Advertisement

ಸಭಾಪತಿ ಹುದ್ದೆಗೆ ಸರ್ಕಸ್‌: ತಜ್ಞರು ಏನಂತಾರೆ?

01:02 AM Dec 16, 2020 | mahesh |

ವಿಧಾನ ಪರಿಷತ್‌ ಸಭಾಪತಿ ವಿರುದ್ಧ ಬಿಜೆಪಿ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಕಲಾಪ ಆರಂಭಕ್ಕೂ ಮೊದಲೇ ಆಡಳಿತ ಮತ್ತು ವಿಪಕ್ಷದ ಸದಸ್ಯರು ಕಿತ್ತಾಡಿ, ಕೈ-ಕೈ ಮಿಲಾಯಿಸಿ, ಕೋಲಾಹಲ ಎಬ್ಬಿಸುವ ಮೂಲಕ ಪರಿಷತ್‌ನ ಕಾರ್ಯಕಲಾಪಗಳ ಸುದೀರ್ಘ‌ ಇತಿಹಾಸಕ್ಕೆ ಕಪ್ಪುಚುಕ್ಕೆ ಇಟ್ಟರು. ಈ ಘಟನಾವಳಿಗಳ ಕುರಿತು ಹಾಗೂ ಮುಂದಿನ ನಡೆ ಏನಿರಬಹುದೆಂದು ಕಾನೂನು ತಜ್ಞರು ಉದಯವಾಣಿಗೆ ಕಿರು ಸಂದರ್ಶನ ನೀಡಿದ್ದು, ವಿವರ ಇಲ್ಲಿದೆ..

Advertisement

1. ಸಭಾಪತಿ ಅನುಮತಿ ಇಲ್ಲದೆ ಉಪ ಸಭಾಪತಿ ಪೀಠದಲ್ಲಿ ಆಸೀನರಾಗಬಹುದೇ?
ಬಿ.ವಿ.ಆಚಾರ್ಯ: ಸದನದ ಕಾರ್ಯಕಲಾಪ ವಿಚಾರದಲ್ಲಿ ಸಭಾಪತಿ ಮತ್ತು ಉಪಸಭಾಪತಿ ಸಮಾನ ಅಧಿಕಾರ ಹೊಂದಿರುತ್ತಾರೆ. ಸಭಾಪತಿ-ಉಪಸಭಾಪತಿಯವರ ಅನುಪಸ್ಥಿತಿಯಲ್ಲಿ ಆ ಸ್ಥಾನ ಅಲಂಕರಿಸಲು ಒಂದು ಪ್ಯಾನಲ್‌ ಇರುತ್ತದೆ. ಸಾಮಾನ್ಯ ಸನ್ನಿವೇಶ ಆಗಿದ್ದರೆ ಸಭಾಪತಿಯವರ ಅನುಮತಿ ಇಲ್ಲದೆ ಉಪಸಭಾಪತಿ ಪೀಠದಲ್ಲಿ ಆಸೀನರಾಗಬಹುದೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಬಹುದಿತ್ತು. ಆದರೆ, ಸಭಾಪತಿಯವರ ವಿರುದ್ಧವೇ ಅವಿಶ್ವಾಸ ನಿರ್ಣಯ ಮಂಡನೆ ಆಗಿರುವಾಗ ಉಪ ಸಭಾಪತಿಯವರೇ ಕಲಾಪ ನಡೆಸಬೇಕೆಂದು ಕಾನೂನಿನಲ್ಲಿ ಸ್ಪಷ್ಟವಾಗಿದೆ.
ಅಶೋಕ ಹಾರನಹಳ್ಳಿ: ಸಾಮಾನ್ಯ ಸನ್ನಿವೇಶ ಆಗಿದ್ದರೆ ಸಭಾಪತಿಯವರ ಅನುಮತಿಯಿಲ್ಲದೆ ಉಪಸಭಾಪತಿ ಆ ಪೀಠದಲ್ಲಿ ಆಸೀನರಾಗುವಂತಿಲ್ಲ. ಆದರೆ, ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆಯಾದಾಗ ಉಪಸಭಾಪತಿ ಕಲಾಪ ನಡೆಸಬೇಕೆಂದು ಸಂವಿಧಾನದ ಕಲಂ 185 ಹೇಳುತ್ತದೆ.
ಪ್ರೊ| ರವಿವರ್ಮ ಕುಮಾರ್‌: ಇಲ್ಲ….ಸಭಾಪತಿ ತಾನೂ ಪೀಠದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದಾಗ ಮಾತ್ರ ಉಪ ಸಭಾಪತಿ ಕುಳಿತುಕೊಳ್ಳಲು ಸಾಧ್ಯ.

