Advertisement

ನೆಂಟರನ್ನು ದೂರವಿಟ್ಟು, ಜನಸಾಮಾನ್ಯರ ದಸರಾ ಮಾಡಿ

12:38 PM Sep 23, 2019 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯ ಕ್ರಮಗಳನ್ನು ಜನ ಸಾಮಾನ್ಯರು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡಿ, ಯಾವುದೇ ಕಾರಣಕ್ಕೂ ಅಧಿಕಾರಿಗಳ ದಸರಾ ಎನ್ನುವಂತೆ ವರ್ತಿಸಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಲಹೆ ನೀಡಿದರು.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ದಸರಾ ಸಿದ್ಧತಾ ಸಭೆ ನಡೆಸಿದ ಅವರು, ಜಂಬೂಸವಾರಿ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಹಾಗೂ ಪಂಜಿನ ಕವಾಯತು ನಡೆಯುವ ಬನ್ನಿಮಂಟಪ ಮೈದಾನದಲ್ಲಿನ ಆಸನಗಳಲ್ಲಿ ಅಧಿಕಾರಿಗಳು, ಮತ್ತವರ ಸಂಬಂಧಿಕರೇ ತುಂಬಿದ್ದಾರೆ ಎಂಬ ಮಾತುಗಳು ಕೇಳಿ ಬರಬಾರದೇ ಜನರ ದಸರಾ ಎನ್ನುವ ಭಾವನೆ ಬರುವಂತೆ ನೋಡಿಕೊಳ್ಳಿ ಎಂದರು.

ಅ.7ರಂದು ಪಂಜಿನ ಕವಾಯತು ಪೂರ್ವ ತಾಲೀಮು ನಡೆಯಲಿದ್ದು, ಅಂದು ಅಧಿಕಾರಿವರ್ಗ ದವರು ತಮ್ಮ ಕುಟುಂಬದವರು, ಸಂಬಂಧಿಕರನ್ನೆಲ್ಲಾ ಕರೆತಂದು ಪ್ರದರ್ಶನ ತೋರಿಸಿ, ಆದರೆ, ಅ.8ರಂದು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಿ, ಮುಖ್ಯವಾಗಿ ದಸರಾ ಪಾಸ್‌ ವಿತರಣೆಯಲ್ಲಿ ಗೊಂದಲ ಇಲ್ಲದಂತೆ ನೋಡಿಕೊಳ್ಳಿ, ಕೆಲವು ಸಂದರ್ಭಗಳಲ್ಲಿ ವಿಐಪಿ ಪಾಸ್‌, ಗೋಲ್ಡ್ ಕಾರ್ಡ್‌ ಹೊಂದಿದ್ದರೂ ಅವರು ಕೂರಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ, ದೇಶ-ವಿದೇಶ ಗಳಿಂದ ದಸರಾ ನೋಡಲು ಬರುವವರಿಗೆ ಮೊದಲು ಆದ್ಯತೆ ಕೊಡಿ ಎಂದರು.

