Advertisement

ಕರ್ನಾಟಕ ಬಂದ್‌: ಉತ್ತರ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

09:13 AM Jan 26, 2018 | Team Udayavani |

ಹುಬ್ಬಳ್ಳಿ: ಮಹದಾಯಿಗಾಗಿ ಗುರುವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಯಲ್ಲಿ ಸಂಪೂರ್ಣ ಬಂದ್‌ ಆಗಿದ್ದರೆ, ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಅರ್ಧಂಬರ್ಧ ಬಂದ್‌ ಆಗಿತ್ತು. ಶಿವಮೊಗ್ಗ, ಹಾವೇರಿ, ಕೊಪ್ಪಳ, ಬೀದರ್‌, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆಯಲ್ಲಿ
ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯಪುರ, ಬಳ್ಳಾರಿಯಲ್ಲಿ ಜನಜೀವನ ಎಂದಿನಂತೆ ಇತ್ತು.

Advertisement

ಧಾರವಾಡದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬೀದಿಗಿಳಿದ ಹೋರಾಟಗಾರರು ಗೋವಾ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ಜ್ಯೂಬಿಲಿ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಗೋವಾ ಸರ್ಕಾರದ ಪ್ರತಿಕೃತಿ ದಹಿಸಿದವು. ಪ್ರತಿಭಟನೆ ವೇಳೆ ಮೂವರು ಮಹಿಳೆಯರು ಅಸ್ವಸ್ಥಗೊಂಡಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಬೆಳಗ್ಗೆಯಿಂದಲೇ ಬಸ್‌ ಹಾಗೂ ಆಟೋ ಸಂಚಾರ ಬಂದ್‌ ಆಗಿದ್ದರಿಂದ ಪ್ರಯಾಣಿಕರು ಪರದಾಡುವಂತಾ ಯಿತು. ಧಾರವಾಡ ರೈಲು ನಿಲ್ದಾಣಕ್ಕೆ
ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು. ನವಲಗುಂದ ದಲ್ಲಿ ಪಕ್ಷಾತೀತ ಹೋರಾಟ ಸಮಿತಿ ನೇತೃತ್ವದಲ್ಲಿ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಯನ್ನು 8 ಗಂಟೆ ಕಾಲ ಬಂದ್‌ ಮಾಡಿ ಪ್ರತಿಭಟಿಸಲಾಯಿತು.
ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಕಾವು ಜೋರಾಗಿತ್ತು. ಕರವೇ ಕಾರ್ಯಕರ್ತರು ಕೋರ್ಟ್‌ ವೃತ್ತದಲ್ಲಿ ಆಗಮಿಸುತ್ತಿದ್ದ ಕಾರನ್ನು ತಡೆದು ಅದರ ಗ್ಲಾಸ್‌ ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಚನ್ನಮ್ಮ ವೃತ್ತದ ಮೂಲಕ ತೆರಳಿ ಮತ್ತೂಮ್ಮೆ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಬಳಿಕ ಬಿಎಸ್‌ಎನ್‌ಎಲ್‌ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಚನ್ನಮ್ಮ ವೃತ್ತದಲ್ಲಿ ಜೆಡಿಎಸ್‌ ಯುವ ಕಾರ್ಯಕರ್ತರು ರಸ್ತೆಯಲ್ಲಿ ಕಬಡ್ಡಿ ಆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಅಲ್ಲದೇ ಸಂಸದ ಪ್ರಹ್ಲಾದ ಜೋಶಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಬಂದ್‌ ನಿಮಿತ್ತ ಎಲ್ಲಿಯೂ ಟಾಯರ್‌ಗೆ ಬೆಂಕಿ ಹಚ್ಚದಿರುವುದು ಈ ಬಾರಿಯ ವಿಶೇಷ.

