Advertisement

ಬಂಟ್ವಾಳ: ನದೀಕ್ಷೇತ್ರದಲ್ಲಿ ಆಗಬೇಕಿದೆ ಇನ್ನೂ ಕೆಲಸ 

09:00 AM Apr 24, 2018 | Karthik A |

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಾಕಷ್ಟು ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ಅವುಗಳನ್ನು ಉದ್ಯೋಗ ಸೃಷ್ಟಿಗೆ ಪೂರಕವಾಗಿ ಬಳಿಸಿಕೊಳ್ಳಲಾಗಿಲ್ಲ. ನಗರ ಕೇಂದ್ರ ಜನ, ವಾಹನ ನಿಬಿಡವಾಗಿದೆ. ನಗರ ವಿಸ್ತರಣೆ ಮಾಡದೆ ಏಕ ಕೇಂದ್ರಿತ ರೀತಿಯಲ್ಲಿ ನಡೆದಿರುವ ಬೆಳವಣಿಗೆ ಇಲ್ಲಿನ ಮುಖ್ಯ ಪಟ್ಟಣ ಬಿ.ಸಿ.ರೋಡಿನ ದೊಡ್ಡ ಸಮಸ್ಯೆಯಾಗಿದೆ.

Advertisement

1. ಸುಗಮ ಸಾರಿಗೆ
ತಾಲೂಕು ಕೇಂದ್ರ ಬಿ.ಸಿ.ರೋಡ್‌ನ‌ಲ್ಲಿ ಫ್ಲೈಓವರ್‌ ರಚನೆ ಆದರೂ ಇಂದಿಗೂ ಸಂಚಾರ ಸಮಸ್ಯೆ ತೀರಿಲ್ಲ. ಮೊಡಂಕಾಪು – ಬ್ರಹ್ಮರ ಕೂಟ್ಲು ಸಂಪರ್ಕದ ಬೈಪಾಸ್‌ ರಸ್ತೆ ಅವಶ್ಯ. ಇದರಿಂದ ಸಂಚಾರದ ಒತ್ತಡ ನಿವಾರಿಸಬಹುದು.

2. ನೀರು ಪೂರೈಕೆ
ಐದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಆಗಿದ್ದರೂ ಎರಡು ಕಡೆ ಕಾಮಗಾರಿ ನಡೆಯುತ್ತಿದೆ. ಉಳಿದವೂ ಶೀಘ್ರ ಅನುಷ್ಠಾನಕ್ಕೆ ಬಂದರೆ ಬಂಟ್ವಾಳ ಕ್ಷೇತ್ರ ಕುಡಿಯುವ ನೀರು ಸಮಸ್ಯೆಯಿಂದ ಮುಕ್ತವಾದೀತು.

3. ಒಳಚರಂಡಿ
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಇದ್ದರೂ ವ್ಯವಸ್ಥೆಗಳ ಲಾಬಿಯಿಂದ ಸಮರ್ಪಕವಾಗಿ ಕಾರ್ಯಗತವಾಗಿಲ್ಲ. ಯೋಜನೆಯ ಆಮೂಲಾಗ್ರ ಬದಲಾವಣೆ ಆಗಬೇಕು.

4. ಕೃಷಿಗೆ ಪ್ರೋತ್ಸಾಹ
ಕ್ಷೇತ್ರದಲ್ಲಿ ಕೃಷಿ ಉತ್ತೇಜಿತ ಉದ್ಯಮ, ಯೋಜನೆಗಳನ್ನು ಹಾಕಿಕೊಳ್ಳಲಾಗಿಲ್ಲ. ತೆಂಗು ಕೃಷಿ ಉತ್ತಮವಾಗಿದ್ದರೂ ಅದನ್ನು ಲಾಭದಾಯಕವಾಗಿ ಮಾರ್ಪಡಿಸುವ ಯೋಜನೆಗಳನ್ನು ಸಂಬಂಧಪಟ್ಟ ಇಲಾಖೆಗಳು ರೂಪಿಸಬೇಕು.

Advertisement

5. ನೀರಾ ಘಟಕಕ್ಕೆ ಪುನಶ್ಚೇತನ
ತುಂಬೆಯಲ್ಲಿರುವ ನೀರಾ ಘಟಕ ಮುಚ್ಚಿದೆ. ಅದಕ್ಕೆ ಪುನಶ್ಚೇತನ ನೀಡಿ ಕೃಷಿ ಉದ್ಯಮವಾಗಿ ಪರಿವರ್ತಿಸಿದರೆ ಅಪಾರ ಉದ್ಯೋಗ ಸೃಷ್ಟಿ ಆಗುವುದು. ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ಉದ್ಯಮಗಳು ಆರಂಭವಾಗಬೇಕು.

