Advertisement

Kashmir; ಸಾಹಿತ್ಯ ಕೃತಿಗಳಲ್ಲಿ ಕಾಶ್ಮೀರದ ಶಾರದಾ ಪೀಠ

12:37 AM Oct 20, 2023 | Team Udayavani |

ಕಾಶ್ಮೀರ ಎಂದ ಕೂಡಲೇ ಶಾರದೆಯು ನೆನಪಾಗುತ್ತಾಳೆ. ಶಾರದೆಯನ್ನು ಕಾಶ್ಮೀರ ಪುರವಾಸಿನಿ ಎಂದೇ ಸ್ತುತಿಸಲಾಗಿದೆ. ಕಾಶ್ಮೀರದ ಶಾರದಾ ಮಂದಿರ ಹಾಗೂ ಶಾರದಾ ಪೀಠಗಳ ಗತವೈಭವಗಳನ್ನು ಇಂದು ಕಣ್ಣಾರೆ ಕಂಡವರಿಲ್ಲ. ಆಸಕ್ತಿಯಿಂದ ಅಂತರ್ಜಾಲದಲ್ಲಿ ಹುಡುಕಿದರೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಾಳುಬಿದ್ದ ಶಾರದಾ ಮಂದಿರದ ಭಾವಚಿತ್ರ ನಮ್ಮ ಗಮನ ಸೆಳೆಯುತ್ತದೆ. ಅಂದಿನ ವೈಭವವನ್ನು ಕಂಡ ಕೆಲವರು ತಮ್ಮ ಅನುಭವಗಳಿಗೆ ಅಕ್ಷರ ರೂಪ ನೀಡಿರುತ್ತಾರೆ. ಇದರೊಂದಿಗೆ ಅನೇಕ ನಂಬಿಕೆ ಹಾಗೂ ದಂತಕಥೆಗಳು ಮೌಖೀಕವಾಗಿ ಜನರ ನಡುವೆ ಕಂಠದಿಂದ ಕಂಠಕ್ಕೆ ಹರಿದು ಬಂದಿವೆ. ಈ ಮಾಹಿತಿಗಳೇ ಅಂದಿನ ವೈಭವವನ್ನು ಕಟ್ಟಿಕೊಡುವ ಪ್ರಮುಖ ಆಕರಗಳು.

Advertisement

ರಾಜತರಂಗಿಣಿ

ಕಾಶ್ಮೀರದ ಪ್ರಾಚೀನ ಇತಿ ಹಾಸದ ಕುರಿತು ಮಾಹಿತಿ ನೀಡುವ ಒಂದು ಪ್ರಮುಖ ಕೃತಿ ರಾಜತರಂಗಿಣಿ. ಈ ಕೃತಿ ಯನ್ನು ಬರೆದವನು ಕಲ್ಹಣ. ಈತನು ಕ್ರಿ.ಶ. 1148 ರಲ್ಲಿ ಈ ಕೃತಿ ಬರೆಯಲು ಆರಂಭಿಸಿ ದನೆಂಬ ವಿವರ ರಾಜತರಂಗಿಣಿಯಲ್ಲಿದೆ. ಕ್ರಿ.ಶ. ಹನ್ನೊಂದನೆಯ ಶತಮಾನದ ತನಕ ಕಾಶ್ಮೀರವನ್ನು ಆಳಿದ ಅರಸರ‌ ವಿವರಗಳು ಈ ಕೃತಿಯಲ್ಲಿವೆ. ಈ ಕೃತಿಯನ್ನು ಹುಡುಕಿ ಸಂಗ್ರಹಿಸಿದವರು ಹಂಗೇರಿಯ ಭಾರತೀಯ ಪುರಾತತ್ವ ಶಾಸ್ತ್ರ ಸಂಶೋಧಕ ಪ್ರೊ| ಆರಲ್‌ ಸ್ಟೈನ್‌. ಈ ಕೃತಿಯ ಸಂಗ್ರಹದ ಹಿಂದೆ ಸ್ವಾರಸ್ಯವಾದ ಕಥೆಯೊಂದಿದೆ. ರಾಜತ ರಂಗಿಣಿಯ ಮೂಲ ಕೃತಿಯ ಹುಡು ಕಾಟದಲ್ಲಿ ಆರಲ್‌ ಸ್ಟೈನ್‌ ತನ್ನನ್ನು ತೊಡಗಿ ಸಿಕೊಳ್ಳುತ್ತಾರೆ. ಸಹೋದರರಿಬ್ಬರ ನಡುವೆ ಆಸ್ತಿಯ ಪಾಲಿನೊಂದಿಗೆ ರಾಜತರಂಗಿ ಣಿಯೂ ಅವರಿಬ್ಬರಲ್ಲಿ ಹಂಚಿ ಹೋಗಿತ್ತು. ಈ ವಿಷಯವನ್ನರಿತ ಪ್ರೊ| ಆರಲ್‌ ಸ್ಟೈನ್‌ ಸಹೋದರಿಬ್ಬರನ್ನು ಭೇಟಿಯಾಗಿ ಅವರ ಮನವೊಲಿಸಿ ಕೃತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಶಾರದಾ ಲಿಪಿಯ ಲ್ಲಿದ್ದ ಈ ಕೃತಿಯು ಮುಂದೆ ಸಂಸ್ಕೃತ ಹಾಗೂ ಆಂಗ್ಲ ಭಾಷೆಗೆ ಅನುವಾದಿಸಲ್ಪಟ್ಟಿತು. ಕಲ್ಹಣನ ರಾಜತರಂಗಿಣಿಯಲ್ಲಿ ಶಾರದಾ ಪೀಠ ಹಾಗೂ ಶಾರದಾ ಮಂದಿರದ ಉಲ್ಲೇಖವಿದೆ.

