Advertisement

ಮಳೆಗೆ ತೊಯ್ದ ಬದುಕು: ಪರಿಹಾರ; ಸಿಎಂ ಅವರತ್ತ ಕರಾವಳಿಗರ ನಿರೀಕ್ಷೆ

02:34 AM Jul 12, 2022 | Team Udayavani |

ಆರೇಳು ದಿನಗಳ ಸತತ ಮಳೆಯಿಂದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟಾಗಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಸ್ಥಿತಿಯ ಪರಿಶೀಲನೆಗಾಗಿ ಆಗಮಿಸುತ್ತಿರುವುದು ಅವರಿಗಿರುವ ಜನಕಾಳಜಿಯ ದ್ಯೋತಕ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಿರುವ ಹಾನಿಯ ಸಮಗ್ರ ಚಿತ್ರಣವನ್ನು ಸಿಎಂ ಅವರ ಗಮನಕ್ಕೆ ತರುವ ಪ್ರಯತ್ನ ಉದಯವಾಣಿಯ ಈ ವರದಿಯದ್ದು.

Advertisement

ದಕ್ಷಿಣ ಕನ್ನಡ:ಐದು ಪ್ರಾಣಹಾನಿ, 528 ಮನೆಹಾನಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ ಸರಾಸರಿಗಿಂತ 500 ಮಿ.ಮೀ.ನಷ್ಟು ಹೆಚ್ಚು ಮಳೆ ಸುರಿದಿದೆ. ಒಂದು ವಾರ ಸುರಿದ ಮಳೆಯಿಂದಾಗಿ ಜೀವಹಾನಿ, ಸೊತ್ತು ಹಾನಿ ಯಾಗಿದ್ದು, ಜನಜೀವನಕ್ಕೆ ಬಲವಾದ ಪೆಟ್ಟು ಬಿದ್ದಿದೆ.

ಎನ್‌ಡಿಆರ್‌ಎಫ್‌ ಕಾಯ್ದೆಯನ್ವಯ ಕನಿಷ್ಠ ಪರಿಹಾರವನ್ನು ನೀಡಿದ್ದರೂ ಅದು ಸಾಕಾಗುತ್ತಿಲ್ಲ. ಎಪ್ರಿಲ್‌ ಮೊದಲಿನಿಂದ ತೆಗೆದುಕೊಂಡರೆ ಜಿಲ್ಲೆಯಲ್ಲಿ 18 ಗ್ರಾಮಗಳು ತೊಂದರೆಗೀಡಾಗಿವೆ. ಐವರು ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರು ನಾಪತ್ತೆಯಾಗಿದ್ದರೆ, ಮೂವರು ಗಾಯಗೊಂಡಿದ್ದಾರೆ. 71 ಮನೆಗಳು ಪೂರ್ತಿಯಾಗಿ, 457 ಮನೆಗಳು ಭಾಗಶಃ ಹಾನಿ ಗೀಡಾಗಿವೆ. 28 ಜನರನ್ನು ಸ್ಥಳಾಂತರಿಸಲಾಗಿದೆ. 27 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 2 ಜಾನು ವಾರುಗಳು ಸಾವನ್ನಪ್ಪಿವೆ.

ತಗ್ಗು ಪ್ರದೇಶಗಳು, ಅದರಲ್ಲೂ ಭತ್ತ ಬೇಸಾಯ ಹೆಚ್ಚಾಗಿ ನದಿಗೆ ಹತ್ತಿರದ ಸ್ಥಳಗಳಲ್ಲಿ ಮಾಡ ಲಾಗುತ್ತದೆ. ಅಂತಹ ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 185 ಹೆಕ್ಟೇರ್‌ ಕೃಷಿ ಪ್ರದೇಶ ನೆರೆಪೀಡಿತವಾಗಿದೆ. 12 ಹೆಕ್ಟೇರ್‌ನಷ್ಟು ಅಡಿಕೆ ತೋಟ ಗಾಳಿಮಳೆಯಿಂದಾಗಿ ಹಾನಿಗೊಂಡಿವೆ.

ಮೆಸ್ಕಾಂನ ಜಿಲ್ಲಾ ವ್ಯಾಪ್ತಿಯಲ್ಲಿ 2,928 ಕಂಬಗಳು, 211 ಪರಿವರ್ತಕ ಗಳು, ಒಟ್ಟು 60 ಕಿ.ಮೀ.ನಷ್ಟು ಲೈನ್‌ ಹಾನಿಗೊಳಗಾಗಿದೆ. ಲೋಕೋಪ ಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ 3 ಸೇತುವೆಗಳು, 27 ಕಿ.ಮೀ.ನಷ್ಟು ಜಿಲ್ಲಾ ಮುಖ್ಯರಸ್ತೆ ಮಳೆಯಿಂದ ಕೆಟ್ಟು ಹೋಗಿದ್ದರೆ 8 ಕಿ.ಮೀ.ನಷ್ಟು ರಾಜ್ಯ ಹೆದ್ದಾರಿ ಕೆಟ್ಟಿದೆ. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ 3 ಸೇತುವೆಗಳು, ಒಟ್ಟು 67 ಕಿ.ಮೀ.ನಷ್ಟು ಉದ್ದದ ರಸ್ತೆಗಳು ಹಾನಿಗೊಂಡಿವೆ.

