Advertisement

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಚರ್ಚೆ ವಿಶ್ವದೆದುರು ಬೆತ್ತಲಾದ ಪಾಕ್‌

01:40 AM Aug 19, 2019 | Team Udayavani |

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ದಿಕ್ಕು ತೋಚದಂತಾಗಿರುವ ಪಾಕಿಸ್ಥಾನ ಅಂತರಾಷ್ಟ್ರೀಯ ಸಮುದಾಯದೆದುರು ಬೆತ್ತಲಾಗುತ್ತಿದೆ. ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸಲು ಹೊರಟು ಮುಖಭಂಗ ಅನುಭವಿಸಿದ್ದು ಇದಕ್ಕೆ ಇನ್ನೊಂದು ಸೇರ್ಪಡೆಯಷ್ಟೆ.ತನ್ನ ಸರ್ವಋತು ಸ್ನೇಹಿತ ಚೀನದ ನೆರವು ಪಡೆದುಕೊಂಡು ಪಾಕ್‌ ಕಾಶ್ಮೀರ ವಿಷಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚರ್ಚೆ ನಡೆಸುವಂತೆ ಮಾಡುವಲ್ಲೇನೋ ಸಫ‌ಲವಾಯಿತು. ಆದರೆ ಚರ್ಚೆಯಲ್ಲಿ ಅದು ನಿರೀಕ್ಷಿಸಿದಂಥ ಫ‌ಲಿತಾಂಶ ಸಿಕ್ಕಿಲ್ಲ. ಚೀನ ಹೊರತುಪಡಿಸಿ ಉಳಿದೆಲ್ಲ ದೇಶಗಳು ಕಾಶ್ಮೀರ ದ್ವಿಪಕ್ಷೀಯ ವಿಚಾರ ಎಂಬ ಭಾರತದ ನಿಲುವನ್ನೇ ಎತ್ತಿ ಹಿಡಿದಿವೆ. ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಪಾಕ್‌ ಮತ್ತೂಮ್ಮೆ ಏಕಾಂಗಿಯಾಗಿದೆ.

Advertisement

ವಿಶ್ವಸಂಸ್ಥೆಯಲ್ಲಿ ನಡೆದಿರುವುದು ಒಂದು ಅನೌಪಚಾರಿಕ ರಹಸ್ಯ ಮಾತುಕತೆ. ಇದು ವಿಶ್ವಸಂಸ್ಥೆಯ ಕಡತಗಳಲ್ಲೂ ದಾಖಲಾಗುವುದಿಲ್ಲ ಹಾಗೂ ವಿಶ್ವಸಂಸ್ಥೆಯಾಗಲಿ , ಭದ್ರತಾ ಮಂಡಳಿಯಲ್ಲಿರುವ ಯಾವ ದೇಶವಾಗಲಿ ಈ ಕುರಿತು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆದರೆ 1971ರ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರ ವಿಚಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೆ ಬಂತು ಎನ್ನುವುದು ನಮಗಾಗಿರುವ ಒಂದು ಹಿನ್ನಡೆ ಹೌದು. ಪಾಕಿಸ್ಥಾನ ಇದನ್ನೇ ಒಂದು ದೊಡ್ಡ ಗೆಲುವು ಎಂಬಂತೆ ಬಿಂಬಿಸಿಕೊಂಡು ಖುಷಿಪಡುತ್ತಿದೆ.

