Advertisement

ಕಾಪು ಪುರಸಭೆ : ಗೆದ್ದವರಿಗೆ ಇನ್ನೂ ಸಿಗದ ಅಧಿಕಾರದ ಗದ್ದುಗೆ !

10:02 PM Dec 29, 2022 | Team Udayavani |

ಕಾಪು: ಕಾಪು ಪುರಸಭೆಯ 2ನೇ ಅವಧಿಗೆ ಚುನಾವಣೆ ನಡೆದು, ಫಲಿತಾಂಶ ಘೋಷಣೆಯಾಗಿ ವರ್ಷ ಕಳೆದರೂ ಸರಕಾರದ ಮೀಸಲಾತಿ ಪ್ರಕಟ ವಿಳಂಬದಿಂದಾಗಿ ಗೆದ್ದವರಿಗೆ ಇನ್ನೂ ಅಧಿಕಾರದ ಪಟ್ಟ ಸಿಕ್ಕಿಲ್ಲ. ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿಗೆ ಮೀಸಲಾತಿ ಪ್ರಕಟವಾಗದೆ ಇರುವುದರಿಂದ ಪುರಸಭೆಯಲ್ಲಿ ಗೆದ್ದ ಜನಪ್ರತಿಧಿಗಳ ಆಡಳಿತ ಮರೀಚಿಕೆಯಾಗಿದೆ.

Advertisement

2021 ಡಿ. 27ರಂದು ಚುನಾವಣೆ ನಡೆದು ಡಿ. 30ಕ್ಕೆ ಫಲಿತಾಂಶ ಪ್ರಕಟವಾಗಿತ್ತು. 23 ಮಂದಿ ಸದಸ್ಯ ಬಲದ ಪುರಸಭೆ ಚುನಾ ವಣೆಯಲ್ಲಿ ಬಿಜೆಪಿ – 12, ಕಾಂಗ್ರೆಸ್‌ -7, ಎಸ್‌ಡಿಪಿಐ -3, ಜೆಡಿಎಸ್‌ – 1 ಸ್ಥಾನವನ್ನು ಗೆದ್ದಿದೆ. ಪುರಸಭೆಯಲ್ಲಿ ಬಿಜೆಪಿಗೆ ಬಹುಮತವಿದ್ದು, ತಮ್ಮದೇ ಪಕ್ಷದ ಸರಕಾರವಿದ್ದರೂ ಅಧ್ಯಕ್ಷ – ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯನ್ನು ಇನ್ನೂ ನಿಗದಿ ಪಡಿಸಲು ಸಾಧ್ಯವಾಗಿಲ್ಲ.

2015ರಿಂದ ಅಸ್ತಿತ್ವ
ಕಾಪು, ಮಲ್ಲಾರು ಹಾಗೂ ಉಳಿಯಾರಗೋಳಿ ಗ್ರಾ.ಪಂ.ಗಳನ್ನು ಸೇರಿಸಿಕೊಂಡು ಅಸ್ತಿತ್ವಕ್ಕೆ ಬಂದಿದ್ದ ಪುರಸಭೆಗೆ 2016ರಲ್ಲಿ ಚುನಾವಣೆ ನಡೆದು ಮೊದಲ 30 ತಿಂಗಳ ಅವಧಿಗೆ ಸೌಮ್ಯಾ ಸಂಜೀವ ಅಧ್ಯಕ್ಷೆಯಾಗಿ, ಕೆ. ಎಚ್‌. ಉಸ್ಮಾನ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಕ್ಷದ ಒಡಂಬಡಿಕೆಯಂತೆ 2018ರಲ್ಲಿ ಮಾಲಿನಿ ಅವರು 2ನೇ ಅಧ್ಯಕ್ಷೆಯಾಗಿ ಮತ್ತು ಕೆ. ಎಚ್‌. ಉಸ್ಮಾನ್‌ ಉಪಾಧ್ಯಕ್ಷರಾಗಿ ಮುಂದುವರಿದಿದ್ದರು. ಈರ್ವರ ಅಧ್ಯಕ್ಷರ ಅಧಿಕಾರಾವಧಿಯು 2018 ಡಿ. 3ರಂದು ಕೊನೆಗೊಂಡಿತ್ತು. ಅದಾದ 22 ತಿಂಗಳು ಆಡಳಿತಾಧಿಕಾರಿ ಆಡಳಿತ ನೀಡಿದ್ದು, 2020 ಅ. 28ರಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಅನಿಲ್‌ ಕುಮಾರ್‌ ಮತ್ತು ಉಪಾಧ್ಯಕ್ಷರಾಗಿ ಪರಿಶಿಷ್ಟ ಜಾತಿ ಮೀಸಲಾತಿಯಿಂದ ಕಾಂಗ್ರೆಸ್‌ನ ಮಾಲಿನಿ 2021 ಜೂ. 6ರ ವರೆಗೆ ಅಧಿಕಾರ ನಡೆಸಿದ್ದರು. ಬಳಿಕ ಮತ್ತೆ ಆಡಳಿತಾಧಿಕಾರಿಯ ಆಡಳಿತ ಕಾಣುವಂತಾಗಿತ್ತು.

