Advertisement

ಕನ್ನಡ ನುಡಿ ಸಂಭ್ರಮ-30: ಅಕ್ಷರ ಜಾತ್ರೆಗೆ ಸಕಲ ಸಿದ್ಧತೆ

12:58 PM Apr 15, 2022 | Team Udayavani |

ಅಕ್ಕಿಆಲೂರು: ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಸಮಾರಂಭಗಳನ್ನು ಆಯೋಜಿಸುತ್ತ ನಾಡಿನ ಮೂಲೆ-ಮೂಲೆಯಲ್ಲೂ ಪ್ರಚಲಿತದಲ್ಲಿರುವ ಅಕ್ಕಿಆಲೂರಲ್ಲಿ ಈಗ 30ನೇ ವರ್ಷದ ಕನ್ನಡ ನುಡಿ- ಸಂಭ್ರಮದ ಸಡಗರ-ಸಂಭ್ರಮ ಮನೆ ಮಾಡಿದೆ.

Advertisement

ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ-30ರ ವಿಶೇಷ ಸಾಂಸ್ಕೃತಿಕ ಸಮಾರಂಭ ಏ.15 ರಿಂದ ಏ.17 ರವರೆಗೆ ಮೂರು ದಿನಗಳ ಕಾಲ ವೈಶಿಷ್ಟ್ಯ ಸಂಪೂರ್ಣವಾಗಿ ನೆರವೇರಲಿದ್ದು, ಸಮಾರಂಭದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

ಕನ್ನಡ ನುಡಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ಪಟ್ಟಣ ಕನ್ನಡಮಯವಾಗುತ್ತಿದೆ. ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ಗಳು, ಫ್ಲೆಕ್ಸ್‌ ಗಳು, ಕನ್ನಡದ ಧ್ವಜಗಳು, ಕಮಾನುಗಳು, ಬಂಟಿಂಗ್ಸ್‌ಗಳ ಕಲರವ ಪಟ್ಟಣದ ಎಲ್ಲೆಡೆ ಕಂಡುಬರುತ್ತಿದೆ.

ಮನೆ-ಮನಗಳ ಹಬ್ಬವಾಗುತ್ತಿರುವ ಕನ್ನಡ ನುಡಿ ಸಂಭ್ರಮ ಸಮಾರಂಭವನ್ನು ಒಂದೆಡೆ ಸಾಹಿತ್ಯಾಸಕ್ತ ಬಳಗ ಉತ್ಸಾಹದಿಂದ ಎದುರು ನೋಡುತ್ತಿದ್ದರೆ, ಇತ್ತ ಮನೆಯಂಗಳವನ್ನು ಕನ್ನಡ ಮಯಗೊಳಿಸುತ್ತಿರುವ ಕನ್ನಡಿಗರ ಕನ್ನಡ ಪ್ರೀತಿಗೆ ಪಾರವೇ ಇಲ್ಲದಂತಾಗಿದೆ.

ಇಲ್ಲಿನ ಪ್ರಮುಖ ರಸ್ತೆ, ವೃತ್ತಗಳಲ್ಲಿ ಸಾಹಿತಿಗಳ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಕಾರ್ಯ, ಪ್ರಧಾನ ವೇದಿಕೆ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿದ್ದು, ಸಂಘದ ಕಾರ್ಯಕರ್ತರು ಹಗಲು-ರಾತ್ರಿ ಕನ್ನಡದ ಸೇವೆಯಲ್ಲಿ ನಿರತರಾಗಿದ್ದಾರೆ.

