Advertisement

ಪಣಿಯೂರು –ಮಲಂಗೋಳಿ ಗುಳಿಯಿಂದ ಮೇಲೇಳಲಿ: ಕೆಲವು ಕೆಲಸ ಆಗಿವೆ, ಹಲವು ಕೆಲಸ ಆಗಬೇಕಿವೆ

02:26 PM Jul 19, 2022 | Team Udayavani |

ಕಾಪು: ಬೆಳಪು ಗ್ರಾಮದ ಮಲಂಗೋಳಿ ಊರಿನ ಪರಿಚಯವೇ ಹೀಗೆ. ಮಲೆ ಅಂದರೆ ಎತ್ತರದ ಪ್ರದೇಶ, ಕಾಡು ಎಂದಾದರೆ, ಗುಳಿ ಅಂದರೆ ತಗ್ಗಿನ ಪ್ರದೇಶ ಎನ್ನಬಹುದು. ಸುತ್ತಲೂ ಮಲೆಯಿಂದ ಆವರಿಸಿಕೊಂಡಿರುವ ತಗ್ಗು (ಗುಳಿ) ಪ್ರದೇಶವೇ ಮಲಂಗುಳಿ. ಇದೇ ಕ್ರಮೇಣ ಮಲಂಗೋಳಿ ಆದದ್ದು.

Advertisement

ಬೆಳಪು ಗ್ರಾ.ಪಂ.ಗೆ ಸೇರಿರುವ ಈ ಪಣಿಯೂರಿನ ಮಲಂಗೋಳಿ ಅರಸರಿಂದ ಉಂಬಳಿ ದೊರೆತ ಜಾಗವೆಂಬ ಪ್ರತೀತಿಯಿದೆ. ಇದು ಬ್ರಹ್ಮಶಾಪದ ವಿಮುಕ್ತಿಗಾಗಿ ಕುತ್ಯಾರು ಅರಮನೆಯ ಎಲ್ಲೂರು ಕುಂದ ಹೆಗ್ಗಡೆ ಅವರು ಗ್ರಾಮದಲ್ಲಿ ಸಂಕೀರ್ತನೆ ನಡೆಸಲು 12 ಬ್ರಾಹ್ಮಣ ಕುಟುಂಬಗಳನ್ನು ಕರೆಸಿ, ಅವರಿಗಾಗಿ ಉಂಬಳಿ ಬಿಟ್ಟ ಜಾಗವಿದು ಎನ್ನಲಾಗಿದೆ. ಅಲ್ಲದೇ ಬಂಟ, ಬಿಲ್ಲವ, ವಿಶ್ವಕರ್ಮ. ಕುಲಾಲ, ಪ.ಜಾತಿ ಹಾಗೂ ಪಂ. ಸಮುದಾಯದವರಿದ್ದಾರೆ. ಸುಮಾರು 800 ಎಕ್ರೆ ವಿಸೀ¤ರ್ಣದ ಭೂ ಪ್ರದೇಶ. ಸುಮಾರು 350 ಕುಟುಂಬಗಳು ವಾಸಿಸುತ್ತಿದ್ದು, ಅಂದಾಜು ಜನಸಂಖ್ಯೆ 1,500. ಮಲಂಗೋಳಿ ಗ್ರಾಮವು ಪೂರ್ವಕ್ಕೆ ಕಳತ್ತೂರು ಮತ್ತು ಎಲ್ಲೂರು ಗ್ರಾಮ, ದಕ್ಷಿಣಕ್ಕೆ ಉಚ್ಚಿಲ – ಎಲ್ಲೂರು ರಸ್ತೆ, ಉತ್ತರಕ್ಕೆ ಬೆಳಪು – ಪುಂಚಲಕಾಡು ರಸ್ತೆ ಹಾಗೂ ಪಶ್ಚಿಮಕ್ಕೆ ಕೊಂಕಣ ರೈಲ್ವೇ ಮಾರ್ಗದ ಗಡಿ ಭಾಗದಲ್ಲಿದೆ.

