Advertisement

ಕಪ್ಪ ಸೀಡಿ: ಕೈ-ಕಮಲ ಸಂಘರ್ಷದ ಕಿಡಿ

09:40 AM Oct 10, 2017 | |

“ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತು’ ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯುಳ್ಳ ಸೀಡಿ ಪ್ರಕರಣ ಇದೀಗ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮಾತುಕತೆ ಕುರಿತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ನೀಡಿರುವ ವರದಿಯ ವಿಶ್ವಾಸಾರ್ಹತೆಯನ್ನು ಅನಂತಕುಮಾರ್‌ ಪ್ರಶ್ನಿಸಿದ್ದಾರಲ್ಲದೆ, “ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ “ಡರ್ಟಿಟ್ರಿಕ್ಸ್‌’ ಮೂಲಕ ರಾಜಕೀಯ ವಿರೋಧಿಗಳ ಮೇಲೆ ಕೆಸರೆರಚಾಟ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ. ಈ ನಡುವೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತಿರುವ ಸಿಎಂ ಸಿದ್ದರಾಮಯ್ಯ, ವಿಡಿಯೋ ಕುರಿತು ಎಸಿಬಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಪೊಲಿಸ್‌ ಆಯುಕ್ತರು ಹಾಗೂ ಗೃಹ ಸಚಿವರ ಸಲಹೆಗಾರರ ಜತೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಒಟ್ಟಾರೆ, ಇಡೀ ಪ್ರಕರಣ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವೆ ಸಂಘರ್ಷದ ಕಿಡಿ ಹೊತ್ತಿಸಿದೆ…

Advertisement

“ಡರ್ಟಿಟ್ರಿಕ್ಸ್‌’ ರಾಜಕಾರಣ
ಬೆಂಗಳೂರು:
“ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ “ಡರ್ಟಿ ಟ್ರಿಕ್ಸ್‌’ (ಕೊಳಕು ತಂತ್ರ) ಮೂಲಕ ರಾಜಕೀಯ ವಿರೋಧಿಗಳ ಮೇಲೆ ಕೆಸರೆರಚಾಟ ಮಾಡುತ್ತಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಬಿಜೆಪಿ ಬಲಾಡ್ಯವಾಗಿ ಬೆಳೆಯುತ್ತಿದೆ. 19 ರಾಜ್ಯಗಳಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳ ಸರ್ಕಾರಗಳಿವೆ. ಸೋಲಿನಿಂದ ಹತಾಶ ಗೊಂಡಿರುವ ಕಾಂಗ್ರೆಸ್‌ ನಾಯಕರು ರಾಜಕೀಯ ವಿರೋಧಿಗಳತ್ತ ಸ್ಪಿಟ್‌ ಅಂಡ್‌ ರನ್‌ (ಉಗುಳಿ ಓಡಿಹೋಗು)
ಸೂತ್ರ ಅನುಸರಿಸುತ್ತಾ ಕೊಳಕು ತಂತ್ರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಮತ್ತೂಂದು ಉದಾಹರಣೆ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ವಿರುದ್ಧ ಬಂದಿರುವ ಆರೋಪ’ ಎಂದರು.

 ಅಮಿತ್‌ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಒಂದೇ ವರ್ಷದಲ್ಲಿ ಅವರ ಪುತ್ರ ಜಯ್‌ ಶಾ ಅವರ ಕಂಪನಿಯ ವಹಿವಾಟು 16 ಸಾವಿರ ಪಟ್ಟು ಹೆಚ್ಚಳವಾಗಿದೆ ಎಂಬ ಬಗ್ಗೆ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುಳ್ಳು ಸುದ್ದಿಯನ್ನೇ ಬಳಸಿಕೊಂಡು ಕಾಂಗ್ರೆಸ್‌ ಅಪಪ್ರಚಾರದಲ್ಲಿ ತೊಡಗಿದೆ. ಇದರ ವಿರುದ್ಧ ಜಯ್‌ ಶಾ ಅವರು ಈಗಾಗಲೇ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದು, ಇನ್ನೆರಡು ದಿನಗಳಲ್ಲಿ 100 ಕೋಟಿ ಮೊತ್ತದ ಸಿವಿಲ್‌ ಮಾನನಷ್ಟ ಮೊಕದ್ದಮೆಯನ್ನೂ ಹೂಡಲಿದ್ದಾರೆ ಎಂದರು. ಹಿಂದೆ ಬಿಜೆಪಿಯವರೂ ಕಾಂಗ್ರೆಸ್‌ ನಾಯಕರ ಕುಟುಂಬ ಸದಸ್ಯರ ವಿರುದ್ಧ ಆರೋಪ ಮಾಡಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ, “ಬೊಫೋರ್ಸ್‌ ಹಗರಣದಿಂದ ಹಿಡಿದು ನ್ಯಾಷನಲ್‌ ಹೆರಾಲ್ಡ್‌ ವರೆಗೆ ಬಿಜೆಪಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವ ಕಾಂಗ್ರೆಸ್‌ ನಾಯಕರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ? ಬಿಜೆಪಿ ಮಾಡಿರುವ ಆರೋಪದಲ್ಲಿ ಸತ್ಯಾಂಶವಿದೆ ಎಂಬ ಕಾರಣಕ್ಕೆ ತಾನೇ ಅವರು ಸುಮ್ಮನಿರುವುದು. ಕಾಂಗ್ರೆಸ್‌ನವರಂತೆ ಸುಳ್ಳು ಆರೋಪ ಮಾಡುವ ಕೆಲಸ ನಾವು ಮಾಡಿಲ್ಲ’ ಎಂದರು.

