Advertisement

ಅಂಬಿಗ ನಾ ನಿನ್ನ ನಂಬಿದೆ..

06:08 PM Dec 12, 2021 | Team Udayavani |

ಬೆಂಗ್ರೆ: ದಡ ತಲುಪಿದ ಮೇಲೆ ಅಂಬಿಗನ ಹಂಗೇಕೆ? ಎಂದು ಸಾಮಾನ್ಯವಾಗಿ ಕೇಳಬಹುದು. ಆದರೆ ಈ ಅಂಬಿಗರನ್ನು ಹಾಗೆ ಹೇಳು ವಂತಿಲ್ಲ. ಈ ಅಂಬಿಗರ ಪರಂಪರೆ 30 ವರ್ಷಗಳಿಂದ ನಿತ್ಯವೂ ನೂರಾರು ಮಂದಿ ಯನ್ನು ದಡ ತಲುಪಿಸುತ್ತಲೇ ಇದೆ.

Advertisement

ಕಡಲ ತಡಿಯ ಕಸಬಾ ಬೆಂಗ್ರೆ ಹಾಗೂ ಬೆಂಗ್ರೆ ಪರ್ಯಾಯ ದ್ವೀಪ ಪ್ರದೇಶದ ನೂರಾರು ಕುಟುಂಬಗಳಿಗೆ ಮಂಗಳೂರು ನಗರ ಸಂಪರ್ಕಿಸಲು ಲಭ್ಯವಿರುವ ಸಂಪರ್ಕ ಸೇವೆಯೆಂದರೆ ಕಡವು (ಯಂತ್ರ ಚಾಲಿತ ನಾವೆ) ಸೇವೆ. ಮೂವತ್ತು ವರ್ಷ ಗಳಿಂದ ದ್ವೀಪದ ಜನರ ಬಂಧುವಾಗಿದೆ.

ನಗರದ ಮೀನುಗಾರಿಕೆ ಬಂದರು ವ್ಯಾಪ್ತಿಯಿಂದ ಬೆಂಗ್ರೆ, ಕಸಬಾ ಬೆಂಗ್ರೆ ಭಾಗಕ್ಕೆ ಫಲ್ಗುಣಿ ನದಿಯಲ್ಲಿ 3 ಪ್ರತ್ಯೇಕ ಕಡವು (ಫೆರಿ)ಸೇವೆಯಿದೆ. ಇವೇ ನಗರಕ್ಕೂ ಪರ್ಯಾಯ ದ್ವೀಪಕ್ಕೂ ಜೀವನಾಡಿಯಾಗಿರುವಂಥವು. ವಿಶೇಷ
ವೆಂದರೆ, ಫೆರಿಯ ಉಳಿತಾಯ ಆದಾಯ ವನ್ನು ಪರ್ಯಾಯ ದ್ವೀಪದ ಜನರ ಅಭಿವೃದ್ಧಿಗೇ ಬಳಸಲಾಗುತ್ತಿದೆ.

ಕಸಬಾ ಬೆಂಗ್ರೆ ಸೇವೆಗೆ 30 ವರ್ಷ
ದ್ವೀಪ ಪ್ರದೇಶದವರು ತಮ್ಮ ನಿತ್ಯದ ಜೀವನಾವಶ್ಯಕ ವಸ್ತುಗಳಿಗೆ, ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಹಿಂದೆ ಸುಮಾರು 15 ಅಂಬಿಗರ ಹಾಯಿದೋಣಿಗಳನ್ನು ಆಶ್ರಯಿಸಿದ್ದರು. 1975, 1978ರಲ್ಲಿ ಪ್ರಯಾಣಿಕರ ದೋಣಿ ದುರಂತದಿಂದ 6 ಮಂದಿ ಮೃತಪಟ್ಟಿದ್ದರು. ಕ್ರಮೇಣ ಈ ಕಡವು ಸೇವೆ ಬಂದಿತು. ತುರ್ತು ಅಗತ್ಯಗಳಿಗೆ ಅನುಕೂಲವಾಗಲೆಂದು 1985ರಲ್ಲಿ ಖಾಸಗಿ ಯವರು ಒಳನಾಡು ಜಲ ಸಾರಿಗೆಯವ ರಿಂದ ಪರವಾನಿಗೆ ಪಡೆದು ಯಂತ್ರಚಾಲಿತ ನಾವೆಯನ್ನು 5 ವರ್ಷ ನಡೆಸಿದ್ದರು.

