Advertisement

Udupi: ಕಸ್ತೂರಿ ರಂಗನ್‌ ವರದಿ ಬಡವರ ಮೇಲಿನ ದಾಳಿ

12:59 AM Sep 25, 2024 | Team Udayavani |

ಉಡುಪಿ: ಬೈಂದೂರು ತಾಲೂಕಿನ ಜಡ್ಕಲ್‌-ಮುದೂರು ಗ್ರಾಮದ ಜನರು ಮತ್ತು ಗ್ರಾಮ ಹಿತ ರಕ್ಷಣೆ ಸಮಿತಿ ವತಿಯಿಂದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Advertisement

ಶಾಸಕ ಗುರುರಾಜ್‌ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್‌ ಭಂಡಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮನವಿ ಸ್ವೀಕರಿಸಿದರು. ಈ ಸಂದರ್ಭ ಗುರುರಾಜ್‌ ಗಂಟಿಹೊಳೆ ಮಾತನಾಡಿ, ಈ ಅವೈಜ್ಞಾನಿಕ ಮತ್ತು ಜನ ವಿರೋಧಿ ವರದಿಯನ್ನು ಸರಕಾರ ಕೈಬಿಡಬೇಕು. ಈ ವರದಿಯಿಂದ ಜನರಿಗೆ ಸಮಸ್ಯೆಯಾಗಲಿದ್ದು, ವರದಿ ಅನುಷ್ಠಾನಗೊಳಿಸದಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಜನರಿಗೆ ಸಮಸ್ಯೆಯಾಗುವ ವರದಿ ಅನುಷ್ಠಾನ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿದಿದೆ ಎಂದರು. ಎಂಎಲ್‌ಸಿ ಮಂಜುನಾಥ್‌ ಭಂಡಾರಿ ಮನವಿ ಸ್ವೀಕರಿಸಿ ಮಾತನಾಡಿದರು.

ಕಲ್ಕುಳಿ ವಿಠಲ ಹೆಗಡೆ ಮಾತನಾಡಿ, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡುವ ವರದಿ ಇದಾಗಿದ್ದು, ಯಾವುದೇ ಕಾರಣಕ್ಕೂ ಈ ವರದಿಯನ್ನು ಒಪ್ಪತಕ್ಕದ್ದಲ್ಲ. ಈ ರೀತಿ ಹೋರಾಟ ಒಂದು ದಿನಕ್ಕೆ ಸೀಮಿತವಾಗದೇ ಗ್ರಾಮ ಮಟ್ಟದಲ್ಲಿ ಹೋರಾಟ ನಡೆಯಬೇಕು ಎಂದರು.

ಜಡ್ಕಲ್‌ ಗ್ರಾ. ಪಂ. ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷೆ ಭಾರತಿ ಶೆಟ್ಟಿ, ಹೋರಾಟ ಸಮಿತಿ ಪ್ರಮುಖರಾದ ಲಕ್ಷ್ಮಣ ಶೆಟ್ಟಿ ಮುದೂರು, ವಾಸುದೇವ ಮುದೂರು ಮತ್ತಿತರರು ಭಾಗವಹಿಸಿದ್ದರು. ವರದಿ ಅನುಷ್ಠಾನ ಮಾಡದಂತೆ ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next