ಸರ್ಕಾರದ ಪಾತ್ರ ಇಲ್ಲ
ಬೆಂಗಳೂರು: ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ಕನ್ನಡ ಪರ ಸಂಘಟನೆಗಳು ನೀಡಿದ್ದ ಬಂದ್‌ನಲ್ಲಿ ಸರ್ಕಾರದ ಪಾತ್ರ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ರಾಜ್ಯಾದ್ಯಂತ ಮಹದಾಯಿ ಹೋರಾಟ
ಶಾಂತಿಯುತವಾಗಿ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆ ನಡೆದಿಲ್ಲ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳು ಬಂದ್‌ಗೆ ಬೆಂಬಲಿಸಿವೆ. ನೌಕರರು ಬಂದರೆ ಬಸ್‌ ಚಾಲನೆ ಮಾಡುತ್ತೇವೆ. ಬಾರದೇ ಇದ್ದರೆ ಚಾಲನೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಕೇಳಿ ಬಂದ್‌ ಮಾಡುವುದಿಲ್ಲ. ಇದರಲ್ಲಿ ಸರ್ಕಾರದ ಪಾತ್ರ ಏನೂ
ಇಲ್ಲ. ಸರ್ಕಾರ ರೈತರ ಪರವಾಗಿದೆ. ಗೋವಾ ಸಚಿವರು ರಾಜ್ಯದ ಜನತೆಯ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಈ ಬಗ್ಗೆ ಬಿಜಿಪಿಯವರು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಸಚಿವರು ಆಗ್ರಹಿಸಿದರು.

ಕಲ್ಲು ತೂರಾಟ
ಗದಗ ಜಿಲ್ಲೆ ನರಗುಂದದಲ್ಲಿ ಗೋವಾ ನೋಂದಣಿ ಹೊಂದಿದ ಕಾರೊಂದರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು. ಪಟ್ಟಣ ಹೊರವಲಯ ರೋಣ ವೃತ್ತದಿಂದಲೇ ಹೆದ್ದಾರಿ ವಾಹನಗಳ ಸಂಚಾರ ಬಂದ್‌ ಮಾಡಿದ್ದರಿಂದ ಸುಮಾರು ಒಂದೂವರೆ
ಕಿ.ಮೀ. ಉದ್ದಕ್ಕೂ ರಾಜ್ಯ ಮತ್ತು ಹೊರರಾಜ್ಯದ ಲಾರಿಗಳು ಸಂಜೆವರೆಗೂ ಸಾಲುಗಟ್ಟಿ ನಿಂತಿದ್ದವು. ಗಜೇಂದ್ರಗಡ ಸೇರಿ ಜಿಲ್ಲಾದ್ಯಂತ ಬಂದ್‌ ಯಶಸ್ವಿಯಾಯಿತು. ಬೆಳಗಾವಿ ನಗರ, ಸವದತ್ತಿ, ಖಾನಾಪುರ, ರಾಮದುರ್ಗ, ಬೈಲಹೊಂಗಲ ತಾಲೂಕುಗಳಲ್ಲಿ ಮಾತ್ರ
ಬಂದ್‌ ಯಶಸ್ವಿಯಾಯಿತು. ಉಳಿದಂತೆ ಜಿಲ್ಲೆಯ ವಿವಿಧೆಡೆ ಜನಜೀವನ ಎಂದಿನಂತಿತ್ತು.

