Advertisement

ಐ.ಎಸ್.ಪಿ.ಆರ್.ಎಲ್ ಖಾಸಗೀಕರಣ ವಿರೋಧಿಸಿ ಜನಾಂದೋಲನ‌ ಯಾತ್ರೆ : ವಿನಯ್ ಕುಮಾರ್ ಸೊರಕೆ

08:36 PM May 18, 2021 | Team Udayavani |

ಕಾಪು : ದೇಶದ ಭದ್ರತೆ ಮತ್ತು ರಕ್ಷಣೆಯ ಹೆಸರಿನಲ್ಲಿ ಅನುಷ್ಟಾನಗೊಂಡಿರುವ ಪಾದೂರು ಐ ಎಸ್‌ ಪಿ ಆರ್ ಯೋಜನೆಯನ್ನು, ಜನರ ಭಾವನೆಗಳಿಗೆ ವಿರುದ್ಧವಾಗಿ ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿರ್ವದಿಂದ ಮಜೂರಿನವರೆಗೆ ಬೃಹತ್ ಜನಾಂದೋಲನ ಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

Advertisement

ಮಂಗಳವಾರ(ಮೇ.18) ಕಾಪು ರಾಜೀವ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸೊರಕೆ,  ದೇಶದ ಆತಂಕರಿಕ ಭದ್ರತೆ, ರಕ್ಷಣೆ ಮತ್ತು ಆಪತ್ ಕಾಲದ ವಿಪತ್ತಿನ‌ ಸಂದರ್ಭದಲ್ಲಿ ಬಳಕೆಗೆ ಬೇಕಾಗುವ ಕಚ್ಚಾ ತೈಲ ಸಂಗ್ರಹಣೆಗಾಗಿ ಕೇಂದ್ರ ರಕ್ಷಣಾ ಇಲಾಖೆಯ ಮೂಲಕ ಪಾದೂರಿನ ಕಚ್ಛಾ ತೈಲ ಸಂಗ್ರಹಣಾ ಘಟಕವನ್ನು ಅನುಷ್ಟಾನಕ್ಕೆ ತರಲಾಗಿತ್ತು. ಇದೀಗ ರಕ್ಷಣಾ ಇಲಾಖೆಯಿಂದ ಪ್ರತ್ಯೇಕಿಸಿ, ಪೆಟ್ರೋಲಿಯಂ ಇಲಾಖೆಗೆ ವಹಿಸಲಾಗಿದ್ದು, ಅಲ್ಲಿಂದ ಮತ್ತೆ ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿರುವುದು ಖಂಡನೀಯ ಎಂದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಎ ಎಸ್‌ ಸಿ ಕೇಂದ್ರದಲ್ಲಿ ಕೋವಿಡ್‌ ಕೇರ್ ಸೆಂಟರ್ : ಡಾ.ಸಿ.ಎನ್.‌ ಅಶ್ವತ್ಥನಾರಾಯಣ

ಮಜೂರು, ಪಾದೂರು ಮತ್ತು ಹೇರೂರು ಗ್ರಾಮಗಳ ಜನರು ತಮ್ಮ ನೂರಾರು ಎಕರೆ ಕೃಷಿ ಭೂಮಿಯನ್ನು ದೇಶದ ರಕ್ಷಣೆ ಮತ್ತು ಭದ್ರತೆಗೆ ಸಂಬಂಧಿಸಿದ ಯೋಜನೆಯೆಂಬ ನೆಲೆಯಲ್ಲಿ ಕಡಿಮೆ ಮೌಲ್ಯಕ್ಕೆ‌ ತ್ಯಾಗ ಮನೋಭಾವದಿಂದ ಒದಗಿಸಿದ್ದು, ಇದೀಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಐಎಸ್‌ಪಿಎಲ್ ಯೋಜನೆಯನ್ನು ಖಾಸಗಿಯವರಿಗೆ ಗುತ್ತಿಗೆಯಾಧಾರದಲ್ಲಿ ನೀಡುವ ಮೂಲಕ ಸ್ಥಳೀಯರ ತ್ಯಾಗ ಮನೋಭಾವಕ್ಕೆ ಪೆಟ್ಟು ನೀಡಲು ಹೊರಟಿದೆ‌. ಆ ಮೂಲಕ ಜಂಟಿ ಸರಕಾರಗಳು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತವು ಇಲ್ಲಿನ‌ ಜನರ ಭಾವನೆಗಳೊಂದಿಗೆ ಆಟವಾಡಲು ಹೊರಟಿದೆ ಎಂದು ಅವರು ಆರೋಪಿಸಿದ್ದಾರೆ.

