Advertisement

ಉಡುಪಿ ಅಷ್ಟ ಮಠದ ಸಂಪ್ರದಾಯ ನಮ್ಮನ್ನು ಪ್ರಭಾವಿಸಿದೆ: ಹೈಕೋರ್ಟ್‌

10:20 PM Mar 15, 2022 | Team Udayavani |

ಬೆಂಗಳೂರು: “ಉಡುಪಿಯ ಅಷ್ಟಮಠದ ಹಬ್ಬ ಮತ್ತು ಆಚರಣೆಗಳಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆಂಬ ವಿಚಾರ ನಮ್ಮನ್ನು ಪ್ರಭಾವಿಸಿದೆ’ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

Advertisement

ಅರ್ಜಿಯ ವಿಚಾರಣೆ ವೇಳೆ ಉಡುಪಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಎಸ್‌.ಎಸ್‌ ನಾಗಾನಂದ, “ಉಡುಪಿ ಕೃಷ್ಣ ಮಠದ ಸುತ್ತ ಹಲವು ಮುಸ್ಲಿಂ ಕುಟುಂಬಗಳಿವೆ. ರಥೋತ್ಸವದ ವೇಳೆ ಅವರೂ ಪಾಲ್ಗೊಳ್ಳುತ್ತಾರೆ. ಇಂತಹ ಸಾಮರಸ್ಯ ವಾತಾವರಣ ಹಾಳು ಮಾಡಲಾಗುತ್ತಿದೆ. ಎಲ್ಲರೂ ಅಣ್ಣತಮ್ಮಂದಿರಂತೆ ಬಾಳಬೇಕು’ ಎಂದು ವಾದ ಮಂಡಿಸಿದ್ದರು.

ಈ ವಾದ ಪ್ರಸ್ತಾಪಿಸಿ,”ಉಡುಪಿಯ ಅಷ್ಟಮಠದ ಹಬ್ಬ ಮತ್ತು ಆಚರಣೆಗಳಲ್ಲಿ ಮುಸ್ಲಿಮರು ಭಾಗವಹಿಸುತ್ತಾರೆ ಎಂಬುದು ನಿಜಕ್ಕೂ ಸಂತಸದ ವಿಚಾರ. ಅಷ್ಟಮಠದ ಈ ಸಂಪ್ರದಾಯ ನಮ್ಮನ್ನು ಪ್ರಭಾವಿಸಿದೆ’ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌, ನ್ಯಾ. ಖಾಜಿ ಜೈಬುನ್ನಿಸಾ ಅವರಿದ್ದ ತ್ರಿಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ಹೇಳಲಾಗಿದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಹೈಕೋರ್ಟ್‌ ದಿಗ್ಭ್ರಮೆ: ಉಡುಪಿ ಸರ್ಕಾರಿ ಪಪೂ ಕಾಲೇಜಿನಲ್ಲಿ 2004ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಅಷ್ಟಮಠ ಸಂಪ್ರದಾಯದ ಪ್ರಕಾರ ಆಚರಿಸಲ್ಪಡುವ ಹಬ್ಬಗಳಲ್ಲಿ ಮುಸ್ಲಿಮರೂ ಭಾಗವಹಿಸುತ್ತಾರೆ ಎನ್ನುವುದು ನಿಜಕ್ಕೂ ಸಂತಸದ ವಿಚಾರ. ಹೀಗಿರುವಾಗ, ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಏಕಾಏಕಿ ಹಿಜಾಬ್‌ ವಿವಾದ ಭುಗಿಲೆದ್ದಿರುವುದು ದಿಗ್ಭ್ರಮೆಯುಂಟು ಮಾಡಿದೆ ಎಂದೂ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಈ ಬೆಳವಣಿಗೆ ಗಮನಿಸಿದರೆ, ಕೆಲ “ಕಾಣದ ಕೈಗಳು’ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ ಎಂಬ ವಾದವನ್ನು ಪುಷ್ಟೀಕರಿಸುತ್ತಿದೆ. ಪೊಲೀಸ್‌ ತನಿಖೆ ನಡೆಯುತ್ತಿರುವುದರಿಂದ ಈ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸದ್ಯ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ನ್ಯಾಯಾಲಯ ಯಾವುದೇ ಅನಿಸಿಕೆ ವ್ಯಕ್ತಪಡಿಸುತ್ತಿಲ್ಲ. ಈ ಸಂಬಂಧ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಒದಗಿಸಲಾಗಿದ್ದ ದಾಖಲೆಗಳನ್ನು ಪರಿಶೀಲಿಸಿ, ಹಿಂದಿರುಗಿಸಲಾಗಿದೆ. ಪ್ರಕರಣ ಸಂಬಂಧ ಪರಿಣಾಮಕಾರಿ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ನ್ಯಾಯಾಲಯ ನಿರೀಕ್ಷಿಸುತ್ತದೆ ಎಂದು ಹೈಕೋರ್ಟ್‌ ಹೇಳಿದೆ.