ವರದಿ ವಿಶ್ವಾಸಾರ್ಹತೆ ಪ್ರಶ್ನಿಸಿದ ಅನಂತ್‌ಕುಮಾರ್‌
ಬೆಂಗಳೂರು: ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತಂತೆ ತಾವು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮಾತುಕತೆ ಕುರಿತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ ಎಲ್‌) ನೀಡಿರುವ ವರದಿಯ ವಿಶ್ವಾಸರ್ಹತೆಯನ್ನೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಪ್ರಶ್ನಿಸಿದ್ದಾರೆ. ತಮ್ಮ ಧ್ವನಿಯ ಹೋಲಿಕೆ ಪ್ರಕ್ರಿಯೆಯನ್ನು ಸೈಬರ್‌ ಫೋರೆನ್ಸಿಕ್‌ ನಲ್ಲಿ ಮಾಡುವ ಬದಲು ಪ್ರಯೋಗಾಲಯದ ಫಿಸಿಕ್ಸ್‌ (ಭೌತಶಾಸ್ತ್ರ) ವಿಭಾಗದಲ್ಲಿ ಮಾಡಿರುವುದನ್ನು ಮುಂದಿಟ್ಟುಕೊಂಡು ಅವರು ಈ ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ, ಇದೊಂದು ರಾಜಕೀಯ ದ್ವೇಷದ ಕ್ರಮವಾಗಿದ್ದು, ಇದರ ವಿರುದ್ಧ ವಿಧಾನಮಂಡಲ, ಸಾರ್ವಜನಿಕವಾಗಿ ಮಾತ್ರವಲ್ಲದೆ ಕಾನೂನು ಹೋರಾಟವನ್ನೂ ಮಾಡಲಾಗುವುದು ಎಂದು ಹೇಳಿದ್ದಾರೆ. 

Advertisement

ತಮ್ಮ ಮತ್ತು ಯಡಿಯೂರಪ್ಪ ಅವರ ಮಾತುಕತೆ ಕುರಿತು ಕೇವಲ 15 ದಿನಗಳಲ್ಲಿ ವರದಿ ನೀಡಿರುವ ಎಫ್ಎಸ್‌ಎಲ್‌ ಕ್ರಮವೇ ಸೋಜಿಗವುಂಟುಮಾಡುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ತಮ್ಮ ಮಾತುಕತೆ ದಾಖಲಾದ ಸೀಡಿಯನ್ನು ಎಫ್ಎಸ್‌ಎಲ್‌ ಪರಿಶೀಲನೆಗೆ ಕಳುಹಿಸಲಾಗಿತ್ತು. ಇದು ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಸೈಬರ್‌ ಫೋರೆನ್ಸಿಕ್‌ ವಿಭಾಗವೇ ಅದರ ಪರಿಶೀಲನೆ ನಡೆಸಿ ವರದಿ ನೀಡಬೇಕಿತ್ತು. ಅದರ ಬದಲು ಭೌತಶಾಸ್ತ್ರ ವಿಭಾಗಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳಲಾಗಿದೆ. ಇದನ್ನು ವರದಿಯಲ್ಲೂ ಹೇಳಲಾಗಿದ್ದು, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಕಾಂಗ್ರೆಸ್‌ ಸರ್ಕಾರ ವಿಧಿವಿಜ್ಞಾನ ಪ್ರಯೋಗಾಲಯವನ್ನೂ
ಸಹ ಬಳಸಿಕೊಳ್ಳುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದರು.

