Advertisement

ಕರ್ನಾಟಕ ಸಂಘ ಡೊಂಬಿವಲಿ: ಪುರಂದರ ದಾಸರ ಆರಾಧನೆ, ಭಜನ ಸ್ಪರ್ಧೆ

12:30 AM Mar 07, 2019 | |

ಮುಂಬಯಿ: ಡೊಂಬಿವಲಿ ಕರ್ನಾಟಕ ಸಂಘವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ವರ್ಷಪೂರ್ತಿ ವೈವಿಧ್ಯಮಯ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಅಭಿ ಮಾನದ ವಿಷಯವಾಗಿದೆ. ಶೈಕ್ಷಣಿಕ, ಸಾಹಿತ್ಯಕ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಸಂಘವು ಸುವರ್ಣ ವರ್ಷಗಳನ್ನು ಪೂರೈಸಿ ಮುನ್ನುಗ್ಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಸಂಘದ ಸುವರ್ಣ ಮಹೋತ್ಸವವು ಇತ್ತೀಚೆಗೆ 15 ಯಶಸ್ವಿ ಸರಣಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಘವು ಪ್ರತಿ ವರ್ಷ ಆತ್ಮಾನಂದ ನೀಡುವ ಭಜನ ಕಾರ್ಯಕ್ರಮಗಳನ್ನು ನೀಡಿ ಕಲ್ಮಶ ತುಂಬಿದ ಮನಸ್ಸನ್ನು ಶುದ್ಧಿಗೊಳಿಸುತ್ತಿದೆ. ಡೊಂಬಿವಲಿ ಪರಿಸರದಲ್ಲಿ ಜಾತಿ, ಮತ, ಭೇದ-ಭಾವವನ್ನು ತೊರೆದು ಎಲ್ಲರೊಳು ಒಂದಾಗಿ ಕನ್ನಡ ನಾಡು-ನುಡಿಯ ಪರ ಕೆಲಸಗಳನ್ನು ಮಾಡುತ್ತಿರುವ ಸಂಘದ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕಲ್ಲಡ್ಕ ಕರುಣಾಕರ ಶೆಟ್ಟಿ ನುಡಿದರು.

Advertisement

ಮಾ. 3ರಂದು ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ನಡೆದ ಕರ್ನಾಟಕ ಸಂಘ ಡೊಂಬಿವಲಿ ಇದರ ಲಲಿತಕಲಾ ವಿಭಾಗದ ಪುರಂದರ ದಾಸರ ಆರಾಧನಾ ಮಹೋತ್ಸವ ಹಾಗೂ ಪುರಂದರ ದಾಸರ ಭಜನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಭಜನೆಯಿಂದ ವಿಭಜನೆಯಿಲ್ಲ ಎಂಬ ಮಾತಿನಂತೆ, ಪರಿಶುದ್ಧವಾದ ಪ್ರಾರ್ಥನಾ ಭಜನೆಯನ್ನು ಮಾಡಿದಾಗ ದೇವರ ಕೃಪಾಕಟಾಕ್ಷ ನಮ್ಮ ಮೇಲಾಗುವುದರಲ್ಲಿ ಅನುಮಾನವೇ ಇಲ್ಲ. ಸಂಘದ ಆರಾಧ್ಯ ದೇವರಾದ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಇಂತಹ ಕಾರ್ಯಕ್ರಮಗಳಿಂದ ಸಂಘದ ಕೀರ್ತಿ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.

ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡು-ನುಡಿಯ ಸೇವೆಯೊಂದಿಗೆ ಕನ್ನಡತನವನ್ನು ಉಳಿಸಿ-ಬೆಳೆಸುವುದರೊಂದಿಗೆ ಶಿಕ್ಷಣ, ಧಾರ್ಮಿಕ, ಸಾಹಿತ್ಯ, ವೈದ್ಯಕೀಯ ಸೇವೆಯನ್ನು ಮಾಡುವುದರೊಂದಿಗೆ ಪ್ರತಿ  ತಿಂಗಳು ಕನ್ನಡಿಗರಿಗಾಗಿ ವೇದಿಕೆಯನ್ನು ಕಲ್ಪಿಸಿ ಅವರ ಪ್ರತಿಭೆಗಳನ್ನು ಗುರುತಿಸುವಂತಹ ಕಾರ್ಯ ಮಾಡುತ್ತಿದ್ದೇವೆ. ನಾವು ಮಂಜುನಾಥ ಶಿಕ್ಷಣ ಸಂಸ್ಥೆಯನ್ನು ದೇವಾಲಯದಂತೆ ಕಾಣುತ್ತಿದ್ದು, ಇಂದು ಭಜನೆಯ ಮೂಲಕ ದೇವಾಲಯ ಪಾವನವಾಗಿದೆ. ಇಂದಿನ ಸ್ಪರ್ಧೆಯಲ್ಲಿ 13 ತಂಡಗಳು ಭಾಗವಹಿಸಿ ಕರ್ನಾಟಕ ಸಂಘಕ್ಕೆ ಸ್ಪೂರ್ತಿ ನೀಡಿವೆ. ನಿಮ್ಮ ಸ್ಪೂರ್ತಿಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಸಂಘವು ನೀಡಲಿದೆ ಎಂದರು.

ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಪ್ರತಿಯೊಂದು ತಂಡಗಳು ಉತ್ತಮ ಪ್ರದರ್ಶನವನ್ನು ನೀಡಿವೆ. ಈ ಸ್ಪೂರ್ತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಸಂಘವು ಮಾಡಲಿದೆ. ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಶ್ರೀ ಸತ್ಯಧ್ಯಾನ ವಿದ್ಯಾಪೀಠ ಮುಲುಂಡ್‌ ಇದರ ಸಂಶೋಧಕ ಪಂಡಿತ್‌ ಋಷಿಕೇಶ್‌ ಆಚಾರ್ಯ ಕದರಿ ಇವರು, ಕರ್ನಾಟಕ ಸಂಗೀತವನ್ನು ಹುಟ್ಟು ಹಾಕಿ, ಸಂಗೀತದ ಬಗ್ಗೆ ವ್ಯಾಮೋಹ ಹಾಗೂ ತನ್ನ ಕೃತಿಗಳ ಮೂಲಕ ಜನ ಸಾಮಾನ್ಯರಿಗೆ ಮನಮುಟ್ಟುವಂತೆ  ಉಪದೇಶ ನೀಡಿದವರು ಪುರಂದರ ದಾಸರು. ದೇವರ ಮೇಲೆ ಭಕ್ತಿ ಇಡು, ದುರ್ಜನರ ಸಂಗ ಬಿಡು, ಅಹಂಕಾರವನ್ನು ತ್ಯಜಿಸಲು ತನ್ನ ಕೃತಿಗಳ ಮೂಲಕ ತಿಳಿಸಿದ್ದಾರೆ. ಭಕ್ತಸಾಗರ, ಜನಸಾಮಾನ್ಯರನ್ನು ಸುಧಾರಿಸುವಲ್ಲಿ ಪುರಂದಾಸರ ಪ್ರಯತ್ನ ವಿಶೇಷವಾಗಿದೆ. ದೇವರನ್ನು ಅನ್ಯೋನ್ಯತೆಯಿಂದ ಪ್ರೀತಿಸಿ, ಸಂಸಾರವೆಂಬ ಭವರೋಗವನ್ನು ಪರಿಹಾರ ಮಾಡಿ, ಧರ್ಮದ, ಜ್ಞಾನದ, ಭಕ್ತಿಯ ಮಾರ್ಗವನ್ನು ತೋರಿಸಿದವರು ದಾಸರು. ಅಂತಹ ದಾಸ ಶ್ರೇಷ್ಟರ ಆರಾಧನೆಯನ್ನು ಕಳೆದ ಐವತ್ತೆರಡು ವರ್ಷಗಳಿಂದ ಕರ್ನಾಟಕ ಸಂಘ ಡೊಂಬಿವಲಿ ಮಾಡುತ್ತಿರುವುದು ಅಭಿನಂದನೀಯ. ದಾಸರ ನಾಮದಿಂದ ಮನೋಲ್ಲಾಸದೊಂದಿಗೆ ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ ಎಂದರು.

