Advertisement

ಕಾಶ್ಮೀರ ನ್ಯಾಯ: ಅವರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ!

09:22 AM Aug 16, 2017 | |

ಕಳೆದ ಕೆಲವು ದಶಕಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕಾರಣಿಗಳಿಗೆ ನಮ್ಮ ಕರ್ನಾಟಕದ ರಾಜಧಾನಿಯಲ್ಲಿ ದೊರೆತಿರುವ “ನಿವೇಶನ ಭಾಗ್ಯ’ದ ಕತೆಯ ಮೇಲೊಮ್ಮೆ ಕಣ್ಣಾಡಿಸಿ. ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಬಕ್ಷಿ ಗುಲಾಂ ಅಹ್ಮದ್‌ ಅವರಿಗೆ ಸುಮಾರು 1960ರ ಆಸುಪಾಸಿನಲ್ಲಿ ಬೆಂಗಳೂರು ನಗರ ಸುಧಾರಣಾ ಟ್ರಸ್ಟ್‌ ಮಂಡಳಿಯು ಬಂಗಲೆಯೊಂದರ ನಿವೇಶನವೊಂದನ್ನು ಒದಗಿಸಿತ್ತು. ಇವತ್ತು ಕೂಡ ಸಕ್ರಿಯರಾಗಿರುವ ಜಮ್ಮು ಮತ್ತು ಕಾಶ್ಮೀರದ ಇನ್ನೊಬ್ಬ ರಾಜಕಾರಣಿ ಕೊಡಗು ಜಿಲ್ಲೆಯಲ್ಲೊಂದು ಕಾಫಿ ಎಸ್ಟೇಟೊಂದನ್ನು ಹೊಂದಿದ್ದಾರೆನ್ನಲಾಗಿದೆ. ಹಾಗೆ ನೋಡಿದರೆ ಕಾಶ್ಮೀರದ ಮಾಜಿ ಮಹಾರಾಜ ಹರಿಸಿಂಗ್‌ ಅವರು, ಮಹಾರಾಜರುಗಳ ಪೈಕಿ ಕೆಲವರ ಪಾಲಿಗೆ ಹಿಂದೊಮ್ಮೆ ಅಕ್ಷರಶಃ “ಬೇಸಿಗೆ ರಾಜಧಾನಿ’ಯೇ ಆಗಿ ಪರಿಣಮಿಸಿದ್ದ ಬೆಂಗಳೂರಿನ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಬಂಗಲೆಯೊಂದನ್ನು ಹೊಂದಿದ್ದರು.

Advertisement

ಆದರೆ ಎಂಥ ವ್ಯಂಗ್ಯ ನೋಡಿ- ಯಾವನೇ ನಾಗರಿಕ ಬಿಡಿ, ಕರ್ನಾಟಕದ ಯಾವ ಮಂತ್ರಿಯೇ ಆಗಲಿ, ಯಾವ ಮುಖ್ಯಮಂತ್ರಿಯೇ ಆಗಲಿ, ಜಮ್ಮು ಕಾಶ್ಮೀರದಲ್ಲಿ ಯಾವುದೇ ಆಸ್ತಿಯನ್ನು ಖರೀದಿಸುವ ಬಗೆಗಿನ ಆಸೆಯನ್ನು ಇರಿಸಿಕೊಳ್ಳುವಂತಿಲ್ಲ! ನಮ್ಮ ದೇಶವನ್ನು ಆಳಿರುವ ಮಂದಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೃಷ್ಟಿಸಿರುವ ವ್ಯಂಗ್ಯ ಸನ್ನಿವೇಶ ಇದು. ಈ ವರ್ಷದ ಆಗಸ್ಟ್‌ 15ರ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಚಿಂತನೆಗೆ ಗ್ರಾಸ ಒದಗಿಸಿರುವ ಸಂಗತಿ ಇದು. ಈಗ ಬಿಸಿಬಿಸಿ ಚರ್ಚೆಗೆ ವಿಷಯವಾಗಿರುವ ಇದು ಸಂವಿಧಾನದ 35ಎ ವಿಧಿಗೆ ಸಂಬಂಧಪಟ್ಟಿರುವ ವಿಷಯವಾಗಿದೆ.