ಗ್ರಾಮಸ್ಥರು ದೇವರಲ್ಲಿ ಪ್ರಾರ್ಥಿಸಿ ಸೊಪ್ಪು ಕಡಿಯುತ್ತಿದ್ದ ಮಲಂಗೋಳಿಗೆ ಸೇರಿದ ಬೆಳಪು ಕಾಡಿನ ಒಂದು ಭಾಗ ಹಿಂದೊಮ್ಮೆ ಕೊಜೆಂಟ್ರಿಕ್ಸ್‌ ಪಾಲಾಗಿತ್ತು. ಆದರೆ ಸತತವಾಗಿ ನಡೆದ ಕಾನೂನು ಹೋರಾಟದ ಫ‌ಲವಾಗಿ ಸುಮಾರು 68 ಎಕ್ರೆ ಸರಕಾರಿ ಭೂಮಿ ಮರಳಿ ಗ್ರಾ.ಪಂ. ತೆಕ್ಕೆಗೆ ಬಂದಿತು. ಅದೀಗ ಕೆಐಎಡಿಬಿ ಪಾಲಾಗಿ ಕೈಗಾರಿಕಾ ಪ್ರದೇಶ ನಿರ್ಮಾಣಗೊಂಡಿದೆ. ಅದರ ಪೂರ್ವಕ್ಕಿರುವ 60 ಎಕ್ರೆ ಗೋಮಾಳ ಪ್ರದೇಶವು ನಿವೃತ್ತ ಸೈನಿಕರಿಗೆ ಆಶ್ರಯ ನೀಡುವ ಮಿಲಿಟರಿ ಕಾಲನಿಯಾಗಿದೆ.

ನೀರಿಗೆ ಕೊರತೆಯಿಲ್ಲ

ನಡಿಮನೆ ಕೆರೆ, ಚಿನ್ನಯ ಕೆರೆ, ನಾರಾಯಣ ಕೆರೆ, ಹತ್ವಾರಿ ಕೆರೆ, ಜಾರಂದಾಯ ಕೆರೆ, ಪಿಲಿಮುರ ಕೆರೆ, ಸಂಜೀವ ಮಡಿವಾಳ ಮನೆ ಬಳಿ ಕೆರೆಗಳಿದ್ದು ಇದರಲ್ಲಿ ಹತ್ವಾರಿ ಕೆರೆಯ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಕೆರೆಗಳಿಗೂ ಕಾಯಕಲ್ಪ ಒದಗಿದರೆ ಜನರಿಗೆ ಅನುಕೂಲವಾಗಲಿದೆ. ಬೆದ್ರ ಕಟ್ಟ, ಜೆನ್ನಿ ಕಟ್ಟ , ಕಲ್ಲ ಕಟ್ಟ, ಪಿಲಿ ಮುರ ಕಟ್ಟ ರಚನೆಯಾಗಿದ್ದು ಚೆಕ್‌ ಡ್ಯಾಮ್‌ ನಿರ್ಮಾಣಗೊಂಡಿದೆ. ಆದರೆ ಕೆರೆ ಮತ್ತು ತೋಡಿನಲ್ಲಿ ಹೂಳು ಮತ್ತು ಕೊಳಚೆ ತುಂಬಿದೆ. ಹೂಳೆತ್ತಿ ಅಭಿವೃದ್ಧಿಗೊಳಿಸಿದರೆ ಬೆಳಪು ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳಲ್ಲಿ ವರ್ಷಪೂರ್ತಿ ನೀರಿನ ಒರತೆ ಹೆಚ್ಚಾಗಲಿದೆ.