Advertisement

ಗೋವಾಗೂ ತಟ್ಟಿದ ಬಿಸಿ
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿ ಸಿದಂತೆ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆ
ಗೋವಾದಿಂದ ಕದಂಬ ಮಹಾಮಂಡಳದ ಬಸ್‌ ಓಡಾಟ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಬಂದ್‌ ಹಿನ್ನೆಲೆ ಬುಧವಾರದಿಂದಲೇ ಬಸ್‌ ಓಡಾಟ ಸ್ಥಗತಗೊಳಿಸಲಾಗಿತ್ತು. ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಹಾಗೂ ಕರ್ನಾಟಕದ ನಡುವಿನ ಸಂಘರ್ಷ ಹೆಚ್ಚುತ್ತಲೇ ಸಾಗಿದೆ. ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕದಿಂದ ಹಾಲು, ತರಕಾರಿ, ಮೊಟ್ಟೆ, ಕಿರಾಣಿ ಸಾಮಗ್ರಿಗಳು ಗೋವಾಕ್ಕೆ ಪೂರೈಕೆಯಾಗಲಿಲ್ಲ. ಇದರಿಂದಾಗಿ ಗೋವಾದಲ್ಲಿ ವಿವಿಧ ವಸ್ತುಗಳ ಕೊರತೆಯುಂಟಾಗಿ ಜನತೆ ಪರದಾಟುವ ಪರಿಸ್ಥಿತಿ ಉಂಟಾಗಿತ್ತು. 

ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ
ಮಂಗಳೂರು/ಉಡುಪಿ: ಬಂದ್‌ಗೆ ಮಂಗಳೂರು ಮತ್ತು ಉಡುಪಿ ನಗರದಲ್ಲಿ ಪ್ರತಿಕ್ರಿಯೆ ನೀರಸವಾಗಿತ್ತು. ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಹೊರ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರು ಕೊಂಚ ಆತಂಕಕ್ಕೆ ಒಳಗಾಗಿದ್ದರು. ಬೆಳಗ್ಗೆ 10.30ರ
ಬಳಿಕ ಕೆಎಸ್‌ಆರ್‌ಟಿಸಿ ಸಂಚಾರ ಸಹಜ ಸ್ಥಿತಿಗೆ ಮರಳಿತು.ಇದೇ ಪರಿಸ್ಥಿತಿ ಉಡುಪಿ, ಕುಂದಾಪುರದಲ್ಲೂ ಉಂಟಾಗಿತ್ತು.

ರೈಲು ತಡೆದು ಪ್ರತಿಭಟನೆ: ಬಂದ್‌ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ಬಣದ ದಕ್ಷಿಣ ಕನ್ನಡ ಘಟಕವು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಕೇರಳಕ್ಕೆ ತೆರಳುವ ರೈಲು ತಡೆದು ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ತುರವೇ ಕಾರ್ಯಕರ್ತರು ಮತ್ತು ಸ್ಥಳೀಯರು ಕರವೇ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡು, ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡದ ನೀವು ಈಗೇಕೆ ಪ್ರತಿಭಟನೆಗೆ ಬೆಂಬಲ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಈ ವೇಳೆಯಲ್ಲಿ ಎರಡೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. 

ಬಂದ್‌ ವಿರುದ್ಧ ಪಿಐಎಲ್‌
ಬೆಂಗಳೂರು: ಮಹದಾಯಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಧಾನಮಂತ್ರಿಯವರು ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಜ.25ರಂದು ಕರೆ ನೀಡಿದ್ದ “ಕರ್ನಾಟಕ ಬಂದ್‌’ ಹಾಗೂ ಫೆ.4ರ ಉದ್ದೇಶಿತ
“ಬೆಂಗಳೂರು ಬಂದ್‌’ ವಿರೋಧಿಸಿ ಹೈಕೋರ್ಟ್‌ನಲ್ಲಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಬಂದ್‌ನಿಂದ ರಾಜ್ಯದ ಬೊಕ್ಕಸಕ್ಕೆ ಆಗುವ ನಷ್ಟವನ್ನು ವಾಟಾಳ್‌ ನಾಗರಾಜ್‌ ಹಾಗೂ ಸಂಬಂಧಪಟ್ಟ ಸಂಘಟನೆಯಿಂದ ವಸೂಲಿ ಮಾಡಬೇಕು  ದು
ರಾಜಾಜಿನಗರದ ಶ್ರದ್ಧಾ ಪೋಷಕರ ಸಂಘದ ಅಧ್ಯಕ್ಷ ಸಿ. ರಾಜಾ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next