ರಾಜಕೀಯ ವಿರೋಧಿಗಳ ವಿರುದ್ಧ ತ್ವರಿತ ತನಿಖೆ: ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಿದ ಬಳಿಕ ಪ್ರಕರಣ ನಡೆದು ಒಂದು ವರ್ಷದ ಬಳಿಕ ಎಫ್ಎಸ್‌ಎಲ್‌ ವರದಿ ಬಂದಿದೆ. ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ನಡೆದು ಎರಡು ವರ್ಷ ಕಳೆದರೂ ಇನ್ನೂ ಎಫ್ಎಸ್‌ಎಲ್‌ ವರದಿ ಬಂದಿಲ್ಲ. ಆದರೆ, ತಮ್ಮ ಮತ್ತು ಯಡಿಯೂರಪ್ಪ ಪ್ರಕರಣದಲ್ಲಿ ಕೇವಲ 15 ದಿನಗಳಲ್ಲಿ ವರದಿ ನೀಡಲಾಗಿದೆ. ಇದನ್ನು ಗಮನಿಸಿದಾಗ ರಾಜಕೀಯ ವಿರೋಧಿಗಳ ವಿರುದ್ಧ ತ್ವರಿತ ತನಿಖೆ ನಡೆಸುವುದು, ಜನಸಾಮಾನ್ಯರಿಗೆ ಸಂಬಂಧಿಸಿದ ವಿಚಾರವಾದರೆ ನಿಧಾನ ಮಾಡುವುದು ಸರ್ಕಾರದ ಉದ್ದೇಶ ಎಂಬುದು ಗೊತ್ತಾಗುತ್ತದೆ. ಇನ್ನೊಂದೆಡೆ ಮುಖ್ಯಮಂತ್ರಿ ಅಥವಾ ಅವರ ಸಂಪುಟ ಸದಸ್ಯರ ಮೇಲೆ ಆರೋಪ ಬಂದಾಗ ತ್ವರಿತವಾಗಿ ಕ್ಲೀನ್‌ ಚಿಟ್‌ ನೀಡುವುದು
ಕಾಂಗ್ರೆಸ್‌ ಸರ್ಕಾರದ ಆಡಳಿತ ಕ್ರಮವಾಗಿದೆ. ಆದರೆ, ಸರ್ಕಾರ ಕೈಗೊಳ್ಳುವ ಇಂತಹ ರಾಜಕೀಯ ಪ್ರೇರಿತ ಕ್ರಮಕ್ಕೆ ಬಗ್ಗುವುದೂ ಇಲ್ಲ, ಹೆದರುವುದೂ ಇಲ್ಲ. ಸಂವಿಧಾನ, ನ್ಯಾಯಾಲಯ ಮತ್ತು ಕಾನೂನಿನ ಮೇಲೆ ಗೌರವವಿದೆ ಎಂದು ಹೇಳಿದರು.

ಅಧಿಕಾರಿಗಳ ಜತೆ ಸಿಎಂ ಚರ್ಚೆ?
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ ಕುಮಾರ ಹೈಕಮಾಂಡ್‌ಗೆ ಕಪ್ಪ
ನೀಡಿದ್ದಾರೆನ್ನಲಾದ ಮಾತುಕತೆ ವಿಡಿಯೋ ಕುರಿತು ಎಸಿಬಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಬೆಂಗಳೂರು ನಗರ
ಪೊಲಿಸ್‌ ಆಯುಕ್ತ ಸುನೀಲ್‌ ಕುಮಾರ್‌ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸೋಮವಾರ ಇಬ್ಬರೂ  ಅಧಿಕಾರಿಗಳನ್ನು ತಮ್ಮ ನಿವಾಸ ಕಾವೇರಿಗೆ ಕರೆಸಿಕೊಂಡು ಇಬ್ಬರು ನಾಯಕರು ಮಾತನಾಡಿರುವ ಸಿಡಿ ಪ್ರಕರಣದ ಬಗ್ಗೆ ವಿವರಣೆ ಪಡೆದಿದ್ದಾರೆ.