ಈ ವಿವಾದಿತ ವಿಷಯವನ್ನು ವಿಶ್ಲೇಷಿಸುವ ಮುನ್ನ ಹೇಳಬೇಕಾದ ಮುಖ್ಯ ಮಾತೊಂದಿದೆ. ಈ ಬಾರಿ ದೇಶದ ಉಳಿದ ಭಾಗಗಳ ಜನರು 71ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಲ್ಲಿ ಮಗ್ನರಾಗಿದ್ದರೆ, ಕಾಶ್ಮೀರಿ ಕಣಿವೆಯ ನಿವಾಸಿಗಳ ಪೈಕಿ ಕೆಲವರು ತಮಗೆ ಭಾರತದಿಂದ “ಸ್ವಾತಂತ್ರ್ಯ’ ಬೇಕು; ತಾವಿರುವ ನೆಲ ಪಾಕಿಸ್ಥಾನದೊಂದಿಗೆ ಸೇರ್ಪಡೆಗೊಳ್ಳಬೇಕು ಎಂಬ ರಾಗಾಲಾಪನೆಯಲ್ಲಿ ನಿರತರಾಗಿದ್ದಾರೆ. ಹಾಗೆ ನೋಡಿದರೆ, ಹೀಗೆ ಆಗ್ರಹಿಸುತ್ತಿರುವವರು ಕಣಿವೆಯಲ್ಲಿರುವ ಮುಸ್ಲಿಮರ ಒಂದು ಗುಂಪೇ ಹೊರತು, ಆ ರಾಜ್ಯದ ಜನರಲ್ಲ! ಇದೇ ವೇಳೆ ಅಸ್ಸಾಂ, ನಾಗಾಲ್ಯಾಂಡ್‌ ಹಾಗೂ ಮಣಿಪುರಗಳಲ್ಲಿ ಕೂಡ ಭಾರತದಿಂದ ಸ್ವಾತಂತ್ರ್ಯ ಬೇಕು ಎಂಬ ಕೂಗು ಮೊಳಗುತ್ತಿರುವುದು ನಿಜ.