Advertisement

ಗಲಾಟೆಗೆ ಸಿಎಫ್ಐ ಕಾರಣ: ಕಾಲೇಜು
ಅರ್ಜಿ ಕುರಿತು ಫೆ.23ರಂದು ನಡೆದಿದ್ದ ವಿಚಾರಣೆ ವೇಳೆ ಉಡುಪಿ ಕಾಲೇಜಿನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ್‌, 2004ರಿಂದಲೂ ಕಾಲೇಜಿನಲ್ಲಿ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. ಆದರೆ, ಇಷ್ಟು ವರ್ಷಗಳ ಬಳಿಕ ಏಕಾಏಕಿ ಸಮಸ್ಯೆ ಉದ್ಭವಿಸಿದೆ. 2021ರ ಡಿ.30ರಂದು ಸಿಎಫ್‌ಐ ಎಂಬ ಸಂಘಟನೆ ಕಾಲೇಜು ಅಧಿಕಾರಿಗಳನ್ನು ಭೇಟಿ ಮಾಡಿ, ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಿತ್ತು. ಇದಕ್ಕೆ ನಿರಾಕರಿಸಿದಾಗ ಇಷ್ಟೆಲ್ಲ ಗದ್ದಲಗಳು ಸೃಷ್ಟಿಯಾಗಿವೆ. ಸಿಎಫ್‌ಐ ಸಂಘಟನೆ ಶಿಕ್ಷಕರಿಗೂ ಬೆದರಿಕೆ ಹಾಕಿದೆ. “ಸಿಎಫ್‌ಐ ನಂತಹ ಸಂಘಟನೆಗಳು ಸಮಾಜವನ್ನು ಬೆದರಿಸಬಾರದು. ಉಡುಪಿ ಕೃಷ್ಣ ಮಠದ ಸುತ್ತ ಹಲವು ಮುಸ್ಲಿಂ ಕುಟುಂಬಗಳಿವೆ. ರಥೋತ್ಸವದ ವೇಳೆ ಅವರೂ ಪಾಲ್ಗೊಳ್ಳುತ್ತಾರೆ. ಇಂತಹ ಸಾಮರಸ್ಯ ವಾತಾವರಣ ಹಾಳು ಮಾಡಲಾಗುತ್ತಿದೆ. ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.

ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌, ಸಂಘಟನೆಯ ಬಗ್ಗೆ ಸರ್ಕಾರದಿಂದ ಮಾಹಿತಿ ಕೇಳಿತ್ತು. ಮರುದಿನ ಅರ್ಜಿ ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ಉಡುಪಿಯ ಕಾಲೇಜಿನ ಶಿಕ್ಷಕರು ಹಿಜಾಬ್‌ಗ ಅನುಮತಿ ನೀಡದ್ದಕ್ಕೆ ಕೆಲ ಸಂಘಟನೆಗಳು ಬೆದರಿಕೆ ಹಾಕಿದ ಬಗ್ಗೆ ನೀಡಲಾಗಿದ್ದ ದೂರಿನ ಮೇರೆಗೆ ಒಂದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿ, ಎಫ್‌ಐಆರ್‌ಗೆ ಸಂಬಂಧಿಸಿದ ದಾಖಲೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next