Advertisement

ಬಂಟ್ವಾಳ: ಪ್ರಭಾವಿ ಸಚಿವರ ಕ್ಷೇತ್ರದಲ್ಲಿ ಕಾಂಗ್ರೆಸ್ಸೋ? ಬಿಜೆಪಿಯೋ?

08:20 AM Apr 30, 2018 | Team Udayavani |

ಮಂಗಳೂರು: ಬಂಟ್ವಾಳದಲ್ಲಿ ಪದೇ ಪದೇ ನಡೆದ ಕೋಮು ಸಂಘರ್ಷ, ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಕೊಲ್ಲೂರಿನಿಂದ ಬರುತ್ತಿದ್ದ ವಿದ್ಯಾರ್ಥಿಗಳ ಊಟದ ಅನುದಾನ ಕಡಿತದ ವಿಚಾರ ಸೇರಿದಂತೆ ಕೆಲವು ದಿನಗಳಿಂದ SDPI ಅಭ್ಯರ್ಥಿಯ ನಾಮಪತ್ರ ಹಿಂದೆಗೆತದ ವಿಚಾರ ಪ್ರಸ್ತುತ ಚುನಾವಣೆಯ ಹೊಸ್ತಿಲಲ್ಲಿ ಬಂಟ್ವಾಳ ಕ್ಷೇತ್ರವನ್ನು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ. ರಾಜ್ಯ ಸಚಿವ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿರುವ ಬಿ. ರಮಾನಾಥ ರೈ ಅವರನ್ನು ಸೋಲಿಸಲೇಬೇಕು ಎಂದು ಪಣತೊಟ್ಟಂತೆ ಬಿಜೆಪಿಯು ಇಲ್ಲಿ ಕಾರ್ಯತಂತ್ರ ರೂಪಿಸುತ್ತಿದೆ. ಇದು ಅಭಿವೃದ್ಧಿ ಮತ್ತು ಅಪಪ್ರಚಾರಗಳ ನಡುವಿನ ಚುನಾವಣೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷವು ರಮಾನಾಥ ರೈ ಅವರನ್ನು 7ನೇ ಬಾರಿಗೆ ಗೆಲ್ಲಿಸಲು ಹೊರಟಿದೆ.

Advertisement

ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ-ಹಾಗೂ ಕಾಂಗ್ರೆಸ್‌ ಮಧ್ಯೆಯೇ ನೇರ ಹಣಾಹಣಿ ಇದ್ದು, ಮೂರನೇ ಅಭ್ಯರ್ಥಿ ಇಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದ್ದರೂ ಬಂಟ್ವಾಳದಲ್ಲಿ ಅಂತಹ ಯಾವುದೇ ಗೊಂದಲಗಳಿರಲಿಲ್ಲ. ಬಿಜೆಪಿ ಇಲ್ಲಿ 2013ರಲ್ಲಿ ಸ್ಪರ್ಧಿಸಿದ್ದ ರಾಜೇಶ್‌ ನಾಯ್ಕ ಉಳಿಪ್ಪಾಡಿ ಅವರನ್ನೇ ಕಣಕ್ಕಿಳಿಸಿದೆ.

ಮೊನ್ನೆ ಮೊನ್ನೆಯವರೆಗೂ ಬಂಟ್ವಾಳದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಗೆ SDPI ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರ ನಾಮಪತ್ರ ಹಿಂದೆಗೆತದ ವಿಚಾರ ದೊಡ್ಡ ತಲೆನೋವನ್ನು ತಂದಿದೆ. ಆದರೆ ಸಾರ್ವಜನಿಕವಾಗಿ ಅದನ್ನು ತೋರಿಸಿಕೊಳ್ಳದ ಬಿಜೆಪಿ ಇದರಿಂದ ನಮಗೆ ಇನ್ನೂ ಹೆಚ್ಚಿನ ಲಾಭವಾಗಲಿದೆ ಎಂದೇ ಹೇಳಿಕೊಳ್ಳುತ್ತಿದೆ. ಮತ್ತೂಂದೆಡೆ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದಕ್ಕೆ SDPI ಪಕ್ಷದಲ್ಲೂ ವಿರೋಧದ ಮಾತುಗಳು ಕೇಳಿಬರುತ್ತಿವೆ. 


