Advertisement

Padubidri: ‘ಕಟ್ಟದಪ್ಪಪ್ರಿಯ’ ಗಣಪತಿ; ಆ.11, 12 ರಂದು ಸಾರ್ವಜನಿಕ ಕಟ್ಟದಪ್ಪ ಸೇವೆ

02:37 PM Aug 11, 2023 | Team Udayavani |

ಪಡುಬಿದ್ರಿ: ಸೀಮೆಗೊಡೆಯನಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಕ್ಷಿಪ್ರ ಪ್ರಸಾದವನ್ನಿತ್ತು ಕಾಯುವ ಜಗತ್ಪ್ರಸಿದ್ಧ ಶ್ರೀ ಮಹಾಗಣಪತಿಯ ಪುಣ್ಯ ಕ್ಷೇತ್ರವಾಗಿ ಪಡುಬಿದ್ರಿಯು ಮೆರೆದಿದೆ.

Advertisement

ಇಲ್ಲಿ ಈಶ್ವರನು ಪ್ರಧಾನ ದೇವರಾಗಿದ್ದು, ಉಪಸ್ಥಾನ ಅಧಿಪತಿಯಾಗಿ ಮಹಾಗಣಪತಿ ಸನ್ನಿಧಾನವಿದೆ. ಪಡುಬಿದ್ರಿ ಗಣಪತಿಯು ‘ಕಟ್ಟದಪ್ಪ’ (ಕಟಾಹಾಪೂಪ) ಪ್ರಿಯನಾಗಿದ್ದು, ಆ. 11 ಹಾಗೂ 12 ರಂದು ಈ ಬಾರಿಯ ಸಾರ್ವಜನಿಕ ಅಪ್ಪಸೇವೆಯು ನಡೆಯಲಿದೆ.

ಗತಕಾಲದ `ಆಟಿ’ ತಿಂಗಳಲ್ಲಿ ರೈತಾಪಿ ವರ್ಗ ತಮ್ಮ ಕೃಷಿ ಕಾಯಕವನ್ನು ಮುಗಿಸಿ ಧಾರಾಕಾರವಾಗಿ ಸುರಿಯುವ ಮಳೆಗೆ ಮನೆಯೊಳಗಿದ್ದೇ ತಮ್ಮ ಕೃಷಿ ಬಿತ್ತನೆಯು ಮುಂದೆ ಉತ್ತಮ ಫಸಲಾಗಲಿ ಎಂದು ಬೇಡಿಕೊಳ್ಳುವ ಕಾಲವಾಗಿತ್ತು. ಈ ವೇಳೆ ಅವರು ಮಳೆಗಾಲದಲ್ಲಿ ನೀರ ತೋಡುಗಳಿಗೆ `ಕಟ್ಟ'(ಒಡ್ಡು)ಗಳನ್ನು ಕಟ್ಟಿಕೊಂಡು ಶ್ರಮವಹಿಸಿ ತಮ್ಮ ಗದ್ದೆಗಳಿಗೆ ನೀರೊಡ್ಡುತ್ತಿದ್ದರು.

ಸ್ವಾಭಾವಿಕವಾಗಿಯೇ ಈ ಗದ್ದೆಗಳಿಂದ ಉತ್ತಮ ಫಲ ಬರಲಿ ಎಂದು ಗ್ರಾಮದ ದೈವ, ದೇವರುಗಳನ್ನು ಪ್ರಾರ್ಥಿಸುತ್ತಿದ್ದರು. ಹಾಗಾಗಿಯೇ ಕೃಷಿ ಕಾಯಕಕ್ಕಾಗಿ ಕಟ್ಟಲಾಗುತ್ತಿದ್ದ ಕಟ್ಟಗಳು ಒಡೆಯದೆ ಈ ಒಡ್ಡುಗಳ ರಕ್ಷಣೆ ಮತ್ತು ಹೇರಳ ನೀರಾಶ್ರಯವು ನಿರ್ವಿಘ್ನವಾಗಿ ತಮಗೆ ದೊರೆಯಲೆಂದು ಗ್ರಾಮ ದೇವರಿಗೆ ಹರಕೆ ರೂಪದಲ್ಲಿ ರೈತಾಪಿ ವರ್ಗವು ಸಮರ್ಪಿಸುವ ಅಪ್ಪಸೇವೆಗೆ ‘ಕಟ್ಟದಪ್ಪ’ವೆಂಬ ಹೆಸರು ಬಲು ಪ್ರಚಲಿತವಿದೆ.

