Advertisement

ಕನ್ಯಾನ : ಅಭಿವೃದ್ಧಿಯ ವೇಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ

10:55 AM Aug 24, 2018 | Team Udayavani |

ವಿಟ್ಲ : ಕನ್ಯಾನ ಜಂಕ್ಷನ್‌ ನಿಜವಾದ ಅರ್ಥದಲ್ಲಿ ಅರೆಪಟ್ಟಣ. ಯಾಕೆಂದರೆ ನೋಡಲು ಗ್ರಾಮೀಣ ಪ್ರದೇಶದಂತೆ ಇದ್ದರೂ ಪಟ್ಟಣದಂತೆ ಬೆಳೆಯುತ್ತಿದೆ. ಜತೆಗೆ ಎರಡು ರಾಜ್ಯಗಳನ್ನು ಸಂಪರ್ಕಿಸುವ, ಮೂರು ಪ್ರಮುಖ ರಸ್ತೆಗಳು ಸಂಧಿಸುವ ಸ್ಥಳವಾಗಿರುವುದರಿಂದ ಹೆಚ್ಚಿನ ಮಹತ್ವ. ಶೈಕ್ಷಣಿಕ, ಧಾರ್ಮಿಕ, ಸಾಹಿತ್ಯಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿರುವ ಕನ್ಯಾನ ಜಂಕ್ಷನ್‌ನಲ್ಲಿ ಅಭಿವೃದ್ಧಿಯಾಗಬೇಕಾದದ್ದು ಬಹಳಷ್ಟಿದೆ.

Advertisement

ತಿರುವು ಸಮಸ್ಯೆ
ರಸ್ತೆಗಳೇನೂ ಪರವಾಗಿಲ್ಲ. ಆದರೆ ಜಂಕ್ಷನ್‌ನಲ್ಲಿ ವಿಟ್ಲದಿಂದ ಉಪ್ಪಳ ರಸ್ತೆಯ ಕಡೆಗಿನ ತಿರುವು ಮತ್ತು ಉಪ್ಪಳ ರಸ್ತೆಯಿಂದ ವಿಟ್ಲ ಕಡೆಗಿನ ತಿರುವು ಅವೈಜ್ಞಾನಿಕವಾಗಿದೆ. ತಿರುವಿನಲ್ಲಿ ಎದುರಿಗೆ ಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸದಿರುವುದರಿಂದ ಅಪಘಾತಗಳ ಸಾಧ್ಯತೆ ಹೆಚ್ಚಾಗಿದೆ. ವಾಹನ ದಟ್ಟಣೆ ಹೆಚ್ಚುತ್ತಿದ್ದು, ತಿರುವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಸಾಧ್ಯವಾಗುತ್ತದೆ.

ಹತ್ತು ವರ್ಷಗಳ ಹಿಂದೆ ಪೇಟೆಯ ರಸ್ತೆಯನ್ನು ವಿಸ್ತರಿಸಲಾಗಿತ್ತು. ಆದರೆ ಒಂದು ಬದಿಯಲ್ಲಿ ಶಾಲೆ ಇರುವುದರಿಂದ ಇನ್ನಷ್ಟು ರಸ್ತೆ ವಿಸ್ತರಣೆ ಕಷ್ಟ. ಎದುರು ಭಾಗದಲ್ಲಿ ಪೇಟೆಯುದ್ದಕ್ಕೂ ಅಂಗಡಿಗಳ ಸಾಲು. ಭವಿಷ್ಯದಲ್ಲಿ ರಸ್ತೆಯನ್ನು ಇನ್ನಷ್ಟು ವಿಸ್ತರಿಸುವ ಅನಿವಾರ್ಯ ಸೃಷ್ಟಿಯಾಗಲಿದೆ.