ಕಾಶ್ಮೀರಿ ಪ್ರತ್ಯೇಕವಾದಿಗಳು ಕಾಶ್ಮೀರಿಯತ್‌ನ ಬಗ್ಗೆ ವಿತಂಡವಾದ ಹೂಡುತ್ತ ತಮ್ಮ ರಾಜ್ಯಕ್ಕೆ ಸ್ವಾತಂತ್ರ್ಯ ಬೇಕು ಎಂದು ಆಡಿಕೊಳ್ಳುತ್ತ ತಿರುಗಾಡುತ್ತಿರುವುದು ಹೌದಾದರೂ ಅವರ ಈ ವಾದದ ಅರ್ಥ ಪಾಕಿಸ್ಥಾನಕ್ಕೆ ಸೇರ್ಪಡೆಗೊಳ್ಳಬೇಕೆಂಬುದೇ ಆಗಿದೆ. ಈ ಪ್ರತ್ಯೇಕತಾವಾದಿಗಳು ನಮ್ಮ ಇಂಗ್ಲಿಷ್‌ ಟಿವಿ ಚಾನೆಲ್‌ಗ‌ಳಲ್ಲಿ ಕಾಣಿಸಿಕೊಂಡು ಜಮ್ಮು-ಕಾಶ್ಮೀರದಲ್ಲೀಗ ಏನು ನಡೆಯುತ್ತಿದೆಯೋ ಅದಕ್ಕೆಲ್ಲ ಭಾರತ ಸರಕಾರ ಹಾಗೂ ಸಶಸ್ತ್ರ ಪಡೆಗಳೇ ಕಾರಣ ಎಂದು ನಿಂದಿಸುತ್ತಿದ್ದಾರೆ; ಬಹಿರಂಗ ಸವಾಲನ್ನೂ ಹಾಕುತ್ತಿದ್ದಾರೆ. ಹೆಚ್ಚೇನು, ಪಾಕಿಸ್ಥಾನದಿಂದ ಕಳುಹಿಸಲ್ಪಟ್ಟಿರುವ ಭಯೋತ್ಪಾದಕರಿಗೆ ಏನಾದರೂ “ಹಾನಿ’ಯಾದ ಸಂದರ್ಭದಲ್ಲಿ ಸೇನೆ ಹಾಗೂ ಪೊಲೀಸರ ಮೇಲೆ ತೀವ್ರ ವಾಗ್ಧಾಳಿ ನಡೆಸುತ್ತಿದ್ದಾರೆ. ತಮ್ಮ ಮೂಗಿನ ನೇರದ ಅರ್ಥದಲ್ಲಿ ಹಿಂದುತ್ವ ಕುರಿತಂತೆ ಕಟುಮಾತುಗಳ ಟೀಕೆಗಳನ್ನು ತೂರಿಬಿಡುತ್ತಿರುವ ಇವರು, ಇಂಥ ಕಹಿಮಾತುಗಳ ನಡುವೆ ಜಮ್ಮು ಪ್ರದೇಶದಲ್ಲಿರುವ ಹಿಂದೂಗಳ ಹಾಗೂ ಲಡಾಖ್‌ ಪ್ರದೇಶದ ಬೌದ್ಧ ನಾಗರಿಕರ ಆಶಯ, ಕಾಳಜಿಗಳೇನೆಂಬುದನ್ನು ಅನಾಯಾಸವಾಗಿ ಮರೆತುಬಿಟ್ಟಿರುತ್ತಾರೆ; ಇನ್ನು ಕಣಿವೆಯಿಂದ ಹೊರದೂಡಲ್ಪಟ್ಟಿರುವ ಕಾಶ್ಮೀರಿ ಪಂಡಿತರ ಬಗ್ಗೆ ಯೋಚಿಸುವ ಗೋಜಿಗೇ ಹೋಗುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಾ| ಫಾರೂಕ್‌ ಅಬ್ದುಲ್ಲಾ ಅವರೇ ಭಯೋತ್ಪಾದಕರ ಪರ ಮಾತನಾಡುತ್ತಾರೆಂದ ಮೇಲೆ ರಾಜ್ಯದಲ್ಲಿರುವ ಪ್ರತ್ಯೇಕವಾದಿಗಳ ಬಗ್ಗೆ ಏನು ಹೇಳುವುದಿದೆ? ಅಬ್ದುಲ್ಲಾ ಕುಟುಂಬದ ಸದಸ್ಯರನ್ನು ನಮ್ಮ ಸರಕಾರಗಳು ದಶಕಗಳ ಕಾಲದಿಂದ ಮುದ್ದು ಮಾಡಿ ಕೆಡಿಸಿ ಬಿಟ್ಟಿವೆ. ಫಾರೂಕ್‌ ಅಬ್ದುಲ್ಲಾ ಅವರಾದರೋ ಇಂಥ ಮುಚ್ಚಟೆಯ ಗುಂಗಿನಲ್ಲೇ ಮಾತನಾಡುತ್ತಿದ್ದಾರೆ. ಇದುವರೆಗೆ ಅಬ್ದುಲ್ಲಾ ವಂಶದ ಮೂವರೂ ಇಲ್ಲಿ ಮುಖ್ಯಮಂತ್ರಿಗಳಾಗಿದ್ದಾರೆ. ಗಮನಿಸಬೇಕಾದ ಅಂಶ ಇದು- ಕಾಶ್ಮೀರದ ಯಾವ ಮುಸ್ಲಿಂ ನೇತಾರರೂ ಇಂದು ಕಾಶ್ಮೀರದ ಪ್ರಗತಿ ಕುಂಠಿತವಾಗಿರುವ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಯಾವ ಬೆಲೆ ತೆತ್ತಾದರೂ ಅವರಿಗೆ ದೇಶವನ್ನು ಬಿಟ್ಟು ಹೋಗಬೇಕಾಗಿದೆ. ಆ ರಾಜ್ಯದಲ್ಲಿ ಇಂದು ಭ್ರಷ್ಟಾಚಾರ ಗರಿಷ್ಠ ಮಟ್ಟದಲ್ಲಿರುವುದಕ್ಕೆ ಕಾರಣ, ಅಲ್ಲಿ ಅಧಿಕಾರವನ್ನು ಅನುಭವಿಸುತ್ತ ಬಂದಿರುವ ರಾಜಕಾರಣಿಗಳೇ. ಅಲ್ಲಿನ ಇಬ್ಬರು ಮಾಜಿ ಕಾಂಗ್ರೆಸ್‌ ಮುಖ್ಯಮಂತ್ರಿಗಳಾದ ಬಕ್ಷಿ ಗುಲಾಂ ಅಹಮದ್‌ ಹಾಗೂ ಜಿ.ಎಂ. ಸಾದಿಕ್‌ ಇವರುಗಳು ಭ್ರಷ್ಟಾಚಾರ ಎಸಗಿದ್ದುದರ ಬಗ್ಗೆ ಚರ್ಚಿಸಲಾಗುತ್ತಿದೆಯಾದರೂ ಇದುವರೆಗೂ ಈ ವಿಷಯದಲ್ಲಿ ಇವರಿಬ್ಬರ ವಿಷಯದಲ್ಲಿ ಯಾರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.