ಹಿಂದೆಯೂ ಹೀಗಾಗಿತ್ತು
2016ರಿಂದ 2021ರ ವರೆಗಿನ 5 ವರ್ಷಗಳ ಅವಧಿಯಲ್ಲಿ ಪುರಸಭೆಯಲ್ಲಿ ಕೇವಲ 36 ತಿಂಗಳು ಮಾತ್ರ ಜನಪ್ರತಿನಿಧಿಗಳ ಆಡಳಿತವಿತ್ತು. ನಗರ – ಸ್ಥಳೀಯ ಸಂಸ್ಥೆಗಳ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿ ಪ್ರಶ್ನಿಸಿ ಇತರ ಕಡೆಗಳಲ್ಲಿ ಹುದ್ದೆ ಆಕಾಂಕ್ಷಿತ ಸದಸ್ಯರು, ರಾಜಕೀಯ ಪಕ್ಷಗಳು ನ್ಯಾಯಾಲಯದ ಮೆಟ್ಟಿಲೇರಿದ್ದ ಪರಿಣಾಮ ಹಿಂದಿನ 5 ವರ್ಷಗಳ ಅವಧಿಯಲ್ಲಿ 22 ತಿಂಗಳ ಕಾಲ ಆಡಳಿತಾಧಿಕಾರಿ ಆಡಳಿತ ನಡೆಸುವಂತಾಗಿತ್ತು. ಈಗ ಎರಡನೇ ಅವಧಿಯಲ್ಲಿ 12 ತಿಂಗಳುಪೂರ್ತಿ ಆಡಳಿತಾಧಿಕಾರಿ ಆಡಳಿತ ಕಾಣುವಂತಾಗಿದೆ.

ಏಳು ವರ್ಷದಲ್ಲಿ 7 ಸಲ ಆಡಳಿತಾಧಿಕಾರಿ ಪುರಸಭೆ ಅಸ್ತಿತ್ವಕ್ಕೆ ಬಂದ ಏಳು ವರ್ಷದಲ್ಲಿ 3 ಮಂದಿ ಅಧ್ಯಕ್ಷರು, 2 ಮಂದಿ ಉಪಾಧ್ಯಕ್ಷರು, 7 ಮಂದಿ ಆಡಳಿತಾಧಿಕಾರಿ ಗ‌ಳು ಹಾಗೂ 4 ಮಂದಿ ಮುಖ್ಯಾಧಿಕಾರಿಗಳ ಆಡಳಿತ ನಿರ್ವಹಣೆ ಕಂಡಿದೆ. ಕಾಪು ಪುರಸಭೆಯಲ್ಲಿ 2015-16ರಲ್ಲಿ ನಾಲ್ಕು ಮಂದಿ, 2018 – 20ರಲ್ಲಿ ಮೂರು ಮಂದಿ ಆಡಳಿತಾಧಿಕಾರಿಯಾಗಿದ್ದರು. 2021 ರಿಂದ ಇದುವರೆಗೆ ಉಪವಿಭಾಗಾಧಿಕಾರಿ ಕೆ. ರಾಜು ಆಡಳಿತಾಧಿಕಾರಿಯಾಗಿದ್ದಾರೆ. ಪುರಸಭೆಯ ಪ್ರಾರಂಭದಲ್ಲಿ ಪಿ. ಸುಂದರ ಪ್ರಭು, 2016ರಲ್ಲಿ ಚುನಾವಣೆಯವರೆಗೆ ಮೇಬಲ್‌ ಡಿ’ಸೋಜಾ, 2016ರಿಂದ 2019ರವರೆಗೆ ರಾಯಪ್ಪ, ಬಳಿಕ ಕೆಲವು ದಿನಗಳವರೆಗೆ ವೆಂಕಟರಮಣಯ್ಯ ಕಾರ್ಯ ನಿರ್ವಹಿಸಿದ್ದ‌ು, 2019 ಅ. 9 ರಿಂದ ವೆಂಕಟೇಶ ನಾವಡ ಮುಖ್ಯಾಧಿಕಾರಿ ಆಗಿದ್ದಾರೆ.

