Advertisement

ಪ್ರಜಾಪ್ರಭುತ್ವ ವಿರೋಧಿ: ಕೇರಳ ರಾಜ್ಯಪಾಲ ಆರಿಫ್ ಖಾನ್ ವಿರುದ್ದ ಪಿಣರಾಯಿ ಕಿಡಿ

02:06 PM Oct 24, 2022 | Team Udayavani |

ತಿರುವನಂತಪುರಂ: 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸೂಚಿಸಿರುವುದು ಕೇರಳದ ರಾಜ್ಯಪಾಲ ಆರಿಫ್ ಮೊಹಮದ್‌ ಖಾನ್‌ ಅವರ ವಿರುದ್ದ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.

Advertisement

ರಾಜ್ಯಪಾಲರಾದ ಆರಿಫ್ ಎಂ. ಖಾನ್ ಅವರು ಕುಲಪತಿ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಅಧಿಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ವಿಸಿಗಳ ಅಧಿಕಾರದ ಮೇಲಿನ ಅತಿಕ್ರಮಣವಾಗಿದೆ. ರಾಜ್ಯಪಾಲರ ಹುದ್ದೆಯು ಸರಕಾರದ ವಿರುದ್ಧ ನಡೆಯುವುದಲ್ಲ, ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯುವುದು. ಅವರು ಆರ್‌ಎಸ್‌ಎಸ್‌ನ ಸಾಧನವಾಗಿ ವರ್ತಿಸುತ್ತಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ.

ಉಪಕುಲಪತಿಗಳು ಖಾನ್ ಅವರ ಆದೇಶವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದು, ಎಎನ್‌ಐ ಪ್ರಕಾರ ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯವು ಸೋಮವಾರ (ಅಕ್ಟೋಬರ್ 24) ಸಂಜೆ 4 ಗಂಟೆಗೆ ವಿಶೇಷ ಸಭೆ ನಡೆಸಲಿದೆ.

ಎ.ಪಿ.ಜಿ.ಅಬ್ದುಲ್‌ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಜಿಸಿ ನಿಯಮ ಉಲ್ಲಂಘಿಸಿ ಉಪ ಕುಲಪತಿ ನೇಮಕ ಮಾಡಿಕೊಳ್ಳಲಾಗಿದ್ದು, ಆ ನೇಮಕವನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯಪಾಲರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಅಬ್ದುಲ್‌ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ರಾಜಶ್ರೀ ಎಂ.ಎಸ್‌ ಸೇರಿದಂತೆ ಒಟ್ಟು 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಈ ಸೂಚನೆ ನೀಡಲಾಗಿದೆ.ಸೋಮವಾರ ಬೆಳಗ್ಗೆ 11.30ರ ಒಳಗಾಗಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಬೇಕೆಂದೂ ಹೇಳಲಾಗಿತ್ತು.

Advertisement

ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಯಮದ ಪ್ರಕಾರ ಸರ್ಕಾರ ರಚಿಸುವ ಶೋಧ ಸಮಿತಿಯು ಇಂಜಿನಿಯರಿಂಗ್‌ ವಿಜ್ಞಾನ ವಿಷಯದಲ್ಲಿ ಪರಿಣಿತರಾಗಿರುವ ಕನಿಷ್ಠ ಮೂವರು ಹೆಸರನ್ನು ಸೂಚಿಸಬೇಕಿತ್ತು. ಆದರೆ ಅಬ್ದುಲ್‌ ಕಲಾಂ ವಿವಿ ವಿಚಾರದಲ್ಲಿ ಕೇವಲ ಒಬ್ಬರ ಹೆಸರನ್ನು ಮಾತ್ರ ಸೂಚಿಸಿ, ಅವರನ್ನೇ ಉಪ ಕುಲಪತಿಯನ್ನಾಗಿಸಲಾಗಿತ್ತು. ಇದರಿಂದಾಗಿ ನಿಯಮ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next