35ಎ ಎಲ್ಲಿದೆ?
ಸಂವಿಧಾನದ 35ಎ ವಿಧಿಯನ್ನು ಉಳಿಸಿಕೊಳ್ಳಬೇಕೆಂಬ ಬಗೆಗಿನ ವಿವಾದ ಎಷ್ಟು ತೀವ್ರವಾದ ಸಂಚಲನ ಮೂಡಿಸಿದೆಯೆಂದರೆ ನಮ್ಮನೇಕರಲ್ಲಿ ಸಂವಿಧಾನದ ಪುಟಗಳನ್ನು ಆತುರದಿಂದ ಮಗುಚಿ ಹಾಕಲು ಮುಂದಾಗುವಷ್ಟು ಅಥವಾ ಸಂವಿಧಾನದ ಒಂದು ಪ್ರತಿಯನ್ನು ಖರೀದಿಸಿ ನೋಡಬೇಕೆನ್ನುವಷ್ಟು ತುಡಿತ ಹಾಗೂ ಒತ್ತಡ ಉಂಟು ಮಾಡಿದೆ! ಹೀಗೆ ಕುತೂಹಲದಿಂದ ಸಂವಿಧಾನದ ಮೇಲೆ ಕಣ್ಣಾಡಿಸಲು ಹೊರಡುವವರಿಗೆ ನಿರಾಶೆಯಾಗುವುದು ಖಚಿತ. ಯಾಕೆಂದರೆ ಸಂವಿಧಾನದಲ್ಲಿ ಇಂಥದೊಂದು ನಿಬಂಧನೆಯೇ ಇಲ್ಲ! ಅಥವಾ ಈ ವಿಚಾರದಲ್ಲಿ ಇನ್ನಷ್ಟು ಪರಿಶೀಲನೆ ಅಗತ್ಯವಿದೆ ಎನ್ನೋಣವೇ? ಸಂವಿಧಾನದ ಅನುಬಂಧವೊಂದರಲ್ಲಿ ಇದರ ಪತ್ತೆ ಸಾಧ್ಯ. ಈ ವಿಧಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಹೊರಗಡೆಯ ವ್ಯಕ್ತಿಯೊಬ್ಬ ರಾಜ್ಯದೊಳಗಡೆಯ ಭೂನಿವೇಶನವನ್ನು ಖರೀದಿಸುವಂತಿಲ್ಲ. ಅದರ ಒಡೆತನವನ್ನು ಹೊಂದುವಂತಿಲ್ಲ. 1954ರಲ್ಲಿ ಹೊರಡಿಸಲಾದ ರಾಷ್ಟ್ರಪತಿಗಳ ಆದೇಶದ ಮೂಲಕ ಈ ವಿಧಿಯನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು. ಗಮನಿಸಬೇಕು, ಈ ಆದೇಶ ಜಮ್ಮು ಮತ್ತು ಕಾಶ್ಮೀರಕ್ಕೆ (ಮಾತ್ರ) ಅನ್ವಯಿಸುವಂಥದು. ರಾಜ್ಯಕ್ಕೆ ವಿಶೇಷ ಸ್ಥಾನ-ಮಾನವನ್ನು ಸಾಧ್ಯವಾಗಿಸುವ 370ನೆಯ ವಿಧಿಯ ಅಂಗ ಇದು. ದಿಲ್ಲಿ ಒಡಂಬಡಿಕೆಯೆಂದು ಹೆಸರಾಗಿರುವ ಒಪ್ಪಂದವೊಂದರ ಪರಿಣಾಮವಾಗಿ ಉದ್ಭವಿಸಿದ ಶಿಶುವೇ 35ಎ ವಿಧಿ. ಈ ಒಪ್ಪಂದಕ್ಕೆ ಸಹಿ ಹಾಕಿದವರು ಅಂದಿನ ನಮ್ಮ ಪ್ರಧಾನಿ ಜವಾಹರಲಾಲ ನೆಹರೂ ಹಾಗೂ ಅಂದಿನ ಕಾಶ್ಮೀರದ ಪ್ರಧಾನಿ (ಈಗ ಈ ಹುದ್ದೆಗೆ ಮುಖ್ಯಮಂತ್ರಿ ಎನ್ನುತ್ತಾರೆ) ಶೇಖ್‌ ಅಬ್ದುಲ್ಲಾ. “ರಾಜ್ಯದ ಖಾಯಂ ನಿವಾಸಿಗಳೆಂದರೆ ಯಾರು’ ಎಂದು ವ್ಯಾಖ್ಯಾನಿಸಿ ಗುರುತಿಸುವ ಹಾಗೂ ಅಂಥವರಿಗೆ ವಿಶೇಷ ಹಕ್ಕುಗಳನ್ನು ಹಾಗೂ ಸವಲತ್ತುಗಳನ್ನು ಒದಗಿಸುವ ಅಧಿಕಾರವನ್ನು 35ಎ ವಿಧಿ ಕಾಶ್ಮೀರ ಸರಕಾರಕ್ಕೆ ನೀಡಿದೆ.

