Advertisement

ಹೆಜಮಾಡಿ ಬಂದರು ಯೋಜನೆಗೆ ವೇಗ; ಶಾಶ್ವತ  ತಡೆಗೋಡೆಗಾಗಿ ‘ಡಕ್‌ಫೂಟ್‌’

11:28 AM May 07, 2022 | Team Udayavani |

ಪಡುಬಿದ್ರಿ: ಕರಾವಳಿಯ ಮೀನು ಗಾರರ ಸಮಸ್ಯೆಗಳಿಗೆ ರಾಜ್ಯ ಸರಕಾರವು ಸದಾ ಸ್ಪಂದಿಸುತ್ತಿದೆ. ಹೆಜಮಾಡಿ ಬಂದರು ಕಾಮಗಾರಿಗೆ ಹೆಚ್ಚಿನ ವೇಗ ದೊರೆತಿದೆ. ಕರಾವಳಿ ತೀರವನ್ನು ಸದಾ ಬಾಧಿಸುವ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಯನ್ನು ಅನುಸರಿಸಲು ಇಸ್ರೋದ ನಿವೃತ್ತ ಎಂಜಿನಿಯರ್‌ ಜಯಸಿಂಹ ಅವರ ನೆರವಿನೊಂದಿಗೆ ಮರವಂತೆ ಸಮುದ್ರ ಕಿನಾರೆಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ ‘ಡಕ್‌ಫೂಟ್‌’ (ಬಾತುಕೋಳಿಯ ಕಾಲಿನಾಕಾರದ ರಚನೆ) ಯೋಜನೆಯನ್ನು ಪೂರ್ಣ ಭಾರತೀಯ ತಂತ್ರಜ್ಞಾನದೊಂದಿಗೆ ಅನುಷ್ಠಾನಿಸಲಾಗುವುದೆಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಮೇ 6ರಂದು ಉಚ್ಚಿಲದ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಕಾಪು ಕ್ಷೇತ್ರ ಶಾಸಕ ಲಾಲಾಜಿ ಮೆಂಡನ್‌ ಆಶಯದಂತೆ ಆಯೋಜಿಸಲಾದ ಕಾಪು ತಾ| ಬೃಹತ್‌ ಕಂದಾಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ಏನೆಂಬುದೂ ಬಹುತೇಕ ಹಳ್ಳಿಗರಿಗೆ ತಿಳಿದಿರಲಿಲ್ಲ. ಇದರ ಅನುಷ್ಠಾನಕ್ಕಾಗಿ ಹಳ್ಳಿಗಳಲ್ಲಿ ಪ್ರತೀ ಮನೆಯ ರೈತರನ್ನೂ ಸಂಪರ್ಕಿಸಿ ಜನಧನ್‌ ಖಾತೆಯನ್ನೂ ತೆರೆಸಲಾಯಿತು. ಆಗ ಬಹುತೇಕ ಮಂದಿ ನಕ್ಕು, ಟೀಕೆ, ಟಿಪ್ಪಣಿಗಳನ್ನೂ ಮಾಡಿದ್ದರು. ಇಂದು ಅವರೇ ಪ್ರಧಾನಮಂತ್ರಿಗಳ ಕೃಷಿ ಸಮ್ಮಾನ್‌ ಯೋಜನೆಯ ಫಲಾನುಭವಿಗಳೂ ಆಗಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ದೇಶದ ಬಡ ಜನತೆಯ ಪರವಾಗಿದ್ದು ಅವರ ಸಮಸ್ಯೆಗಳನ್ನು ಆಲಿಸಿ, ಸುಲಭ ರೀತಿಯಲ್ಲಿ ಸವಲತ್ತುಗಳು ಅವರನ್ನು ತಲುಪುವಂತಾಗಲು ಇಂತಹ ಕಂದಾಯ ಮೇಳ ಸಹಿತ, ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ, ಮನೆ ಬಾಗಿಲಿಗೆ ಕಂದಾಯ ಇಲಾಖಾ ಸವಲತ್ತುಗಳಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದೆ ಎಂದೂ ಸಚಿವರು ತಿಳಿಸಿದರು.