2. ಸಭಾಪತಿ ಸ್ಥಾನದಲ್ಲಿ ಯಾರು ಕುಳಿತುಕೊಳ್ಳ ಬೇಕೆಂದು ನಿರ್ಧರಿಸಬೇಕಾದವರು ಯಾರು?
ಬಿ.ವಿ.ಆಚಾರ್ಯ: ಸಭಾಪತಿ ಪೀಠದಲ್ಲಿ ಯಾವಾಗ, ಯಾರು ಆಸೀನರಾಗಬೇಕು ಎಂಬುದಕ್ಕೆ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳಲ್ಲಿ ಸ್ಪಷ್ಟವಾಗಿ ವಿವರಣೆಯಿದೆ. ಅದರಂತೆಯೇ ನಡೆದುಕೊಳ್ಳಬೇಕಾಗುತ್ತದೆ. ಆದರೆ, ಒಂದಂತೂ ಸ್ಪಷ್ಟ. ಸಭಾಪತಿಯವರ ವಿರುದ್ಧ ಅವಿಶ್ವಾಸ ಮಂಡನೆಯಾದ ಸಂದರ್ಭದಲ್ಲಿ ಅವರೇ ಪೀಠದಲ್ಲಿ ಆಸೀನರಾಗಿ ಕಲಾಪ ನಡೆಸುವುದು ಸರಿಯಲ್ಲ.
ಅಶೋಕ ಹಾರನಹಳ್ಳಿ: ಕಲಾಪ ನಡೆಯುವಾಗ ಸಭಾಪತಿ ಪೀಠದಲ್ಲಿ ಯಾರು ಆಸೀನರಾಗಬೇಕೆಂದು ಸಭಾಪತಿಯವರೇ ನಿರ್ಧರಿಸುತ್ತಾರೆ. ಆದರೆ, ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿರುವಾಗ ಅವರೇ ಪೀಠದಲ್ಲಿ ಕುಳಿತು ಕಲಾಪ ನಡೆಸುವುದು ಮತ್ತು ಅವರೇ ಕಲಾಪ ಮುಂದೂಡುವುದು ಸರಿಯಲ್ಲ. ಇದು ಸಹಜ ನ್ಯಾಯದ ತತ್ವಕ್ಕೆ ವಿರುದ್ಧವಾದದ್ದು ಮತ್ತು ಹಿತಾಸಕ್ತಿಯ ಪ್ರಶ್ನೆ ಹುಟ್ಟು ಹಾಕುತ್ತದೆ.
ಪ್ರೊ| ರವಿವರ್ಮ ಕುಮಾರ್‌: ಸಭಾಪತಿ ಸ್ಥಾನದಲ್ಲಿ ಯಾರು ಕುಳಿತುಕೊಳ್ಳ ಬೇಕೆಂದು ನಿರ್ಧರಿಸುವವರು ಸಭಾಪತಿಯವರೇ, ಕಲಾಪ ನಡೆಯವಾಗ ಉಪ ಸಭಾಪತಿ ಉಪಸ್ಥಿತರಿಲ್ಲದಿದ್ದರೆ ಅವರನ್ನು ಸದನಕ್ಕೆ ಕರೆಸಿಕೊಂಡು ಸಭಾಪತಿ ಸ್ಥಾನದಲ್ಲಿ ಕೂರಿಸುವ ಅಧಿಕಾರ ಸಭಾಪತಿಯವರಿಗಿದೆ.