Advertisement

ಐತಿಹಾಸಿಕ ಹಿನ್ನೆಲೆಯ ಅಕ್ಕಿಆಲೂರಿನಲ್ಲಿ ಕನ್ನಡ ನಾಡು-ನುಡಿಯ ಜಾಗೃತ ಸಂದೇಶ ಸಾರುವ ಸಮಾರಂಭ ಇದಾಗಿದ್ದು, ನಾಡಿನ ಮೂಲೆ-ಮೂಲೆಗಳಿಂದ ಕನ್ನಡಾಭಿಮಾನಿ ಗಳ ದಂಡು ಇತ್ತಕಡೆ ಧಾವಿಸಲು ಕಾತರತೆಯಿಂದ ಎದುರು ನೋಡುತ್ತಿದೆ.

ನಾಡಿನ ವಿವಿಧ ಮಠಾಧೀಶರು, ಕಲಾವಿದರು, ಸಾಹಿತಿಗಳು, ಖ್ಯಾತ ವಾಗ್ಮಿಗಳು, ಚಲನಚಿತ್ರ ನಟ-ನಟಿಯರು, ಕಿರುತೆರೆ ನಟ-ನಟಿ ಯರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ನಾಡಿನ ಭಾಷೆ, ನೆಲ, ಜಲದ ರಕ್ಷಣೆ ಕಾರ್ಯ ಕೈಗೆತ್ತಿಕೊಂಡಿರುವ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಕನ್ನಡ ಸೇವೆ ಕಳೆದ 30 ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದ್ದು, ಕನ್ನಡ ನುಡಿ ಸಂಭ್ರಮ-30 ರ ಸಮಾರಂಭವನ್ನೂ ಅತಿ ವಿಶಿಷ್ಟವಾಗಿ ಹೆಣೆಯಲಾಗಿದೆ.

ಏ.15 ರಂದು ಕನ್ನಡ ಧ್ವಜಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ಪಡೆದು ಕೊಳ್ಳಲಿರುವ ಶ್ರೀ ದುಂಡಿಬಸವೇಶ್ವರ ಜನ ಪದ ಕಲಾ ಸಂಘದ ಕನ್ನಡ ನುಡಿ ಸಂಭ್ರಮ-30ಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಉತ್ಸವ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವಂತೆ ವೈಶಿಷ್ಟ್ಯ ಪೂರ್ಣವಾಗಿ ಕಾರ್ಯಕ್ರಮಗಳನ್ನೊಳಗೊಂಡಂತೆ ರೂಪುಗೊಂಡಿರುವ ಈ ಬಾರಿಯ ಕನ್ನಡ ನುಡಿ ಸಂಭ್ರಮ ಸಾಹಿತ್ಯಾಸಕ್ತರ ಮನ ತಣಿಸುವಲ್ಲಿ ಎರಡು ಮಾತಿಲ್ಲ.

ಇಲ್ಲಿನ ಮುತ್ತಿನಕಂತಿಮಠ ಗುರುಪೀಠದ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಧಾನ ವೇದಿಕೆ ನಿರ್ಮಾಣ ಬಹುತೇಕ ಪೂರ್ಣ ಗೊಂಡಿದ್ದು, ಕಳೆದ ಬಾರಿ ದಾಖಲಾದ ಕನ್ನಡಾಭಿಮಾನಿಗಳ ಸಂಖ್ಯೆಗನುಸಾರವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸಂಘದ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಸಾಹಿತ್ಯಾಸಕ್ತರ ಪ್ರೋತ್ಸಾಹದ ಮಧ್ಯೆ ಕನ್ನಡ ತಾಯಿ ಭುವನೇಶ್ವರಿಯ ತೇರು ಎಳೆಯಲು ಜಿಲ್ಲಾ ಮತ್ತು ರಾಜ್ಯ ಮಟ್ಟದ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಸಮಾರಂಭವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ.

