Advertisement

ತವರು ಜಿಲ್ಲೆಯ ನಿರೀಕ್ಷೆಗಳನ್ನು ಕಾಯುತ್ತಾರಾ ಸಿಎಂ

12:13 PM Mar 12, 2017 | Team Udayavani |

ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 15ರಂದು ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಸಂಘಟನೆಗಳ, ಇಲಾಖೆಗಳ, ಕೈಗಾರಿಕೋದ್ಯಮಿಗಳ ಜತೆ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್‌ನಲ್ಲಿ ಜನರ ನಿರೀಕ್ಷೆಯೇನು? ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಲಾಗಿರುವ ಯೋಜನೆಗಳ ಸ್ಥಿತಿಗತಿಗಳೇನು? ಎಂಬುದರ ಕುರಿತು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಮ್ಮದು…

Advertisement

ಮೈಸೂರು: ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ತಮ್ಮ ಐದನೇ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಹಾಗೆ ನೋಡಿದರೆ, 2018 ವಿಧಾನಸಭಾ ಚುನಾವಣಾ ವರ್ಷ ಆಗಿರುವುದರಿಂದ ಇದು ಚುನಾವಣಾ ಬಜೆಟ್‌ ಎಂದೇ ಬಿಂಬಿತವಾಗುತ್ತಿದೆ. ಹೀಗಾಗಿ ತವರು ಜಿಲ್ಲೆಯ ಮೈಸೂರು ನಗರದ ಜನತೆ ಈ ಬಜೆಟ್‌ನಲ್ಲಿ ಭರಪೂರ ಯೋಜನೆ ಹಾಗೂ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಭೆ ನಡೆಸಿ ಸಲಹೆ ಪಡೆದಿರುವ ಮುಖ್ಯಮಂತ್ರಿಯವರಿಗೆ ಮೈಸೂರು ಮಹಾ ನಗರಪಾಲಿಕೆಯು ನಗರದ ಅಭಿವೃದ್ಧಿಗಾಗಿ ಬರೋಬ್ಬರಿ 810 ಕೋಟಿ ಅನುದಾನ ಕೇಳಿದೆ. ಜತೆಗೆ ಮೈಸೂರು ಕೈಗಾರಿಕಾ ಸಂಘ ಸೇರಿದಂತೆ ಹಲವರು ತಮ್ಮದೇ ಆದ ಸಲಹೆಗಳ ಜತೆಗೆ ಮನವಿಯನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ತವರು ಜಿಲ್ಲೆಗೆ ಏನೇನು ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮೈಸೂರು ಮಹಾ ನಗರಪಾಲಿಕೆ: ಮೈಸೂರು ನಗರದ ದೇವರಾಜ, ವಾಣಿವಿಲಾಸ, ಮಂಡಿ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡ ಇತ್ಯಾದಿ ಮಾರುಕಟ್ಟೆ ಕಟ್ಟಡಗಳ ಅಭಿವೃದ್ಧಿಗೆ 150 ಕೋಟಿ, ಇರಿÌನ್‌ ರಸ್ತೆ ಅಗಲೀಕರಣ, ಹಳೇ ಉಂಡುವಾಡಿಯಲ್ಲಿ ಭೂ ಸ್ವಾಧೀನಕ್ಕಾಗಿ 75 ಕೋಟಿ, ರಾಯನಕೆರೆ, ಕೆಸರೆ, ಸಿವೇಜ್‌ ಫಾರಂ, ಕಟ್ಟಡ ನಿರ್ಮಾಣ ತ್ಯಾಜ್ಯ ನಿರ್ವಹಣೆ, ಸಿವೇಜ್‌ ಫಾರಂ ಹೊರಭಾಗದ ರಸ್ತೆ ಜಾಲದ ಅಭಿವೃದ್ಧಿ ಸೇರಿದಂತೆ ಘನ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆಗಾಗಿ 75 ಕೋಟಿ, ನಗರದ ಒಳ ಚರಂಡಿ ಜಾಲದ ಅಭಿವೃದ್ಧಿಗಾಗಿ 75 ಕೋಟಿ,