Advertisement

ಈ ಎಲ್ಲ ವಿಚಾರಗಳನ್ನು ಪ್ರಸ್ತಾವಿಸಿದುದಕ್ಕೆ ಕಾರಣವಿದೆ. ಜಮ್ಮು ಆ್ಯಂಡ್‌ ಕಾಶ್ಮೀರ್‌ ಸ್ಟಡಿ ಸೆಂಟರ್‌ ಎಂಬ ಚಿಂತನ ಚಿಲುಮೆಯೊಂದು 35ಎ ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಮೊದಲಿಗೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಹಾಗೂ ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ದಾವೆ ಹೂಡಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಈಗ ಮೆಹಬೂಬಾ ಮುಫ್ತಿ ನೇತೃತ್ವದ ಜಮ್ಮು ಮತ್ತು ಕಾಶ್ಮೀರದ ಸರಕಾರ ವಿರೋಧ ವ್ಯಕ್ತಪಡಿಸಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಈಗಾಗಲೇ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರ ಮೂಲಕ ಈ ವಿಷಯದಲ್ಲಿ ತನ್ನ ನಿಲುವಿನ ಬಗೆಗಿನ ಇಂಗಿತವನ್ನು ಸೂಚಿಸಿದೆ. ರಾಜ್ಯ ಸರಕಾರದ ನಿಲುವನ್ನು ವಿರೋಧಿಸುವ ಅಫಿದವಿತ್ತನ್ನು ಕೇಂದ್ರ ಸರಕಾರ ಸಲ್ಲಿಸುವುದಿಲ್ಲವೆಂದು ವೇಣುಗೋಪಾಲ್‌ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಇದರ ಬದಲಿಗೆ, ಈ ವಿಷಯದಲ್ಲಿ ಬಹುಮುಖ್ಯ ಸಾಂವಿಧಾನಿಕ ಅಂಶಗಳು ಸೇರಿಕೊಂಡಿರುವುದರಿಂದ ನ್ಯಾಯಾಲಯವು ಇದರ ಪರಿಶೀಲನೆಗಾಗಿ ಇನ್ನೂ ವಿಶಾಲ ತಳಹದಿಯ ನ್ಯಾಯಪೀಠವನ್ನು ಅಸ್ತಿತ್ವಕ್ಕೆ ತರಬೇಕೆಂಬ ಬಯಕೆಯನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. ಈ ನಡುವೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡುತ್ತ, 370 ಹಾಗೂ 35ಎ ವಿಧಿಗಳು ಭಾವನಾತ್ಮಕ ವಿಷಯಗಳಾಗಿರುವುದರಿಂದ ದಿಢೀರ್‌ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದ ಮೆಹಬೂಬಾ ಮುಫ್ತಿ ಅವರು, ಈ ಎರಡೂ ವಿಧಿಗಳನ್ನು ಉಳಿಸಿಕೊಳ್ಳುವ ವಿಷಯದಲ್ಲಿನ ಕೇಂದ್ರದ ನಿಲುವಿನಲ್ಲಿ ಏನೂ ಬದಲಾವಣೆಯಿಲ್ಲವೆಂದು ತನಗೆ ಪ್ರಧಾನಿ ಭರವಸೆ ನೀಡಿರುವುದಾಗಿ ಹೇಳಿದ್ದರು.

