Advertisement

ಮುಖವೀಣೆ ಆಂಜಿನಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

04:29 PM Oct 31, 2022 | Team Udayavani |

ಚಿಕ್ಕಬಳ್ಳಾಪುರ: ಆಧುನಿಕತೆ ನಡುವೆ ದೇಶಿಯ ಕಲೆ, ಸಂಸ್ಕೃತಿ ನಶಿಸುತ್ತಿದೆ ಎಂಬ ಅಪವಾದದ ಮಧ್ಯೆಯೂ ಮುಖವೀಣೆ ಕಲೆ ಆರಾಧಿಸುವ ಆಂಜಿನಪ್ಪ ಸತ್ಪಾಡಿ ಅವರು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

Advertisement

ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕದಾಳವಾಟ ಗ್ರಾಮದ ಮುಖವೀಣೆ ಕಲಾವಿದ ಆಂಜಿನಪ್ಪ ಸತ್ಪಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗವಿಗುಂಟನಹಳ್ಳಿ ಗ್ರಾಮದಲ್ಲಿ ನೆಲೆಸಿದ್ದಾರೆ. ತಿಮ್ಮಯ್ಯ, ತಿಮ್ಮಕ್ಕ ದಂಪತಿಯ ಪುತ್ರರಾದ ಆಂಜಿನಪ್ಪ ಸತ್ಪಾಡಿ, ಕೇವಲ 14 ವರ್ಷದಲ್ಲೇ ತಮ್ಮ ತಂದೆ, ತಾತ ರೂಢಿಸಿಕೊಂಡು ಬಂದಿದ್ದ ಮುಖವೀಣೆ ಕಲೆ ಕರಗತ ಮಾಡಿಕೊಂಡು, ಅಖಂಡ ಕೋಲಾರ ಜಿಲ್ಲೆ ಸೇರಿ ರಾಜ್ಯದ ಉಡುಪಿ, ಧರ್ಮಸ್ಥಳ, ನೆರೆಯ ತಮಿಳುನಾಡು, ಮಹಾರಾಷ್ಟ್ರ, ಕೇರಳ ಇನ್ನಿತರೆ ರಾಜ್ಯಗಳಲ್ಲಿ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ನಟ ಡಾ.ರಾಜಕುಮಾರ್‌, ತೆಲುಗು ನಟ ಬಾಲಕೃಷ್ಣ ಅವರಿಂದ ಗೌರವ ಸ್ವೀಕರಿಸಿದ್ದಾರೆ.

ಅಪರೂಪದ ಪ್ರತಿಭೆ: ಮುಖವೇಣಿ ಆಂಜನಪ್ಪ ಅವರು ಕೇಳಿಕೆ ಬಯಲಾಟಗಳಲ್ಲಿ ತಮ್ಮ ತಂದೆ ನುಡಿಸುತ್ತಿದ್ದ ಮುಖವೇಣಿಯ ಫಲಕುಗಳಿಗೆ ಮಾರಿಹೋದವರು. ಶಾಸ್ತ್ರ ಬದ್ಧ ಕಲಿಕೆಗಳನ್ನೆಲ್ಲ ಸುಳ್ಳಾಗಿಸುವಂತೆ ಅವರಿಗೆ ಅವರೇ ಗುರುಗಳಾಗಿ ಮುಖವೇಣಿ ಕಲೆ ವಶೀಕರಿಸಿಕೊಂಡಿದ್ದಾರೆ. ಇವರ ವಾದನಕ್ಕೆ ನೂರಾರು ಮಂದಿ ತಲೆ ದೂಗಿದ್ದಾರೆ. ಜಾತ್ರೆ, ಸಮಾರಂಭ, ಶಾಲಾ-ಕಾಲೇಜುಗಳಲ್ಲಿ ನಿರಂತರ 2 ಗಂಟೆ ಮುಖವೀಣೆ ಉಸಿರಾಗಿಸಿಕೊಂಡು, ಬದುಕುವ ಅಪರೂಪದ ಪ್ರತಿಭೆ ಇವರಲ್ಲಿ ಅಡಗಿದೆ. ಶ್ರುತಿ ವಾದ್ಯ, ಮುಖವೇಣಿಗಳನ್ನು ಮುಪ್ಪುರಿಗೊಳಿಸಿ ನುಡಿಸಬಲ್ಲದಲ್ಲದೆ, ಮೂಗಿನ ಮೂಲಕ ನೀರ ಝರಿ, ಉಸಿರಿನ ಮೂಲಕ ನಾದ ಝರಿ ಹರಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವ, ಬಿಸ್ಮಿಲ್ಲಾ ಖಾನ್‌ ಶಹನಾಯಿ ವಾದವನ್ನು ನೆನಪಿಸುವ ಮುಖವೀಣೆ ಮಾಂತ್ರಿಕನಿಗೆ ಅನೇಕ ಪುರಸ್ಕಾರಗಳು ದೊರೆತಿವೆ.

