Advertisement

ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ

10:31 PM Aug 11, 2020 | mahesh |

ಮುಂಬೈ: ಮಳೆಯನ್ನು ಲೆಕ್ಕಿಸದೇ ರಸ್ತೆ ಮಧ್ಯದಲ್ಲಿದ್ದ ಮ್ಯಾನ್‌ಹೋಲ್‌ ಬಳಿ ಸತತ ಏಳು ಗಂಟೆ ಕಾಲ ನಿಂತು ಟ್ರಾಫಿಕ್‌ ಪೊಲೀಸರಂತೆ ಕಾರ್ಯ ನಿರ್ವಹಿಸಿದ ಮಹಿಳೆಗೆ 1.5 ಲಕ್ಷ ರೂ.ದೇಣಿಗೆ ನೀಡಲಾಗಿದೆ. ಮುಂಬೈನಲ್ಲಿ ಆ.4ರಂದು ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿ ಸಂಚಾರ ವ್ಯತ್ಯಯವಾಗಿತ್ತು. ಈ ಸಂದರ್ಭದಲ್ಲಿ ಬೀದಿಬದಿ ಹೂ ವ್ಯಾಪಾರಿ ಕಾಂತಾ ಮೂರ್ತಿ(50) ಎಂಬಾಕೆ ರಸ್ತೆ ಮಧ್ಯದಲ್ಲಿದ್ದ ಮ್ಯಾನ್‌ಹೋಲ್‌ ಮುಚ್ಚಳವನ್ನು ತೆರೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದರು. ಅಲ್ಲದೆ, ಮ್ಯಾನ್‌ಹೋಲ್‌ ಬಳಿ 7 ಗಂಟೆಗಳ ಕಾಲ ನಿಂತು, ತನ್ನತ್ತ ವಾಹನಗಳು ಬಾರದಂತೆ ನೋಡಿಕೊಂಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಮಳೆಯಿಂದಾಗಿ ಈಕೆಯ ಹೂವಿನ ಟೆಂಟ್‌ ಕೂಡ ಕೊಚ್ಚಿಹೋಗಿತ್ತು.

Advertisement

ಇದರಿಂದಾಗಿ 10 ಸಾವಿರ ರೂ. ನಷ್ಟವಾಗಿತ್ತು. ಈ ಮಹಿಳೆಯ ನಿಸ್ವಾರ್ಥ ಸೇವೆಯನ್ನು ಮೆಚ್ಚಿಕೊಂಡು ಉದ್ಯಮಿಗಳು, ಸಾರ್ವಜನಿಕರು 1.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂತಾ ಮೂರ್ತಿ, “2017ರಲ್ಲಿ ಮಳೆಯಿಂದಾಗಿ ಮ್ಯಾನ್‌ಹೋಲ್‌ ತೆರೆದಿದ್ದಕ್ಕೆ ಓರ್ವ ಸವಾರ ಸಾವನ್ನಪ್ಪಿದ್ದನು. ಅಲ್ಲದೇ ಕಳೆದ ವಾರ ಸುರಿದ ಭಾರೀ ಮಳೆಯಿಂದ ರಸ್ತೆಗಳು ನೀರಿನಿಂದ ಕೂಡಿದ್ದವು. ಹೀಗಾಗಿ ಬೇರೆ ದಾರಿಯಿಲ್ಲದೇ ನಾನೇ ಖುದ್ದಾಗಿ ರಸ್ತೆಗೆ ತೆರಳಿ ಮ್ಯಾನ್‌ಹೋಲ್‌ ತೆರೆದು ನೀರು ಹರಿದು ಹೋಗುವಂತೆ ಮಾಡಿದ್ದೆ. ಅಲ್ಲದೇ ಸತತ 7 ಗಂಟೆ ಕಾಲ ನಿಂತು ಇತ್ತ ವಾಹನಗಳು ಬಾರದಂತೆ ಬಾರದಂತೆ ನೋಡಿಕೊಂಡಿದ್ದೆ’ ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next