Advertisement

ಕರಿಯಪ್ಪನವರ ಸಮಾಜಸೇವೆ ಶ್ಲಾಘನೀಯ

12:15 PM Oct 16, 2021 | Team Udayavani |

ಸಿಂಧನೂರು: ಪುರಸಭೆ ಮಾಜಿ ಅಧ್ಯಕ್ಷ ದಿ| ಕೆ.ನಾಗಪ್ಪನವರ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಸಾಗುತ್ತಿರುವ ಎಲ್ಲ ವರ್ಗದವರನ್ನು ಕರೆದೊಯ್ಯುವ ಒಳ್ಳೆಯ ಡ್ರೈವರ್‌ ಎಂದು ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಬಾಲಸ್ವಾಮಿ ಕೊಡ್ಲಿ ಹೇಳಿದರು.

Advertisement

ತಾಲೂಕಿನ ಮಾಡಸಿರವಾರ ಗ್ರಾಮದಲ್ಲಿ ದಿ| ಕೆ.ನಾಗಪ್ಪ ಚಾರಿಟಬಲ್‌ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಮನೆ-ಮನೆಗೆ ತೆರಳಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತೀರ್ಣ ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರಂಭದ ದಿನಗಳಲ್ಲಿ ನಾನು ಕೂಡ ಸಿಂಧನೂರಿನಲ್ಲಿ ಕೆಲವು ವರ್ಷಗಳಿದ್ದೆ. ಆಗ ಅಂಬೇಡ್ಕರ್‌ ಸರ್ಕಲ್‌ ಸ್ಥಾಪನೆಗೆ ಸಂಬಂಧಿಸಿ ತೊಂದರೆ ಉಂಟಾದಾಗ ಕೆ.ನಾಗಪ್ಪ ಅವರು ಧೈರ್ಯ ನೀಡಿ, ಆ ಕಾರ್ಯಕ್ಕೆ ಸಾಥ್‌ ನೀಡಿದರು. ತಮ್ಮ ಮನೆಗೆ ತೆರಳಿದ ನೊಂದವರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದರು. ಅವರ ಸ್ಮರಣಾರ್ಥ ಕೆ.ಕರಿಯಪ್ಪನವರು ಕೂಡ ಟ್ರಸ್ಟ್‌ ಸ್ಥಾಪಿಸಿ, ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ, ರೈತರಿಗೆ ಗನ್‌ ಪಂಪ್‌ ವಿತರಣೆ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿ ಶಿಬಿರ ನಡೆಸಿದ್ದಾರೆ.

ಪ್ರತಿ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ, ಇತರರಲ್ಲಿ ಸ್ಪೂರ್ತಿ ತುಂಬುತ್ತಿದ್ದಾರೆ. ನಮಗೊಬ್ಬ ಬಸ್‌ ಡ್ರೈವರ್‌ ಸಿಕ್ಕಂತಾಗಿದೆ. ಎಲ್ಲ ವರ್ಗದ ಜನರನ್ನು ಜಾತಿ, ಧರ್ಮ ಭೇದವಿಲ್ಲದೇ ಕರೆದೊಯ್ಯುವ ವ್ಯಕ್ತಿಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಆರ್‌. ಬಸನಗೌಡ ತುರುವಿಹಾಳ ಮಾತನಾಡಿ, ಹಿಂದುಳಿದವರು, ನೊಂದವರು ಸೇರಿದಂತೆ ಎಲ್ಲರನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಟ್ರಸ್ಟ್‌ ಸಮಾಜಮುಖೀಯಾಗಿ ಮುನ್ನಡೆದಿದೆ. ಸಮಾಜದತ್ತ ಚಿತ್ತ ಹರಿಸಿ, ನಮ್ಮ ನಡೆ ಪ್ರತಿಭಾನ್ವಿತರ ಕಡೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು.

Advertisement

ಇದನ್ನೂ ಓದಿ: ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ಕೆ.ಕರಿಯಪ್ಪ ಮಾತನಾಡಿ, ಗುಲಾಮರು ತಮಗಾಗಿ ಬದುಕಿದರೆ, ಸ್ವಾಭಿಮಾನಿಗಳು ಸಮಾಜಕ್ಕಾಗಿ ಬದುಕುತ್ತಾರೆಂಬ ಮಹಾತ್ಮರ ನುಡಿಯೇ ನನಗೆ ಸ್ಫೂರ್ತಿ. ನಿಮ್ಮನ್ನೆಲ್ಲ ಮುಂದಿನ ತಾಪಂ, ಜಿಪಂ ಚುನಾವಣೆಗಳಲ್ಲಿ ನಾಯಕರನ್ನಾಗಿ ನೋಡುವ ಬಯಕೆಯಿದೆ. ಎರಡನೇ ಹಂತದ ನಾಯಕರು ಬೆಳೆಯಬೇಕೆಂಬುದು ನನ್ನ ಅಪೇಕ್ಷೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು, ಉದ್ಯಮಿ ಸಿದ್ರಾಮಪ್ಪ ಸಾಹುಕಾರ, ನಿವೃತ್ತ ಶಿಕ್ಷಕ ಬೀರಪ್ಪ ಶಂಭೋಜಿ ಮಾತನಾಡಿದರು. ಮುಖಂಡರಾದ ಅಮರೇಶಪ್ಪ ಮೈಲಾರ, ರಾಯಪ್ಪ ವಕೀಲರು, ಜೆ.ರುದ್ರಪ್ಪ, ಆದಪ್ಪ ಯಾದವ್‌, ಎಚ್‌.ಕರಿಯಪ್ಪ, ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಶ್ರೀನಿವಾಸ ಗೋಮರ್ಸಿ, ಉಪಾಧ್ಯಕ್ಷೆ ಚನ್ನಮ್ಮ, ವಿಎಸ್‌ಎಸ್‌ಎನ್‌ ಅಧ್ಯಕ್ಷ ಮಲ್ಲಯ್ಯ, ಮಾಜಿ ಅಧ್ಯಕ್ಷ ಬಸನಗೌಡ ಮೇಟಿಗೌಡರ್‌, ಪತ್ರಕರ್ತ ಯಮನಪ್ಪ ಪವಾರ ಇದ್ದರು. ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶಕುಂತಲಾ, ಬಸವರಾಜ, ಪರಿಸರ ಪ್ರೇಮಿ ಬಸವರಾಜ ಜಾಡರ್‌, ನಿಂಗಪ್ಪ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಭಾಕರ .ಕೆ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next