3. ಬೆಲ್‌ ಮುಗಿಯುವ ಮೊದಲು ಪೀಠದಲ್ಲಿ ಆಸೀನರಾಗಲು ಸಾಧ್ಯವೇ?
ಬಿ.ವಿ.ಆಚಾರ್ಯ: ಬೆಲ್‌ ಹಾಕುವುದು ಸಂಪ್ರದಾಯವಾಗಿರಬಹುದು, ಅದರ ಬಗ್ಗೆ ನಿಯಮಾವಳಿಗಳಲ್ಲಿ ಉಲ್ಲೇಖವೂ ಆಗಿರಬಹುದು. ಆದರೆ, ಅದು ಆಷ್ಟೊಂದು ಪ್ರಸ್ತುತ ಅನಿಸುವುದಿಲ್ಲ. ಬೆಲ್‌ ಸ್ಟಾಪ್‌ ಮಾಡಲು ಹೇಳುವವರು ಯಾರು ಎಂಬ ಪ್ರಶ್ನೆಯೂ ಮೂಡುತ್ತದೆ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಉಪಸಭಾಪತಿಯವರು ಕಲಾಪ ನಡೆಸುವ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ ಮತ್ತು ಅವರೇ ಕಲಾಪ ನಡೆಸಬೇಕು ಅನ್ನುವುದು ಮುಖ್ಯ.
ಅಶೋಕ ಹಾರನಹಳ್ಳಿ: ಅದು ಸದನದ ಆಂತರಿಕ ನಿಯಮಗಳು, ಅದಕ್ಕೆ ಅದರದೇ ಆದ ಕ್ರಮಗಳು ಮತ್ತು ಶಿಷ್ಟಾಚಾರಗಳಿವೆ. ಸದನ ಹೇಗೆ ನಡೆಸಬೇಕು ಎಂದು ಸಭಾಪತಿ ನಿರ್ಣಯಿಸುತ್ತಾರೆ. ಸದನ ಅಥವಾ ಕಲಾಪ ಹೀಗೆ ನಡೆಯಬೇಕು ಎಂದು ನ್ಯಾಯಾಲಯ ಸಹ ನಿರ್ದೇಶನ ನೀಡಲು ಬರುವುದಿಲ್ಲ. ಸಭಾಪತಿಗಳ ಪ್ರವೇಶಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ. ಇದು ಯಾರಿಗೂ ಶೋಭೆ ತರುವಂತಹದ್ದಲ್ಲ.
ಪ್ರೊ| ರವಿವರ್ಮ ಕುಮಾರ್‌: ಇಲ್ಲ…ಸದನ ಶುರುವಾಗುವ ಮೊದಲೇ ಉಪಸಭಾಪತಿ ಹೋಗಿ ಸಭಾಪತಿ ಸ್ಥಾನದಲ್ಲಿ ಕೂರುವುದು ಪರಿಷತ್ತಿನ ಇತಿಹಾಸದಲ್ಲಿ ಕೇಳರಿಯದ ಸಂಗತಿ. ಅದು ಸಭಾಪತಿ ಸ್ಥಾನದಲ್ಲಿ ಕುಳಿತುಕೊಳ್ಳು ವವರಿಗೆ ಗೌರವ ತರುವಂತಹದ್ದಲ್ಲ. ಏಕೆಂದರೆ, ಗೌರವಯುತ ಮತ್ತು ಶಿಷ್ಠಾಚಾರದಂತೆ ಕರೆ ಗಂಟೆ ನಿಂತು ಕೋರಂ ಇದೆ ಎಂದು ಖಾತರಿಯಾದ ಬಳಿಕ ಸಭಾಪತಿ ಸದನಕ್ಕೆ ಬರಬೇಕು. ಆದರೆ, ಕರೆ ನಿಲ್ಲುವುದಕ್ಕೆ ಮುಂಚೆ, ಇನ್ನೂ ಸದಸ್ಯರೇ ಬಾರದಿರುವಾಗ ಉಪ ಸಭಾಪತಿಯುವರು ಪೀಠಕ್ಕೆ ಹೋಗಿ ಕೂತಿದ್ದಾರೆ. ಉಪ ಸಭಾಪತಿ ಎಲ್ಲೆ ಮೀರಿ ನಡೆದುಕೊಂಡಿದ್ದಾರೆ.