Advertisement

ಶತಮಾನೋತ್ತರ ಇತಿಹಾಸವನ್ನು ಹೊಂದಿರುವ ಪಣಿಯೂರು ಶ್ರೀ ದುರ್ಗಾ ದೇವಿ ಖಾಸಗಿ ಅನುದಾನಿತ ಹಿ.ಪ್ರಾ.ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಅಭದ್ರತೆಯ ನಡುವೆಯೇ ತರಗತಿಗಳು ನಡೆಯುವಂತಾಗಿದೆ. ಖಾಯಂ ಶಿಕ್ಷಕರ ಕೊರತೆ ಮತ್ತೂಂದು ಸಮಸ್ಯೆ. ಬೆಳಪು ಸಿಎ ಬ್ಯಾಂಕ್‌ ಓರ್ವ ಗೌರವ ಶಿಕ್ಷಕಿಯನ್ನು ಒದಗಿಸುತ್ತಿದೆ. ಉಳಿದವರಿಗೆ ಸಂಚಾಲಕರ ಸಹಿತವಾಗಿ ಶಾಲಾಡಳಿತ ಮಂಡಳಿಯು ದಾನಿಗಳ ಸಹಕಾರದೊಂದಿಗೆ ವೇತನ ನೀಡುತ್ತಿದೆ. ಖಾಯಂ ಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಕುಸಿತಗೊಳ್ಳುತ್ತಿದೆ. ಇದಕ್ಕೆ ಕಾಯಕಲ್ಪ ಒದಗಬೇಕಿದೆ.

ಆಗಲೇಬೇಕಾದ ಕೆಲಸ

ಬೆಳಪು ಗ್ರಾಮದ ಏಕೈಕ ದೇವಸ್ಥಾನ ಕಾನ ಬ್ರಹ್ಮಲಿಂಗೇಶ್ವರ ಖಡೆYàಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರಿನ ಹೊಂಡದಂತಾಗಿದೆ. ಮಲಂಗೋಳಿ ಮತ್ತು ಪಣಿಯೂರು ಬೈಲ್‌ನಲ್ಲಿ ಮಳೆ ನೀರು ಸರಾಗ ವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆಗಳಿಲ್ಲ. ಹಾಗಾಗಿ ಕೃತಕ ನೆರೆ ಇದ್ದದ್ದೇ. ಇದರೊಂದಿಗೆ ಮಳೆ ನೀರಿನೊಂದಿಗೆ ಬರುವ ಕೊಳಚೆ ಮತ್ತು ತ್ಯಾಜ್ಯ ವಸ್ತುಗಳು ಈ ಗದ್ದೆಗಳಲ್ಲಿ ಸಂಗ್ರಹವಾಗುತ್ತಿದೆ. ಆದ ಕಾರಣ ನೂರಾರು ಎಕ್ರೆ ಗದ್ದೆಗಳು ಹಡಿಲು ಬಿದ್ದಿವೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಕೃಷಿಕರಿಗೆ ಪ್ರಯೋಜನವಾಗಲಿದೆ.

ಉಳಿದಂತೆ ಒಳ ರಸ್ತೆಗಳಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಪಣಿಯೂರು – ಮಲಂಗೋಳಿ ಪ್ರದೇಶದಿಂದ ಕಳತ್ತೂರು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ರಸ್ತೆ ಇಲ್ಲ. ಕೃಷಿಕರು, ಜಾನುವಾರುಗಳ ಸಂಚಾರ ಹಾಗೂ ಕೃಷಿ ಯಂತ್ರೋಪಕರಣ ಸಾಗಾಟಕ್ಕೆ ಕಾಲು ಸಂಕ, ಮಿನಿ ಸೇತುವೆ, ಕಿಂಡಿ ಅಣೆಕಟ್ಟುಗಳೇ ಗತಿ. ಇದರಿಂದ ಅಪಾಯ ತಪ್ಪಿದ್ದಲ್ಲ. ಆದ ಕಾರಣ ಕೆಲವೆಡೆ ಕಾಲು ಸಂಕಗಳು ರಚನೆಯಾಗಬೇಕು. ಇದರೊಂದಿಗೆ ಅಪಾಯದ ಸ್ಥಿತಿಯಲ್ಲಿರುವ ಸಂಕಗಳ ದುರಸ್ತಿಯಾಗಬೇಕು. ಕೆಲವೆಡೆ ಕಿಂಡಿ ಅಣೆಕಟ್ಟುಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಅದಕ್ಕೊಂದು ವ್ಯವಸ್ಥೆ ಕಲ್ಪಿಸಬೇಕಿದೆ.