ಕಾಶ್ಮೀರ ವಿಚಾರ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವಕ್ಕೆ ಬರದಂತೆ ತಡೆಯಲು ಭಾರತ ಇನ್ನಷ್ಟು ಪ್ರಯತ್ನ ಮಾಡಬೇಕಿತ್ತು. ಆದರೆ ಆ.5ರಂದು 370ನೇ ವಿಧಿಯನ್ನು ರದ್ದುಪಡಿಸಿದ ವಿಚಾರವನ್ನು ಕೆಲವು ಆಯ್ದ ದೇಶಗಳಿಗೆ ತಿಳಿಸುವ ಮೂಲಕ ಪರೋಕ್ಷವಾಗಿ ಸರಕಾರವೇ ಕಾಶ್ಮೀರ ವಿಚಾರಕ್ಕೆ ಅಂತಾರಾಷ್ಟ್ರೀಯ ಆಯಾಮವನ್ನು ನೀಡಿತ್ತು. ಕಾಶ್ಮೀರ ನಮ್ಮ ಆಂತರಿಕ ವಿಚಾರ ಎಂದು ಪ್ರತಿಪಾದಿಸುತ್ತಿರುವಾಗ ಆ ರಾಜ್ಯಕ್ಕೆ ಸಂಬಂಧಿಸಿದಂತೆ ಇತರ ದೇಶಗಳಿಗೆ ತಿಳಿಸುವ ಅಗತ್ಯವೇನಿತ್ತು ?

ಪಾಕಿಸ್ಥಾನದ ನಿಜಬುದ್ಧಿ ತಿಳಿದಿರುವ ಜಗತ್ತಿನ ಯಾವುದೇ ದೇಶ ಅದರ ಮಾತನ್ನು ನಂಬುತ್ತಿಲ್ಲ. ಧಾರ್ಮಿಕ ನೆಲೆಯಲ್ಲಿ ಬೆಂಬಲ ಪಡೆಯುವ ಪ್ರಯತ್ನವೂ ಫ‌ಲ ನೀಡುತ್ತಿಲ್ಲ. ಅರಬ್‌ ದೇಶಗಳು ಕೂಡಾ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸದಿರಲು ತೀರ್ಮಾನಿಸಿವೆ ಹಾಗೂ ಹೆಚ್ಚಿನ ಮುಸ್ಲಿಂ ದೇಶಗಳು ಭಾರತದ ಬೆಂಬಲಕ್ಕೆ ನಿಂತಿವೆ. ಇದು ಪ್ರಧಾನಿ ಮೋದಿಯ ರಾಜತಾಂತ್ರಿಕ ಕೌಶ ಲಕ್ಕೆ ಸಂದಿರುವ ಗೆಲುವೇ ಸರಿ. ಚೀನಕ್ಕೆ ಕಾಶ್ಮೀರ ವಿಚಾರದಲ್ಲಿ ಪಾಕ್‌ಗೆ ಆಗಿರುವ ಹಿನ್ನಡೆಗಿಂತಲೂ ಲಡಾಖ್‌ನಲ್ಲಿ ತನ್ನ ಹಿತಾಸಕ್ತಿಗೆ ಅಪಾಯ ಎದುರಾದೀತು ಎಂಬ ಭೀತಿಯೇ ಪಾಕ್‌ ಬೆನ್ನಿಗೆ ನಿಲ್ಲಲು ಇರುವ ಮುಖ್ಯ ಕಾರಣ.

ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸಲು ಪಾಕಿಸ್ಥಾನ ನಡೆಸುತ್ತಿರುವ ಕುಟಿಲ ತಂತ್ರಗಳೆಲ್ಲ ಈಗ ವಿಶ್ವ ಸಮುದಾಯಕ್ಕೆ ಗೊತ್ತಾಗಿದೆ. ಇದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಲು ನಮ್ಮ ರಾಯಭಾರಿಗಳು ಮಾಡಿರುವ ಪ್ರಯತ್ನಗಳು ನಿಜಕ್ಕೂ ಅಭಿನಂದನೀಯ.