4. ತಮ್ಮ ವಿರುದ್ಧ ಮಂಡನೆಯಾದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವ ಅಧಿಕಾರ ಸಭಾಪತಿಯವರಿಗೆ ಇದೆಯೇ?
ಬಿ.ವಿ.ಆಚಾರ್ಯ: ನನ್ನ ಪ್ರಕಾರ ತಮ್ಮದೇ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಅವರೇ ತಿರಸ್ಕರಿಸಲು ಬರುವುದಿಲ್ಲ. ಮುಖ್ಯವಾಗಿ ಇದೊಂದು “ಸಹಜ ನ್ಯಾಯ’ (ನ್ಯಾಚುರಲ್‌ ಜಸ್ಟಿಸ್‌) ತಣ್ತೀಕ್ಕೆ ವಿರುದ್ಧವಾದದ್ದು.
ಅಶೋಕ ಹಾರನಹಳ್ಳಿ: “ನಮ್ಮ ವ್ಯಾಜ್ಯಕ್ಕೆ ನಾನೇ ನ್ಯಾಯ ನಿರ್ಣಯಿಸುವುದು’ ಸಹಜ ನ್ಯಾಯದ ತಣ್ತೀಕ್ಕೆ ವಿರುದ್ಧವಾದದ್ದು, ಆ ನಿಟ್ಟಿನಲ್ಲಿ ತಮ್ಮ ವಿರುದ್ಧದ ಗೊತ್ತುವಳಿಯನ್ನು ಸಭಾಪತಿ ತಿರಸ್ಕರಿಸುವುದು ನನ್ನ ಪ್ರಕಾರ ಸರಿಯಲ್ಲ. ಬಹುಮತ ಇದ್ದರೆ ಅದನ್ನು ಕಾನೂನು ರೀತಿ ಎದುರಿಸಬೇಕು, ಇಲ್ಲದಿದ್ದಾಗಲೂ ಕಾನೂನು ರೀತಿ ನಡೆದುಕೊಳ್ಳಬೇಕು. ತಮ್ಮ ವಿರುದ್ಧ ಅವಿಶ್ವಾಸ ಗೊತ್ತವಳಿಯನ್ನು ತಿರಸ್ಕರಿಸಿದ್ದು ಸಭಾಪತಿ ಮಾಡಿದ ತಪ್ಪು. ಯಾರು ಗಲಾಟೆ ಮಾಡಿದರು, ಏನಾಯಿತು ಅನ್ನುದಕ್ಕಿಂತ ಮುಖ್ಯವಾಗಿ ಈ ಬೆಳವಣಿಗೆಗಳ ಬಗ್ಗೆ ಸಭಾಪತಿಯವರು ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ.

Advertisement

5. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡ ನೆಯಾದಾಗ ಅವರು ಕಲಾಪ ನಡೆಸಬಹುದೇ , ಅನಿರ್ದಿಷ್ಟಾವಧಿಗೆ ಮುಂದೂಡಬಹುದೇ?
ಬಿ.ವಿ.ಆಚಾರ್ಯ: ಸಭಾಪತಿಯವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿ, ಅದೊಂದೇ ಕಲಾಪದ ಕಾರ್ಯಸೂಚಿ (ಅಜೆಂಡಾ) ಆಗಿರುವಾಗ ಕಲಾಪವನ್ನು ನಡೆಸಿ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಮಾಡಿಕೊಡಬೇಕಿತ್ತು. ಅವರು ಪೀಠಕ್ಕೆ ಬಂದಿದ್ದು ಮತ್ತು ಕಲಾಪ ಮುಂದೂಡಿದ್ದು ಎರಡೂ ತಪ್ಪು.
ಪ್ರೊ. ರವಿವರ್ಮ ಕುಮಾರ್‌: ಎಲ್ಲಿತ್ತು….ಸದನದ ಮುಂದೆ ಇದ್ದದ್ದು ಒಂದೇ ಅಜೆಂಡಾ ಅದು ಗೋಹತ್ಯೆ ನಿಷೇಧ ಮಸೂದೆ ಮಾತ್ರ. ಅವಿಶ್ವಾಸ ನಿರ್ಣಯ ಸಭೆಯ ಮುಂದೆ ಇರಲೇ ಇಲ್ಲ. ಸಭಾಪತಿ ಪ್ರವೇಶಿಸುವ ದ್ವಾರ ಬಂದ್‌ ಮಾಡಿದ್ದು ತಪ್ಪು. ಪೀಠದಲ್ಲಿ ಕೂರಬಾರದು ಎಂದು ಸಭಾಪತಿಗೆ ಬಿಜೆಪಿ ಹೇಳಿದೆ. ಒಂದು ರಾಜಕೀಯ ಪಕ್ಷಕ್ಕೆ ಅಂತಹ ಅಧಿಕಾರವಿಲ್ಲ.