ಉಳಿದ ಬೇಡಿಕೆಗಳ ಪಟ್ಟಿ

ಪಣಿಯೂರು ಪ್ರಾ.ಆ. ಕೇಂದ್ರವು ಪೂರ್ಣ ಪ್ರಮಾಣದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕಿದೆ. ಪಣಿಯೂರು ಶಾಲೆ ಅಭಿವೃದ್ಧಿಯಾಗಬೇಕಿದೆ. ಪಣಿಯೂರು – ಬೆಳಪು ದ್ವಿಪಥ ರಸ್ತೆಗೆ ಬೇಡಿಕೆಯಿದ್ದು, ರೈಲ್ವೇ ಸ್ಟೇಷನ್‌ ರಸ್ತೆ ದುರಸ್ತಿಗೊಳ್ಳಬೇಕಿದೆ. ಕಾನ ದೇವಸ್ಥಾನ ರಸ್ತೆ, ಅಲ್ಲಿಂದ ಬೆಟ್ಟಿಗೆ ತಂತ್ರಿಗಳ ಮನೆಗೆ ಹೋಗುವ ಕಚ್ಚಾ ರಸ್ತೆ, ಮಲಂಗೋಳಿ ಬೈಲ್‌ಗೆ ಹೋಗುವ ರಸ್ತೆಯೂ ಅಭಿವೃದ್ಧಿಯಾಗಬೇಕಿದೆ. ನಡಿಮನೆ ರಸ್ತೆ, ಅಣ್ಣಾ ಹಜಾರೆ ರಸ್ತೆ, ಕಾನ ರಸ್ತೆಗಳು ಮಲಂಗುಳಿ ಬೆ„ಲ್‌ ಗೆ ಕೊನೆಗೊಳ್ಳುತ್ತಿದ್ದು ಅಲ್ಲಿಂದ ಮುಂದಿನ ಬೆಳಪು – ಪುಂಚಲಕಾಡು ರಸ್ತೆಗಳಿಗೆ ಜೋಡಣೆಯಾದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ.

ಅರಸರಿಂದ ಉಂಬಳಿ ದೊರೆತ ಜಾಗವೇ ಊರಾಗಿ ಬೆಳೆದಿರುವ ಪಣಿಯೂರು-ಮಲಂಗೋಳಿ ಕೃಷಿ ಪ್ರಧಾನವಾದ ಗ್ರಾಮ. ಸದ್ಯಕ್ಕೆ ಕೃಷಿಗೆ ಕುತ್ತಾಗುವ ಸ್ಥಿತಿ ಇದೆ. ಜತೆಗೆ ಹಲವು ಕಡೆ ರಸ್ತೆ ಅಭಿವೃದ್ಧಿಯಿಂದ ಹಿಡಿದು ಹತ್ತಾರು ಕಾಮಗಾರಿಗಳು ಆಗಬೇಕಿವೆ. ಅವೆಲ್ಲ ಕಾರ್ಯಸಾಧ್ಯವಾದರೆ ಇಡೀ ಊರೇ ಮತ್ತೆ ಹೊಳೆಯತೊಡಗುತ್ತದೆ.

ಪಣಿಯೂರೇ ರಾಜಧಾನಿ

ಪಣಿಯೂರು – ಮಲಂಗೋಳಿ ಕಂದಾಯ ಗ್ರಾಮವಲ್ಲದೇ ಇದ್ದರೂ, ಬೆಳಪುವಿಗೆ ಪಣಿಯೂರೇ ರಾಜಧಾನಿ. ಬೆಳಪು ಅಭಿವೃದ್ಧಿಗೊಳ್ಳುವ ಮುನ್ನ ಪಣಿಯೂರು ಮಿನಿ ಪೇಟೆಯಾಗಿತ್ತು. ಈಗಲೂ ಮಲಂಗೋಳಿ, ಕುಂಜೂರು ಸಹಿತ ಸುತ್ತಲಿನ ಗ್ರಾಮಸ್ಥರಿಗೆ ಇದುವೇ ಪುಟ್ಟ ಪೇಟೆ. ಖಾಸಗಿ ಶಾಲೆ, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ಗಳು, ಆಯುಷ್‌ ಆಸ್ಪತ್ರೆ, ಹಾಲು ಉತ್ಪಾದಕರ ಸಂಘಗಳು, ಪ್ರಧಾನ ಅಂಚೆ ಕಚೇರಿ, ಅಂಗನವಾಡಿ ಕೇಂದ್ರ, ರೈಲ್ವೆಸ್ಟೇಷನ್‌, ಸಾರ್ವಜನಿಕ ಗ್ರಂಥಾಲಯ ಇಲ್ಲಿದೆ.