ಕಟಾಹದಲ್ಲಿನ ಅಪ್ಪ; ಕಟಾಹಾಪೂಪ

Advertisement

ಈ ಅಪ್ಪಕ್ಕೆ ಕಟಾಹಾಪೂಪವೆಂತಲೂ ಹೆಸರಿದ್ದು, ದೊಡ್ಡ-ದೊಡ್ಡ ಕಟಾಹಗಳಲ್ಲಿ ಈ ಅಪ್ಪಗಳನ್ನು ಮಹಾಗಣಪತಿಗೆ ಅರ್ಪಿಸುವುದರಿಂದಲೂ ಈ ಹೆಸರೂ ಚಾಲ್ತಿಯಲ್ಲಿದೆ.

ಕಟ್ಟದಪ್ಪ ಸೇವೆಯ ದಿನ ರಾತ್ರಿ ಪೂಜೆಯ ಸಂದರ್ಭ ಊರ ಪ್ರಮುಖರ ಸಹಿತ ಕೃಷಿಕರೆಲ್ಲರೂ ದೇಗುಲದಲ್ಲಿ ಸೇರುತ್ತಾರೆ. ಸಾಮೂಹಿಕವಾಗಿ ಶ್ರೀ ಮಹಾಲಿಂಗೇಶ್ವರ ಹಾಗೂ ಪ್ರಧಾನವಾಗಿ ಶ್ರೀ ಮಹಾಗಣಪತಿ ದೇವರಲ್ಲಿ ತಮ್ಮ ಧನ-ಧಾನ್ಯ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ರಾತ್ರಿ ಪೂಜೆಯ ಸಂದರ್ಭದಲ್ಲಿನ ಈ ಸೇವೆಗಾಗಿ ಬೆಳಿಗ್ಗಿನಿಂದಲೇ ಬಾಣಸಿಗರು ದೊಡ್ಡ ದೊಡ್ಡ ಬಾಣಲೆಯಲ್ಲಿ ಅಪ್ಪ ಕಾಯಿಸಿ ತಯಾರಿಸುತ್ತಾರೆ. ಇವುಗಳನ್ನು ಮುಂದೆ ದೊಡ್ಡ ದೊಡ್ಡ ಕಟಾಹಗಳಲ್ಲಿ ತುಂಬಿ ಸಮರ್ಪಣೆಗಾಗಿ ಅಣಿಗೊಳಿಸಲಾಗುತ್ತದೆ. ಪೂಜೆ, ಪ್ರಾರ್ಥನೆಗಳ ಬಳಿಕ ಸಾಮೂಹಿಕ ಪ್ರಸಾದ ವಿತರಣೆಯೂ ಆರಂಭಗೊಳ್ಳುತ್ತದೆ.

ಅಪರಿಮಿತ ಖ್ಯಾತಿಯ `ಪೊಟ್ಟಪ್ಪ’ ಸೇವೆ

ಬ್ರಿಟಿಷ್ ಅಧಿಕಾರಿಯೊಬ್ಬ ಗ್ರಾಮದಲ್ಲಿನ ಸಂಚಾರಕ್ಕೆ ಕುದುರೆಯನ್ನೇರಿ ಬಂದಿದ್ದಾಗ ಹೆದ್ದಾರಿಯಲ್ಲಿ ಸಾಗುತ್ತಿರಬೇಕಾದರೆ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲೇ ಕುದುರೆ ಆಯತಪ್ಪಿ ಬಿದ್ದಾಗ ಅಧಿಕಾರಿಯೂ ಕೆಳಕ್ಕೆ ಬೀಳುವಂತಾಯಿತು.