ಬಂಟ್ವಾಳದಲ್ಲಿ ಮುಸ್ಲಿಂ ಹಾಗೂ ಬಿಲ್ಲವ ಸಮುದಾಯಗಳು ಪ್ರಬಲವಾಗಿದ್ದರೂ 1989ರಿಂದ ಇಲ್ಲಿಯವರೆಗೂ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಂಟರೇ ಸ್ಪರ್ಧಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿಜೆಪಿ-ಕಾಂಗ್ರೆಸ್‌ ಮಧ್ಯೆಯೇ ನೇರ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಗೆದ್ದು ಶಾಸಕರಾದವರ ಪಕ್ಷವು ಅಧಿಕಾರಕ್ಕೆ ಬಂದರೆ ಶಾಸಕರು ಸಚಿವರಾಗುತ್ತಾರೆ ಎಂಬ ಮಾತಿದೆ. ಅದಕ್ಕೆ ಪೂರಕವೆಂಬಂತೆ ರೈ ಅವರು ಹಲವು ಅವಧಿಗಳಲ್ಲಿ ಸಚಿವರಾಗುವ ಜತೆಗೆ, 2004ರಲ್ಲಿ ಗೆದ್ದ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ಅವರು ಬಿಜೆಪಿ-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಸಚಿವರಾಗಿದ್ದರು.

ಪ್ರಮುಖ ಸ್ಪರ್ಧಿಗಳು
ಬಿ. ರಮಾನಾಥ ರೈ: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಾಗಿರುವ ರಮಾನಾಥ ರೈ ಅವರು ಪ್ರಸ್ತುತ 8ನೇ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. 2004ರಲ್ಲಿ ಬಿಜೆಪಿಯ ಬಿ. ನಾಗರಾಜ ಶೆಟ್ಟಿ ಅವರ ವಿರುದ್ಧ ಸೋತದ್ದು ಬಿಟ್ಟರೆ, ಉಳಿದಂತೆ 1985ರಿಂದ 6 ಅವಧಿಗಳಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ರೈ ಅವರು ಗೃಹ ರಾಜ್ಯ ಸಚಿವರಾಗಿ, ಅಬಕಾರಿ ಸಚಿವರಾಗಿ, ಬಂದರು, ಮೀನುಗಾರಿಕೆ ಸಚಿವರಾಗಿ, ಸಾರಿಗೆ ಸಚಿವರಾಗಿ, ಕಳೆದ 5 ವರ್ಷಗಳಿಂದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸರಕಾರದ ಕೊನೆಯ ಅವಧಿಯಲ್ಲಿ ಡಾ| ಜಿ. ಪರಮೇಶ್ವರ ಅವರಿಂದ ತೆರವಾದ ಗೃಹಸಚಿವರ ಹುದ್ದೆಗೆ ರೈ ಅವರ ಹೆಸರೂ ಕೇಳಿಬಂದಿತ್ತು.

Advertisement

ರಾಜೇಶ್‌ ನಾಯ್ಕ ಉಳಿಪ್ಪಾಡಿ: ರಾಜೇಶ್‌ ನಾಯ್ಕ ಉಳಿಪ್ಪಾಡಿ ಅವರು 2013ರಲ್ಲಿ ರಮಾನಾಥ ರೈ ಅವರ ಎದುರು ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸೋತರೂ ಕಾರ್ಯಕರ್ತರ ಸಂಪರ್ಕವನ್ನು ಬಿಡದೆ ಇಡೀ ಕ್ಷೇತ್ರದಾದ್ಯಂತ ಸಂಚರಿಸಿ, ಈ ಬಾರಿ ಸುಲಭವಾಗಿ ಬಿಜೆಪಿಯ ಸೀಟು ಗಿಟ್ಟಿಸಿಕೊಂಡಿದ್ದಾರೆ. ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿರುವವರು ನಾಯ್ಕ. ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಇವರ ಒಡ್ಡೂರು ಫಾರ್ಮ್ಸ್ ದೊಡ್ಡ ಹೆಸರನ್ನು ಪಡೆದಿದೆ. ಇವರ ಕೃಷಿ ಪ್ರಯೋಗಗಳ ಕುರಿತು ಹಲವು ಸಂಶೋಧನೆಗಳೂ ನಡೆದಿರುವುದು ವಿಶೇಷ.

ಇಡೀ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ. ಕಾಂಗ್ರೆಸ್‌ನವರು ಸೋಲಿನ ಭಯದಿಂದ ಜೆಡಿಎಸ್‌ ಹಾಗೂ SDPI ಅಭ್ಯರ್ಥಿ ಸ್ಪರ್ಧಿಸದಂತೆ ಮಾಡಿದ್ದಾರೆ. SDPIಯನ್ನು ಬಿಜೆಪಿ ಎಂದೂ ಅವಲಂಬಿಸಿಲ್ಲ. ಕೊಲೆಗಡುಕರು ಎಂದು ಆರೋಪಿಸುತ್ತಿದ್ದವರ ಜತೆಯೇ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಂಡಿದ್ದು, ಬಂಟ್ವಾಳದಲ್ಲಿ ಗೆಲ್ಲುವ ಪೂರ್ಣ ವಿಶ್ವಾಸವಿದೆ. 
– ರಾಜೇಶ್‌ ನಾಯ್ಕ, ಬಿಜೆಪಿ ಅಭ್ಯರ್ಥಿ

ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನೂ ಸಮಾನವಾಗಿ ಕಂಡಿದ್ದೇವೆ. ನನ್ನನ್ನು ಯಾರೂ ಜಾತಿವಾದಿ, ಮತೀಯವಾದಿ ಎನ್ನುವುದಿಲ್ಲ. ನಮ್ಮ ತನವನ್ನು ಕಾರ್ಯಪಾಲನೆ ಮೂಲಕ ತೋರಿಸುತ್ತೇವೆ. ಹೀಗಾಗಿ ಬಂಟ್ವಾಳದಲ್ಲಿ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ. 
– ಬಿ. ರಮಾನಾಥ ರೈ, ಕಾಂಗ್ರೆಸ್‌ ಅಭ್ಯರ್ಥಿ

SDPI, ಜೆಡಿಎಸ್‌ ಸ್ಪರ್ಧೆ ಇಲ್ಲ
2013ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗಿಂತ ಅನಂತರದ ಸ್ಥಾನಗಳನ್ನು ಪಡೆದ SDPI ಹಾಗೂ ಜೆಡಿಎಸ್‌ ಈ ಬಾರಿ ಸ್ಪರ್ಧಿಸುತ್ತಿಲ್ಲ. ಕಳೆದ ಬಾರಿ ಆರು ಇದ್ದ ಅಭ್ಯರ್ಥಿಗಳ ಸಂಖ್ಯೆ ಈ ಬಾರಿ ಐದಕ್ಕೆ ಇಳಿದಿದೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಇಬ್ರಾಹಿಂ ಕೈಲಾರು ಅವರು ಈ ಬಾರಿ ಪಕ್ಷೇತರರಾಗಿದ್ದಾರೆ. ಉಳಿದಂತೆ ಲೋಕ ಆವಾಜ್‌ ದಳದಿಂದ ಬಾಲಕೃಷ್ಣ ಪೂಜಾರಿ ಹಾಗೂ ಎಂಇಪಿಯಿಂದ ಶಮೀರ್‌ ಸ್ಪರ್ಧಿಸುತ್ತಿದ್ದಾರೆ.

ಪಕ್ಷೇತರ ಗೆಲುವು ರಾಜ್ಯದಲ್ಲಿ ಹೆಚ್ಚು
ರಾಜ್ಯದಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಅನೇಕರು ಅವಕಾಶ ನಿರಾಕರಣೆಯಾದ ತತ್‌ಕ್ಷಣ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇದು ಹಲವು ಕ್ಷೇತ್ರಗಳ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ. ಕಳೆದ ಐದು ಚುನಾವಣೆಗಳ ಅಂಕಿ ಅಂಶಗಳನ್ನು ಗಮನಿಸಿದರೆ, ದೇಶದ ಇತೆರಲ್ಲ ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕದಲ್ಲಿಯೇ ಪಕ್ಷೇತರರು ಹೆಚ್ಚು ಗೆಲುವಿನ ಪ್ರಮಾಣ ದಾಖಲಿಸಿರುವುದು ಕಂಡುಬರುತ್ತದೆ. ಕಳೆದ ಐದು ಚುನಾವಣೆಗಳಲ್ಲಿ ಕರ್ನಾಟಕ, ಆಂಧ್ರ, ತ. ನಾಡು, ಉ. ಪ್ರದೇಶ, ಗುಜರಾತ್‌, ದಿಲ್ಲಿ, ರಾಜಸ್ಥಾನ, ಬಿಹಾರ, ಪ. ಬಂಗಾಲ ಮತ್ತು ಮ. ಪ್ರದೇಶಗಳ ಪೈಕಿ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿಗಳು ಶೇ.2ರಷ್ಟು ಗೆಲುವು ಸಾಧಿಸಿರುವುದು ಗಮನಾರ್ಹ. ರಾಜಸ್ಥಾನವನ್ನು ಹೊರತು ಪಡಿಸಿದರೆ ಇನ್ಯಾವುದೇ ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿಗಳ ಗೆಲುವು ಶೇ.1ನ್ನು ಮೀರಿಲ್ಲ. ರಾಜ್ಯದಲ್ಲಿ ಪಕ್ಷೇತರರ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸುವ ಅಂಶವೆಂದರೆ ಅವು ಬಂಡಾಯ ಅಭ್ಯರ್ಥಿಗಳು ಎಂಬುದೇ ಆಗಿದೆ. ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲ್ಲುವ ಪ್ರಮಾಣ ಹೆಚ್ಚಳ 1983ರಿಂದ ಆರಂಭವಾಯಿತು. ಆಗ 22 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ತ್ರಿಕೋನ ಸ್ಪರ್ಧೆ ಏರ್ಪಡುವ ಕ್ಷೇತ್ರಗಳಲ್ಲಿ ಇಂತಹ ಅಭ್ಯರ್ಥಿಗಳು ಫ‌ಲಿತಾಂಶವನ್ನು ಬುಡಮೇಲು ಮಾಡುವ ಸಾಧ್ಯತೆಗಳು ಹೆಚ್ಚು.

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next