Advertisement

ತಿಂಗಳು ಆರು ಕಳೆದರೂ ಕರಾಟೆ ತರಬೇತಿ ಭಾಗ್ಯವಿಲ್ಲ!

02:50 AM Nov 17, 2018 | Team Udayavani |

ವಿಶೇಷ ವರದಿ : ಬೆಳ್ಮಣ್‌: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಕಲೆ ಕಲಿಸಿಕೊಡುವ ಉದ್ದೇಶದಿಂದ ಜಾರಿಗೊಳಿಸಿದ್ದ ಸ್ವರಕ್ಷಣಾ ಕೌಶಲ ತರಬೇತಿ ಯೋಜನೆ ಅನುದಾನ ಬಿಡುಗಡೆಯಾಗದ್ದರಿಂದ ಈ ವರ್ಷ ಇನ್ನೂ ಆರಂಭಗೊಂಡಿಲ್ಲ. ಈಗಾಗಲೇ ಆರಂಭಗೊಂಡು ಮುಗಿಯಬೇಕಿದ್ದ ಕರಾಟೆ ತರಬೇತಿ ಅರ್ಧವಾರ್ಷಿಕ ರಜೆ ಮುಗಿದ ಬಳಿಕವೂ ಆರಂಭವಾಗಿಲ್ಲ. ಸರಕಾರ 2014ರಲ್ಲಿ ಈ ಯೋಜನೆಯನ್ನು ಆರಂಭಿಸಿತ್ತು.

Advertisement

ವರ್ಷದಲ್ಲಿ 3 ತಿಂಗಳ ಕಾಲ ಕರಾಟೆ ತರಬೇತಿ
ರಾಜ್ಯದ ಒಟ್ಟು 4,643 ಸರಕಾರಿ ಪ್ರೌಢಶಾಲೆಗಳು, ಆದರ್ಶ ವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳ, ಸಮಾಜ ಕಲ್ಯಾಣ ಇಲಾಖೆಯ ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ಪ್ರತೀ ವರ್ಷ 3 ತಿಂಗಳ ಕಾಲ ನಡೆಸಲಾಗುತ್ತಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಆರಂಭವಾಗದೆ ಇರುವ ಬಗ್ಗೆ ಕರಾಟೆ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಕಳವಳ ವ್ಯಕ್ತಪಡಿಸಿದ್ದಾರೆ.

ಗೌರವಧನವೂ ಘೋಷಣೆಯಾಗಿತ್ತು
ತರಬೇತುದಾರರಿಗೆ 3 ತಿಂಗಳ ಅವಧಿಗೆ ಎಲ್ಲ ವೆಚ್ಚಗಳು ಸೇರಿ ಗೌರವಧನ ನೀಡುವುದಕ್ಕಾಗಿ ಪ್ರತೀ ಶಾಲೆಗೆ 9 ಸಾವಿರ ರೂ. ನೀಡಲಾಗುತ್ತಿತ್ತು. ಶಾಲೆಯ ಮುಖ್ಯ ಶಿಕ್ಷಕರೇ ಹಾಜರಾತಿ ಹಾಗೂ ತರಬೇತಿ ನೀಡಿದ ವರದಿ ಪರಿಶೀಲಿಸಿ ಪ್ರತೀ ಅವಧಿಗೆ 350 ರೂ.ಗಳಂತೆ 24 ತರಗತಿಗಳಿಗೆೆ ಸುಮಾರು 8,400 ರೂ. ಪಾವತಿಸಲು ಕ್ರಮಕೈಗೊಳ್ಳಲಾಗಿತ್ತು. ಕಳೆದ ಸಾಲಿನಲ್ಲಿ ಸರಕಾರ‌ ಅನುದಾನ ಬಿಡುಗಡೆಗೊಳಿಸಿದ್ದು, ಶಿಕ್ಷಣ ಇಲಾಖೆ ಕರಾಟೆ ತರಬೇತಿ ಹಮ್ಮಿಕೊಂಡಿತ್ತು.