Advertisement

ಸಮಸ್ಯೆಗಳೇನು ?
ಪುರಸಭೆ ವ್ಯಾಪ್ತಿಯ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದರೂ ಜನಪ್ರತಿನಿಧಿಗಳು ಅಧಿಕಾರವಿಲ್ಲದೆ ಜನರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಡಳಿತವಿಲ್ಲದೇ ಇರುವುದರಿಂದ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದೆ. ವಾರ್ಡ್‌ಗಳ ಸಮಸ್ಯೆ ಕುರಿತು ಮಾತನಾಡಲು ಜನಪ್ರತಿನಿಧಿಗಳಿಗೆ ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ವರ್ಷ ಪೂರ್ಣಗೊಂಡರೂ ಈವರೆಗೂ ಒಂದೇ ಒಂದು ಸಭೆ ನಡೆದಿಲ್ಲ. ಜನರ ಸಮಸ್ಯೆ ಹೇಳಿಕೊಳ್ಳಲು ಅವಕಾಶಗಳು ಸಿಗುತ್ತಿಲ್ಲ.

ವಾಟ್ಸ್‌ಆ್ಯಪ್‌ ಗ್ರೂಪ್‌
ಸದಸ್ಯರಿಗೆ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಅಧಿಕಾರದ ಅವಕಾಶಗಳು ಸಿಗುತ್ತಿಲ್ಲ ಎಂಬ ಭಾವನೆ ಬರಬಾರದು ಎಂಬ ಚಿಂತನೆಯೊಂದಿಗೆ ಎಲ್ಲ ಸದಸ್ಯರನ್ನೂ ಸೇರಿಸಿಕೊಂಡು ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಚುನಾಯಿತ ಜನಪ್ರತಿನಿಧಿಗಳಿಗೆ ನೀಡಬೇಕಾದ ಗೌರವ ನೀಡುತ್ತಿದ್ದೇವೆ. ಅವರವರ ವಾರ್ಡ್‌ ಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೌನ್ಸಿಲರ್‌ಗಳ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಸರಕಾರದ ನಿಯಮಾವಳಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸುವುದು ನಮ್ಮ ಕರ್ತವ್ಯವಾಗಿದೆ.
– ವೆಂಕಟೇಶ ನಾವಡ, ಮುಖ್ಯಾಧಿಕಾರಿ, ಕಾಪು ಪುರಸಭೆ

ಸರಕಾರದ ಜತೆ ಮಾತುಕತೆ
ಪುರಸಭೆಯ ಅಧ್ಯಕ್ಷ – ಮೀಸಲಾತಿ ಸರಕಾರೀ ಮಟ್ಟದ ಪ್ರಕ್ರಿಯೆಯಾಗಿದ್ದು ರಾಜ್ಯದ 56 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟಿಗೆ ಮೀಸಲಾತಿ ಘೋಷಣೆಯಾಗಬೇಕಿದೆ. ಈ ಬಗ್ಗೆ ಸರಕಾರ ಅಧಿಕೃತವಾಗಿ ಗೆಜೆಟ್‌ ನೋಟಿಫಿಕೇಶ‌ನ್‌ ಪ್ರಕಟನೆಯನ್ನು ಹೊರಡಿಸಿ, ಆ ಬಳಿಕ ಚುನಾಯಿತ ಪ್ರತಿನಿಧಿಗಳ ವರದಿ ತಯಾರಿಸಿಕೊಂಡು ಮೀಸಲಾತಿ ಘೋಷಿಸಬೇಕಿದೆ. ಮೀಸಲಾತಿ ವಿಚಾರದ ಗೊಂದಲ ಬಗೆಹರಿಸಿ, ಶೀಘ್ರ ಚುನಾಯಿತ ಪ್ರತಿನಿಧಿಗಳ ಆಡಳಿತವನ್ನು ಅಧಿಕಾರಕ್ಕೆ ತರಿಸುವಲ್ಲಿ ಸರಕಾರದ ಜತೆಗೆ ಮಾತುಕತೆ ನಡೆಸಲಾಗಿದೆ. ಶೀಘ್ರ ಮೀಸಲಾತಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
– ಲಾಲಾಜಿ ಆರ್‌. ಮೆಂಡನ್‌, ಶಾಸಕರು, ಕಾಪು

Advertisement

Udayavani is now on Telegram. Click here to join our channel and stay updated with the latest news.

Next