ರೈಲ್ವೆ ಕ್ರಾಸಿಂಗ್‌ ಹತ್ತಿರ ಹೊಸದಾಗಿ ಕೆಳ ಸೇತುವೆ ನಿರ್ಮಾಣ ಸಂಬಂಧ ನಗರದ ಕುಕ್ಕರಹಳ್ಳಿ ಕೆರೆ ಹತ್ತಿರ ರೈಲ್ವೆ ಕೆಳಸೇತುವೆ ಮತ್ತು ಕೆ.ಜಿ.ಕೊಪ್ಪಲು ಬಳಿ ಅಗಲೀಕರಣಕ್ಕಾಗಿ 30 ಕೋಟಿ, ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಅಕ್ವೇರಿಯಂ ಮತ್ತು ಬಹು ಮಹಡಿ ವಾಹನ ನಿಲ್ದಾಣ ನಿರ್ಮಾಣಕ್ಕೆ 60 ಕೋಟಿ, ಮಯೂರ ಕಾಂಪ್ಲೆಕ್ಸ್‌ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ 30 ಕೋಟಿ, ನಗರದ ಎಲ್ಲ ವಾರ್ಡ್‌ಗಳ ರಸ್ತೆ ಅಭಿವೃದ್ಧಿಗಾಗಿ 150 ಕೋಟಿ, ಕೆ.ಆರ್‌. ಆಸ್ಪತ್ರೆ, ಮಹಾರಾಜ ಕಾಲೇಜು ಮತ್ತು ಗ್ರಾಮಾಂತರ ಬಸ್‌ ನಿಲ್ದಾಣದ ಬಳಿ ಪಾದಚಾರಿ ಕೆಳ ಸೇತುವೆಗಳ ನಿರ್ಮಾಣಕ್ಕೆ -ಕೋಟಿ,

Advertisement

ಸಾಡೇರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗಾಗಿ 50 ಕೋಟಿ, ದಳವಾಯಿ ಕಣಿವೆಯಲ್ಲಿ ಮಳೆ ನೀರು ದೊಡ್ಡ ಚರಂಡಿ ನಿರ್ಮಾಣಕ್ಕೆ 15 ಕೋಟಿ, ಕುಕ್ಕರಹಳ್ಳಿ, ದಳವಾಯಿ, ಕಾರಂಜಿ ಸೇರಿದಂತೆ ನಗರದ ಕೆರೆಗಳ ಅಭಿವೃದ್ಧಿಗಾಗಿ 25 ಕೋಟಿ, ಸಂಸ್ಕರಿಸಿದ ತ್ಯಾಜ್ಯ ನೀರಿನ ಮರು ಬಳಕೆಗಾಗಿ 50 ಕೋಟಿ ಹಾಗೂ ಗೊರೂರು, ರಮಾಬಾಯಿ ನಗರಗಳಲ್ಲಿ ಆಶ್ರಯ ಬಡಾವಣೆಗಳ ಅಭಿವೃದ್ಧಿಗಾಗಿ 5 ಕೋಟಿ ರೂ. ಸೇರಿದಂತೆ ಒಟ್ಟಾರೆ ಮೈಸೂರು ನಗರದ ಅಭಿವೃದ್ಧಿ ಸಲುವಾಗಿ ಮಹಾ ನಗರಪಾಲಿಕೆಗೆ 810 ಕೋಟಿ ರೂ. ಅನುದಾನ ಒದಗಿಸುವಂತೆ ಇತ್ತೀಚೆಗೆ ಮೇಯರ್‌ ಎಂ.ಜೆ.ರವಿಕುಮಾರ್‌ ನೇತೃತ್ವದ ಮೈಸೂರು ಮಹಾ ನಗರಪಾಲಿಕೆ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.

ಕೈಗಾರಿಕಾ ಸಂಘದ ಬೇಡಿಕೆ: ಮೈಸೂರು ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿರುವ ಬನ್ನಿಮಂಟಪ ಎ ಮತ್ತು ಬಿ ಬಡಾವಣೆ ಹಾಗೂ ವಿಶ್ವೇಶ್ವರನಗರ ಮೈಸೂರು ದಕ್ಷಿಣ ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆಯ ಪೂರೈಕೆಗಾಗಿ ಕನಿಷ್ಟ 10 ಕೋಟಿ ರೂ., ಎಂಟು ಸಾವಿರ ಎಕರೆ ವಿಶಾಲವಾದ ಮೈಸೂರು ಕೈಗಾರಿಕಾ ಪ್ರದೇಶದಲ್ಲಿ 100 ಹೆಚ್ಚು ಮಧ್ಯಮ ಮತ್ತು ಭಾರೀ ಕೈಗಾರಿಕೆಗಳು, ರಫ್ತು ಉದ್ಯಮಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಪ್ರದೇಶಕ್ಕೆ ಒಂದು ಹೆಲಿಪ್ಯಾಡ್‌ ನಿರ್ಮಾಣ.

ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂದಾಯ ಇಲಾಖೆಯಿಂದ ಕೆಐಎಡಿಬಿಗೆ ಹಸ್ತಾಂತರವಾಗಿರುವ ಪ್ರದೇಶಕ್ಕೆ ಸಮಾನಾಂತರವಾಗಿ ಕನಿಷ್ಠ 50 ಎಕರೆ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ವರ್ಗದ ಕೈಗಾರಿಕಾ ಕ್ಲಸ್ಟರ್‌ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿ ಪಡಿಸಲು ಬಜೆಟ್‌ನಲ್ಲಿ ಪ್ರಕಟಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕವಾಗಿ 30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರಂತರ ವಿದ್ಯುತ್‌ ಸರಬರಾಜಿಗಾಗಿ ಗ್ಯಾಸ್‌ ಆಪರೇಟೆಡ್‌ ಸಬ್‌ಸ್ಟೇಷನ್‌ ಸ್ಥಾಪನೆ ಪ್ರಕಟಿಸಬೇಕು.

ಹೆಬ್ಟಾಳು, ಮೇಟಗಳ್ಳಿ, ಹೂಟಗಳ್ಳಿ, ಬೆಳವಾಡಿ ಕೈಗಾರಿಕಾ ಪ್ರದೇಶಗಳ 6500 ಎಕರೆ ಪ್ರದೇಶದಲ್ಲಿನ 45 ಕಿಮೀ ರಸ್ತೆ ಅಗಲೀಕರಣ, ಅಭಿವೃದ್ಧಿ, ಡಕ್ಟ್ಪೈಪ್‌ ಅಳವಡಿಕೆ, ಸಾಲು ಮರ ನೆಡುವಿಕೆ, ಇತ್ಯಾದಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೆಐಎಡಿಬಿ ಗೆ 35 ಕೋಟಿ ರೂ. ಕಾಯ್ದಿರಿಸಬೇಕು. ಮೈಸೂರು ಕೈಗಾರಿಕಾ ಪ್ರದೇಶಕ್ಕೆ ಒಟ್ಟಾರೆ 2 ಎಂಜಿಡಿ ನೀರು ಸರಬರಾಜು ಬೇಡಿಕೆ ಪೂರೈಸಲು ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಮತ್ತು ಮೈಸೂರು ನಗರಕ್ಕೆ ಹಳೆ ಉಂಡುವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಸಮಗ್ರ ನೀರು ಸರಬರಾಜು ಯೋಜನೆಗೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ,

ಬೀಚನಕುಪ್ಪೆ ಗ್ರಾಮದ 88.5 ಎಕರೆ ಜಮೀನನ್ನು ಮೈಸೂರು ಮಹಾ ನಗರಪಾಲಿಕೆಯ ಹಳೆ ಉಂಡವಾಡಿ ನೀರು ಸರಬರಾಜು ಯೋಜನೆಗೆ ಹಸ್ತಾಂತರಿಸಿ ಅಗತ್ಯ ಆರ್ಥಿಕ ಬೆಂಬಲ ನೀಡಬೇಕೆಂದು ಮೈಸೂರು ಕೈಗಾರಿಕೆಗಳ ಸಂಘ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದೆ. ಇದಲ್ಲದೆ ಮುಂಬರುವ ಚುನಾವಣೆ ದೃಷ್ಟಿಯಿಂದ ಜಿಲ್ಲೆಯ ಎಲ್ಲ ವಿಧಾನಸಬಾ ಕ್ಷೇತ್ರಗಳಿಗೂ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ವಿಶೇಷ ಪ್ರೀತಿ ತೋರಲೇ ಬೇಕಿದೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next