Advertisement

ಕಾರ್ಕಳ: ಕುದುರೆಮುಖ ಘಾಟಿಯಲ್ಲಿ ಚಾಲನೆ-ಇರಲಿ ಜಾಗ್ರತೆ

03:19 PM Jun 12, 2024 | Team Udayavani |

ಕಾರ್ಕಳ: ಮಳೆಗಾಲ ಕುದುರೆಮುಖ- ಮಾಳ ರಾಷ್ಟ್ರೀಯ ಹೆದ್ದಾರಿ ಘಾಟಿಯಲ್ಲಿ ಸಂಚರಿಸುವುದೆಂದರೆ ಹೆದರಿಕೆ. ಇಲ್ಲಿ ತೆರಳುವಾಗ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸಬೇಕು. ತುಸು ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಯೂ ಈ ಭಾಗದಲ್ಲಿ ಹೆಚ್ಚಿರುತ್ತದೆ. ಹೆದ್ದಾರಿ ತಿರುವು ಮುರುವಿನಿಂದ ಕೂಡಿದೆ. ಘಾಟಿಯಲ್ಲಿ ವಾಹನಗಳು ಹತ್ತಿಳಿಯುವಾಗ ಅಪಘಾತಗಳು
ಸಂಭವಿಸುತ್ತವೆ. ಕಳೆದ ಮಳೆಗಾಲದಲ್ಲಿ ಅನೇಕ ಅವಘಡಗಳು ಸಂಭವಿಸಿತ್ತು. ಜೀವಹಾನಿಯೂ ಆಗಿತ್ತು.

Advertisement

ಕಾರ್ಕಳ ತಾ|ನ ಗಡಿಭಾಗದಲ್ಲಿರುವ ಎಸ್‌ಕೆ ಬಾರ್ಡರ್‌ನಿಂದ ಮೇಲೆ ಹೋಗುವ ಈ ರಸ್ತೆ ಬಲು ಅಪಾಯಕಾರಿ, ಕಡಿದಾದ ರಸ್ತೆಯುದ್ದಕ್ಕೂ ಹೇರ್‌ ಪಿನ್‌ ರೀತಿಯ ತಿರುವುಗಳಿವೆ. ಮಣ್ಣು ಸವಕಳಿಯಿಂದ ಮಳೆಗೆ ಗುಡ್ಡ ಕುಸಿತ, ರಸ್ತೆ ಮೇಲೆ ಮರ, ಕೊಂಬೆ ಉರುಳಿ ಬೀಳುವುದು ನಿರಂತರವಾಗಿ ನಡೆಯುತ್ತಿರುತ್ತದೆ. ಇಳಿದು ಬರುವ ವಾಹನ ಸವಾರರು ಬ್ರೇಕ್‌ ಅನ್ನು ಹತೋಟಿಯಲ್ಲಿ ಇಟ್ಟುಕೊಂಡೇ ಸಾಗಬೇಕು. ವೇಗದಲ್ಲೂ ನಿಯಂತ್ರಣ ಅಗತ್ಯ. ಬ್ರೇಕ್‌ ವೈಫ‌ಲ್ಯ ಆದಲ್ಲಿ ಏನೂ ಮಾಡಲಾಗದ ಸ್ಥಿತಿಯಿದೆ.

ವಾಹನ ದಟ್ಟಣೆ ಹೆಚ್ಚಿರುವ ಹೆದ್ದಾರಿ
ಘಾಟಿ ರಸ್ತೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಓಡಾಡುತ್ತಿರುತ್ತಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು ಮಾಳ ಮುಳ್ಳೂರು ಘಾಟಿ ರಸ್ತೆಯಾಗಿ ಬೆಳ್ತಂಗಡಿಗೆ ತೆರಳುತ್ತಾರೆ. ಕಳಸ, ಕುದುರೆ ಮುಖ, ಶೃಂಗೇರಿ ಮತ್ತು ಕೊಪ್ಪ ಕಡೆಯಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಕರಾವಳಿ ಭಾಗಕ್ಕೆ ಘಟ್ಟದ ಮೇಲಿಂದ ಬರುತ್ತಾರೆ.