ವಿಧಿ ವಿಜ್ಞಾನ ಇಲಾಖೆಯ ವರದಿಯಲ್ಲಿ ಸೀಡಿಯಲ್ಲಿ ಕೇಳಿಸುವ ಧ್ವನಿ ಇಬ್ಬರೂ ನಾಯಕರದ್ದೇ ಎಂದು ಸಾಬೀತಾಗಿದೆ ಎಂದು
ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಈ ಪ್ರಕರಣ ಎಸಿಬಿಯಲ್ಲಿ ದೂರು ದಾಖಲಿಸುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಸುಳಿವು ನೀಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರೂ ದೂರು ನೀಡಿದ್ದರೆ, ಅದರಂತೆ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, “ಇಬ್ಬರೂ ನಾಯಕರು ಮಾತನಾಡಿರುವುದು ಅವರದ್ದೇ ಧ್ವನಿ ಎಂದು ಎಫ್ಎಸ್‌ಎಲ್‌ ವರದಿಯಲ್ಲಿ ಬಂದಿದೆ. ಪೊಲಿಸರು ಆ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ನಾನು ಯಾರಿಗೂ ಯಾವುದೇ ನಿರ್ದೇಶನ ನೀಡಿಲ್ಲ’ ಎಂದು ಹೇಳಿದರು.

ಇದೇ ವೇಳೆ, ಗೋಮಾಂಸ ತಿನ್ನುವವರು ಆಸ್ಪತ್ರೆ ಮುಂದೆ ಕ್ಯೂ ನಿಲ್ಲುತ್ತಾರೆ ಎಂಬ ಬಿಜೆಪಿ ವಕ್ತಾರ ಸಿ.ಟಿ. ರವಿ ಹೇಳಿಕೆಗೆ
ಪ್ರತಿಕ್ರಿಯಿಸಿರುವ ಅವರು, ಆಹಾರ ತಿನ್ನುವುದು ಅವರವರ ಹಕ್ಕು, ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆ ನೀಡುವುದು
ಸರಿಯಲ್ಲ. ಬೇರೆಯವರು ತಿನ್ನುವ ಆಹಾರದ ಬಗ್ಗೆ ಮಾತನಾಡಲು ನಾವ್ಯಾರು? ಇದನ್ನು ಸಿ.ಟಿ. ರವಿ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಕಪ್ಪು ಹಣ ಕುರಿತ ಸಂಭಾಷಣೆಯುಳ್ಳ ಸೀಡಿ ಅಸಲಿ ಎಂದು ಎಫ್‌ ಎಸ್‌ಎಲ್‌ ವರದಿ ನೀಡಿರುವುದರ ಹಿಂದೆ ಸರಕಾರದ ಷಡ್ಯಂತ್ರ ಅಡಗಿದೆ. ಸಿದ್ದರಾಮಯ್ಯ ಕುತಂತ್ರ, ಕುಹಕ ಬುದ್ಧಿಯಿಂದ ರಾಜಕೀಯ ಪ್ರೇರಿತವಾಗಿ ಅವರ ಮೇಲೆ ಎಸಿಬಿ ಮೂಲಕ ಹಣಿಯಲು ಮುಂದಾಗಿದ್ದು, ಇದು ಅಧಿಕಾರದ ದುರುಪಯೋಗ ಆಗಿದೆ.
 ●ಜಗದೀಶ ಶೆಟ್ಟರ್‌,ವಿಧಾನಸಭೆ ಪ್ರತಿಪಕ್ಷ ನಾಯಕ

ಹೈಕಮಾಂಡ್‌ಗೆ ಕಪ್ಪ ನೀಡಿರುವ ಕುರಿತು ತಾವು ಮತ್ತು ಕೇಂದ್ರ ಸಚಿವ ಅನಂತಕುಮಾರ್‌ ಮಾತುಕತೆಯಾಡಿದ್ದನ್ನು
ನಿರಾಕರಿಸುವುದಿಲ್ಲ. ನಾವು ಮಾತನಾಡಿದ್ದು ಹೌದು. ನಮ್ಮ ಮಾತುಕತೆ ಕುರಿತ ಸೀಡಿಯಲ್ಲಿ ಕಾಂಗ್ರೆಸ್‌ನವರು ಬಿಡುಗಡೆ ಮಾಡಿದ್ದು ಒಂದು ಭಾಗ ಮಾತ್ರ. ಕಾಂಗ್ರೆಸ್‌ನವರಿಗೆ ಧೈರ್ಯವಿದ್ದರೆ ಸೀಡಿಯ ಪೂರ್ತಿ ಅಂಶಗಳನ್ನು ಬಹಿರಂಗಪಡಿಸಲಿ. ಆಗ ಸತ್ಯ ಏನೆಂದು ಗೊತ್ತಾಗುತ್ತದೆ.

 ●ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next