ಶಾರದಾ ಗ್ರಾಮ

ಕಾಶ್ಮೀರದಲ್ಲಿ ಶಾರದಾ ಎಂಬ ಹಳ್ಳಿ. ಶಾರದಾ ಮಂದಿರದಿಂದಾಗಿ ಆ ಹಳ್ಳಿಗೂ ಶಾರದಾ ಎಂಬ ಹೆಸರು. ಲಿಪಿಯ ಹೆಸರೂ ಶಾರದಾ. ಕಾಶ್ಮೀರದ ಮಧುಮತಿ ಹಾಗೂ ಕಿಶನ್‌ ಗಂಗಾ ನದಿಗಳ ಸಂಗಮವೇ ಮಂದಿರದ ತಾಣ. ಸಂಶೋಧಕರ ಪ್ರಕಾರ ಶಾರದಾ ಮಂದಿರ ಹಾಗೂ ಶಾರದಾ ಪೀಠಕ್ಕಿರುವ ಅಂತರ ಸುಮಾರು ಒಂದು ಮೈಲು. ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಶಾರದಾ ಪೀಠ.

Advertisement

ಶಾರದಾ ಮಂದಿರ

ಸಹನಾ ವಿಜಯ ಕುಮಾರ್‌ ತಮ್ಮ “ಕಶೀರ’ ಕೃತಿಯಲ್ಲಿ ತಿಳಿಸುವಂತೆ ಶಾರ ದೆಯು ಮೊದಲು ಶಿಲಾರೂಪದಲ್ಲಿದ್ದು ಪೂಜಿಸಲ್ಪಡುತ್ತಿದ್ದಳು. ಈ ಕುರಿತಂತೆ ಪ್ರಚಲಿತವಿದ್ದ ಕಥೆಯೊಂದನ್ನೂ ಕೃತಿಯಲ್ಲಿ ಉಲ್ಲೇಖೀಸುತ್ತಾರೆ. ಸಮುದ್ರ ಮಥನವಾಗಿ ದೇವತೆಗಳ ಅಮೃತ ಪಾನಾನಂತರ ಶೇಷವನ್ನು ತಾಯಿ ಶಾರದೆಯು ಷಡು½ಜ ರೂಪ ಧರಿಸಿ ಕಲಶ ಸಹಿತವಾಗಿ ಶಾರದಾ ಎಂಬ ಸ್ಥಳಕ್ಕೆ ತರುತ್ತಾಳೆ. ಭೂಮಿಯಲ್ಲಿ ಈ ಕಲಶವನ್ನು ಹುದುಗಿಟ್ಟು ಸಮತಟ್ಟಿನ ಶಿಲೆಯ ರೂಪ ಧರಿಸಿ ತಾನೇ ಆ ಕಲಶದ ಬಿರಡೆಯಾಗುತ್ತಾಳೆ. ಹಾಗಾಗಿ ಎಲ್ಲರೂ ಈ ಶಿಲೆಯನ್ನೇ ಶಾರದೆ ಎಂದು ಪೂಜಿಸುತ್ತಾರೆ. ಕ್ರಮೇಣ ಸುತ್ತ ಮಂದಿರ ನಿರ್ಮಿಸಲಾಯಿತು.