ಇನ್ನು, ಪ್ರಥಮ ಹಂತದ ಭೂ ಸ್ವಾದೀನ ಪ್ರಕ್ರಿಯೆ ವೇಳೆ ಕನಿಷ್ಟ ಮೌಲ್ಯದ ಪರಿಹಾರವನ್ನು ನೀಡಿದ್ದರೂ ಅದನ್ನು ವಿರೋಧಿಸದೇ ಯೋಜನೆಯನ್ನು ಬೆಂಬಲಿಸಿದ ಜನರ ಉದಾರತೆಯ ಮನೋಭಾವವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ದುರ್ಬಳಕೆ ಮಾಡಿಕೊಂಡಿವೆ. ಇದನ್ನು ಖಂಡಿಸಿ ಪ್ರತಿಭಟನೆಯ ರೂಪದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಐಎಸ್ ಪಿಆರ್ ಎಲ್ ಘಟಕದ ಪ್ರಥಮ ಹಂತದ ಯೋಜನೆಯ ವೇಳೆ ಸ್ಥಳೀಯರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಯೋಜನಾ ಸ್ಥಾವರದೊಳಗೆ ಪರಿಣತ ತಾಂತ್ರಿಕ ಸಿಬಂದಿಗಳ ಕೊರತೆಯಿಂದ ಸಮರ್ಪಕ ನಿರ್ವಹಣೆಯಾಗದೇ ಅವಘಡದ ಭೀತಿಯೂ ಎದುರಾಗುತ್ತಿದೆ. ಭೂಮಿಯೊಳಗೆ ತೈಲ ಸೋರಿಕೆಯಾಗಿ ಭೂಮಿಯ ಫಲವತ್ತತೆ ನಾಶವಾಗುವ ಭೀತಿಯಿದೆ. ಮುಂದೆ ಖಾಸಗಿಯವರು ವಹಿಸಿಕೊಂಡಲ್ಲಿ ಅವರಲ್ಲಿಯೂ ಪರಿಣಿತರ ಕೊರತೆಯಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಇದೀಗ ಎರಡನೇ ಹಂತದ ಯೋಜನೆಗಾಗಿ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ. ದೇಶದಲ್ಲಿ ಜಾರಿಯಲ್ಲಿರುವ ನೂತನ ಭೂಸ್ವಾಧೀನ ನೀತಿಯನ್ನು ಗಾಳಿಗೆ ತೂರಿ, ಜನ ವಸತಿ ಪ್ರದೇಶದಲ್ಲಿ ಭೂಸ್ವಾದೀನ ನಡೆಸಲಾಗುತ್ತಿದೆ. ಶಿರ್ವ ಹಾಗೂ ಕಾಪುವಿನಲ್ಲಿರುವ ಭೂಮಿ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ನೀಡಿ ಭೂಸ್ವಾದೀನ ನಡೆಯುತ್ತಿದೆ. ಎರಡನೇ ಹಂತದ ಯೋಜನೆಯ ಭೂಸ್ವಾದೀನ ಪ್ರಕ್ರಿಯೆ ವೇಳೆ ಅಲ್ಲಿಗಿಂದ ಮೂರು ಪಟ್ಟು ಹೆಚ್ಚಳ ಮೌಲ್ಯವನ್ನು ನೀಡುವಂತೆ ಹಾಗೂ ಸಿಎಸ್‌ಆರ್ ನಿಧಿಯ ಬಳಕೆ, ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಪ್ರಥಮ ಹಂತದ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಉತ್ತಮ ಭೂ ಮೌಲ್ಯ, ಪಾದೂರು-ತೋಕುರು ನಡುವಿನ ಪೈಪ್‌ಲೈನ್ ಯೋಜನೆಗಾಗಿ ಭೂಮಿ ಕಳೆದಕೊಂಡವರಿಗೆ, ಹೈಟೆನ್ಶನ್ ವಿದ್ಯುತ್ ಮಾರ್ಗ ಹಾದು ಹೋದ ಪ್ರದೇಶದಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಿಕೆ, ಪೈಪ್‌ಲೈನ್ ಕಾಮಗಾರಿ ವೇಳೆ ಬಂಡೆ ಸ್ಪೋಟದಿಂದಾಗಿ ಅಪಾಯಕ್ಕೊಳಗಾದ ಮನೆಗಳಿಗೆ ಗರಿಷ್ಠ ಪರಿಹಾರ ಧನ ಒದಗಿಸುವಿಕೆ ಬಗ್ಗೆ ಜನಜಾಗೃತಿ ಸಮಿಯಿಯು ನಡೆಸಿರುವ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬೆಂಬಲ ನೀಡಿತ್ತು. ಮುಂದೆಯೂ ಸಮಿತಿ ನಡೆಸುವ ಹೋರಾಟಕ್ಕೆ ಅದೇ ಮಾದರಿಯ ಬೆಂಬಲ ನೀಡಲು ಕಾಂಗ್ರೆಸ್ ಪಕ್ಷ ಬದ್ಧವಿದೆ ಎಂದರು.

ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್ ದೀನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸಂಶುದ್ದೀನ್ ಶೇಖ್, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಹರೀಶ್ ನಾಯಕ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ಸುವರ್ಣ, ನಾಗಭೂಷಣ ರಾವ್ ಉಪಸ್ಥಿತರಿದ್ದರು.

ಇದನ್ನೂ ಓದಿ : ಕೋವಿಡ್ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಕ್ಕಿಲ್ಲ ಅಡ್ಡಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next