Advertisement

karnataka election 2023; ಮುದುಡಿಹೋದ ಗಿಡ ವರ್ಸಸ್‌ ನೇಪಥ್ಯಕ್ಕೆ ಸರಿದ ಅನಂತ ಬಳಗ

10:10 PM Apr 18, 2023 | Team Udayavani |

ಬೆಂಗಳೂರು: ಸಕಾಲಿಕ ಟ್ವೀಟ್‌ಗಳ ಮೂಲಕ ಆಗಾಗ ರಾಜಕೀಯ ಆಸಕ್ತರು ಅದರಲ್ಲಿಯೂ ವಿಶೇಷವಾಗಿ ಬಿಜೆಪಿ ಅಂತರ್ವಲಯದ ನಾಯಕರ ಅಂತರಂಗ ಚುರ್ರೆನ್ನಿಸುವಂತೆ ಮಾಡಿ ಮತ್ತೆ ಮೌನಕ್ಕೆ ಶರಣಾಗಿ ಬಿಡುವ ತೇಜಸ್ವಿನಿ ಅನಂತಕುಮಾರ್‌ ಮಂಗಳವಾರ ಒಂದು ಮಾರ್ಮಿಕ ಟ್ವೀಟ್‌ ಮಾಡಿದ್ದರು. ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಒಣಗಿ ಹೋಗುತ್ತಿರುವ ಗಿಡವೊಂದರ ಫೋಟೋವನ್ನು ತಮ್ಮ ಟ್ವೀಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡ ಅವರು “ಈ ಗಿಡ ಜೂನ್‌ 5, 2015ರಂದು ಲಾಲ್‌ ಬಾಗ್‌ ಪಶ್ಚಿಮದ್ವಾರದ ಬಳಿ ಶ್ರೀ ಅನಂತಕುಮಾರ್‌ ಅವರು ನೆಟ್ಟಿದ್ದು. ಯಾಕೋ ಮುದುರಿ ಹೋಗಿದೆ. ಲಾಲ್‌ ಬಾಗ್‌ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅನಂತಕುಮಾರ್‌ ಅನುಪಸ್ಥಿತಿಯಲ್ಲಿ ಈ ಗಿಡವನ್ನು ಉಳಿಸುವ ಜವಾಬ್ದಾರಿ ನಮ್ಮದು ಎಂಬುದು ನನ್ನ ಭಾವನೆ’…

Advertisement

ಕಾಕತಾಳೀಯವೋ ಎಂಬಂತೆ ತೇಜಸ್ವಿನಿ ಅನಂತಕುಮಾರ್‌ ಅವರು ಈ ಟ್ವೀಟ್‌ ಮಾಡುವ ಹಿಂದಿನ ದಿನ ಬಿಜೆಪಿ ಎಂಬ ಮಹಾವೃಕ್ಷದ ಅಂಚುಗಳಲ್ಲಿ ಅನಂತಕುಮಾರ್‌ ನೆಟ್ಟು ಬೆಳೆಸಿದ ರಾಜಕೀಯದ ಗಿಡಗಳೆಲ್ಲವೂ ಇದೇ ರೀತಿ ಮುದುರಿ, ಬಾಡಿ, ಧರಾಶಾಯಿಯಾಗಿದ್ದವು!

“ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಮೌನ ಮಾತ್ರ ಬಂಗಾರ. ಏನಂತೀರಿ ? ಎಂದು ಹಿಂದಿನ ದಿನವಷ್ಟೇ ಪ್ರಶ್ನಾರ್ಥಕ ಟ್ವೀಟ್‌ ಹಂಚಿಕೊಂಡಿದ್ದ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಬಹುಶಃ “ಅನಂತಕುಮಾರ್‌ ರಾಜಕೀಯದಲ್ಲಿ ನೆಟ್ಟ ಗಿಡಗಳೆಲ್ಲವೂ ಮುದುರಿ ಹೋಗಿದ್ದನ್ನು ಕಂಡು ಅಂತಃಕರಣ ಕಲಕಿದ್ದರ ಪರಿಣಾಮವೇ ಈ ಟ್ವೀಟ್‌ ಆಗಿರಲಿಕ್ಕೂ ಸಾಕು. ಆದರೆ ರಾಜ್ಯ ರಾಜಕಾರಣದಲ್ಲಿ ಅನಂತಕುಮಾರ್‌ ಕುಟುಂಬ ಹಾಗೂ ಅವರ ಶಿಷ್ಯ ವರ್ಗ ಸಂಪೂರ್ಣವಾಗಿ ನೆಲಕಚ್ಚಿ ಅಸ್ತಿತ್ವ ಕಳೆದುಕೊಂಡಿದ್ದಂತೂ ಸುಳ್ಳಲ್ಲ.
ಹೌದು. ರಾಜ್ಯ ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 60 ಹೊಸಮುಖಗಳಿಗೆ ಅವಕಾಶ ನೀಡಿದೆ. ಅದರ ಜತೆಗೆ ಮೊದಲನೆ ಜನರೇಷನ್‌ನ ಎಲ್ಲ ಹಿರಿಯರನ್ನು ಬದಿಗೆ ಸರಿಸಿದೆ. ಇದೆಲ್ಲದರ ಮಧ್ಯೆ ಗಮನಿಸಬೇಕಾದ ಮತ್ತೂಂದು ಸಂಗತಿ ಎಂದರೆ ಅದು ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ಶಿಷ್ಯ ವರ್ಗವನ್ನು ಪಕ್ಷದ ಎಲ್ಲ ಆಯಕಟ್ಟಿನ ಸ್ಥಾನಗಳಷ್ಟೇ ಅಲ್ಲ ಚುನಾವಣಾ ರಾಜಕಾರಣದಿಂದಲೇ ಬದಿಗೆ ಸರಿಸಲಾಗಿದೆ. ಜಗದೀಶ್‌ ಶೆಟ್ಟರ್‌, ಅರವಿಂದ ಲಿಂಬಾವಳಿ, ರಾಮದಾಸ್‌ ಮಾತ್ರವಲ್ಲ ಒಂದು ಕಾಲದಲ್ಲಿ ಅನಂತಕುಮಾರ್‌ ಆಪ್ತ ಎಂದೇ ಪರಿಗಣಿಸಲ್ಪಟ್ಟಿದ್ದ ಕೆ.ಎಸ್‌.ಈಶ್ವರಪ್ಪ ಕೂಡಾ ರಾಜಕೀಯದ ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದಾರೆ. 1999, 2004ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡ ಇನ್ನು ಕೆಲವು “ಅನಂತ ಶಿಷ್ಯರು’ ಕೂಡಾ ಈ ಹಿಟ್‌ ಲಿಸ್ಟ್‌ನಲ್ಲಿ ಇದ್ದಾರೆ ಎಂದೇ ಬಿಜೆಪಿ ಆಂತರಿಕ ಮೂಲಗಳು ವ್ಯಾಖ್ಯಾನಿಸುತ್ತಿವೆ. ಈಗ ಅವರೆಲ್ಲರೂ ನಾನು ಅನಂತಕುಮಾರ್‌ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೇ ಅಂಜುವಂಥ ಸ್ಥಿತಿ ಬಿಜೆಪಿಯಲ್ಲಿದೆ. ಅಲ್ಲಿಗೆ ರಾಜ್ಯ ಬಿಜೆಪಿಯ ನಾಯಕರೆಲ್ಲರೂ ಹೊಸ ತಲೆಮಾರು, ಹೊಸ ಚಿಂತನೆ ಹಾಗೂ ಹೊಸ ಗುರುಗಳ ಶಿಷ್ಯರಾದಂತಾಗಲಿದೆ.

ಈ ರೀತಿಯ ನಿರಾಕರಣೆ ಖುದ್ದು ತೇಜಸ್ವಿನಿಯವರಿಗೂ ಆಗಿದೆ. ಅನಂತಕುಮಾರ್‌ ಅವರ ಅಕಾಲಿಕ ಮರಣದ ಬಳಿಕ ಬೆಂಗಳೂರು ದಕ್ಷಿಣ ಲೋಕಸಭಾ ಸ್ಥಾನಕ್ಕೆ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ “ಡಿಎನ್‌ಎ ಪಾಲಿಟಿಕ್ಸ್‌ಗೆ’ ಬಿಜೆಪಿಯಲ್ಲಿ ಜಾಗವಿಲ್ಲ ಎಂಬ ವಾದ ಅವರಿಗೆ ಟಿಕೆಟ್‌ ತಪ್ಪಿಸಿತು. ಆದಾದ ಬಳಿಕ ಈಗ ಎದುರಾಗಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್‌ ವಂಚಿತರಾಗಿದ್ದಾರೆ. ಆದರೆ ಯಾವ ವಾದದ ಮೂಲಕ ಅನಂತಕುಮಾರ್‌ ಕುಟುಂಬ ಹಾಗೂ ಅವರ ಶಿಷ್ಯ ವರ್ಗವನ್ನು ಸಕ್ರಿಯ ರಾಜಕಾರಣದಿಂದ ಬಿಜೆಪಿ ದೂರ ತಳ್ಳಿದೆಯೋ, ಆ ಮಾನದಂಡ ಎಲ್ಲರಿಗೂ ಅನ್ವಯವಾಗಿಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ.

-ರಾಘವೇಂದ್ರ ಭಟ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next