ವಿದ್ಯಾರ್ಥಿಗಳಿಂದ ಲಾಂಛನ: ಮುಖ್ಯಮಂತ್ರಿ ಕಪ್‌ ಸೇರಿದಂತೆ ದಸರಾ ಕ್ರೀಡಾಕೂಟಕ್ಕೆ ಬರುವ ಕ್ರೀಡಾ ಪಟುಗಳಿಗೆ ಯಾವುದೇ ತೊಂದರೆ ಎದುರಾಗದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ, ಇದೇ ವೇಳೆ ದಸರಾ ಕ್ರೀಡಾಕೂಟಕ್ಕೆ ಪ್ರತ್ಯೇಕ ಲಾಂಛನ ರೂಪಿಸುವ ಸಂಬಂಧ ಕ್ರೀಡಾ ಇಲಾಖೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಕ್ರೀಡಾ ಲಾಂಛನ ಮಾಡಿಕೊಡುವ ಸ್ಪರ್ಧೆ ಏರ್ಪಡಿಸಿದರೆ ಸಾಕಷ್ಟು ಕಾಲೇಜು ವಿದ್ಯಾರ್ಥಿಗಳೇ ಮುಂದೆ ಬಂದು ಲೋಗೋ ಮಾಡಿಕೊಡುತ್ತಾರೆ. ನಮ್ಮ ವಿದ್ಯಾರ್ಥಿಗಳಲ್ಲಿಯೇ ಇರುವ ಪ್ರತಿಭೆಯನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ರೈತ ದಸರಾ: ಅ.1ರಿಂದ ಮೂರು ದಿನಗಳ ಕಾಲ ರೈತ ದಸರಾ ನಡೆಯಲಿದ್ದು, ಕೃಷಿ ಖಾತೆಯೂ ಮುಖ್ಯಮಂತ್ರಿಯವರ ಬಳಿಯೇ ಇರುವುದರಿಂದ ಎಲ್ಲ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿಯ ವರನ್ನೇ ಕರೆತರಲಾಗುವುದಿಲ್ಲ. ಹೀಗಾಗಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಾರ್ಯಕ್ರಮಗಳಿಗೆ ಜೋಡಿಸಿಕೊಳ್ಳಿ, ಮಹಾ ನಗರಪಾಲಿಕೆಯವರು ಅವರ ಮಿತಿಯಲ್ಲಿ ದೀಪಾಲಂಕಾರ ಮಾಡುತ್ತಾರೆ. ದೀಪಾಲಂಕಾರ ಸಮಿತಿಯವರು ನಗರದ ವರ್ತುಲ ರಸ್ತೆ ಒಳಗಿನ ಎಲ್ಲಾ ವೃತ್ತಗಳಿಗೆ ದೀಪಾಲಂಕಾರ ಮಾಡಿಸಿ ಎಂದು ಹೇಳಿದರು.

Advertisement

ಮಹಿಳಾ, ಮಕ್ಕಳ ದಸರಾ: ಮಹಿಳಾ ಮತ್ತು ಮಕ್ಕಳ ದಸರಾ ಉದ್ಘಾಟನಾ ಸಮಾರಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರ ಜೊತೆಗೆ ನಟಿ ತಾರಾ ಕೂಡ ಆಗಮಿಸಲಿದ್ದಾರೆ. ಮತ್ಸ್ಯಮೇಳ ಉದ್ಘಾಟನೆಯನ್ನು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ ಮಾಡಿಸಿ ಎಂದ ಸಚಿವರು, ಸಾಂಸ್ಕೃತಿಕ ದಸರಾ, ಲಲಿತ ಕಲೆ, ಸ್ತಬ್ಧಚಿತ್ರ ಉಪ ಸಮಿತಿ, ಯೋಗ ದಸರಾ ಸೇರಿದಂತೆ ಉತ್ತಮ ಕಾರ್ಯಕ್ರಮಗಳನ್ನು ಜೋಡಿಸಿ, ಶ್ರಮ ಹಾಕಿ ಕೆಲಸ ಮಾಡಿ, ನಿಮ್ಮೆಲ್ಲರ ಶ್ರಮಕ್ಕೆ ಜಂಬೂಸವಾರಿ-ಪಂಜಿನ ಕವಾಯತು ಮುಗಿದ ನಂತರ ಫ‌ಲ ಸಿಗಲಿದೆ. ಈ ಬಾರಿ ಯಶಸ್ವಿ ದಸರಾ ಆಚರಿಸುವ ಮೂಲಕ ರಾಷ್ಟ್ರಕ್ಕೆ ದಸರೆಯ ಹೊಸ ಸಂದೇಶ ಹೋಗುವಂತೆ ನೋಡಿಕೊಳ್ಳಿ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಶ್ಶಂತ್‌, ಡಿಸಿಎಫ್ ಪ್ರಸನ್ನ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಮುಡಾ ಆಯುಕ್ತ ಕಾಂತರಾಜು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next