ಗಮನಿಸಿ- 35ಎ ವಿಧಿ ರಾಜ್ಯದ ಹೊರಗಡೆಯ ಯಾವನೇ ವ್ಯಕ್ತಿಯನ್ನು ವಿವಾಹವಾಗುವ ಕಾಶ್ಮೀರಿ ಮಹಿಳೆಯರ ಬಗ್ಗೆ ತಾರತಮ್ಯ ತೋರಿಸುತ್ತದೆ. ಇಂಥ ಮಹಿಳೆಯರು ರಾಜ್ಯದ ಒಳಗಡೆ ಆಸ್ತಿಪಾಸ್ತಿ ಹೊಂದುವ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ! ಹಾಗೆ ನೋಡಿದರೆ ರಾಜ್ಯದಲ್ಲಿ ಯಾವುದೇ ಆಸ್ತಿಯನ್ನು ಹೊಂದುವುದಕ್ಕೆ ಹೇರಲಾಗಿರುವ ನಿಷೇಧ, ಹಿಂದೂ ಮಹಾರಾಜರುಗಳ ಕಾಲದಿಂದಲೂ ಇದೆ ಎಂಬ ವಾದದಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶವಿದೆ. 1927ರಲ್ಲಿಯೇ ಅಲ್ಲಿನ ಮಹಾರಾಜರು ರಾಜ್ಯದೊಳಗೆ ಭೂಮಿ ಖರೀದಿಸುವ ವಿಷಯದಲ್ಲಿ ಇಂಥದೊಂದು ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಕಾಶ್ಮೀರದ ಆಹ್ಲಾದಕರ ವಾತಾವರಣದಿಂದ ಆಕರ್ಷಿತರಾಗಿ ಬ್ರಿಟಿಷ್‌ ಅಧಿಕಾರಿಗಳು ಹಾಗೂ ಪಂಜಾಬಿಗಳು ರಾಜ್ಯದಲ್ಲಿನ ಆಸ್ತಿ ಖರೀದಿಗೆ ಮುಂದಾಗುವುದನ್ನು ತಡೆಯುವುದು ಇಂಥ ಕಾಯ್ದೆಯ ಉದ್ದೇಶವಾಗಿತ್ತು.

