Advertisement

ಅಖಂಡ ಕರ್ನಾಟಕ ಅಭಿವೃದ್ಧಿ ಧ್ಯೇಯವಾಗಲಿ: ಜಗದೀಶ ಶೆಟ್ಟರ್

12:53 PM Nov 01, 2020 | keerthan |

ಧಾರವಾಡ: ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ, ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು‌.

Advertisement

ನಗರದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಗೌರವ ವಂದನೆ ಸ್ವೀಕರಿಸಿ ಅವರು‌ ಮಾತನಾಡಿದರು.

ಯುವ ಪೀಳಿಗೆಯು ತಮ್ಮ ಅಧ್ಯಯನ, ವ್ಯಾಸಂಗದ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕಂತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನ, ಕನ್ನಡತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದರ ಜೊತೆಗೆ ಕೋವಿಡ್ ವೈರಾಣುವಿನ ವಿರುದ್ಧ ಹೋರಾಡಲು ಪ್ರತಿಯೊಬ್ಬ ನಾಗರಿಕರು ಈ ಸಂದರ್ಭದಲ್ಲಿ ಪಣ ತೊಡಬೇಕು.  ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪದೇ ಪದೇ ಕೈ ತೊಳೆಯುವ, ಸ್ವಚ್ಛತೆ ಕಾಪಾಡುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದೊಂದಿಗೆ, ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯೂ ಮಹತ್ವ ಪಡೆದಿದೆ. ವಿವಿಧ ಸುಮಾರು 19 ಆಡಳಿತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು, ಬ್ರಿಟಿಷರ ಆಡಳಿತದ ನಂತರ ಮತ್ತೆ ಒಂದಾಗಿದ್ದು, ನಮ್ಮೆಲ್ಲರ ಹೆಮ್ಮೆಯ ಸಂಗತಿ. ಕರ್ನಾಟಕ ಏಕೀಕರಣದ ಚಳವಳಿಯು ಇದೇ ನಮ್ಮ ಧಾರವಾಡದ ನೆಲದಲ್ಲಿ ಜನ್ಮ ತಾಳಿದ್ದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ ಎಂದರು.

ಇಲ್ಲಿನ ನರೇಂದ್ರ ಗ್ರಾಮದ ರಾ.ಹ.ದೇಶಪಾಂಡೆಯವರು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಓದುವಾಗ ತಮಗಾದ ನೋವುಗಳಿಂದ ನೊಂದಿದ್ದರು. 1887 ರಿಂದಲೇ ಕನ್ನಡ ಭಾಷೆಯ ದೀನ ಸ್ಥಿತಿಯನ್ನು ದೂರ ಮಾಡುವುದಕ್ಕಾಗಿ ಕನ್ನಡ ಜನರ ಸಹಾಯದಿಂದ ಒಂದು ಸಂಘ ಸ್ಥಾಪಿಸಲು ಅವರು ಪ್ರಯತ್ನಿಸುತ್ತಿದ್ದರು. ಅವರ ಪ್ರಯತ್ನದ ಫಲವಾಗಿ ಜುಲೈ 20, 1890 ರಲ್ಲಿ ಧಾರವಾಡದಲ್ಲಿ ಸಮಾನ ಮನಸ್ಕರ ಸಹಕಾರದೊಂದಿಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. ಕನ್ನಡಿಗರನ್ನು ಸಾಹಿತ್ಯಿಕವಾಗಿ, ಸಾಂಸ್ಕಂತಿಕವಾಗಿ ಒಂದುಗೂಡಿಸಲು ಧಾರವಾಡದಲ್ಲಿ ನಡೆದ ಚಳುವಳಿ, ಹೋರಾಟಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗಿದ್ದವು. ಡೆಪ್ಯೂಟಿ ಚನ್ನಬಸಪ್ಪನವರು ಕನ್ನಡ ಮಾಧ್ಯಮ ಶಿಕ್ಷಣಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿರುವುದನ್ನು ನಾವೆಲ್ಲ ಸದಾಕಾಲ ನೆನೆಯಬೇಕು. ಕರ್ನಾಟಕ ಏಕೀಕರಣಕ್ಕೆ ಒತ್ತಾಯಿಸಿ ಹುಬ್ಬಳ್ಳಿ ಸಮೀಪದ ಅದರಗುಂಚಿ ಗ್ರಾಮದಲ್ಲಿ ಅಂದಿನ ನೇತಾರರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು 23 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ಅದರ ಪರಿಣಾಮವಾಗಿ ಲೋಕಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲು ಸಾಧ್ಯವಾಯಿತು.

Advertisement

ಸುದೀರ್ಘ ಹೋರಾಟದ ಫಲವಾಗಿ 1956 ರ ನವೆಂಬರ್ 1 ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ನಂತರದಲ್ಲಿ ಅದು ಕರ್ನಾಟಕ ಎಂದು ಮರುನಾಮಕರಣ ಗೊಂಡಿತು ಎಂದರು.

ಕನ್ನಡದ “ಮೊಟ್ಟ ಮೊದಲ ಕವಿ ಪಂಪ’’ ಇದೇ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದವರು. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದೇ ಹೆಸರಾದ ಕುಮಾರವ್ಯಾಸ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮದವರು. ಆದಿಕವಿ ಪಂಪನಿಂದ ಹಿಡಿದು, ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ವರಕವಿ ಡಾ.ದ.ರಾ.ಬೇಂದ್ರೆ, ಡಾ.ವಿ.ಕೃ.ಗೋಕಾಕ, ಡಾ.ಗಿರೀಶ ಕಾರ್ನಾಡ ನಮ್ಮ ಧಾರವಾಡದವರು ಎಂಬುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ.  ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಈ ಹೋರಾಟದಲ್ಲಿ ತೊಡಗಿದ್ದ ರಾ.ಹ.ದೇಶಪಾಂಡೆ, ಸರ್.ಸಿದ್ಧಪ್ಪ ಕಂಬಳಿ, ಬಿ.ಬಸವಲಿಂಗಪ್ಪ, ಹಳ್ಳಿಕೇರಿ ಗುದ್ಲೆಪ್ಪನವರು, ಆಲೂರು ವೆಂಕಟರಾಯರು, ಡಿ.ಪಿ.ಕರಮಕರ್, ರಂಗನಾಥ ದಿವಾಕರ್,  ಮೊಹರೆ ಹಣಮಂತರಾಯರು,  ಟಿ.ಆರ್.ನೇಸ್ವಿ, ಶ್ರೀರಂಗರು, ಹೊಸಮನಿ ಸಿದ್ಧಪ್ಪ, ವೀರನಗೌಡ ಪಾಟೀಲ, ಕೆ.ಎಫ್.ಪಾಟೀಲ ಮೊದಲಾದ ಮಹಾನ್ ವ್ಯಕ್ತಿಗಳ ನೇತೃತ್ವದಲ್ಲಿ ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ.  ಆ ಮಹಾನ್ ಚೇತನಗಳನ್ನೆಲ್ಲಾ ಇಂದು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next