ಪ್ರಸಿದ್ಧ ವಿದ್ಯಾಕೇಂದ್ರ

ಶಾರದಾ ಪೀಠವು ಆ ಕಾಲದ ಪ್ರಸಿದ್ಧ ವಿದ್ಯಾಕೇಂದ್ರ. ಇಲ್ಲಿನ ವಿದ್ಯಾ ರ್ಜನೆಗೆ ಬೇರೆ ಬೇರೆ ಭಾಗಗಳಿಂದ ಆಸಕ್ತರು ಬರುತ್ತಿದ್ದರು. ಶಾರದಾ ಪೀಠವು ಅಮೂಲ್ಯ ಗ್ರಂಥಗಳ ಸಂಗ್ರಹದ ಮೂಲಕವೂ ವಿದ್ವಾಂ ಸರ ಗಮನ ಸೆಳೆದಿತ್ತು. ಗುಜರಾತಿನ ಅರಸು ರಾಜಾ ಜಯಸಿಂಹನ ಆಸ್ಥಾನದಲ್ಲಿ ಹೇಮ ಚಂದ್ರ ಎಂಬ ವಿದ್ವಾಂಸನಿದ್ದನು. ವ್ಯಾಕರಣದ ಕುರಿತ ಕೃತಿಯೊಂದರ ರಚನೆಗೆ ಅರಸನ ಅಪೇ ಕ್ಷೆಯಂತೆ ಮುಂದಾಗುತ್ತಾನೆ. ಆಗ ಅರಸ ಜಯಸಿಂಹನೇ ತನ್ನ ಪ್ರತಿನಿಧಿಗಳನ್ನು ಶಾರದಾ ಪೀಠದ ಗ್ರಂಥಾಲಯಕ್ಕೆ ಕಳುಹಿಸಿ ವ್ಯಾಕರಣ ಕೃತಿಯ ರಚನೆಯಲ್ಲಿ ಹೇಮಚಂದ್ರನಿಗೆ ನೆರವಾಗುತ್ತಾನೆ. ಬರೆಹಗಾರರಿಗೆ ವಿದ್ಯಾ ದೇವತೆಯಾದ ಶಾರದೆಯ ಮೇಲೆ ಅಪಾರ ನಂಬಿಕೆ. ಈ ಕುರಿತಂತೆ ಪ್ರಚಲಿತವಿದ್ದ ದಂತ ಕಥೆಯೊಂದು ಗಮನಾರ್ಹ. ಭೂರ್ಜ ಪತ್ರ ದಲ್ಲಿ ಬರೆದ ಕೃತಿಯನ್ನು ಹರಿವಾಣದಲ್ಲಿಟ್ಟು ಶಾರದೆಯ ಆಶೀರ್ವಾದಕ್ಕಾಗಿ ವಿಗ್ರಹದ ಮುಂದೆ ಇಡುತ್ತಿದ್ದರಂತೆ. ಬರೆಹದ ಪುಟ ಗಳಲ್ಲಿ ಯಾವುದೇ ಹಾನಿಯಾಗದಿದ್ದಲ್ಲಿ ಶಾರ ದಾ ದೇವಿಯು ಆಶೀರ್ವಚಿಸಿ ಕೃತಿಯನ್ನು ಮಾನ್ಯ ಮಾಡಿದಳೆಂದು ಭಾವಿಸುತ್ತಿದ್ದರು.

ವಿದೇಶಿ ಪ್ರವಾಸಿಗರ ಕಥನ

ಶಾರದಾ ಮಂದಿರ ಹಾಗೂ ಶಾರದಾ ಪೀಠದ ಬಗ್ಗೆ ವಿದೇಶಿ ಪ್ರವಾಸಿಗರ ಬರೆಹಗಳಲ್ಲೂ ಉಲ್ಲೇಖಗಳಿವೆ. ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಅಲೆºàರೂನಿ ಶಾರದಾ ಮಂದಿರದ ಬಗ್ಗೆ ತನ್ನ ಪ್ರವಾಸ ಕಥನದಲ್ಲಿ ನೀಡಿದ ವಿವರಗಳನ್ನು “ಪ್ರವಾಸಿ ಕಂಡ ಇಂಡಿಯಾ’ ಕೃತಿಯಲ್ಲಿ ಡಾ| ಎಚ್‌.ಎಲ್‌. ನಾಗೇಗೌಡರು ಉಲ್ಲೇಖೀಸಿದ್ದಾರೆ. ಕಾಶ್ಮೀರದ ಒಳಭಾಗದಲ್ಲಿ ಅಂದರೆ ರಾಜಧಾನಿಯಿಂದ ಎರಡು, ಮೂರು ದಿನ ಪ್ರಯಾಣದಲ್ಲಿ ಸಿಕ್ಕುವ ಬೋ ಲೋರ್‌ ಎಂಬ ಪರ್ವತದ ಕಡೆಗೆ ಶಾರದಾ ವಿಗ್ರಹವಿದೆ. ಇದನ್ನು ಮರದಿಂದ ಮಾಡಿ ದ್ದಾರೆ. ಅನೇಕ ಜನ ಯಾತ್ರಾರ್ಥಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಆರಾಧಿಸುತ್ತಾರೆ. ಶಾರದಾ ಪೀಠವು ಎಷ್ಟು ಪ್ರತಿಷ್ಠಿತ ವಿದ್ಯಾ ಕೇಂದ್ರ ವಾಗಿತ್ತೆಂದರೆ ಕಾಶೀ ವಿದ್ಯಾಪೀಠದಲ್ಲಿ ಅಧ್ಯ ಯನ ಮುಗಿಸಿದವರ ಮುಂದೆ ಅಧ್ಯ ಯನದ ಆಯ್ಕೆ ಶಾರದಾ ಪೀಠ. ಇದಕ್ಕೆ ಪುರಾವೆಯಾಗಿ ಆ ಕಾಲದಲ್ಲಿ ನಡೆಯುತ್ತಿದ್ದ ಆಚರಣೆ ಯೊಂದು ಇಲ್ಲಿ ಗಮನಾರ್ಹ. ಶಾರದಾ ಪೀಠವು ಇರುವ ದಿಕ್ಕಿನೆಡೆಗೆ ನಾಲ್ಕು ಹೆಜ್ಜೆ ನಡೆಯುತ್ತಿದ್ದರಂತೆ.