ಬಳಿಕ ಮದ್ರಸತ್ತುಲ್‌ ದೀನಿಯಾ ಫೆರಿ ಸರ್ವಿಸ್‌(ಬಿಎಂಡಿ)ನ ಗುತ್ತಿಗೆ ಪಡೆಯಲು ಮುಂದಾಯಿತು. ಅಂದು ಬೆಂಗ್ರೆ ಮಹಾಜನ ಸಭಾ ಅಧ್ಯಕ್ಷರಾಗಿದ್ದ ಧನಂಜಯ ಪುತ್ರನ್‌ ಮಾರ್ಗದರ್ಶನದಲ್ಲಿ ಜಮಾತ್‌ನ ಅಧ್ಯಕ್ಷರಾಗಿದ್ದ ದಿ|ಹಾಜಿ ಹಸನಬ್ಬರ ಮುಂದಾಳತ್ವದಲ್ಲಿ ಅಂದಿನ ಶಾಸಕರಾಗಿದ್ದ ಬಿ.ಎಂ.ಇದಿನಬ್ಬರ ಸಹಕಾರದಿಂದ 1991ರಲ್ಲಿ ಬಿಎಂಡಿ ಗುತ್ತಿಗೆ ಪಡೆಯಿತು. ಇಲ್ಲಿವರೆಗೂ ಸೇವೆ ಚಾಲ್ತಿಯಲ್ಲಿದೆ. ಆದರೆ, 1992ರಲ್ಲಿ ಭೀಕರ ದುರಂತ ಸಂಭವಿಸಿ 12 ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಾತ್ರ ಮಂಗಳೂರಿನ ಪಾಲಿಗೆ ಮರೆಯಲಾಗದ ಘಟನೆ.

Advertisement

ಪ್ರಾರಂಭದಲ್ಲಿ 50 ಪೈಸೆ ಇದ್ದ ದರ ಈಗ 8 ರೂ. ಆಗಿದೆ. ಪ್ರಸ್ತುತ ಇಲ್ಲಿ 4 ದೊಡ್ಡ ಯಂತ್ರಚಾಲಿತ ಬೋಟ್‌ಗಳಿವೆ. 25 ಸಿಬಂದಿಯಿದ್ದಾರೆ. ಇದುವರೆಗೆ ಈ ಪ್ರದೇಶದ ಸುಮಾರು 1, 500 ಮಂದಿ ವಿದ್ಯಾರ್ಥಿಗಳು ಉಚಿತ ಸೇವೆ ಪಡೆದಿದ್ದಾರೆ.

ಬೆಂಗರೆ ಕಡವಿಗೆ 35 ವರ್ಷ
ನೇತ್ರಾವತಿ ನದಿ ಫಲ್ಗುಣಿ ಹೊಳೆಯೊಡನೆ ಸೇರಿ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮದಲ್ಲಿ ಉದ್ಬವವಾದ ಮರಳು ದಿಣ್ಣೆಯ ಪರ್ಯಾಯ ದ್ವೀಪ ಬೆಂಗ್ರೆಯನ್ನು ಸಂಪರ್ಕಿಸುವ ಕಡವು (ಯಂತ್ರಚಾಲಿತ ನಾವೆ) ಸೇವೆಗೆ ಈಗ 35 ವರ್ಷ. ಮೊದಲು ಜನರು ಹಾಯಿದೋಣಿಗಳಲ್ಲಿ ಹೋಗಿ ಬರುತ್ತಿದ್ದರು. ಇದು ಅಪಾಯಕಾರಿ ಆಗಿತ್ತು. ಹೀಗಾಗಿ ಸುಗಮ ಜಲಸಾರಿಗೆಯ ಯಂತ್ರಚಾಲಿತ ನಾವೆಯನ್ನು ಆರಂಭಿಸಲು ಬೆಂಗ್ರೆ ಮಹಾಜನ ಸಭಾ ಚಿಂತನೆ ನಡೆಸಿತು.
ಸಭಾದ ಅಂದಿನ ಅಧ್ಯಕ್ಷ ಮಿಲಿಟ್ರಿ ಸದಾನಂದ ಕರ್ಕೇರ, ಪ್ರಧಾನ ಕಾರ್ಯದರ್ಶಿ ಧನಂಜಯ ಪುತ್ರನ್‌, ಸಮಾಜ ಸೇವಕರಾಗಿದ್ದ ಹರೀಶ್ಚಂದ್ರ ಬೆಂಗ್ರೆ, ತುಳುಕೇಸರಿ ಮೋಹನ್‌ ಬೆಂಗ್ರೆ ವೈಯಕ್ತಿಕ ಬಾಂಡ್‌ನ‌ ಮೇಲೆ ಭದ್ರತೆ ನೀಡಿ 2.28 ಲಕ್ಷ ರೂ. ವ್ಯಯಿಸಿ ಆರ್ಥಿಕ ಸಾಲ ಪಡೆದು ಕಡವು ಸೇವೆ ಆರಂಭಿಸಿದ್ದರು. ವೀರಭಾರತಿ ವ್ಯಾಯಾಮ ಶಾಲೆ, ಮಿತ್ತಮನೆ ಬೆಂಗ್ರೆ ಆರ್ಥಿಕ ಸಹಾಯ ನೀಡಿದ್ದರು. ಫೆರಿ ಸರ್ವಿಸ್‌ ಪ್ರಾರಂಭಿಸಲು ಸುಂದರ ಸಾಲ್ಯಾನ್‌ ಮತ್ತು ಮೆಸರ್ಸ್‌ ಮಹಾ ಮೈಸೂರು ಬೋಟು ಬಿಲ್ಡಿಂಗ್‌ ಯಾರ್ಡ್‌ನವರು ಯಂತ್ರಚಾಲಿತ ನಾಡದೋಣಿ ನೀಡಿ ಸಹಕರಿಸಿದ್ದರು. 1985ರ ಕರ್ನಾಟಕ ರಾಜ್ಯೋತ್ಸವ ದಿನದಂದು ಅಂದಿನ ಜಿಲ್ಲಾಧಿಕಾರಿ ಸುಧೀರ್‌ ಕೃಷ್ಣಯಾಂತ್ರಿಕ ಜಲಯಾನ ಉದ್ಘಾಟಿಸಿದ್ದರು. ಅಂದು ಟಿಕೆಟ್‌ ದರ 50 ಪೈಸೆ ಇದ್ದರೆ ಈಗ 10 ರೂ. ಆಗಿದೆ. ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ವ್ಯವಸ್ಥೆಯಿದೆ.