ತಂಗುದಾಣ ಬೇಕು
ಉಪ್ಪಳ ರಸ್ತೆಯಲ್ಲಿ ಬಸ್‌ ತಂಗುದಾಣವಿದೆ. ಆದರೆ ವಿಟ್ಲ ಕಡೆಗೆ ಸಾಗುವ ಪ್ರಯಾಣಿಕರು, ಮುಡಿಪು ಅಥವಾ ಮಂಜೇಶ್ವರ ಭಾಗಕ್ಕೆ ತೆರಳುವವರು ರಸ್ತೆ ಬದಿ ಅಥವಾ ಅಂಗಡಿ ಬಾಗಿಲಲ್ಲಿ ಕಾಯಬೇಕು. ಜಂಕ್ಷನ್‌ನಲ್ಲೇ ಬಸ್‌ ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಇತರ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಮೂರು ರಸ್ತೆಗಳ ವಾಹನಗಳು ಒಟ್ಟಾಗಿ ಕೆಲವೊಮ್ಮೆ ಜಂಕ್ಷನ್‌ನಲ್ಲಿ ನುಗ್ಗಿದಾಗ ಟ್ರಾಫಿಕ್‌ ಜಾಮ್‌ ಸಮಸ್ಯೆ ಸೃಷ್ಟಿಯಾಗಿ ವಾಹನಗಳ ಸಂಚಾರ ಸ್ಥಗಿತಗೊಳ್ಳುವುದುಂಟು. ಪಾದಚಾರಿಗಳಿಗೂ ತೊಂದರೆ. ಜಂಕ್ಷನ್‌ ಬದಿಯಲ್ಲೇ ಸರಕಾರಿ ಶಾಲೆ, ಅಂಗನವಾಡಿಗಳಿದ್ದು, ಹಗಲು ಹೊತ್ತು ವಾಹನಗಳು ಜಾಗ್ರತೆ ವಹಿಸಬೇಕು. ಪಕ್ಕದಲ್ಲೇ ಪಪೂ ಕಾಲೇಜು, ಪದವಿ ಕಾಲೇಜುಗಳಿವೆ, ಕಲ್ಯಾಣ ಮಂಟಪವಿದೆ. ಆದುದರಿಂದ ಬೆಳಗ್ಗೆ ಮತ್ತು ಸಂಜೆ ಸಾವಿರಾರು ವಿದ್ಯಾರ್ಥಿಗಳು ಓಡಾಡುವ ಸಂದರ್ಭ ಪೇಟೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ.

ಹೆಚ್ಚಿನ ಸೌಲಭ್ಯಗಳಿವೆ
ಇದಲ್ಲದೇ ಈ ಜಂಕ್ಷನ್‌ನಲ್ಲೇ ಅಂಚೆ ಕಚೇರಿ, ಬ್ಯಾಂಕ್‌, ಎಟಿಎಂ, 100 ಮೀಟರ್‌ ವ್ಯಾಪ್ತಿಯಲ್ಲಿ ಆಸ್ಪತ್ರೆ, ಬಿಎಸ್ಸೆನ್ನೆಲ್‌ ಕಚೇರಿ, ಮೆಸ್ಕಾಂ ಕಚೇರಿ, ಕಂದಾಯ, ಪಂಚಾಯತ್‌ ಕಚೇರಿಗಳಿವೆ. ಶೌಚಾಲಯವಿದೆ. ಆದರೆ ಅಪರಿಚಿತರ ಉಪಟಳ ಹೆಚ್ಚಾಗಿದೆ ಎಂಬ ದೂರು ಕೇಳಿಬರುತ್ತಿದೆ.

Advertisement

ಎಲ್ಲೆಲ್ಲಿಗೆ ?
ಕನ್ಯಾನದಿಂದ ಒಂದು ರಸ್ತೆ ಮುಡಿಪು, ಮಂಗಳೂರು ಹಾಗೂ ಆನೆಕಲ್ಲು ಮಂಜೇಶ್ವರಕ್ಕೆ ಸಾಗುತ್ತದೆ.ಮತ್ತೊಂದು ವಿಟ್ಲಕ್ಕೆ, ಇನ್ನೊಂದು ಒಡಿಯೂರು, ಬಾಯಾರು, ಉಪ್ಪಳದತ್ತ ಸಾಗುತ್ತದೆ. ಕನ್ಯಾನನದಲ್ಲಿ ಒಟ್ಟು ಸಾಗುವ ಖಾಸಗಿ ಬಸ್ಸುಗಳು 15. ಸರಕಾರಿ ಬಸ್‌ಗಳು 5. ಉಪ್ಪಳ, ಬಾಯಾರು, ಕನ್ಯಾನ, ಆನೆಕಲ್ಲು, ಮಂಜೇಶ್ವರಕ್ಕೆ ತೆರಳುವ ಮೂಲಕ ಕರ್ನಾಟಕ-ಕೇರಳ ಗಡಿಭಾಗದಲ್ಲೇ 5 ಖಾಸಗಿ ಬಸ್ಸುಗಳು ಸಂಚರಿಸುತ್ತವೆ. ಇಲ್ಲಿ ನಿತ್ಯವೂ ಸಂಚರಿಸುವ ಜನಸಂಖ್ಯೆ ಸುಮಾರು 3,000. ಶೇ.40ರಷ್ಟು ಮಂದಿ ಮಾತ್ರ ಕನ್ಯಾನದಲ್ಲಿ ಇಳಿಯುತ್ತಾರೆ. ಬಸ್‌ ಬದಲಿಸಿ, ವಿವಿಧೆಡೆಗೆ ತೆರಳುತ್ತಾರೆ.