Advertisement

ರಾಷ್ಟ್ರೀಯ ಹೆದ್ದಾರಿಗೆ ಹಾನಿ
ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಎನ್‌ಎಚ್‌ 66, 75 ಎರಡರಲ್ಲೂ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ತುರ್ತು ನಿರ್ವಹಣೆ ಬೇಕಿದೆ. ಅದರ ನಿರ್ವಹಣೆಯನ್ನು ಪ್ರಾಧಿ ಕಾರವೇ ಮಾಡಬೇಕಾಗುತ್ತದೆ. ಇನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗದಡಿ ಬರುವ ಎನ್‌ಎಚ್‌ 275ರ ಮಾಣಿ ಮೈಸೂರು ಹೆದ್ದಾರಿಯ ಆನೆಗುಂಡಿ ಎಂಬಲ್ಲಿ ಭೂಕುಸಿತ, ಎನ್‌ಎಚ್‌ 73ಯ ಬಡಾಗುಂಡಿ ಎಂಬಲ್ಲಿ ರಸ್ತೆಗೆ ಹಾನಿ ಯಾಗಿದೆ. ಎನ್‌ಎಚ್‌ 169ರ ಗುರು ಪುರ ಬಳಿ ರಸ್ತೆ ಕುಸಿತ ಉಂಟಾಗಿದೆ.

ಇನ್ನೂ ಸಿಗದ ಆದೇಶ
ಅತಿವೃಷ್ಟಿ ಪರಿಶೀಲನೆಗೆ ಜು. 7ರಂದು ಆಗಮಿಸಿದ್ದ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಸಿಗುವ ಪರಿಹಾರ ಕಡಿಮೆ ಇರುವುದರಿಂದ ಪರಿಹಾರ ವಿತರಣೆಗೆ ಪರಿಷ್ಕೃತ ಆದೇಶವನ್ನು ಮರುದಿನವೇ ಹೊರಡಿಸಲಾಗುವುದು. ಅದರಂತೆ ಪೂರ್ಣ ಮನೆಹಾನಿಗೆ 5 ಲಕ್ಷ ರೂ, ಶೇ. 50 ಹಾನಿಗೆ 3 ಲಕ್ಷ ರೂ., ಭಾಗಶಃ ಹಾನಿಯಾದರೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಪರಿಷ್ಕೃತ ಆದೇಶ ಬಂದಿಲ್ಲ. ಹಾಗಾಗಿ ಹಳೆಯ ಆದೇಶದಂತೆ ಪರಿಹಾರ ನೀಡಲಾಗುತ್ತಿದೆ. ಪ್ರಸ್ತುತ ಪೂರ್ಣಹಾನಿಯಾದ ಮನೆಗೆ 95 ಸಾವಿರ ರೂ., ಭಾಗಶಃ ಹಾನಿಯಾದರೆ 5,200 ರೂ., ಅಲ್ಲದೆ ಮನೆಗೆ ನೀರು ನುಗ್ಗಿದ್ದರೆ ಹೆಚ್ಚುವರಿಯಾಗಿ 10 ಸಾವಿರ ರೂ. ನೀಡಲಾಗುತ್ತದೆ. ಎಲ್ಲ ತಹಶೀಲ್ದಾರರಿಗೆ ವಿಪತ್ತು ಪರಿಹಾರ ನಿಧಿಯಿಂದ ಮೊತ್ತ ವಿತರಿಸಲಾಗಿದೆ. ಅದರಂತೆ ದೊಡ್ಡ ತಾಲೂಕುಗಳಾದ ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳಕ್ಕೆ ತಲಾ 50 ಲಕ್ಷ ರೂ., ಉಳ್ಳಾಲಕ್ಕೆ 40 ಲಕ್ಷ ರೂ. ಹಾಗೂ ಸಣ್ಣ ತಾಲೂಕುಗಳಾದ ಮೂಲ್ಕಿ, ಮೂಡುಬಿದಿರೆ ಮತ್ತು ಕಡಬಕ್ಕೆ ತಲಾ 30 ಲಕ್ಷ ರೂ. ನೀಡಲಾಗಿದೆ.

ವಾಡಿಕೆ ಮಳೆಗಿಂತ ಹೆಚ್ಚು
ಜಿಲ್ಲೆಯಲ್ಲಿ ಸರಾಸರಿಯಾಗಿ ಜನವರಿ ಯಿಂದ ಇದುವರೆಗಿನ ಲೆಕ್ಕಾಚಾರದಂತೆ ವಾಡಿಕೆಯಂತೆ 1,560 ಮಿ.ಮೀ. ಮಳೆಯಾಗಬೇಕು, ಈ ಬಾರಿ 2,007 ಮಿ.ಮೀ. ಮಳೆಯಾಗಿದೆ.

