೆ ಪ್ರತಿಭಟನ ಮೆರವಣಿಗೆ ಸಾಗಿ ಬಂತು.

Advertisement

Udayavani is now on Telegram. Click here to join our channel and stay updated with the latest news.

Next