ಮೇಲೆ ಹೇಳಿದ ಮಾಜಿ ಮಹಾರಾಜರ ಕಾಲದ ಕಾಯ್ದೆ ಇಂದು ಕೂಡ ಜೀವಂತವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಬ್ಬಿರುವ ಅಶಾಂತಿಗೆ ಮೂಲಕಾರಣ ಇದೇ ಕಾಯ್ದೆ. ಇಂಥದೊಂದು ಕಾಯ್ದೆಗೆ ಆಸ್ಪದವಿತ್ತಿರುವ ಸಂವಿಧಾನದ 35ಎ ವಿಧಿಯನ್ನು “ಸಾಂವಿಧಾನಿಕ ಪ್ರಮಾದ’ವೆಂದು ದೂಷಿಸಲಾಗಿದ್ದು, ಈ ತಕರಾರು ಇದೇ ಕಾರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ. ಮಾತ್ರವಲ್ಲ, 370ನೆಯ ವಿಧಿಯ ಬಗೆಗೂ ಅಪಸ್ವರವೆದ್ದಿದೆ. ಅದರ ಸಿಂಧುತ್ವವನ್ನೂ ಪ್ರಶ್ನಿಸಲಾಗಿದೆ.

ಮೋದಿ ಸರಕಾರ ಇದೀಗ ಈ ಇಡೀ ತಕರಾರಿಗೆ ಸಂಬಂಧಿಸಿದಂತೆ ತಾನೇ ಒಂದು ನಿರ್ಧಾರಕ್ಕೆ ಬರುವ ಬದಲಿಗೆ ಇದನ್ನು ಬಗೆಹರಿಸುವ ಕೆಲಸ ನ್ಯಾಯಾಲಯದಲ್ಲೇ ನಡೆಯಲಿ ಎಂದು ನಿರ್ಧರಿಸಿದಂತಿದೆ. ಇದು ಕೇಂದ್ರ ಸರಕಾರದ ರಾಜಕೀಯ ತಂತ್ರಗಾರಿಕೆಯಂತೆ ಭಾಸವಾಗುತ್ತಿದೆ.

ಪಾಕ್‌ ಆಕ್ರಮಿತ ಕಾಶ್ಮೀರದ     ಹಿಂದೂ ನಿರಾಶ್ರಿತರ ಪಾಡೇನು?
ಕಾಶ್ಮೀರದ ಬಗ್ಗೆ ಈಗ ನಡೆಯುತ್ತಿರುವ ಸಂವಾದ -ಚರ್ಚೆಗಳಲ್ಲಿ ಒಂದು ಮಹತ್ವದ ಅಂಶ ಉಲ್ಲೇಖಗೊಳ್ಳುವುದೇ ಇಲ್ಲ. ಪಾಕ್‌ ಆಕ್ರಮಿತ ಕಾಶ್ಮೀರದಿಂದ ಬಂದ 5 ಲಕ್ಷ ನಿರಾಶ್ರಿತರು ಎದುರಿಸುತ್ತಿರುವ ದಯನೀಯ ಪರಿಸ್ಥಿತಿಯ ಕುರಿತು ಇಂದು ಯಾರೂ ಸೊಲ್ಲೆತ್ತುವುದಿಲ್ಲ. ಈ ನಿರಾಶ್ರಿತರಿಗೆ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಸಿಕ್ಲಿಲ್ಲ; ಭೂಮಿಯನ್ನು ಖರೀದಿಸಲು, ನೆಲದೊಡೆಯರಾಗಲು ಅವಕಾಶವಿಲ್ಲ. ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿಲ್ಲ. ಇವರೆಲ್ಲ ಜಮ್ಮು ನಗರದಲ್ಲಿ ರಾಜ್ಯದಿಂದ ಬಲವಂತವಾಗಿ ಹೊರಹಾಕಲ್ಪಟ್ಟಿರುವ ಕಾಶ್ಮೀರಿ ಪಂಡಿತರುಗಳಂತೆ ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ಥಾನಕ್ಕೆ ನಿರಾಶ್ರಿತರೆಂಬ ನೆಲೆಯಲ್ಲಿ ಹೋಗಿದ್ದ ಮುಸ್ಲಿಮರಿಗೆ ರಾಜ್ಯಕ್ಕೆ ಮರಳಿ ಬರಲು ಅವಕಾಶ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲ, ಇವರನ್ನು ಇಲ್ಲಿನ ಖಾಯಂ ನೆಲೆಸಿಗರೆಂಬ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಕೂಡ!

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next