Advertisement

ಪ್ರಾರಂಭದಲ್ಲಿ  ಸಂಘದ ಕಾರ್ಯಾ ಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಇವರು ದೀಪಪ್ರಜ್ವಲಿಸಿ ಭಜನ ಸ್ಪರ್ಧೆಗೆ ಚಾಲನೆ ನೀಡಿದರು. ಕರ್ನಾಟಕ ಸಂಘದ ಮಹಿಳಾ ವಿಭಾಗದ ಭಜನೆಯೊಂದಿಗೆ ಸ್ಪರ್ಧೆಯು ಪ್ರಾರಂಭಗೊಂಡಿತು. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ, ಉಳಿದ ಹತ್ತು ತಂಡಗಳಿಗೆ ಲಲಿತಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಆರ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ತಲಾ ಒಂದೊಂದು ಸಾವಿರ ರೂ. ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ತೀರ್ಪುಗಾರರಾಗಿ ಪದ್ಮನಾಭ ಭಟ್‌ ಕಾರ್ಕಳ, ನಿತ್ಯಪ್ರಕಾಶ್‌ ಶೆಟ್ಟಿ, ವಸಂತಿ ಕುಲಕರ್ಣಿ ಸಹಕರಿಸಿದರು.

ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಮೇಶ್‌ ಕಾಖಂಡಕಿ ಅತಿಥಿಗಳನ್ನು ಪರಿಚಯಿಸಿದರು. ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ, ಕಾರ್ಯಾಧ್ಯಕ್ಷ ಸುಕುಮಾನ್‌ ಎನ್‌. ಶೆಟ್ಟಿ, ಮುಖ್ಯ ಅತಿಥಿ ಕಲ್ಲಡ್ಕ ಕರುಣಾಕರ ಶೆಟ್ಟಿ, ವಿಶೇಷ ಉಪನ್ಯಾಸಕ ಋಷಿಕೇಶ್‌ ಆಚಾರ್ಯ ಕದರಿ, ಉಪಾಧ್ಯಕ್ಷ ಡಾ| ದಿಲೀಪ್‌ ಕೋಪರ್ಡೆ, ಪ್ರಭಾಕರ ಶೆಟ್ಟಿ, ಗೌರವ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಲೋಕನಾಥ ಶೆಟ್ಟಿ, ರಮೇಶ್‌ ಕಾಖಂಡಕಿ, ವಸಂತ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಸಂಘ ಡೊಂಬಿವಲಿ ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ಕ್ರಾಂತಿಯನ್ನು ಮಾಡಿದೆ. ಅಲ್ಲದೆ ಸಾಹಿತ್ಯ, ಕ್ರೀಡೆ, ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವ ಸಂಸ್ಥೆಯು ಈಗಾಗಲೇ ನಾಡು-ಹೊರನಾಡಿನಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಕಳೆದ 3 ವರ್ಷಗಳಿಂದ ಲಲಿತಕಲಾ ವಿಭಾಗವು ಪುರಂದರ ದಾಸರ ಆರಾಧನೆಯನ್ನು ಮಾಡಿಕೊಂಡು ಬಂದಿದೆ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಬಹುಮಾನ ಗಳಿಸುವುದು ಅಲ್ಲ. ಸಂಘವು ಈಗಾಗಲೇ ಡೊಂಬಿವಲಿ ಪರಿಸರದ ತುಳು-ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವುದರೊಂದಿಗೆ ಎಲ್ಲರ ಗಮನ ಸೆಳೆದಿರುವುದು ಅಭಿನಂದನೀಯವಾಗಿದೆ.
– ಸುಕುಮಾರ್‌ ಎನ್‌. ಶೆಟ್ಟಿ.
  ಕಾರ್ಯಾಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next