ಹೆದ್ದಾರಿಯುದ್ದಕ್ಕೂ ಸಿಗುವ ಪ್ರಾಕೃತಿಕ ರಮಣೀಯತೆ ವೀಕ್ಷಿಸಲೆಂದು ಬರುವವರು ಅಧಿಕ ಪ್ರಮಾಣದಲ್ಲಿ ಇರುತ್ತಾರೆ. ದಟ್ಟ ಕಾಡಿನಲ್ಲಿ ಹಾದು ಹೋಗಿರುವ ಹೆದ್ದಾರಿ ಯುದ್ದಕ್ಕೂ ನೆಟ್‌ವರ್ಕ್‌ ಸಿಗುವುದಿಲ್ಲ. ಅವಘಡ ನಡೆದಾಗ ತತ್‌ ಕ್ಷಣಕ್ಕೆ ಸಂಪರ್ಕ ಸಿಗುವುದಿಲ್ಲ. ತುರ್ತು ಚಿಕಿತ್ಸೆಗೆ ಮಾರ್ಗ ಮಧ್ಯೆ ಆಸ್ಪತ್ರೆಗಳಿಲ್ಲ. ಅಪಘಾತ ನಡೆದು ಗಾಯಗಳಾದಲ್ಲಿ ಅವರನ್ನು ಕಾರ್ಕಳ, ಮಣಿಪಾಲ, ಉಡುಪಿ, ಮಂಗಳೂರಿಗೆ ಕರೆದೊಯ್ಯಬೇಕು. ಶೃಂಗೇರಿ ತಾಲೂಕಿನಲ್ಲೂ ಸೂಕ್ತ ಆಸ್ಪತ್ತೆ ಇಲ್ಲ. ಅಪಘಾತ ಸಂದರ್ಭ ಇತರ ವಾಹನದವರು ಗೇಟ್‌ ತಪಾಸಣೆ ಸಿಬಂದಿಗೆ ಮಾಹಿತಿ ನೀಡಿ ಅವರು ಸಂಬಂಧಿಕರನ್ನು ಸಂಪರ್ಕಿಸಿ ತಿಳಿಸಬೇಕಾದ ಸ್ಥಿತಿಯಿದೆ. ರಾತ್ರಿ ವೇಳೆ ಅಪಘಾತವಾದಲ್ಲಿ ನರಳುತ್ತಲೇ ನಡು ರಸ್ತೆಯಲ್ಲಿ ಇರುಳು ಕಳೆಯಬೇಕು.

ವಿಶೇಷ ಗಸ್ತು ವಾಹನ ನಿಯೋಜನೆ ಅಗತ್ಯ
ತನಿಕೋಡು ಅರಣ್ಯ ತಪಾಸಣ ಕೇಂದ್ರದಿಂದ ಮಾಳ ಅರಣ್ಯ ತಪಾಸಣ ಕೇಂದ್ರದವರೆಗೆ ಒಟ್ಟು 39 ಕಿ.ಮೀ. ವ್ಯಾಪ್ತಿಯಲ್ಲಿ ಸಂವಹನಕ್ಕೆ ಸಂಬಂಧಿಸಿ ವಯರ್‌ ಲೆಸ್‌ ಮೊಬೈಲ್‌ ಸಂಪರ್ಕ ವ್ಯವಸ್ಥೆಗಳು ಸಮರ್ಪಕವಿಲ್ಲ. ಮಾಳ ಅರಣ್ಯ ಇಲಾಖೆಯ ತಪಾಸಣ ಗೇಟ್‌, ಎಸ್‌ಕೆ ಬಾರ್ಡರ್‌ ದಾಟಿ ಮುಂದಕ್ಕೆ ಕಳಸ, ಶೃಂಗೇರಿ ಹಾಗೂ ಇನ್ನಿತರ ಸ್ಥಳಗಳಿಗೆ ಸಾಗುವ ದಾರಿ ಮಧ್ಯೆ ಮಾಳ ತಪಾಸಣೆ ಗೇಟ್‌ನಿಂದ ಕುದುರೆಮುಖ ಹಾಗೂ ಶೃಂಗೇರಿಗೆ ಕವಲೊಡೆಯುವ ಜಂಕ್ಷನ್‌ ತನಕದ ನಡುವಿನ ಪ್ರದೇಶದಲ್ಲಿ ಸಂಪರ್ಕ ಸಮಸ್ಯೆಯಿರುವುದು. ವಿಶೇಷವಾಗಿ ಮಳೆಗಾಲದಲ್ಲಿ ತುರ್ತು ವ್ಯವಸ್ಥೆಗಾಗಿ ರಾತ್ರಿ, ಹಗಲು ಗಸ್ತಿನ ವಾಹನದ ಆವಶ್ಯಕತೆ ಈ ಘಾಟಿ ರಸ್ತೆಗಿದೆ.