6. ಈಗ ರಾಜ್ಯಪಾಲರ ಪಾತ್ರವೇನು?
ಬಿ.ವಿ.ಆಚಾರ್ಯ: ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರೂ ಹೌದು, ಅದೇ ರೀತಿ ಅವರು ಎರಡೂ ಸದನದ ಸದಸ್ಯರೂ ಹೌದು. ಇದು ಸಂವಿಧಾನದಲ್ಲೇ ಇದೆ. ಬಹಳ ಜನರಿಗೆ ಇದು ಗೊತ್ತಿಲ್ಲ. ಈಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಭಾಪತಿಯವರಿಗೆ ಯಾವ ನಿರ್ದೇಶನಗಳನ್ನು ರಾಜ್ಯಪಾಲರು ನೀಡಬಹುದು ಎಂಬುದರ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ, ಸದನದ ಘನತೆ ಮತ್ತು ನಿಯಮಾವಳಿಗಳ ಚೌಕಟ್ಟು ಮೀರಿ ನಡೆದುಕೊಂಡು ಅಪರಾಧಿಕ ರೂಪದ ಕೃತ್ಯಗಳು ನಡೆಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಅಥವಾ ಸರಕಾರಕ್ಕೆ ನಿರ್ದೇಶನ ನೀಡಬಹುದು. ಸದನದಲ್ಲಿ ನಡೆದಿದ್ದರ ಬಗ್ಗೆ ದೂರು ನೀಡುವಂತಿಲ್ಲ, ಕ್ರಮ ಕೈಗೊಳ್ಳುವಂತಿಲ್ಲ. ಈ ವಿಚಾರದಲ್ಲಿ ನಮಗೆ ಪ್ರಿವಿಲೇಜ್‌ ಇದೆ ಎಂದು ಸದಸ್ಯರು ವಾದಿಸಬಹುದು. ಆದರೆ, ಆ ಪ್ರಿವಿಲೇಜ್‌ ಅಪರಾಧಿಕ ನಡತೆಗೆ ಅನ್ವಯವಾಗುವುದಿಲ್ಲ.
ಅಶೋಕ ಹಾರನಹಳ್ಳಿ: ಅಧಿವೇಶನ ಕರೆಯಬಹುದು. ಈ ಬಗ್ಗೆ ಉಪಸಭಾಪತಿಯವರಿಗೆ ರಾಜ್ಯಪಾಲರು ನಿರ್ದೇಶನ ನೀಡಬಹುದು.
ಪ್ರೊ| ರವಿವರ್ಮ ಕುಮಾರ್‌: ರಾಜ್ಯಪಾಲರಿಗೆ ಯಾವುದೇ ಪಾತ್ರ ಇಲ್ಲ ಇದರಲ್ಲಿ. ಸಭೆಯಯನ್ನು ಕರೆಯುವಂತೆ ರಾಜ್ಯಪಾಲರು ಹೇಳಬಹುದಷ್ಟೇ. ವಿಧಾನಪರಿಷತ್ತಿನ ಕಾರ್ಯಸೂಚಿ ನಿಗದಿಪಡಿಸುವ ಅಧಿಕಾರ ರಾಜ್ಯಪಾಲರಿಗಿಲ್ಲ. ಸದನವನ್ನು ಸಭಾಪತಿ ಕರೆಯಬೇಕಿತ್ತು. ಅದು ಆಗಿಲ್ಲ. ಸಭಾಪತಿಗಳಿಲ್ಲದೇ ಸದನ ನಡೆಯುವಂತಿಲ್ಲ. ಸಭೆಯಲ್ಲಿ ಸಭಾಪತಿಗಳ ತೀರ್ಮಾನವೇ ಅಂತಿಮ.

ಇಂಥ ಘಟನೆ ಇತಿಹಾಸದಲ್ಲಿ ನೋಡಿಲ್ಲ
ಬೆಂಗಳೂರು: ರಾಜ್ಯದ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಇಂತಹ ಕೆಟ್ಟ ಘಟನೆ ಯಾವತ್ತೂ ನಡೆದಿರಲಿಲ್ಲ. ಇದು ಸದನದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎಂದು ವಿಧಾನ ಪರಿಷತ್‌ ವಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಭಾಪತಿಯವರು ಇರುವಾಗಲೇ ಉಪ ಸಭಾಪತಿ ಸಭಾಪತಿಯ ಚೇರ್‌ ಮೇಲೆ ಹೋಗಿ ಕುಳಿತು ಅಪಮಾನ ಮಾಡಿದ್ದಾರೆ. ಸದನದ ಗೌರವವನ್ನು ಹಾಳು ಮಾಡಿ ಗೂಂಡಾ ಸಂಸ್ಕೃತಿ ಪ್ರದರ್ಶನ ಮಾಡಿದ್ದಾರೆ ಎಂದು ಎಸ್‌.ಆರ್‌. ಪಾಟೀಲ್‌ ದೂರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next