Advertisement

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

01:39 PM Sep 22, 2024 | Team Udayavani |

ಕಾಪು: ಪಾಂಗಾಳದ ನಾನಯರ ಗರಡಿಯಲ್ಲಿ  ಕಳರಿ ಸೇರಿದಂತೆ ಸಮರ ಕಲೆಗಳನ್ನು ಅಧ್ಯಯನ ಮಾಡಿದ್ದ  ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರು ಈಜುತ್ತಿದ್ದರು ಎಂದು ಹೇಳಲಾದ ಕಟ್ಟಿಕೆರೆ ಮತ್ತು ನಾನಯರ ಸಮಾಧಿಗಳು ಈಗಲೂ ಇವೆ. ಇದರ ಜತೆಗೆ  ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಕಳರಿ ಸಮರಾಭ್ಯಾಸ ಕಲೆಗೆ ತುಳುನಾಡು ಮೂಲವಾಗಿತ್ತು ಎಂಬುದಕ್ಕೆ ಪೂರಕವಾಗಿಯೂ ಕೆಲವು ದಾಖಲೆಗಳು  ಒದಗಿವೆ.

Advertisement

16ನೇ ಶತಮಾನದಲ್ಲಿ ಪಾಂಗಾಳದ ನಾನಯರ ಗುರುಮಠದ ಗುರುಗಳಾದ ಕಿನ್ನಿಂಗದೇವ ನಾನಯರ ಸಲಹೆಯಂತೆ ಅವರ ಶಿಷ್ಯಂದಿರಾದ ಬಲಿಪ ನಾನಯ ಮತ್ತು ಪಿಲಿಪ ನಾನಯ ಅವರು, ಕೋಟಿ-ಚೆನ್ನಯರಿಗೆ  ಯುದ್ಧ ವಿದ್ಯೆಗಳನ್ನು ಕಲಿಸಿದ್ದರು. ತುಳುನಾಡಿನಲ್ಲಿ ಮಲ್ಲ ವಿದ್ಯೆಯನ್ನು ಕಲಿಸುವ ಹಲವಾರು ಗರಡಿಗಳಿದ್ದವು. ಇಲ್ಲಿ ಮೂರು ವರ್ಷದ ತರಬೇತಿ ನೀಡುತ್ತಿದ್ದು ಇದನ್ನು ಕೇರಳದಲ್ಲಿ ತುಳುನಾಡನ್‌ ವಿದ್ಯೆ ಎಂದು ಕರೆಯುತ್ತಿದ್ದರು. ಈ ಮಲ್ಲ ವಿದ್ಯೆಗಳಿಗಾಗಿ ಮಲ್ಲಕಂಬಗಳನ್ನು ಬಳಸಲಾಗುತ್ತಿತ್ತು. ತುಳುನಾಡಿನ ಹಲವಾರು ಗರೋಡಿಗಳಲ್ಲಿ ಕಾಣಸಿಗುವ ಗುರು ಕಂಬಗಳಿಗೂ, ಕಳರಿ ಸಮರಾಭ್ಯಾಸದ ಮಲ್ಲ ಕಂಬಗಳಿಗೂ ಪರಸ್ಪರ ಸಂಬಂಧಗಳಿವೆ.