ಕಾಪು ಶಾಸಕ ಲಾಲಾಜಿ ಮೆಂಡನ್‌ ಅವರು ಮಾತನಾಡಿ, ಬೆಳ್ಳೆ ಗ್ರಾ. ಪಂ. ನಲ್ಲಿ 5ಎಕ್ರೆ ಜಾಗವನ್ನೇ ಇದೀಗ ವಸತಿ ವಲಯಕ್ಕೆ ಮೀಸಲಿರಿಸಲಾಗಿದೆ. ಕಟಪಾಡಿ, ಕೋಟೆ, ಕುರ್ಕಾಲು ಹಾಗೂ ಇನ್ನಂಜೆ ಗ್ರಾ. ಪಂ. ಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಈಗಾಗಲೇ ಶೇ.60ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು ಕಾಪು ಕ್ಷೇತ್ರಕ್ಕೆ ಜಲಜೀವನ್‌ ಮಿಶನ್‌ ಯೋಜನೆಗಾಗಿ 65 ಕೋಟಿ ರೂ.ಗಳ ಅನುದಾನವು ಬಂದಿರುತ್ತದೆ. ಶಿರ್ವ ಸಮುದಾಯ ಆರೋಗ್ಯ ಕೇಂದ್ರವನ್ನು ಬೆಡ್‌ ವ್ಯವಸ್ಥೆ, ರೋಗಿಗಳ ಶುಶ್ರೂಷೆ ಹಾಗೂ ನೋಂದಣಿಯೊಂದಿಗೆ ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮಣಿಪಾಲ ಆಸ್ಪತ್ರೆಯೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಕಾಪು ತಾ| ಕಚೇರಿಯ 10 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಡಿಸೆಂಬರ್‌, ಜನವರಿ ವೇಳೆಗೆ ಇದನ್ನು ಉದ್ಘಾಟಿಸಲಾಗುವುದೆಂದು ಹೇಳಿದರು.

ಕಾಪು ಲೈಟ್‌ ಹೌಸ್‌ ಬಳಿ ಸಾಂಪ್ರದಾಯಿಕ ಮೀನುಗಾರಿಕಾ ನಾಡ ದೋಣಿ ಹಾಗೂ ಸಣ್ಣ ದೋಣಿ ತಂಗಲು ಜೆಟ್ಟಿ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ, ಪೊಲಿಪು, ಮೂಳೂರು, ಪಡುಬಿದ್ರಿ ಕರಾವಳಿ ಭಾಗ ಕಡಲು ಕೊರೆತ ರಕ್ಷಣಾ ಕಾಮಗಾರಿಗೆ ಹೆಚ್ಚಿನ ಅನುದಾನ, ಈ ಸಲದ ಬಜೆಟ್‌ನಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮೀನುಗಾರರಿಗೆ 5,000 ಮನೆ ಘೋಷಣೆ ಆಗಿದ್ದು, ಮೀನುಗಾರರ ಅನುಕೂಲದ ದೃಷ್ಟಿಯಲ್ಲಿ ಮೀನುಗಾರಿಕಾ ಇಲಾಖೆಯ ಮೂಲಕವೇ ಅನುಷ್ಟಾನಿಸಲು ಮನವಿ ಹಾಗೂ ಕರಾವಳಿ ಭಾಗದ ಮೀನುಗಾರಿಕಾ ಕೊಂಡಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರಾತಿ ಮಾಡಲು ಕಾಪು ತಾ| ಕಂದಾಯ ಮೇಳದಲ್ಲಿ ಕ್ಷೇತ್ರ ಶಾಸಕ ಲಾಲಾಜಿ ಮೆಂಡನ್‌ ಮನವಿಯೊಂದನ್ನು ನೀಡಿದರು.

Advertisement

ಮುಖ್ಯ ಅತಿಥಿಗಳಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್‌ ರತ್ರಾಕರ ಹೆಗ್ಡೆ ಮಾತನಾಡಿ, ಕಾಪು ಕ್ಷೇತ್ರಾಭಿವೃದ್ಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮೂಲಕವೂ ಹೆಚ್ಚಿನ ಅನುದಾನಗಳನ್ನು ಒದಗಿಸಿದ್ದೇವೆ ಎಂದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌, ಡೀಮ್ಡ್ ಫಾರೆಸ್ಟ್‌ ಸಮಸ್ಯೆಯ ಬಗೆಗೆ ಅರಣ್ಯಾಧಿಕಾರಿ ಆಶಿಷ್‌ ರೆಡ್ಡಿ ಮಾತನಾಡಿದರು.

ವೇದಿಕೆಯಲ್ಲಿ ಕಾಪು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ್‌ ನಾವಡ, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಬಡಾ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಗಣೇಶ್‌, ಉಡುಪಿ ತಹಶೀಲ್ದಾರ್‌ ಅರ್ಚನಾ ಭಟ್‌, ಕಾಪು ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್‌ ಮತ್ತಿತರರಿದ್ದರು. ಕಾಪು ತಹಶೀಲ್ದಾರ್‌ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಕುಂದಾಪುರದ ಸಹಾಯಕ ಕಮಿಷನರ್‌ ರಾಜು ಕೆ. ಪ್ರಾಸ್ತಾವಿಸಿದರು. ಎಚ್‌. ಸತೀಶ್‌ ಶೆಟ್ಟಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next