ನಾಡಿನ ಖ್ಯಾತ ಸಾಹಿತಿಗಳು, ಕಲಾವಿದರು, ಈ ಭಾಗದಲ್ಲಿ ಪ್ರಾಮಾಣಿಕ ವಾಗಿ ಸೇವೆಗೈದ ಮಹನೀ ಯರ ಹೆಸರಿನಡಿ ನಿರ್ಮಿಸಿರುವ ವೇದಿಕೆಯಲ್ಲಿ ಮಹಿಳಾ ಸಮಾವೇಶ, ಯುವ ಸಂಭ್ರಮ, ಕೃಷಿ ಗೋಷ್ಠಿ, ರೈತ ಸಮಾವೇಶ, ಸಾಂಸ್ಕೃತಿಕ ಸಂಭ್ರಮ ಸೇರಿದಂತೆ ಹತ್ತು ಹಲವಾರು ವಿಶಿಷ್ಟ ಕಾರ್ಯಕ್ರಮಗಳ ಜೋಡಣೆಯ ಮುಖಾಂತರ ನಾಡಿನ ಕನ್ನಡದ ಮನಸ್ಸುಗಳ ಕದ ತಟ್ಟುವಲ್ಲಿ ಕನ್ನಡ ನುಡಿ ಸಂಭ್ರಮ- 30ರ ಸಮಾರಂಭ ಅಕ್ಷರಶಃ ಅಕ್ಷರ ಜಾತ್ರೆಯ ವಿಶಿಷ್ಟ ಅನುಭವ ನೀಡಲಿದೆ.

  • ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ಗಳು -ಫ್ಲೆಕ್ಸ್‌ಗಳು- ಕನ್ನಡದ ಧ್ವಜಗಳು, ಕಮಾನುಗಳು- ಬಂಟಿಂಗ್ಸ್‌ಗಳ ಕಲರವ
  • ನಾಡಿನ ವಿವಿಧ ಮಠಾ ಧೀಶರು, ಕಲಾವಿದರು, ಸಾಹಿತಿಗಳು, ಖ್ಯಾತ ವಾಗ್ಮಿಗಳು, ಚಲನಚಿತ್ರ ನಟ-ನಟಿಯರು, ಕಿರುತೆರೆ ನಟ-ನಟಿಯರು, ಜನಪ್ರತಿನಿಧಿ ಗಳ ಸಮಾಗಮ

ದುಂಡಿ ಬಸವೇಶ್ವರ ಜನಪದ ಕಲಾಸಂಘ ನಡೆದುಬಂದ ದಾರಿ: ಅದು ಗ್ರಾಮದಲ್ಲಿ ಎಲ್ಲರೂ ದುಡಿದು ತಿನ್ನುವ ಅನಿವಾರ್ಯತೆಯ ಮನೆ. ಉದ್ಯೋಗ ಮಾಡುತ್ತ ತಮ್ಮ ಪಾಡಿಗೆ ತಾವು ಇದ್ದ ಕಾಲದಲ್ಲಿ ನಾಡಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತ, ಸಂಘಟನಾತ್ಮಕವಾಗಿ ನಮ್ಮಿಂದ ಮತ್ತು ನಮ್ಮ ಊರಿನಿಂದ ನಾಡಿಗೆ ಏನಾದರೂ ಸೇವೆ ಸಲ್ಲಿಸಬೇಕೆಂದು ಕೆಲವು ಹವ್ಯಾಸಿ ಕಲಾವಿದ ಯುವಕರು ಸೇರಿ ಕಟ್ಟಿದ ಡಾ| ರಾಜಕುಮಾರ್‌ ಯುವಕ ಸಂಘ ಇಂದು ದುಂಡಿಬಸವೇಶ್ವರ ಜನಪದ ಕಲಾ ಸಂಘವಾಗಿ ಕನ್ನಡ ನುಡಿಯ ಸೇವೆ ಸಲ್ಲಿಸುತ್ತ ನಾಡಿನಾದ್ಯಂತ ಹೆಸರು ಮಾಡಿದೆ.

ಪ್ರವೀಣ ಕುಮಾರ ಶಿ. ಅಪ್ಪಾಜಿ

 

Advertisement

Udayavani is now on Telegram. Click here to join our channel and stay updated with the latest news.

Next