ಮಹತ್ವದ ಜಂಕ್ಷನ್‌
ಗಡಿಭಾಗದಲ್ಲಿರುವ ಈ ಜಂಕ್ಷನ್‌ನನ್ನು ಕೇರಳದ ಎರಡು ರಸ್ತೆಗಳು ಹಾದುಹೋಗುತ್ತವೆ. ಕರೋಪಾಡಿ ಗ್ರಾಮವೂ ಕನ್ಯಾನವನ್ನೇ ಅವಲಂಬಿಸಿದೆ. ಕೇರಳದಲ್ಲಿ ಅಕ್ರಮ ಚಟುವಟಿಕೆ ನಡೆಸುವ ಆರೋಪಿಗಳಿಗೆ ಕನ್ಯಾನ ಅಡಗುದಾಣವಾಗಿದೆ ಎಂಬ ಆರೋಪವೂ ಇದೆ. ಪರಿಣಾಮವಾಗಿ ಕನ್ಯಾನಕ್ಕೆ ಸೂಕ್ಷ್ಮಪ್ರದೇಶವೆಂಬ ಹಣೆಪಟ್ಟಿ ಬಂದಿದೆ. ಜಂಕ್ಷನ್‌ನಲ್ಲಿ ವಿಟ್ಲಕ್ಕೆ ತೆರಳುವ ಜಾಗದಲ್ಲಿ ಬಸ್‌ ತಂಗುದಾಣ ಪ್ರಸ್ತಾವ ಹಳೆಯದು. ಅದನ್ನು ಈಡೇರಿಸಬೇಕಿದೆ. ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಅದನ್ನು ಅಪರಿಚಿತರು ಹಾಳುಗೆಡವುತ್ತಾರೆ. ಬಾಟಲಿಗಳನ್ನು ಎಸೆಯುವುದು, ಬಾಗಿಲು ಒಡೆದು ಹಾಕುತ್ತಿದ್ದಾರೆ. ಇದಕ್ಕೆ ಪರಿಹಾರ ಹುಡುಕಬೇಕಿದೆ.

ಮಹತ್ವದ ಜಂಕ್ಷನ್‌
ಗಡಿಭಾಗದಲ್ಲಿರುವ ಜಂಕ್ಷನ್‌ಮೂಲಕ ಕೇರಳದ ಎರಡು ರಸ್ತೆಗಳು ಹಾದು ಹೋಗುತ್ತವೆ. ಕರೋಪಾಡಿ ಗ್ರಾಮವೂ ಕನ್ಯಾನವನ್ನೇ ಅವಲಂಬಿಸಿದೆ. ಕೇರಳದಲ್ಲಿ ಅಕ್ರಮ ಚಟುವಟಿಕೆ ಮಾಡುವ ಆರೋಪಿಗಳಿಗೆ ಕನ್ಯಾನ ಅಡಗುದಾಣವಾಗಿದೆ ಎಂಬ ಆರೋಪವೂ ಇದೆ. ಪರಿಣಾಮವಾಗಿ ಕನ್ಯಾನಕ್ಕೆ ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಬಂದಿದೆ. 

ತಿರುವು ಅಭಿವೃದ್ಧಿಗೆ ಕ್ರಮ
ಪೇಟೆಯಲ್ಲಿ ಅಂಗಡಿ ಮಾಲಕರು ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕಾಗಿದೆ. ಅದಕ್ಕೆ ಅವರ ಮನವೊಲಿಸುತ್ತೇವೆ. ಜಂಕ್ಷನ್‌ ತಿರುವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಬೇಕಾಗಿದೆ.
 - ವಿಜಯಶಂಕರ್‌ ಆಳ್ವ ಮಿತ್ತಳಿಕೆ
 ಪಂ.ಅಭಿವೃದ್ಧಿ ಅಧಿಕಾರಿ, ಕನ್ಯಾನ

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next