ಪ್ರಸ್ತಾವನೆ ಸಲ್ಲಿಕೆ: ಗ್ರಾಮಕ್ಕೆ ಹಂತ ಹಂತವಾಗಿ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಇಲ್ಲಿ ಈಗಾಗಲೇ ಹತ್ತಾರು ಅಭಿವೃದ್ಧಿ ಯೋಜನೆಗಳು ಹಿಂದಿನ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಅವರ ನೇತೃತ್ವದಲ್ಲಿ ಜಾರಿಗೊಂಡಿವೆ. ಪಣಿಯೂರು-ಬೆಳಪು ದ್ವಿಪಥ ರಸ್ತೆ ಅಭಿವೃದ್ಧಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಳೆ ನೀರು ಹರಿದು ಹೋಗುವ ತೊಡುಗಳ ಹೂಳೆತ್ತಲಾಗಿದೆ. ಜನರ ಬೇಡಿಕೆಗಳಿಗೆ ಅನುಗುಣವಾಗಿ ಇನ್ನಷ್ಟು ವ್ಯವಸ್ಥೆಗಳನ್ನು ಜೋಡಿಸಲು ಮಾಸ್ಟರ್‌ ಪ್ಲ್ರಾನ್‌ ಸಿದ್ಧಪಡಿಸಲಾಗಿದೆ. –ಶೋಭಾ ಭಟ್‌ ಅಧ್ಯಕ್ಷರು, ಬೆಳಪು ಗ್ರಾ. ಪಂ.

ಅಭಿವೃದಿಗೆ ಅವಕಾಶ: ಕೃಷಿ ಪ್ರಧಾನವಾದ ಮಲಂಗೋಳಿಯ ಗದ್ದೆಗಳಿಗೆ ಗುಡ್ಡ ಪ್ರದೇಶ, ಕೆಐಎಡಿಬಿ ಸ್ಥಾವರ, ಮಿಲಿಟರಿ ಕಾಲನಿ, ಪಣಿಯೂರು ಪೇಟೆ ಹೀಗೆ ಎಲ್ಲ ಕಡೆಗಳಿಂದಲೂ ಮಳೆ ನೀರು ಹರಿದು ಬಂದು ತೊಂದರೆಯಾಗುತ್ತಿದೆ. ಕಾನ ದೇವಸ್ಥಾನ ರಸ್ತೆಗೆ ಡಾಮರು ಹಾಕಬೇಕಿದೆ. ಮಲಂಗೋಳಿ ಬೈಲ್‌ನಿಂದ ಪುಂಚಲಕಾಡು, ಕಳತ್ತೂರಿಗೆ ನೇರ ಸಂಪರ್ಕ ವ್ಯವಸ್ಥೆಯಾದಲ್ಲಿ ಉತ್ತಮ. ಮೂಳೂರು – ಬೆಳಪು – ಪುಂಚಲಕಾಡು ಮತ್ತು ಉಚ್ಚಿಲ – ಪಣಿಯೂರು – ಎಲ್ಲೂರು ನಡುವಿನ ಮಲಂಗೋಳಿಯಲ್ಲಿ ಇನ್ನಷ್ಟು ಅಭಿವೃದ್ಧಿಗೆ ಅವಕಾಶಗಳಿವೆ. –ವಾದಿರಾಜ ರಾವ್‌ ನಡಿಮನೆ, (ಸ್ಥಳೀಯರು)

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next