Advertisement

ತೆರಿಗೆ ಹೊರೆ ಇಲ್ಲದೆ ಭರವಸೆಗಳ ಬುತ್ತಿ ಬಿಚ್ಚಿಟ್ಟ ಬಸವಣ್ಣ

09:57 PM Feb 17, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಎದುರಾಗುವ ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಿಗೆ ಹೊರೆ ಇಲ್ಲದೆ ಭರವಸೆಗಳ ಬುತ್ತಿಯನ್ನೇ ರಾಜ್ಯದ ಜನತೆಗೆ ಬಡಿಸಿದ್ದಾರೆ. ಮತದಾರರನ್ನು ಸೆಳೆಯಲು ಜನಪ್ರಿಯತೆಗೆ ತುಸು ಒತ್ತು ಕೊಟ್ಟಿದ್ದರೂ ಅಭಿವೃದ್ಧಿ ಮಂತ್ರ ಜಪಿಸಿದ್ದಾರೆ. ಲಭ್ಯ ಸಂಪನ್ಮೂಲ ಸಂಗ್ರಹ ಮೂಲಗಳಲ್ಲೇ ಹೆಚ್ಚಿನ ಆದಾಯ ನಿರೀಕ್ಷಿಸಿ ಹಲವು ಹೊಸ ಯೋಜನೆಗಳ ಮೂಲಕ ಜನಮನ್ನಣೆ ಪಡೆಯುವ ಜಾಣ್ಮೆಯ ನಡೆ ಅನುಸರಿಸಿದ್ದಾರೆ.

Advertisement

ಮತಬ್ಯಾಂಕ್‌ ಕೇಂದ್ರವಾಗಿಟ್ಟುಕೊಂಡೇ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಬಡವರು, ದಲಿತರು ಹಾಗೂ ಅಸಂಘಟಿತ ವಲಯದ ಕಾರ್ಮಿಕರನ್ನು ಸೆಳೆಯುವ ಯೋಜನೆಗಳ ಮೂಲಕ ಸರ್ವರನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದಾರೆ. ಒಂದು ಕಡೆ ಜನಪ್ರಿಯತೆ, ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಮತ್ತೊಂದೆಡೆ ಶಿಕ್ಷಣ, ಆರೋಗ್ಯ, ನೀರಾವರಿಗೂ ಆದ್ಯತೆ ನೀಡಿ ನಮ್ಮದು ಅಭಿವೃದ್ಧಿಪರ ಸರಕಾರವೆಂದು ಬಿಂಬಿಸಿಕೊಳ್ಳಲು ಹೊರಟಂತಿದೆ.

