Advertisement

KEA Exam ಅಕ್ರಮ ಪ್ರಕರಣ; ಠಾಣೆಯಲ್ಲಿ ಆರ್.ಡಿ.ಪಾಟೀಲ್ ನೋಡಿ ಕಣ್ಣೀರಿಟ್ಟ ಪತ್ನಿ

04:47 PM Nov 11, 2023 | Team Udayavani |

ಕಲಬುರಗಿ: ಕೆಇಎ ಅಕ್ರಮ ಪರೀಕ್ಷಾ ಹಗರಣದ ರೂವಾರಿ ಆರ್.ಡಿ.ಪಾಟೀಲ್ ಅಲಿಯಾಸ್ ರುದ್ರಗೌಡ ಪಾಟೀಲ್ ನನ್ನು ಕಾಣಲು ಶನಿವಾರ ನಗರದ ಅಶೋಕ್ ನಗರ ಪೊಲೀಸ್ ಠಾಣೆಗೆ ಆಗಮಿಸಿದ ಪತ್ನಿ ಗಂಡನ ಪರಿಸ್ಥಿತಿ ನೋಡಿ ಕಣ್ಣೀರಿಟ್ಟ ಘಟನೆ ನಡೆಯಿತು.

Advertisement

ನಿನ್ನೆಯಷ್ಟೇ ರುದ್ರಗೌಡನನ್ನು ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಅಶೋಕ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಶನಿವಾರ ಆರೋಗ್ಯ ತಪಾಸಣೆ ಸೇರಿದಂತೆ ಇತರೆ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ, ನ್ಯಾಯಾಂಗದ ಮುಂದೆ ಹಾಜರು ಪಡಿಸುವ ಮುನ್ನ ಕುಟುಂಬ ಸದಸ್ಯರಿಗೆ ಬಂಧನದ ಮಾಹಿತಿಯನ್ನು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರುದ್ರಗೌಡ ಪತ್ನಿ ಹಾಗೂ ಕುಟುಂಬ ಸದಸ್ಯರು ಅಪರಾಹ್ನ ಪೊಲೀಸ್ ಠಾಣೆಗೆ ಆಗಮಿಸಿ ಆರ್ ಡಿ ಪಾಟೀಲ ನನ್ನ ನೋಡಿ ಮಾತುಕತೆ ಮಾಡಿದರು. ಬಳಿಕ ಪೊಲೀಸ್ ಠಾಣೆಯಿಂದ ಹೊರ ಬರುವಾಗ ತನ್ನ ಗಂಡನ ಪರಿಸ್ಥಿತಿ ನೋಡಿ ಬಿಕ್ಕಳಿಸಿ ಅಳಲಾರಂಭಿಸಿದರು.

12 ದಿನಗಳಿಂದ ಕುಟುಂಬದಿಂದ ದೂರ
ಪರೀಕ್ಷಾ ಅಕ್ರಮ ಹೊರಬೀಳುತ್ತಿದ್ದಂತೆ ಅಭ್ಯರ್ಥಿಗಳು ನೀಡಿದ ಸುಳಿವಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು ಪ್ರಕರಣ ದಾಖಲಾಗುತ್ತಿದ್ದಂತೆ ರುದ್ರಗೌಡ ಪಾಟೀಲ್ ಮನೆಯಿಂದ ಕಾಲು ಕಿತ್ತಿದ್ದ. ಅಲ್ಲಿಗೆ ಆತ 12 ದಿನಗಳಿಂದ ಕುಟುಂಬ ಸದಸ್ಯರ ಜತೆ ಸಂಪರ್ಕ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಗಂಡನನ್ನು ನೋಡುತ್ತಿದ್ದನಂತೆ ಪತ್ನಿ ಕಣ್ಣೀರು ಹಾಕಿದರು. ಠಾಣೆಯಲ್ಲಿ ಆತನ ಅವಸ್ಥೆಯನ್ನು ಕಂಡು ಕಳವಳಗೊಂಡರು.ಅಲ್ಲದೆ ಬಂಧನ ಮಾಹಿತಿಯನ್ನು ಕುಟುಂಬ ಸದಸ್ಯರಿಗೆ ಖಚಿತಪಡಿಸಿದ ಪೊಲೀಸರು ಮಾಹಿತಿಗಾಗಿ ಪತ್ನಿಯಿಂದ ಸಹಿ ಪಡೆಯಲಾಯಿತು.

ಪ್ರಕರಣ ಸಿಐಡಿಗೆ ಹಸ್ತಾಂತರ
ಆರ್‌ಡಿ ಪಾಟೀಲ್ ನನ್ನು ಶನಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ಆತನನ್ನು ಪೊಲೀಸ್ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ರಾಜ್ಯ ಸರ್ಕಾರ ಪ್ರಕರಣವನ್ನು ವಿಸ್ತೃತ ತನಿಖೆಗಾಗಿ ಸಿಐಡಿಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಇನ್ನಷ್ಟು ಕುತೂಹಲ ಕೆರಳಿಸಿದೆ. ಇದಲ್ಲದೆ ಸಿಐಡಿ ಗೆ ಪ್ರಕರಣ ಹತ್ತಾಂತರವಾದ ಬಳಿಕ ಇನ್ನಷ್ಟು ಬಂಧನ ಆಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next