ಕಡಲ್ಕೊರೆತ ಬಿಡಿಸಲಾಗದ ಒಗಟು
ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಹಿಂದೆ ಕೋಟೆ ಪುರ, ಸುಭಾಸ್‌ನಗರ ಪ್ರದೇಶ ಗಳಲ್ಲಿ ಭಾರೀ ಪ್ರಮಾಣದ ಭೂಪ್ರದೇಶವನ್ನು ಕಡಲು ನುಂಗಿತ್ತು. ಆದರೆ ಎಡಿಬಿ ನೆರವಿನ ಕಡಲ್ಕೊರೆತ ತಡೆ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿ ಕಡಿಮೆ ಯಾಗಿದ್ದರೂ ಬಟ್ಟಂಪಾಡಿ ಭಾಗದಲ್ಲಿ ಕಡಲ್ಕೊರೆತ ಹೆಚ್ಚಿದೆ. ಅಲ್ಲಿ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಅದರ ನಿರ್ವಹಣೆಗೆ ಅನುದಾನ ಬಂದಿಲ್ಲ.

ಸಮಸ್ಯೆಗೊಳಗಾದ ಗ್ರಾಮಗಳು ತಾಲೂಕುವಾರು
ಮಂಗಳೂರು: ಅದ್ಯಪಾಡಿ, ಕೊಳಂಬೆ, ಚೇಳಾçರು, ಕೊಟ್ಟಾರಚೌಕಿ, ಜಪ್ಪಿನಮೊಗರು, ಪಡೀಲು.
ಉಳ್ಳಾಲ: ಪೆರ್ಮನ್ನೂರು, ಕಲ್ಲಾಪು
ಮೂಲ್ಕಿ: ಕಿಲೆಂಜಾರು, ಕಿಲ್ಪಾಡಿ, ಅತಿಕಾರಿಬೆಟ್ಟು
ಮೂಡುಬಿದಿರೆ: ಮೂಡುಬಿದಿರೆ
ಬಂಟ್ವಾಳ: ಕುಡ್ತಮುಗೇರು, ದೇಲಂತಬೆಟ್ಟು
ಬೆಳ್ತಂಗಡಿ: ಮಿತ್ತಬಾಗಿಲು, ದಿಡುಪೆ, ಗಣೇಶ್‌ ನಗರ
ಪುತ್ತೂರು: ಉಪ್ಪಿನಂಗಡಿ

ಉಡುಪಿ ಜಿಲ್ಲೆ: 127 ಮನೆಗಳಿಗೆ ಹಾನಿ
ಉಡುಪಿ: ಜಿಲ್ಲೆಯಲ್ಲಿ ಗಾಳಿ ಮಳೆಗೆ ಇದುವರೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಉಂಟಾಗಿದೆ.

ಉಡುಪಿ ಜಿಲ್ಲಾ ವ್ಯಾಪ್ತಿಯ ಒಟ್ಟು ಏಳು ತಾಲೂಕುಗಳಲ್ಲಿ ಒಟ್ಟು 127 ಮನೆಗಳಿಗೆ ಹಾನಿಯಾಗಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ ಭಾಗದಲ್ಲಿ ಹೆಚ್ಚು ಹಾನಿ ಸಂಭವಿಸಿದ್ದು, 8 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ.

ಬಡ ಕುಟುಂಬಗಳಿಗೆ ತೊಂದರೆಯಾಗಿದೆ. ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ 103 ಹೆಕ್ಟೇರ್‌ ಭತ್ತದ ಕೃಷಿಗೆ ಹಾನಿಯಾಗಿದ್ದು, ರೈತ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಜಿಲ್ಲೆಯ ಗ್ರಾಮೀಣ ಮತ್ತು ನಗರ ಭಾಗದಲ್ಲಿ 49 ಸೇತುವೆ, ಕಾಲು ಸಂಕಗಳು, ಕಿರು ಸೇತುವೆಗಳು ಹಾನಿಗೀಡಾಗಿವೆ, ಗ್ರಾಮೀಣ ಭಾಗದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಬೈಂದೂರು ತಾಲೂಕಿನ ಅಮ್ಮನವರತೊಪ್ಲು ಶಾಲೆಗೆ ಹಾನಿಯಾಗಿದ್ದು, ಒಂದು ದನ ಸಾವನ್ನಪ್ಪಿದೆ. 10 ಅಂಗನವಾಡಿಗಳಿಗೆ ಹಾನಿ ಸಂಭವಿಸಿದ್ದು, ಪ್ರಸ್ತುತ ರಜೆ ಇರುವುದರಿಂದ ಮಕ್ಕಳಿಗೆ ಅಪಾಯ ಸಂಭವಿಸಿಲ್ಲ. ಮೆಸ್ಕಾಂಗೆ ಅಪಾರ ಹಾನಿಯಾಗಿದ್ದು, ಇಲ್ಲಿಯವರೆಗೆ ವಿದ್ಯುತ್‌ ಕಂಬ, ಟಿಸಿ, ತಂತಿಗೆ ಹಾನಿ ಸೇರಿ ಒಟ್ಟು 1.1 ಕೋ.ರೂ. ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next