Advertisement

ವಿಸ್ತರಣೆಗೆ ಕೂಡಿ ಬರದ ಕಾಲ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕೂಗು ದಶಕಗಳ ಬೇಡಿಕೆ ಈಡೇರಿಲ್ಲ. ಹೆದ್ದಾರಿಯ ಎರಡೂ ಬದಿ ಕುದುರೆಮುಖ ಉದ್ಯಾನ ವನ ವ್ಯಾಪ್ತಿಗೆ ಬರುತ್ತದೆ. ವಿಸ್ತರಣೆಗೆ ಕಾನೂನಿನ ತೊಡಕಿದೆ. ಹೆಚ್ಚುತ್ತಿರುವ ವಾಹನ ದಟ್ಟನೆಯಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಮಳೆಗಾಲದ ಪೂರ್ವದಲ್ಲಿ ರಸ್ತೆ ಬದಿ ಟ್ರೀ ಕಟ್ಟಿಂಗ್‌ ನಡೆಸಲಾಗಿದ್ದರೂ ಹೆದ್ದಾರಿಯುದ್ದಕ್ಕೂ ಎಚ್ಚರಿಕೆಯ ಸೂಚನಾ ಫ‌ಲಕ. ಮುನ್ನೆಚ್ಚರಿಕೆಗೆ ಸಂಬಂಧಿಸಿ ವಿಶೇಷ ಕ್ರಮಗಳು ಕಾಣಿಸುತಿಲ್ಲ. ಇದ್ದ ಕೆಲವೆಡೆ ನಾಮಫ‌ಲಕದ ಬಣ್ಣ ಮಾಸಿದೆ.

ಹೈವೇ ಪೆಟ್ರೋಲ್‌ ವಾಹನ ನಿಯೋಜನೆ
ಘಾಟಿಯಲ್ಲಿ ಅಪಘಾತದಂತಹ ಸಂದರ್ಭ ತುರ್ತು ಸೇವೆಗೆ ಅನುಕೂಲವಾಗಲೆಂದು ಗೇಟ್‌ ಬಳಿ ಹೈವೇ ಪೆಟ್ರೋಲ್‌ ಅನ್ನು ಹೆಚ್ಚು ಸಮಯ ಇರುವಂತೆ ನಿಯೋಜಿಸಲಾಗುವುದು. ಕಳೆದ ವರ್ಷ ಈ ವ್ಯವಸ್ಥೆ ಇರಲಿಲ್ಲ. ಈ ಬಾರಿ ಇದನ್ನು ಮಾಡಲಾಗುತ್ತಿದೆ. ಗೇಟ್‌ ಬಳಿ ಇರುವಂತೆ ಸೂಚಿಸಲಾಗುವುದು. ಘಾಟಿ ಕಡೆ ಹೆಚ್ಚು ಗಮನ ಹರಿಸಲು ಕ್ರಮವಹಿಸುತ್ತೇವೆ.
*ಅರವಿಂದ ಕಲಗುಜ್ಜಿ , ಡಿವೈಎಸ್ಪಿ ಕಾರ್ಕಳ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next