ಗ್ರಾಮೀಣ ಭಾಗಕ್ಕೆ ಅಗತ್ಯ
ಕರಾಟೆ ತರಬೇತಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಹೆಚ್ಚು ಪ್ರಯೋಜನಕಾರಿ. ವಿದ್ಯಾರ್ಥಿನಿಯರು ಕಾಡು ದಾರಿಯಲ್ಲಿ ಶಾಲೆಗೆ ಬರುವ ಸಂದರ್ಭ ಸ್ವರಕ್ಷಣೆಗೆ ಇದು ಅನಿವಾರ್ಯ. ಅದರಲ್ಲೂ ಉಡುಪಿ ಜಿಲ್ಲೆಯ ಹೆಬ್ರಿ, ಶಿರ್ಲಾಲು, ಅಂಡಾರು, ಹೊಸ್ಮಾರು ಸಹಿತ ಅನೇಕ ಪ್ರದೇಶಗಳು ನಕ್ಸಲ್‌ ಬಾಧಿತವಾಗಿದ್ದು, ಈ ಭಾಗದ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ವರದಾನವಾಗಿತ್ತು.

ತರಬೇತಿಯ ರೂಪುರೇಷೆ
ರಾಜ್ಯದ ಎಲ್ಲ ಸರಕಾರಿ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿಯರಿಗೆ ವಾರಕ್ಕೆ 2ರಂತೆ ತಿಂಗಳಿಗೆ 8 ಅವಧಿಗಳ ಕರಾಟೆ ತರಬೇತಿ ನೀಡಲಾಗುತ್ತಿತ್ತು. ಒಟ್ಟು 3 ತಿಂಗಳಿಗೆ 24 ಅವಧಿಯ ಕಾರ್ಯಕ್ರಮ ಇದು. 45 ನಿಮಿಷಗಳ ಪ್ರತೀ ತರಗತಿಯಲ್ಲಿ ಕರಾಟೆ, ಜುಡೋ ಇತ್ಯಾದಿ ಆತ್ಮರಕ್ಷಣ ಕೌಶಲ ಹೇಳಿಕೊಡಲಾಗುತ್ತಿತ್ತು. ಮುಖ್ಯೋಪಾಧ್ಯಾಯರ ನೇತೃತ್ವದ ಸಮಿತಿ ಸೂಕ್ತ ತರಬೇತುದಾರರನ್ನು ಗುರುತಿಸಿ ನೇಮಿಸುತ್ತಿತ್ತು.

Advertisement

ಅನುದಾನದ ಖಚಿತತೆ ಇಲ್ಲ 
ಕರಾಟೆ ಕಲಿಸಲು ಈ ವರ್ಷ ಇಲಾಖೆಯಿಂದ ಅನುದಾನ ಬಂದಿಲ್ಲ. ಈ ಹಿಂದೆ ಆರ್‌ಎಂಎಸ್‌ನಿಂದ ಅನುದಾನ ಬಂದಿತ್ತು. ಮುಂದೆ ಬರುವುದಾಗಿ ತಿಳಿಸಿದ್ದರೂ ಖಚಿತತೆ ಇಲ್ಲ. ಅನುದಾನ ಬಂದರೆ ಮಾತ್ರ ಕರಾಟೆ ತರಗತಿ ಮುಂದುವರಿಯಲಿದೆ.
-ಶೇಷಶಯನ ಕಾರಿಂಜ, ಡಿಡಿಪಿಐ, ಉಡುಪಿ

ಸರಕಾರದ ಸ್ಪಂದನೆ ಅಗತ್ಯ 
ಕರಾಟೆ ತರಬೇತಿ ಈಗಾಗಲೇ ಆರಂಭವಾಗಬೇಕಿತ್ತು. ಆದರೆ ಅನುದಾನ ಮಂಜೂರಾಗದ ಕಾರಣ ವಿಳಂಬವಾಗುತ್ತಿದೆ. ಈ ಬಗ್ಗೆ ಕೂಡಲೇ ಜನಪ್ರತಿನಿಧಿಗಳು, ಸರಕಾರ ಗಮನಹರಿಸಬೇಕಾಗಿದೆ.
– ಸತೀಶ್‌ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜ್ಯ ಕರಾಟೆ ಶಿಕ್ಷಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next