ಕೇವಲ 2ನೇ ತರಗತಿ ಓದಿದರೂ ಕಲೆಯಲ್ಲಿ ಮಾತ್ರ ತಮ್ಮದೇ ವಿಶ್ವ ವಿದ್ಯಾಲಯ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಕುರಿ ಕಾಯುವ ಇವರು, ಮುಗ್ಧತೆ, ಸಜ್ಜನಿಕೆ ಮೌಲ್ಯ ಎಂಬಂತೆ ಬದುಕುತ್ತಿದ್ದಾರೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಸಂದಿದೆ. ಸಿರಿಗಂಧ ಧಾರವಾಹಿ ಮುಖವೇಣಿಯ ಪರಿಮಳವನ್ನು ನಾಡಿಗೆ ಪರಿಚಯಿಸಿದೆ.

ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ: ಬಯಲಾಟಗಳೇ ಕಾಣೆ ಆಗುತ್ತಿರುವ ಈ ಕಾಲದಲ್ಲಿ ಮುಖವೇಣಿಯಂತಹ ಅಪರೂಪದ ವಾದ್ಯ ಪರಂಪರೆಯನ್ನು ಮುಂದುವರಿಸುತ್ತಿರುವ ಅದ್ಭುತ ಕಲಾವಿದನನ್ನು ಅನೇಕ ಗಣ್ಯರು ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. 250 ರೂ.ನಿಂದ ಮಾಶಾಸನ ಪಡೆಯುತ್ತಿರುವ ಮುಖವೀಣೆ ಕಲಾವಿದ ಆಂಜಿನಪ್ಪ ಸತ್ಪಾಡಿಗೆ 2 ಸಾವಿರ ರೂ. ಮಾಶಾಸನ ಹೊರತುಪಡಿಸಿ, ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. 4 ಎಕರೆ ಜಮೀನಿನಲ್ಲಿ ಕೇವಲ ಉಳಿದುಕೊಂಡಿರುವುದು 2 ಎಕರೆ 7 ಗುಂಟೆ ಮಾತ್ರ. ಮಾಜಿ ಸಿಎಂ ಸಿದ್ದರಾಮಯ್ಯ, ಹಿಂದೆ ಸಚಿವರಾಗಿದ್ದ ಉಮಾಶ್ರೀ 3 ಲಕ್ಷ ರೂ. ನೆರವು ನೀಡಿದ್ದರು. ಅದರ ಜೊತೆಗೆ 2 ಲಕ್ಷ ರೂ. ಕ್ರೋಡೀಕರಿಸಿ ಮನೆ ನಿರ್ಮಿಸಿಕೊಂಡಿದ್ದಾರೆ. ಅನೇಕ ಗಣ್ಯರ ಪ್ರೀತಿಗೆ ಪಾತ್ರರಾಗಿರುವ ಮುಖವೀಣೆ ಕಲಾವಿದ ಆಂಜಿನಪ್ಪ ಸತ್ಪಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದು, ಜಿಲ್ಲೆಯ ಸಮಸ್ತ ಜನರು, ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಇದು ಕಲಾವಿದರಿಗೆ ಸಂದ ಗೌರವ. 20 ವರ್ಷ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ, ಮಾಜಿ ಸಿಎಂ ಸಿದ್ದರಾಮಯ್ಯ ಸನ್ಮಾನ ಮಾಡಿ 3 ಲಕ್ಷ ರೂ. ಕೊಟ್ಟಿದ್ದರು. ಅದರಿಂದ ಮನೆ ಕಟ್ಟಿಕೊಂಡಿದ್ದೇನೆ. ಬೇರೆ ಏನು ಸೌಲಭ್ಯಗಳು ಇಲ್ಲ. ನನ್ನ ಕಲೆ ಮಾರಾಟಕ್ಕಿಲ್ಲ. ಕಲೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಆಸೆ ಆಕಾಶಗಳಿಗಿಂತ ಅಗಲವಿದೆ. ಆದರೆ, ಪ್ರೀತಿಯಿಂದ 3 ಪೈಸೆ ಕೊಡಲಿ ಸಂತೋಷ. – ಆಂಜಿನಪ್ಪ ಸತ್ಪಾಡಿ, ಮುಖವೀಣೆ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

 

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next