ಶಂಕರಾಚಾರ್ಯರಿಂದ ದಕ್ಷಿಣ ದ್ವಾರ ಪ್ರವೇಶ: ಶಂಕರಾಚಾರ್ಯರು ಕಾಶ್ಮೀರಕ್ಕೆ ಭೇಟಿ ನೀಡಿ ದಾಗ ದಕ್ಷಿಣ ದ್ವಾರದಿಂದ ಶಾರದಾ ಪೀಠವನ್ನು ಪ್ರವೇಶಿಸುತ್ತಾರೆ. ಹೀಗೆ ಪ್ರವೇಶಿಸುವಾಗ ಎದುರಾದ ವಿದ್ವಾಂಸರನ್ನು ನಾಲ್ಕು ಸುತ್ತಿನಲ್ಲಿ ತಮ್ಮ ಪ್ರಖರವಾದ ಪಾಂಡಿತ್ಯದ ಮೂಲಕ ಸೋಲಿಸಿ ಸರ್ವಜ್ಞ ಪೀಠವನ್ನು ಏರುತ್ತಾರೆ. ಮೊದಲ ಸುತ್ತಿನಲ್ಲಿ ನ್ಯಾಯ ಹಾಗೂ ವೈಶೇಷಿಕ ವಿದ್ವಾಂಸರನ್ನೂ, ಎರಡನೆಯ ಸುತ್ತಿನಲ್ಲಿ ಯೋಗ ಮತ್ತು ಸಾಂಖ್ಯದ ವಿದ್ವಾಂಸರನ್ನೂ, ಮೂರನೆಯ ಸುತ್ತಿನಲ್ಲಿ ಬೌದ್ಧ ಮತ್ತು ಜೈನ ವಿದ್ವಾಂಸರನ್ನೂ, ಕೊನೆಯ ಸುತ್ತಿನಲ್ಲಿ ಪೂರ್ವ ಮೀಮಾಂಸಾ ವಿದ್ವಾಂಸರನ್ನೂ ಸೋಲಿಸುತ್ತಾರೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್‌ನಲ್ಲಿ ನೂತನವಾಗಿ ನಿರ್ಮಿಸಲಾ ಗಿರುವ ಶಾರದಾ ದೇವಾಲಯವನ್ನು ಈ ವರ್ಷದ ಚಾಂದ್ರಮಾನ ಯುಗಾದಿಯ ಶುಭಸಂದರ್ಭದಲ್ಲಿ ಲೋಕಾರ್ಪಣೆಗೊಳಿಸ ಲಾಗಿತ್ತು. ಕರ್ನಾಟಕದ ಶೃಂಗೇರಿ ದೇಗುಲದ ಆಡಳಿತ ಮಂಡಳಿ ಕೊಡುಗೆಯಾಗಿ ನೀಡಿದ್ದ ಶಾರದಾ ದೇವಿಯ ವಿಗ್ರಹವನ್ನು ಈ ದೇವಾ ಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರದ ಶಾರದಾ ಮಂದಿರದಲ್ಲಿ ನವರಾತ್ರಿ ಮಹೋತ್ಸವವನ್ನು ಈ ಬಾರಿ ಶ್ರದ್ಧಾಭಕ್ತಿಗಳಿಂದ ಆಚರಿ ಸಲಾಗುತ್ತಿದೆ.

ಡಾ| ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next