6. ವಾಹನ ಸಂಚಾರಕ್ಕೆ ಅವಕಾಶ ನೀಡಿ
ತುಂಬೆ ವೆಂಟೆಡ್‌ ಡ್ಯಾಂ ಮೇಲೆ ಲಘು ವಾಹನ ಸಂಚಾರದ ವ್ಯವಸ್ಥೆ ಮಾಡಿದಲ್ಲಿ ನೇತ್ರಾವತಿ ನದಿಯ ಉಭಯ ಗ್ರಾಮಗಳ ಜನರಿಗೆ ಸಂಪರ್ಕ ಸುಲಭವಾದೀತು. ಕೋಟ್ಯಂತರ ರೂ. ಮೌಲ್ಯದ ಇಂಧನ ಉಳಿತಾಯ ಸಾಧ್ಯ.

7. ತ್ಯಾಜ್ಯ ಸಂಸ್ಕರಣೆ
ಪುರಸಭೆ ಪ್ರಾಯೋಜಿತ ಕೋಟ್ಯಂತರ ರೂ. ವೆಚ್ಚದ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ 5 ವರ್ಷಗಳಿಂದ ನನೆಗುದಿಯಲ್ಲಿದೆ. ಇದಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಬೇಕು.

8. ಅಕ್ರಮ ತಡೆ
ಗ್ರಾಮಾಂತರ ಪ್ರದೇಶಗಳಲ್ಲಿ ಕೆಂಪುಕಲ್ಲು ಕೋರೆಗಳು ಜೀವಕ್ಕೆ ಅಪಾಯ ಒಡ್ಡುವ ರೀತಿಯಲ್ಲಿ ಅಕ್ರಮವಾಗಿ ನಡೆಯುತ್ತಿವೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವಾಗಿದ್ದಾರೆ. ಅಕ್ರಮಗಳ ತಡೆ ಮೊದಲಾಗಿ ಆಗಬೇಕು.

9. ಕೃಷಿಕರೆಲ್ಲರಿಗೆ ಸವಲತ್ತು
ಕೃಷಿಕರಿಗೆ ಇಲಾಖೆಗಳಿಂದ ಪ್ರೋತ್ಸಾಹ, ಮಾರ್ಗದರ್ಶನ ಬಹುತೇಕ ಶೂನ್ಯವಾಗಿದ್ದು, ಕೆಲವೇ ಕೃಷಿಕರು ಸರಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಅರ್ಹರೆಲ್ಲರಿಗೂ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.

10. ಬಾಳೆ ಕೃಷಿಗೂ ಬೇಕು ಪ್ರೋತ್ಸಾಹ
ತಾಲೂಕಿನಲ್ಲಿ ಬಾಳೆ ಕೃಷಿ ಸಾಮಾನ್ಯ. ಆದರೆ ಗ್ರಾಮಾಂತರ ಪ್ರದೇಶಗಳಿಂದ ಫ‌ಸಲನ್ನು ಸಂಗ್ರಹಿಸಿ ಮಾರುಕಟ್ಟೆಗೆ ತರುವ ವ್ಯವಸ್ಥೆ ಇಲ್ಲ. ಹಾಲು, ರಬ್ಬರ್‌ ಶೀಟ್‌ ಸಂಗ್ರಹ ಸೊಸೈಟಿ ಮಾದರಿಯಲ್ಲಿ ಇದರ ಸಂಗ್ರಹಕ್ಕೆ ವ್ಯವಸ್ಥೆ ಬೇಕಾಗಿದೆ.

11. ಕೃಷಿಗೆ ನದಿ ನೀರು
ಬಂಟ್ವಾಳ ತಾಲೂಕಿನ ನಡುವೆ ನೇತ್ರಾವತಿ ನದಿ ಹರಿಯುತ್ತದೆ. ಆದರೆ ನದಿ ನೀರನ್ನು ಕೃಷಿಗೆ ಸಮರ್ಪಕವಾಗಿ ಬಳಸುವ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ. ನದಿ ತಟದಲ್ಲಿ ಅಲ್ಲಲ್ಲಿ ಕೃಷಿ ಪೂರಕ ಯೋಜನೆಗಳನ್ನು ರೂಪಿಸಬೇಕು.

12. ಶಿಕ್ಷಣ
ಸರಕಾರಿ ಪ್ರಾಯೋಜಿತ ತಾಂತ್ರಿಕ ಶಿಕ್ಷಣ ನೀಡುವ ಶೈಕ್ಷಣಿಕ ಕೇಂದ್ರಗಳು ಅಗತ್ಯವಾಗಿ ಬೇಕಿವೆ. ಬಡ ವಿದ್ಯಾರ್ಥಿಗಳು ಉನ್ನತ ಕಲಿಕೆಗಾಗಿ ದೂರ ಹೋಗುವಂತಾಗಬಾರದು. ಗ್ರಾಮೀಣ ಪ್ರದೇಶಗಳಲ್ಲೂ ಕಲಿಕೆಗೆ ಅವಕಾಶ ಲಭಿಸಲಿ.

Advertisement

Udayavani is now on Telegram. Click here to join our channel and stay updated with the latest news.

Next