Advertisement

ಒಂದು ಕಾಲದಲ್ಲಿ ಪಾಕ್‌ನ ಪರಮಾಪ್ತ ಮಿತ್ರನಾಗಿದ್ದ ಅಮೆರಿಕ ಕೂಡಾ ಈಗ ಕಾಶ್ಮೀರ ವಿಚಾರದಲ್ಲಿ ವಿಶೇಷ ಆಸಕ್ತಿ ಹೊಂದಿಲ್ಲ. ಕೆಲ ದಿನಗಳ ಹಿಂದೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಚಿತಾವಣೆಯಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಕೊಡುಗೆ ನೀಡಿದ್ದರೂ ಈಗ ಅದು ನೇಪಥ್ಯಕ್ಕೆ ಸರಿದಾಗಿದೆ. ಭದ್ರತಾ ಮಂಡಳಿಯ ಸಭೆಯ ಮೊದಲು ಇಮ್ರಾನ್‌ ಖಾನ್‌, ಟ್ರಂಪ್‌ಗೆ ಫೋನ್‌ ಮಾಡಿ ನೆರವು ಕೇಳಿದ್ದರು. ಆದರೆ ಟ್ರಂಪ್‌ ನೀವು-ನಿವೇ ಬಗೆಹರಿಸಿಕೊಳ್ಳಿ ಎನ್ನುವ ಮೂಲಕ ದ್ವಿಪಕ್ಷೀತ ವಿಚಾರ ಎಂಬ ಭಾರತದ ನಿಲುವನ್ನು ಬೆಂಬಲಿಸಿದ್ದಾರೆ. ಫ್ರಾನ್ಸ್‌, ರಷ್ಯಾ, ಜರ್ಮನಿ ಸೇರಿ ಎಲ್ಲಾ ಪ್ರಮುಖ ದೇಶಗಳು ಪಾಕ್‌ ಬೇಡಿಕೆಯನ್ನು ನಿರಾಕರಿಸಿವೆ. ಅದರಲ್ಲೂ ರಷ್ಯಾ ಬಹಿರಂಗವಾಗಿಯೇ ಭಾರತದ ನಿಲುವು ಸರಿ ಎನ್ನುವುದನ್ನು ಒಪ್ಪಿಕೊಂಡಿದೆ.

370 ವಿಧಿಯನ್ನು ರದುಉಪಡಿಸಿದ ಬಳಿಕ ಕಾಶ್ಮೀರದಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ ಎನ್ನುವುದು ನಿಜ. ಈಗ ಅಲ್ಲಿ ನೆಲೆಸಿರುವುದು ಭದ್ರತಾ ಪಡೆಗಳ ಕಣ್ಗಾವಿಲನ ಶಾಂತಿ. ಯಾವ ರೀತಿಯಲ್ಲಾದರೂ ಕಾಶ್ಮೀರದ ಶಾಂತಿಯನ್ನು ಕದಡಲು ಪಾಕ್‌ ಪ್ರಯತ್ನಿಸುವುದು ನಿಶ್ಚಿತ. ವಿಧಿ ರದ್ದಾದ ಪರಿಣಾಮವಾಗಿ ಜನರು ದಂಗೆಯೆದ್ದು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ವಿಶ್ವ ಸಮುದಾಯದ ಎದುರು ತೋರಿಸಕೊಡಲು ಅದು ಯಾವ ಹೀನ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ. ಇದಕ್ಕೆ ಅವಕಾಶ ಸಿಗದಂತೆ ಮಾಡುವುದರಲ್ಲಿ ಭಾರತದ ಯಶಸ್ಸುವ ಅಡಗಿದೆ. ಯಾವ ಕಾರಣಕ್ಕೂ ಕಣಿವೆಯಲ್ಲಿ ಹಿಂಸಾಚಾರ ತಡೆಯದಂತೆ ನೋಡಿಕೊಳ್ಳುವುದು ಹಾಗೂ ಇದೇ ವೇಳೆ ದೈನಂದಿನ ಜನಜೀವನವನ್ನು ಯಥಾಸ್ಥಿತಿಗೆ ತರುವುದು ಈ ಎರಡು ವಿಚಾರವನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ.

Advertisement

Udayavani is now on Telegram. Click here to join our channel and stay updated with the latest news.

Next