ಸುಲ್ತಾನ್‌ಬತ್ತೇರಿಯಿಂದ ಬೋಳೂರು; ಫೆರಿ ಸರ್ವಿಸ್‌
ಬೋಳೂರು ಸುಲ್ತಾನ್‌ಬತ್ತೇರಿ ಭಾಗದಿಂದ ಫಲ್ಗುಣಿ ನದಿ ದಾಟಿ ಬೋಳೂರು ಚರ್ಚ್‌ ವರೆಗೆ ತೆರಳಲು ಬೋಳೂರು ಮೊಗವೀರ ಫೆರಿ ಸರ್ವಿಸ್‌ ಸುಮಾರು 10 ವರ್ಷಗಳ ಹಿಂದೆ ಆರಂಭವಾಗಿತ್ತು. ಅತ್ತಿಂದಿತ್ತ 2 ಬೋಟ್‌ ಸೇವೆ ಇಲ್ಲಿಂದ ಲಭ್ಯವಿದೆ. 10 ರೂ. ದರವಿದೆ. ವಿಶೇಷವೆಂದರೆ ಇದರಲ್ಲಿ ಬಂದ ಸಂಪನ್ಮೂಲದಿಂದ 100 ಮಂದಿ ವೃದ್ದಾಪ್ಯ, ಅಂಗವಿಕಲರಿಗೆ ತಿಂಗಳಿಗೆ 500 ರೂ.ಗಳಂತೆ ಮಾಸಾಶನ ನೀಡಲಾಗುತ್ತಿದೆ. ಬೋಳೂರು ಮಹಾಸಭಾ ಇದರ ನೇತೃತ್ವ ವಹಿಸಿಕೊಂಡಿದೆ.

ಕಡವು ಸೇವೆ ಸಮಯ ಉಳಿತಾಯ
ಕಡವು ಸೇವೆ ಇಲ್ಲದಿದ್ದರೆ ದ್ವೀಪ ನಿವಾಸಿಗಳು ತಣ್ಣೀರು ಬಾವಿ ಮೂಲಕ ನಗರಕ್ಕೆ ಅರ್ಧ ಗಂಟೆಗೂ ಹೆಚ್ಚು ಸಮಯ ಮತ್ತು ಹೆಚ್ಚಿನ ಹಣವನ್ನು ವ್ಯಯಿಸಿ ಸೀಮಿತ ಬಸ್‌ಗಳನ್ನು ಅವಲಂಬಿಸಿ ಬರಬೇಕು. ಕಡವು ಸೇವೆಯಿಂದ ಕಡಿಮೆ ಅವಧಿಯಲ್ಲಿ ಮತ್ತು ಮಿತವ್ಯಯದಲ್ಲಿ ನಗರಕ್ಕೆ ಬರಬಹುದಾಗಿದೆ.

ಡೀಸೆಲ್‌ ಸಬ್ಸಿಡಿ ದೊರೆಯಲಿ
ಮಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಪರ್ಯಾಯ ದ್ವೀಪಕ್ಕೆ ಕಡವು ಸೇವೆಯನ್ನು ಸ್ಥಳೀಯ ಮೂರು ಸಂಸ್ಥೆ ಗಳು ಒದಗಿಸಿವೆ. ಹೀಗಾಗಿ ಈ ಸಂಸ್ಥೆ ಗಳಿಗೆ ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ದೀರ್ಘಾವಧಿಗೆ ಗುತ್ತಿಗೆ ನೀಡುವುದು, ಡೀಸೆಲ್‌ ಸಬ್ಸಿಡಿಯನ್ನು ವಿಶೇಷ ಅನುದಾನದಲ್ಲಿ ಒದಗಿಸಿದರೆ ಇನ್ನಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಸ್ಪಂದಿಸುವ ನಿರೀಕ್ಷೆಯಿದೆ.
-ಧನಂಜಯ ಪುತ್ರನ್‌ ಬೆಂಗ್ರೆ, ಮಾಜಿ ಅಧ್ಯಕ್ಷರು, ಬೆಂಗ್ರೆ ಮಹಾಜನ ಸಭಾ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next