ಸರ್ವ ಧರ್ಮ, ಜನಾಂಗವನ್ನು ತಲುಪುವ ಪ್ರಯತ್ನದಲ್ಲಿ ಎಲ್ಲಾ ಕಡೆಗೂ ಕೈ ತೋರಿಸಿದರೂ ಯಾರ ಹೊಟ್ಟೆಯೂ ತುಂಬುತ್ತಿಲ್ಲ, ಹಸಿದ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತೆ ಆಗಿದೆ. ಸಂಪನ್ಮೂಲ ಸಂಗ್ರಹಕ್ಕಾಗಿ ಚುನಾವಣೆ ಹೊಸ್ತಿಲಲ್ಲೆ ಮತದಾರರ ಜೇಬಿಗೆ ಕತ್ತರಿ ಹಾಕದೆ ಲಭ್ಯ ಮೂಲಗಳಲ್ಲೇ ಹೆಚ್ಚಿನ ಆದಾಯ ನಿರೀಕ್ಷಿಸಿ ಜತೆಗೆ 78 ಸಾವಿರ ಕೋಟಿ ಸಾಲಕ್ಕೆ ಕೈಚಾಚಿರುವುದು ಸಂಪನ್ಮೂಲ ಕೊರತೆಯನ್ನು ತೋರಿಸುತ್ತದೆ. ಒಟ್ಟು ಆದಾಯದ ಶೇ.19 ರಷ್ಟು ಅಸಲು- ಬಡ್ಡಿ ಪಾವತಿಗೆ ಹೋದರೆ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಸಹಜವಾಗಿ ಪರಿಣಾಮ ಬೀರುತ್ತದೆ.
ಎಲ್ಲರನ್ನೂ ಮೆಚ್ಚಿಸುವ ಹಾಗೂ ಎಲ್ಲರ ಮೆಚ್ಚುಗೆಗೂ ಪಾತ್ರರಾಗುವ ಪ್ರಯತ್ನದಲ್ಲಿ ಅಭಿವೃದ್ಧಿ ಕೆಲಸಗಳು ಹಾಗೂ ಘೋಷಿಸಿರುವ ಹೊಸ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳ್ಳುತ್ತವೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಭರವಸೆಗಳ ಬುತ್ತಿ ಬಡಿಸಲು ಹೊರಟಿರುವ ಬೊಮ್ಮಾಯಿ ಅವರ “ಮೆನು ಕಾರ್ಡ್‌’ ಚೆನ್ನಾಗಿದೆ, ಊಟಕ್ಕೆ ಕುಳಿತವರ ಮುಂದೆ ದೊಡ್ಡ ಎಲೆಯಂತು ಹಾಕಲಾಗಿದೆ. ಆದರೆ ಎಷ್ಟರ ಮಟ್ಟಿಗೆ ಅಡುಗೆ ತಯಾರಿಸಿ ಬಡಿಸಲು ಸಾಧ್ಯ ಎಂಬುದು ಮಾತ್ರ ಯಕ್ಷಪ್ರಶ್ನೆ. ಬಜೆಟ್‌ನಲ್ಲಿ ಘೋಷಿಸಿರುವ ಎಲ್ಲಾ ಕಾರ್ಯಕ್ರಮಗಳ ಜಾರಿಗೆ ಸಂಪನ್ಮೂಲ ಕೊರತೆಯನ್ನು ಅಂಕಿಅಂಶಗಳ ಆಟದಲ್ಲಿ ಮರೆಮಾಚುವ ಪ್ರಯತ್ನ ನಡೆಸಿ, ಪರಿಣಿತ ಅರ್ಥಶಾಸ್ತ್ರಜ್ಞತೆಯನ್ನು ಪ್ರದರ್ಶಿಸಿದ್ದಾರೆ.

ಬಜೆಟ್‌ನಲ್ಲೂ ಹಿಂದುತ್ವದ ಲೇಪ
ಬಿಜೆಪಿ ಸರ್ಕಾರ ತನ್ನ ಹಿಂದುತ್ವದ ಲೇಪವನ್ನು ಬಜೆಟ್‌ಗೂ ಅಂಟಿಸುವ ಮೂಲಕ ಎದುರಾಳಿಗಳ ಬಾಯಿ ಮುಚ್ಚಿಸಲು ಹೊರಟಿದೆ. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಪ್ರಸ್ತಾವನೆ ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ-ಕಾಂಗ್ರೆಸ್‌-ಜೆಡಿಎಸ್‌ ನಡುವೆ ತ್ರಿಕೋನ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ದೇವಾಲಯಗಳು ಹಾಗೂ ಮಠಗಳ ಪುನರುಜ್ಜೀವನಕ್ಕೆ ಒಂದು ಸಾವಿರ ಕೋಟಿ ರೂ. ಮೀಸಲಿರುವುದು ಜಾತ್ಯತೀತವಾದಿಗಳ ಕಣ್ಣು ಕೆಂಪಾಗಿಸಿದೆ. ಇದನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡು ವಿರೋಧಿಗಳ ಬಾಯಿ ಮುಚ್ಚಿಸುವುದು ಇಲ್ಲವೇ ಸಂದಿಗ್ಧಕ್ಕೆ ಸಿಲುಕಿಸುವುದು ಸರ್ಕಾರದ ತಂತ್ರಗಾರಿಕೆಯ ಭಾಗದಂತೆ ಕಾಣುತ್ತಿದೆ.

Advertisement

-ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next