ಮಲಯಾಳಿ ಸಾಹಿತ್ಯದಲ್ಲೂ ಉಲ್ಲೇಖ: ಮಾರ್ಷಲ್‌ ಆರ್ಟ್‌ಗೆ ಸಮಾನವಾಗಿರುವ ಕಳರಿ ಸಮರ ಕಲೆಯು ನಮ್ಮ ತುಳುನಾಡಿನ ಮೂಲ ಕಲೆ ಎನ್ನುವುದನ್ನು ವಿದೇಶಿ ಸಂಶೋಧಕರೂ ಒಪ್ಪಿಕೊಂಡಿದ್ದಾರೆ. ತುಳುನಾಡಿನಿಂದ ಉತ್ತರ ಕೇರಳಕ್ಕೆ ಹೋಗಿ, ಅಲ್ಲಿಂದ ದಕ್ಷಿಣ ತಮಿಳುನಾಡಿನವರೆಗೂ ವ್ಯಾಪಿಸಿರುವ ಕಳರಿ ಕಲೆಯ ಬಗ್ಗೆ ಈಗಾಗಲೇ ಹಲವಾರು ರೀತಿಯ ಅಧ್ಯಯನಗಳು ನಡೆದಿವೆ. ಬಹುತೇಕ ರಾಜ್ಯಗಳ ಸಂಗಮ ಸಾಹಿತ್ಯಗಳಲ್ಲಿ ಕಳರಿ ವಿದ್ಯೆಗಳ ಬಗ್ಗೆ ಉಲ್ಲೇಖವಿದ್ದು ಮಲಯಾಳಿ ಸಾಹಿತ್ಯಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ ಎನ್ನುತ್ತಾರೆ ಕಳರಿ ಸಮರಾಭ್ಯಾಸದ ಬಗ್ಗೆ ಅಧ್ಯಯನಶೀಲರಾಗಿರುವ ಪತ್ರಕರ್ತ, ಚಿಂತಕ ಶ್ರೀಕಾಂತ್‌ ಶೆಟ್ಟಿ ಕಾರ್ಕಳ. ಈ ನಡುವೆ, ಕಳರಿ ಕಲೆಯೇ ಕರಾಟೆ ಆಗಿರಬಹುದು ಎನ್ನುವ ಒಂದು ವಾದ ಶಶಿಕಾಂತ್‌ ಶೆಟ್ಟಿ ಕಟಪಾಡಿ ಅವರದ್ದು.

ನಾನಯರ ಗರಡಿಯಲ್ಲಿ ಏನೇನಿವೆ?

Advertisement

ಶ್ರೀ ಚಂಡಿಕಾ ಪರಮೇಶ್ವರಿ ದೇವಿ ಇಲ್ಲಿನ ಶಕ್ತಿ ದೇವತೆಯಾಗಿದ್ದು ಗಣಪತಿ, ಬ್ರಹ್ಮ, ವೀರಭದ್ರ, ಈಶ್ವರ, ಕುಮಾರನ್ನೊಳಗೊಂಡ ಪಂಚದೈವಿಕ ಸಾನಿಧ್ಯಗಳಿವೆ. ಕೋಟಿ ಚೆನ್ನಯ್ಯರ ಶಸ್ತ್ರ ತರಬೇತಿ ಗುರುಗಳಾದ ಬಲಿಪ ನಾನಯ ಮತ್ತು ಪಿಲಿಪ ನಾನಯರ ಸಮಾಧಿ, ಕೋಟಿ ಚೆನ್ನಯ್ಯರ ಸಹಿತವಾಗಿ ಅನೇಕರು ಸಾಧನೆಗೈಯ್ಯುತ್ತಿದ್ದ ಕಟ್ಟಿಕೆರೆ ಸದ್ಯಕ್ಕೆ ಇಲ್ಲಿ ತೋರಿ ಬರುತ್ತಿರುವ ಪುರಾವೆಗಳು.