ಆಗ ಯಾಕೆ ಹೀಗಾಯಿತ್ತೆನ್ನುವ ಬಗ್ಗೆ ವಿಚಾರಿಸಿದಾಗ ಅಧಿಕಾರಿಗೆ ಪಡುಬಿದ್ರಿ ಗಣಪತಿಯ ದರ್ಶನವನ್ನು ತಾನು ಮಾಡಿಲ್ಲವೆಂಬ ತಪ್ಪಿನ ಅರಿವಾಗಿತ್ತಂತೆ. ಅಂದಿನಿಂದಲೇ ಆತನ ಫರ್ಮಾನಿನಂತೆಯೇ ಪಡುಬಿದ್ರಿ ಗಣಪತಿಗೆ ಬರೀ ಅಕ್ಕಿ, ತೆಂಗಿನಕಾಯಿ ಹಾಗೂ ಉಪ್ಪುಗಳ ಮಿಶ್ರಣಗಳುಳ್ಳ `ಪೊಟ್ಟಪ್ಪ’ ಸೇವೆಯೂ ನಿತ್ಯ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಪಂಚಕಜ್ಜಾಯ ಸೇವೆಯೂ ಇಲ್ಲಿನ ಗಣಪತಿಗೆ ಸಲ್ಲುವ ಇನ್ನೊಂದು ಪ್ರಮುಖ ಹರಕೆಯಾಗಿದೆ.

ಕಟ್ಟದಪ್ಪ ತಯಾರಿ ಹೇಗೆ?

ಈ ಬಾರಿ ಸುಮಾರು 80 ಮುಡಿ ಅಕ್ಕಿಯ ಕಟ್ಟದಪ್ಪವು ಶ್ರೀ ಮಹಾಗಣಪತಿಗೆ ಸಮರ್ಪಿತವಾಗಲಿದೆ. ಈ ಅಕ್ಕಿಗೆ 180 ಕೆಜಿ ಅರಳು, ಸುಮಾರು 700 ಕೆಜಿ ಬಾಳೆಹಣ್ಣು, ಸುಮಾರು 2000 ತೆಂಗಿನಕಾಯಿ, 10 ಕೆಜಿ ಏಲಕ್ಕಿ, 2.5 ಟನ್ ಬೆಲ್ಲಗಳ ಸೇರಿಸಿ ಮಿಶ್ರಣವನ್ನು ತಯಾರಿಸಿಕೊಳ್ಳುತ್ತಾರೆ.

ಮುಂಜಾವದ ವೇಳೆಗೆ ಈ ಎಲ್ಲಾ ತಯಾರಿಗಳೂ ನಡೆದು ಬೆಳಿಗ್ಗಿನಿಂದ ಸಾಯಂಕಾಲದವರೆಗೂ ಇದನ್ನು ಸುಮಾರು 60 ಡಬ್ಬಿ ಎಣ್ಣೆಯನ್ನು ಪೇರಿಸಿ ದೊಡ್ಡ ಬಾಣಲೆಗಳಲ್ಲಿ ಕಾಯಿಸಿಕೊಳ್ಳುತ್ತಾ ಸುಮಾರು 1.5 ಲಕ್ಷದಷ್ಟು ಕಟ್ಟದಪ್ಪಗಳನ್ನು ಬಾಣಸಿಗರು ತಯಾರಿಸುತ್ತಾರೆ. ಮುಖ್ಯ ಬಾಣಸಿಗರಾಗಿ ಪಡುಬಿದ್ರಿಯ ಯೋಗೀಶ್ ರಾವ್ ಅವರಿದ್ದು ವಿವಿದೆಡೆಯ ಬಾಣಸಿಗರು ಈ ಕಟ್ಟದಪ್ಪವನ್ನು ತಯಾರಿಸಲು ಸಹಕರಿಸುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next