Advertisement

ವಿಧಾನಸಭೆ ವಿಸರ್ಜಿಸಿ!

12:49 PM May 20, 2019 | Team Udayavani |

ಹುಬ್ಬಳ್ಳಿ/ಬಾಗಲಕೋಟೆ: ಗೊಂದಲದಲ್ಲಿ ಮುಂದುವರಿಯುವ ಬದಲು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವುದು ಉತ್ತಮ ಎಂಬ ಜೆಡಿಎಸ್‌ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆ ಸಂಚಲನ ಸೃಷ್ಟಿಸಿದೆ. ಸಮ್ಮಿಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಸಂದರ್ಭ ಈ ಹೇಳಿಕೆ ಬೆಂಕಿಗೆ ತುಪ್ಪ ಸುರಿದಿದೆ. ಇದನ್ನೇ ಅಸ್ತ್ರವಾಗಿಸಿ ಬಿಜೆಪಿ ಕೂಡ ಮೈತ್ರಿಕೂಟದ ವಿರುದ್ಧ ಮುಗಿಬಿದ್ದಿದೆ.

Advertisement

ಕುಮಾರಸ್ವಾಮಿಯವರಿಗೆ ಮುಕ್ತ ಆಡಳಿತಕ್ಕೆ ಅವಕಾಶ ನೀಡಬೇಕಿದೆ. ಸಮ್ಮಿಶ್ರ ಸರಕಾರ ಸಮರ್ಪಕವಾಗಿ ನಡೆಯಬೇಕು. ನಿತ್ಯವೂ ಗೊಂದಲಮಯ ವಾತಾವರಣ ಸೃಷ್ಟಿ ಮಾಡಿದರೆ ಆಡಳಿತ ಕಷ್ಟಕರ. ಅನಗತ್ಯ ಗೊಂದಲ ಸೃಷ್ಟಿಯ ಬದಲು ಹೊಸ ಜನಾದೇಶಕ್ಕೆ ಹೋಗುವುದು ಉತ್ತಮ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಹೊರಟ್ಟಿ ಹೇಳಿಕೆ ನೀಡಿದ್ದರು. ಇದು ವಿವಾದದ ರೂಪ ಪಡೆಯುತ್ತಿದ್ದಂತೆ ‘ಸಿದ್ದು ಸಿಎಂ’ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆ ಮೆತ್ತಗಾಗಿಸಲು ಈ ಹೇಳಿಕೆ ನೀಡಿದ್ದೇನೆ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.

ವಿಸರ್ಜನೆ ಸ್ಥಿತಿ ನಿರ್ಮಾಣವಾಗಿಲ್ಲ

ಬಸವರಾಜ ಹೊರಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್.ಡಿ. ದೇವೇಗೌಡ, ಗೊಂದಲ ಸರಿಹೋಗಲಿದ್ದು, ವಿಧಾನಸಭೆ ವಿಸರ್ಜನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದಾರೆ. ಹೊರಟ್ಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್‌, ವಿಧಾನಸಭೆ ವಿಸರ್ಜನೆ ಬಗ್ಗೆ ದೊಡ್ಡವರು ತೀರ್ಮಾನ ಕೈಗೊಳ್ಳಬೇಕು. ಚುನಾವಣೆಗೆ ಹೋಗುವುದು ಸುಲಭದ ಮಾತಲ್ಲ. ಹೊರಟ್ಟಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಬಿಜೆಪಿಗೆ ಲಾಭ ಇಲ್ಲ
ಬಾಗಲಕೋಟೆ:
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಮುಧೋಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೊರಟ್ಟಿ, ಸರಕಾರ ವಿಸರ್ಜನೆಯಾಗಬೇಕು ಎಂಬ ನನ್ನ ಹೇಳಿಕೆ ಯಿಂದ ಬಿಜೆಪಿಗೆ ಲಾಭವಾಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರಲು 8ರಿಂದ 10 ಜನ ಶಾಸಕರು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ಚುನಾವಣೆಗೆ ಹೋಗಲು ಯಾರೂ ತಯಾರಿಲ್ಲ, ಧೈರ್ಯವೂ ಇಲ್ಲ. ಮಧ್ಯಂತರ ಚುನಾವಣೆಗೂ ನನ್ನ ಹೇಳಿಕೆಗೂ ಸಂಬಂಧವಿಲ್ಲ ಎಂದಿದ್ದಾರೆ.

‘ಕೈ’ಕಮಾಂಡ್‌ ಬುಲಾವ್‌
ಬೆಂಗಳೂರು:
ಇತ್ತೀಚೆಗಿನ ಬೆಳವಣಿಗೆ ಗಳ ಕುರಿತು ಚರ್ಚಿಸಲು ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಬುಲಾವ್‌ ನೀಡಿದ್ದಾರೆ. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಶನಿವಾರ ದಿಲ್ಲಿಗೆ ತೆರಳಿದರು. ಮಲ್ಲಿಕಾರ್ಜುನ ಖರ್ಗೆ, ಡಾ| ಜಿ. ಪರಮೇಶ್ವರ್‌, ಡಿಕೆಶಿ ರವಿವಾರ ಬೆಳಗ್ಗೆ ದಿಲ್ಲಿ ತಲುಪಲಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಚುನಾವಣೆ ಫ‌ಲಿತಾಂಶ, ಆಪರೇಷನ್‌ ಕಮಲ ಪ್ರಯತ್ನ, ಸಿಎಂ ಬದಲಾವಣೆ ವಿಚಾರ, ಮೈತ್ರಿಯ ಅನುಕೂಲ, ಅನಾನುಕೂಲಗಳ ಜತೆಗೆ ಫ‌ಲಿತಾಂಶದ ಬಳಿಕ ಜೆಡಿಎಸ್‌ ನಡೆ ಮತ್ತಿತರ ವಿಚಾರಗಳು ಚರ್ಚೆಯಾಗಬಹುದು ಎನ್ನಲಾಗಿದೆ.

ಎಚ್‌ಡಿಕೆ ಟ್ವೀಟ್ ಮನವಿ
ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ರಚನೆಯ ಆಶಯ ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ವ್ಯತಿರಿಕ್ತ ಹೇಳಿಕೆ ನೀಡುವುದರಿಂದ ಈ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದ್ದರಿಂದ ಉಭಯ ಪಕ್ಷಗಳ ಮುಖಂಡರು ಇಂಥ ಆಶಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ವಿವಾದಾತ್ಮಕ ಹೇಳಿಕೆ ನೀಡಬಾರದು ಎಂದು ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next