ಗುರು ಸ್ಮರಣೆಗಾಗಿ 66 ಗರಡಿ ನಿರ್ಮಾಣ

ಸಾಯನ ಬೈದ್ಯರ ಸೂಚನೆಯಂತೆ ಕೋಟಿ-ಚೆನ್ನಯ್ಯರಿಗೆ ಪಾಂಗಾಳ ನಾನಯರ ಗರಡಿಯಲ್ಲಿ ಬಲಿಪ ನಾನಯ ಮತ್ತು ಪಿಲಿಪ ನಾನಯರೆಂಬ ಅವಳಿ ಪುರುಷರ ಬಳಿ ಕಳರಿ ವಿದ್ಯೆ ಸಹಿತ ಪರಿಪೂರ್ಣ ಅಂಗ ಸಾಧನೆ ಕಲಿಸಲಾಗುತ್ತದೆ. ಅಲ್ಲಿ ಗುರುಕಾಣಿಕೆ ವಿಷಯ ಬಂದಾಗ ಗುರುಗಳು ನಿರಾಕರಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಗುರು ವಿದ್ಯೆ ಕಲಿತ ಸ್ಮರಣೆಗಾಗಿ 66 ಗರಡಿ ನಿರ್ಮಿಸುವುದಾಗಿ ಬಲಿಪ ಮತ್ತು ಪಿಲಿಪ ನಾನಯರಿಗೆ ವಾಗ್ಧಾನ ನೀಡುತ್ತಾರೆ. ಮರಣ  ಕಾಲಕ್ಕೆ 66 ಗರಡಿ ನಿರ್ಮಾಣ ಮಾಡುವಂತೆ ಬಲ್ಲಾಳರಿಗೆ ಸೂಚನೆ ನೀಡಿದ್ದು, ಪಾಂಗಾಳ ನಾನಯರ ಗರಡಿಯ ಆಯವನ್ನು ಮಾದರಿಯನ್ನಾಗಿಸಿಕೊಂಡು 66 ಗರಡಿ ನಿರ್ಮಾಣವಾಗಿರುವುದನ್ನು ಸ್ಮರಿಸಿಕೊಳ್ಳಬಹುದಾಗಿದೆ.
-ಸುಧಾಕರ್‌ ಡಿ. ಅಮೀನ್‌, ಪಾಂಗಾಳ ಗುಡ್ಡೆ ಗರಡಿಮನೆ

ಕೇರಳದಲ್ಲಿ 14 ಗ್ರಾಮಗಳು ಉಂಬಳಿ!

ಪಾಂಗಾಳ ನಾನಯರ ಗರಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ಕೂಡಾ ಕಳರಿ ಕಲಿಯಲು ಬರುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಮುದ್ದು ಕುಳಂ, ಚಂಬ ಕುಳಂ ಸಹಿತ 14 ಗ್ರಾಮಗಳನ್ನು ಗುರುದಕ್ಷಿಣೆ ರೂಪದಲ್ಲಿ ನಾನಯರ ಕುಟುಂಬಸ್ಥರಿಗೆ ಉಂಬಳಿ ರೂಪದಲ್ಲಿ ಬಿಡಲಾಗಿತ್ತು. ಅದರಲ್ಲಿ ಮುದ್ದು ಕುಳಂ, ಚಂಬ ಕುಳಂನ ಜಮೀನು ಉಳುವನೇ ಹೊಲದೊಡೆಯ ಕಾನೂನಿನಲ್ಲಿ ಕಳೆದುಹೋಗಿದೆ, ಮುದ್ದು ಕುಳಂನಲ್ಲಿ ಗುರು ಮಠ, ಮನೆ ಮತ್ತು ಪಾಂಗಾಳದಿಂದ ಕೊಂಡೊಯ್ದು ಪ್ರತಿಷ್ಠಾಪಿಸಲಾಗಿರುವ ವೀರಭದ್ರ ದೇವಸ್ಥಾನದಲ್ಲಿ ಈಗಲೂ ಆರಾಧನೆ ನಡೆಯುತ್ತಿದೆ. ನಾನಯ ಕುಟುಂಬದ ಸದಸ್ಯರು ಈಗಲೂ ಮಠದಲ್ಲಿ ವಾಸವಿದ್ದಾರೆ ಎನ್ನುತ್ತಾರೆ ಪಾಂಗಾಳದ ನಾನಯರ ಗರಡಿಯ ಕರುಣಾಕರ ಶೆಟ್ಟಿ.

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next