Advertisement

ಪಂಜಾಬ್‌ಗೆ ಸೋಲಿನ ಪಂಚ್‌ ಕೊಟ್ಟ ಕರ್ನಾಟಕ

09:54 AM Nov 25, 2019 | Team Udayavani |

ಸೂರತ್‌: ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದ ಸೂಪರ್‌ ಲೀಗ್‌ನಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ ಹಾಲಿ ಚಾಂಪಿಯನ್‌ ಕರ್ನಾಟಕ ರವಿವಾರದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ 7 ವಿಕೆಟ್‌ಗಳ ಸೋಲುಣಿಸಿದೆ. ಇದರಿಂದ ಸೆಮಿಫೈನಲ್‌ ಪ್ರವೇಶವನ್ನು ಬಹುತೇಕ ಖಾತ್ರಿಗೊಳಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ (ಅಜೇಯ 84 ರನ್‌, 48 ಎಸೆತ, 7 ಬೌಂಡರಿ, 4 ಸಿಕ್ಸರ್‌) ಅವರ ಭರ್ಜರಿ ಬ್ಯಾಟಿಂಗ್‌ನಿಂದ 18 ಓವರ್‌ಗಳಲ್ಲಿ 3 ವಿಕೆಟ್‌ಗೆ 167 ರನ್‌ ಗಳಿಸಿ ಜಯ ದಾಖಲಿಸಿತು. ಇದರೊಂದಿಗೆ ಕರ್ನಾಟಕ ತಂಡ ಲೀಗ್‌, ಸೂಪರ್‌ ಲೀಗ್‌ ಸೇರಿದಂತೆ ಸತತ 7ನೇ ಗೆಲುವು ಸಾಧಿಸಿತು. ಸೋಮವಾರ ನಡೆಯುವ ಸೂಪರ್‌ ಲೀಗ್‌ ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬಯಿ ತಂಡವನ್ನು ಎದುರಿಸಲಿದೆ.

ರಾಹುಲ್‌ ಅಜೇಯ ಆಟ
ಚೇಸಿಂಗ್‌ ವೇಳೆ ಇನ್‌ಫಾರ್ಮ್ ಆರಂಭಕಾರ ದೇವದತ್ತ ಪಡಿಕ್ಕಲ್‌ ಕೇವಲ 2 ರನ್‌ ಮಾಡಿ ಔಟಾದಾಗ ಕರ್ನಾಟಕ ಆಘಾತ ಅನುಭವಿಸಿತು. ಆಗ ಸ್ಕೋರ್‌ 33 ರನ್‌ ಆಗಿತ್ತು. ಆದರೆ ಒಂದೆಡೆ ಗಟ್ಟಿಯಾಗಿ ಕ್ರೀಸಿಗೆ ಅಂಟಿಕೊಂಡ ರಾಹುಲ್‌ ಪಂಜಾಬ್‌ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಸಾಗಿದರು. ಕರ್ನಾಟಕದ ಜಯಭೇರಿ ವೇಳೆ ರಾಹುಲ್‌ ಅಜೇಯ 84 ರನ್‌ ಮಾಡಿದ್ದರು. 48 ಎಸೆತಗಳ ಈ ಆಕರ್ಷಕ ಇನ್ನಿಂಗ್ಸ್‌ ವೇಳೆ 7 ಬೌಂಡರಿ, 4 ಸಿಕ್ಸರ್‌ ಸಿಡಿಯಲ್ಪಟ್ಟಿತು.

ರೋಹನ್‌ ಕದಮ್‌ (23), ನಾಯಕ ಮನೀಷ್‌ ಪಾಂಡೆ (33 ರನ್‌, 29 ಎಸೆತ, 3 ಸಿಕ್ಸರ್‌) ಮತ್ತು ಕರುಣ್‌ ನಾಯರ್‌ (ಅಜೇಯ 23 ರನ್‌, 11 ಎಸೆತ, 2 ಬೌಂಡರಿ, 2 ಸಿಕ್ಸರ್‌) ರಾಹುಲ್‌ಗೆ ಉತ್ತಮ ಬೆಂಬಲ ನೀಡಿದರು.

ರೋನಿತ್‌ ಮಾರಕ ದಾಳಿ
ಪಂಜಾಬ್‌ ಪರ ಮನ್‌ದೀಪ್‌ ಸಿಂಗ್‌ (76 ರನ್‌, 50 ಎಸೆತ, 9 ಬೌಂಡರಿ, 2 ಸಿಕ್ಸರ್‌) ಹಾಗೂ ಗುರುಕೀರತ್‌ ಸಿಂಗ್‌ (44 ರನ್‌, 32 ಎಸೆತ, 2 ಬೌಂಡರಿ, 3 ಸಿಕ್ಸರ್‌) ದಿಟ್ಟ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಕ್ಲಿಕ್‌ ಆಗಲಿಲ್ಲ. ಪಂಜಾಬ್‌ಗ ಕಡಿವಾಣ ಹಾಕುವಲ್ಲಿ ರೋನಿತ್‌ ಮೋರೆ (27ಕ್ಕೆ 4) ಪಾತ್ರ ಮಹತ್ವದ್ದಾಗಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌
ಪಂಜಾಬ್‌: 20 ಓವರ್‌ಗಳಲ್ಲಿ 6 ವಿಕೆಟಿಗೆ 163 (ಮನ್‌ದೀಪ್‌ 76, ಗುರುಕೀರತ್‌ 44, ಮೋರೆ 27ಕ್ಕೆ 4). ಕರ್ನಾಟಕ: 18 ಓವರ್‌ಗಳಲ್ಲಿ 3 ವಿಕೆಟಿಗೆ 167 (ರಾಹುಲ್‌ ಅಜೇಯ 84, ಪಾಂಡೆ 33, ಕದಮ್‌ 23, ನಾಯರ್‌ ಅಜೇಯ 23).

Advertisement

Udayavani is now on Telegram. Click here to join our channel and stay updated with the latest news.

Next